ಕಠ್ಮಂಡು : ನೇಪಾಳದ ರಸುವಾ ಪ್ರದೇಶದಲ್ಲಿ ಬುಧವಾರ ಸಂಭವಿಸಿದ ವಿನಾಶಕಾರಿ ಹಠಾತ್ ಜಲಪ್ರಳಯಕ್ಕೆ 4.9 ತೀವ್ರತೆಯ ಭೂಕಂಪನ ಹಾಗೂ ಅದರಿಂದ ಉಂಟಾದ ‘ಸಿರ್ಕ್’ (Cirque) ಮಾದರಿಯ ನೀರ್ಗಲ್ಲು (ಗ್ಲೇಸಿಯರ್) ಕುಸಿತವೇ ಮುಖ್ಯ ಕಾರಣ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ಅಂಗಸಂಸ್ಥೆಯಾದ ನ್ಯಾಷನಲ್ ರಿಮೋಟ್ ಸೆನ್ಸಿಂಗ್ ಸೆಂಟರ್ (ಎನ್ಆರ್ಎಸ್ಸಿ) ಹೇಳಿದೆ.
ಬಾಹ್ಯಾಕಾಶ ಉಪಗ್ರಹಗಳ ಆಧಾರಿತ ಪ್ರಾಥಮಿಕ ವಿಶ್ಲೇಷಣೆಯಿಂದ ಈ ಮಾಹಿತಿ ಬಹಿರಂಗವಾಗಿದ್ದು, ಹಿಮಾಲಯದ ಕಡಿದಾದ ಕಣಿವೆಯಲ್ಲಿ ನೈಸರ್ಗಿಕ ವಿಕೋಪಗಳು ಹೇಗೆ ಒಂದಕ್ಕೊಂದು ಸರಪಳಿಯಂತೆ ದುರಂತಕ್ಕೆ ಕಾರಣವಾದವು ಎಂಬುದನ್ನು ಇಸ್ರೋ ವಿಜ್ಞಾನಿಗಳು ಪತ್ತೆಹಚ್ಚಿದ್ದಾರೆ.
ಹಿಮಾಲಯ ಪ್ರದೇಶದ 10 ಕಿಲೋಮೀಟರ್ ಆಳದಲ್ಲಿ ಬುಧವಾರ ಬೆಳಗ್ಗೆ 8.22ಕ್ಕೆ 4.9 ತೀವ್ರತೆಯ ಭೂಕಂಪನ ದಾಖಲಾಗಿತ್ತು.
ಟಿಬೆಟ್ನ ಎತ್ತರದ ಪರ್ವತಗಳಲ್ಲಿ ರೂಪುಗೊಳ್ಳುವ ‘ಸಿರ್ಕ್ ಗ್ಲೇಸಿಯರ್'(ಸಿರ್ಕ್ ನೀರ್ಗಲ್ಲು) ಈ ಚಲನೆಯಿಂದ ತೀವ್ರವಾಗಿ ಅಸ್ಥಿರಗೊಂಡು ಬೃಹತ್ ಪ್ರಮಾಣದಲ್ಲಿ ಕುಸಿದಿದೆ. ಹೀಗೆ ಕುಸಿದ ಹಿಮ ಮತ್ತು ಬಂಡೆಗಳ ರಾಶಿಯು ಪರ್ವತದ ಕೆಳಗಿನ ನದಿ ಹರಿವಿಗೆ ಹಠಾತ್ತಾಗಿ ತಡೆಯೊಡ್ಡಿದವು. ತಡೆಗೋಡೆಯಂತೆ ನಿಂತಿದ್ದ ಈ ಹಿಮಬಂಡೆಯ ಕಟ್ಟೆ ದಿಢೀರನೆ ಒಡೆದು ಹೋದಾಗ ಶೇಖರಗೊಂಡಿದ್ದ ಅಪಾರ ಪ್ರಮಾಣದ ನೀರು, ಕೆಸರು ಹಾಗೂ ಕಲ್ಲುಗಳು ರಭಸವಾಗಿ ತ್ರಿಶೂಲಿ ನದಿಗೆ ನುಗ್ಗಿ ಭೀಕರ ಪ್ರವಾಹ ಸೃಷ್ಟಿಯಾಯಿತು ಎಂದು ಸೆಂಟರ್ ಫಾರ್ ಸಿಸ್ಮೋಲಜಿ ಹೇಳಿದೆ.
ಇಸ್ರೋ, ವಿದೇಶಿ ಉಪಗ್ರಹಗಳ ನೆರವಿನಿಂದ ನಕ್ಷೆ ತಯಾರಿಕೆ
ಎನ್ಆರ್ಎಸ್ಸಿಯ ವಿಜ್ಞಾನಿಗಳು ಯುರೋಪಿಯನ್ ಸೆಂಟಿನೆಲ್-2 ಉಪಗ್ರಹ ಆಗಸ್ಟ್ 24 ರಂದು ತೆಗೆದಿದ್ದ ಚಿತ್ರಗಳನ್ನು ಹಾಗೂ ಭಾರತದ ರಿಸೋರ್ಸ್ಸ್ಯಾಟ್-2ಎ (Resourcesat 2A) ಆಗಸ್ಟ್ 26 ರಂದು ಸೆರೆಹಿಡಿದ ಚಿತ್ರಗಳನ್ನು ಹೋಲಿಸಿ ಪ್ರವಾಹದ ತೀವ್ರತೆಯನ್ನು ವಿಶ್ಲೇಷಿಸಿದ್ದಾರೆ. ಪ್ರವಾಹಕ್ಕೂ ಮುನ್ನ ಮತ್ತು ನಂತರದ ಪರಿಸ್ಥಿತಿಯನ್ನು ಉಪಗ್ರಹ ನಕ್ಷೆಗಳ ಮೂಲಕ ಅಧ್ಯಯನ ನಡೆಸಲಾಗಿದ್ದು, ನದಿ ತೀರದಲ್ಲಾದ ಭೌಗೋಳಿಕ ಬದಲಾವಣೆಗಳು ಮತ್ತು ಹಾನಿಗೊಳಗಾದ ಪ್ರದೇಶಗಳನ್ನು ನಿಖರವಾಗಿ ಗುರುತಿಸಲಾಗಿದೆ. ನೆಲದ ಮಟ್ಟದಲ್ಲಿ ರಕ್ಷಣಾ ಪಡೆಗಳಿಗೆ ತಲುಪಲು ಸಾಧ್ಯವಾಗದ ದುರ್ಗಮ ಹಾದಿಗಳಲ್ಲಿ ಈ ಬಾಹ್ಯಾಕಾಶ ತಂತ್ರಜ್ಞಾನವು ಕಾರ್ಯಾಚರಣೆಗೆ ಮಹತ್ವದ ಮಾಹಿತಿ ಒದಗಿಸಿದೆ.
ಭಾರತಕ್ಕೆ ಪ್ರವಾಹದ ಭೀತಿ ಇಲ್ಲ
ಈ ಭೀಕರ ಜಲಪ್ರಳಯದ ಮೂಲ ಸ್ಥಳವು ಭಾರತದ ಗಡಿಯಿಂದ ಸುಮಾರು 200 ಕಿಲೋಮೀಟರ್ಗಿಂತಲೂ ಹೆಚ್ಚು ದೂರದಲ್ಲಿದೆ. ಹಾಗಾಗಿ ಈ ದುರಂತದ ಗಂಭೀರ ಪರಿಣಾಮಗಳು ನೇಪಾಳ ಮತ್ತು ಟಿಬೆಟ್ನ ನದಿ ಕಣಿವೆ ಪ್ರದೇಶಗಳಿಗೆ ಮಾತ್ರ ಸೀಮಿತವಾಗಿದ್ದು, ಭಾರತದ ಗಡಿ ಪ್ರದೇಶಗಳಿಗೆ ಇದರಿಂದ ತಕ್ಷಣದ ಅಪಾಯವಿಲ್ಲ ಎಂದು ತಜ್ಞರು ಅಂದಾಜಿಸಿದ್ದಾರೆ. ರಕ್ಷಣಾ ಪಡೆಗಳು ಕಾರ್ಯಾಚರಣೆಯನ್ನು ಮುಂದುವರಿಸಿದ್ದು, ದ್ವಿತೀಯ ಹಂತದ ಅಪಾಯಗಳನ್ನು ತಡೆಯಲು ಉಪಗ್ರಹಗಳ ಮೂಲಕ ನದಿ ಹರಿವಿನ ಮೇಲೆ ನಿರಂತರ ನಿಗಾ ಇಡಲಾಗಿದೆ.
ಇದನ್ನೂ ಓದಿ : ಬಜಾಜ್ ಆಟೋ ಭರ್ಜರಿ ಕಾರ್ಯಾಚರಣೆ : 6 ಹೊಸ ಮೋಟಾರ್ ಸೈಕಲ್ಗಳ ಬಿಡುಗಡೆಗೆ ಸಿದ್ಧತೆ



















