ನ್ಯೂಯಾರ್ಕ್ : ಅಮೆರಿಕ ಪ್ರವಾಸದಲ್ಲಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ಎಸ್ಎಸ್) ಸರಸಂಘಚಾಲಕ ಮೋಹನ್ ಭಾಗವತ್ ಅವರು ಹಿಂದುತ್ವದ ನೈಜ ತತ್ವ ಹಾಗೂ ಧಾರ್ಮಿಕ ಸೌಹಾರ್ದತೆಯ ಕುರಿತು ನ್ಯೂಯಾರ್ಕ್ನಲ್ಲಿ ನಡೆಸಿದ ಬಹುಧರ್ಮೀಯ ಸಂವಾದ ಮತ್ತು ಭಾರತೀಯ ಸಮುದಾಯದ ಕಾರ್ಯಕ್ರಮಗಳಲ್ಲಿ ಮಹತ್ವದ ಹೇಳಿಕೆಗಳನ್ನು ನೀಡಿದ್ದಾರೆ.
ಐತಿಹಾಸಿಕ ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್ನಲ್ಲಿ ನಡೆದ ವಿಶ್ವ ಏಕತಾ ಆಚರಣೆ (ಯೂನಿವರ್ಸಲ್ ಒನ್ನೆಸ್ ಸೆಲೆಬ್ರೇಷನ್) ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತಮ್ಮನ್ನು ಸತತವಾಗಿ ಕೇಳಲಾಗುವ “ಮುಸ್ಲಿಮರ ಕಥೆಯೇನು?” ಎಂಬ ಪ್ರಶ್ನೆಗೆ ಸ್ಪಷ್ಟನೆ ನೀಡಿದ್ದಾರೆ. ಜೊತೆಗೆ ಆರ್ಎಸ್ಎಸ್ ವ್ಯಾಖ್ಯಾನಿಸುವ ಹಿಂದುತ್ವದ ಅರ್ಥವನ್ನು ಸ್ಪಷ್ಟಪಡಿಸಿದ್ದಾರೆ. “ಭಾರತದಲ್ಲಿ ಮುಸ್ಲಿಮರೇ ಇರಬಾರದು ಎಂದು ಭಾವಿಸುವ ಯಾವುದೇ ಹಿಂದೂ, ಆ ಕ್ಷಣವೇ ಹಿಂದೂ ಆಗಿ ಉಳಿಯುವುದಿಲ್ಲ” ಎಂದು ಪ್ರತಿಪಾದಿಸಿದ್ದಾರೆ.
ಹಿಂದೆ ನಡೆದ ಘಟನೆಯೊಂದನ್ನು ಸ್ಮರಿಸಿದ ಅವರು, “ಕಾರ್ಯಕ್ರಮವೊಂದರಲ್ಲಿ ಮುಸ್ಲಿಂ ಸಹೋದರರು ನನ್ನ ಬಳಿ ಬಂದು, ‘ನೀವು ಹಿಂದೂ ರಾಷ್ಟ್ರ ಎಂದು ಹೇಳುತ್ತೀರಿ, ಹಾಗಾದರೆ ಮುಸ್ಲಿಮರಾದ ನಮ್ಮ ಗತಿಯೇನು? ನಮ್ಮನ್ನು ದೇಶದಿಂದ ಹೊರಹಾಕುತ್ತೀರಾ?’ ಎಂದು ಕೇಳಿದ್ದರು. ಅದಕ್ಕೆ ನಾನು ‘ಖಂಡಿತ ಇಲ್ಲ, ಅದು ಹಿಂದುತ್ವವಲ್ಲ’ ಎಂದು ಉತ್ತರಿಸಿದ್ದೆ” ಎಂದರು. ಎಲ್ಲಾ ಮಾರ್ಗಗಳೂ ಒಂದೇ ಗುರಿಯನ್ನು ತಲುಪುತ್ತವೆ ಮತ್ತು ಪ್ರತಿಯೊಬ್ಬ ಮಾನವನೂ ಗೌರವಕ್ಕೆ ಅರ್ಹ ಎಂಬ ತತ್ವದಲ್ಲಿ ನಂಬಿಕೆ ಇಡುವುದು ಹಿಂದುತ್ವದ ಮೂಲ. ಹೀಗಾಗಿ ಭಾರತದಲ್ಲಿ ಮುಸ್ಲಿಮರು ಇರಬಾರದು ಎಂದು ಯಾವ ವ್ಯಕ್ತಿ ಹೇಳುತ್ತಾನೋ, ಆತ ಹಿಂದೂ ಅಲ್ಲ ಎಂದು ಭಾಗವತ್ ವಿವರಣೆ ನೀಡಿದ್ದಾರೆ.
1996ರ ದುರಂತದ ಬಗ್ಗೆ ಸ್ಮರಣೆ
ಆರ್ಎಸ್ಎಸ್ ಸ್ವಯಂಸೇವಕರು ಭೇದಭಾವವಿಲ್ಲದೆ ಸೇವೆ ಸಲ್ಲಿಸುತ್ತಾರೆ ಎಂಬುದಕ್ಕೆ 1996ರಲ್ಲಿ ಹರ್ಯಾಣದ ದಾದ್ರಿಯಲ್ಲಿ ಸಂಭವಿಸಿದ ಸೌದಿ ಅರೇಬಿಯನ್ ಹಾಗೂ ಕಝಕಿಸ್ತಾನ್ ವಿಮಾನಗಳ ಭೀಕರ ಮುಖಾಮುಖಿ ಡಿಕ್ಕಿಯ ಘಟನೆಯನ್ನು ಭಾಗವತ್ ನೆನಪಿಸಿಕೊಂಡರು. “ಆ ದುರಂತ ನಡೆದಾಗ ಘಟನಾ ಸ್ಥಳಕ್ಕೆ ಮೊದಲು ತಲುಪಿ ಗಾಯಾಳುಗಳನ್ನು ಹಾಗೂ ಮೃತರ ಶವಗಳನ್ನು ಹೊರತೆಗೆದು ಅಂತಿಮ ಸಂಸ್ಕಾರಕ್ಕೆ ನೆರವಾದವರು ನಮ್ಮ ಸ್ವಯಂಸೇವಕರು. ಆ ವಿಮಾನದಲ್ಲಿದ್ದ ಹೆಚ್ಚಿನ ಪ್ರಯಾಣಿಕರು ಮುಸ್ಲಿಮರಾಗಿದ್ದರು. ಆದರೆ ನಮ್ಮ ಸ್ವಯಂಸೇವಕರು ಅವರೆಲ್ಲ ಮುಸ್ಲಿಮರು ಎಂದು ಯೋಚಿಸಲೇ ಇಲ್ಲ” ಎಂದು ಹೇಳಿದರು.
ಈ ರೀತಿಯ ಸೇವಾ ಕಾರ್ಯಗಳು ರಾಜಕೀಯ ಲಾಭಕ್ಕಾಗಿ ಅಥವಾ ಪ್ರಚಾರಕ್ಕಾಗಿ ಅಲ್ಲ ಎಂದ ಭಾಗವತ್, “ನಾವು ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಕೆಲಸ ಮಾಡುತ್ತೇವೆ. ನಾವು ಕೇವಲ ನೀಡಲು ಬಯಸುತ್ತೇವೆಯೇ ಹೊರತು ಪ್ರತಿಯಾಗಿ ಏನನ್ನೂ ಬಯಸುವುದಿಲ್ಲ,” ಎಂದು ಸ್ಪಷ್ಟಪಡಿಸಿದರು.
ಕರ್ಮಭೂಮಿಗೆ ನಿಷ್ಠೆ, ವೈವಿಧ್ಯತೆಯಲ್ಲಿ ಏಕತೆ
ಅಮೆರಿಕದಲ್ಲಿರುವ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮಾತನಾಡಿದ ಭಾಗವತ್, ಅವರು ವಾಸಿಸುತ್ತಿರುವ ದೇಶಕ್ಕೆ ನಿಷ್ಠೆಯಿಂದಿರಲು ಕರೆ ನೀಡಿದರು. “ನೀವು ಅಮೆರಿಕದಲ್ಲಿದ್ದೀರಿ, ಇಲ್ಲಿಯೇ ದುಡಿಯುತ್ತಿದ್ದೀರಿ. ಹೀಗಾಗಿ ನೀವು ಅಮೆರಿಕಕ್ಕೆ ಪ್ರಾಮಾಣಿಕರಾಗಿರಬೇಕು ಮತ್ತು ನಿಮ್ಮ ಕರ್ಮಭೂಮಿಯ ಕರ್ತವ್ಯಗಳನ್ನು ಪೂರ್ಣಗೊಳಿಸಬೇಕು.
ಆ ಬಳಿಕ ನಿಮಗೇನಾದರೂ ಜನ್ಮಭೂಮಿಯಾದ ಭಾರತಕ್ಕೆ ಕೊಡುಗೆ ನೀಡುವ ಇಚ್ಛೆಯಿದ್ದರೆ ಅದನ್ನು ಮಾಡಬಹುದು,” ಎಂದು ಕಿವಿಮಾತು ಹೇಳಿದರು. ಅಮೆರಿಕದಲ್ಲಿ ‘ಬಹುತ್ವ’ (Pluralism) ಪ್ರಮುಖ ಚರ್ಚೆಯ ವಿಷಯವಾಗಿದ್ದರೆ, ಭಾರತದಲ್ಲಿ ‘ವೈವಿಧ್ಯತೆಯಲ್ಲಿ ಏಕತೆ’ ಮೂಲ ಮಂತ್ರವಾಗಿದೆ. ಭಾರತೀಯರಿಗೆ ಈ ವೈವಿಧ್ಯತೆ ಮತ್ತು ಏಕತೆ ಎಂಬುದು ಅವರ ರಕ್ತದಲ್ಲೇ (ಡಿಎನ್ಎ) ಹಾಸು ಹೊಕ್ಕಾಗಿದೆ ಎಂದು ಅಭಿಪ್ರಾಯಪಟ್ಟರು.
ಭೌತಿಕ ಸುಖ ಶಾಶ್ವತವಲ್ಲ
ಮಾನವನ ಆಧ್ಯಾತ್ಮಿಕ ಚಿಂತನೆಯ ಅಗತ್ಯತೆಯನ್ನು ಒತ್ತಿಹೇಳಿದ ಅವರು, ಭೌತಿಕ ಸುಖದಿಂದ ಶಾಶ್ವತ ತೃಪ್ತಿ ಸಿಗಲು ಸಾಧ್ಯವಿಲ್ಲ ಎಂದರು. ಇದಕ್ಕೆ ಡೋನಟ್ ಉದಾಹರಣೆ ನೀಡಿದ ಅವರು, “ಆರಂಭದಲ್ಲಿ ಅತ್ಯಂತ ರುಚಿಕರವಾಗಿ ಕಾಣುವ ಡೋನಟ್, ಒಂದಷ್ಟು ತಿಂದ ನಂತರ ಬೇಸರ ತರಿಸುತ್ತದೆ. ಆದರೆ ಸ್ವಲ್ಪ ಸಮಯದ ನಂತರ ಮತ್ತೆ ಬೇಕೆನಿಸುತ್ತದೆ.
ಇಲ್ಲಿ ವಸ್ತುವಿನಲ್ಲಿ ಬದಲಾವಣೆಯಿಲ್ಲ, ನಮ್ಮ ಮನಸ್ಥಿತಿಯಲ್ಲಿ ಬದಲಾವಣೆಯಾಗಿದೆ. ಆದ್ದರಿಂದ ಸರಿಯಾದ ದಾರಿಯಲ್ಲಿ ಆಲೋಚಿಸಿದಾಗ ಮಾತ್ರ ದೇವರ ಸಾಮೀಪ್ಯ ದೊರೆಯುತ್ತದೆ,” ಎಂದರು. ಇದಲ್ಲದೆ, ಒಬ್ಬ ವ್ಯಕ್ತಿಯ ಯಶಸ್ಸನ್ನು ಆತ ಎಷ್ಟು ಸಂಪಾದಿಸುತ್ತಾನೆ ಎಂಬುದಕ್ಕಿಂತ, ಸಮಾಜಕ್ಕೆ ಎಷ್ಟು ಮರಳಿ ನೀಡುತ್ತಾನೆ ಎಂಬುದರ ಮೇಲೆ ಅಳೆಯಲಾಗುತ್ತದೆ ಎಂದು ತಿಳಿಸಿದರು. ಭಾರತೀಯ ತತ್ತ್ವಶಾಸ್ತ್ರವು ಹಣ ಅಥವಾ ಯಶಸ್ಸನ್ನು ನಿರಾಕರಿಸುವುದಿಲ್ಲ; ಧರ್ಮ ಮತ್ತು ಮೋಕ್ಷದ ಜೊತೆಗೆ ಅರ್ಥ ಹಾಗೂ ಕಾಮಗಳಿಗೂ ಪ್ರಾಮುಖ್ಯತೆ ನೀಡಿದೆ ಎಂದು ಅವರು ವಿವರಿಸಿದರು.
ಇದನ್ನೂ ಓದಿ : ನೆಹರು ಸೆಂಟರ್ ಫಾರ್ ಅಡ್ವಾನ್ಸ್ಡ್ ಸೈಂಟಿಫಿಕ್ ರಿಸರ್ಚ್ ಸಂಸ್ಥೆಯಲ್ಲಿ ನೇಮಕಾತಿ : 2.25 ಲಕ್ಷ ರೂ. ಸ್ಯಾಲರಿ


















