ಬೆಂಗಳೂರು : ರಾಜ್ಯದಲ್ಲಿ ನಡೆಯುತ್ತಿರುವ ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆಯ ಕರಡು ಮತದಾರರ ಪಟ್ಟಿಯನ್ನು ಚುನಾವಣಾ ಆಯೋಗ ಇಂದು ಪ್ರಕಟಿಸಲಿದೆ. ರಾಜ್ಯದ ಒಟ್ಟು 4 ಕೋಟಿ 46 ಲಕ್ಷ 35 ಸಾವಿರದ 899 ಮತದಾರರು ಎಸ್ಐಆರ್ ಪ್ರಕ್ರಿಯೆಯ ವ್ಯಾಪ್ತಿಗೆ ಒಳಪಟ್ಟಿದ್ದು, ಈ ಎಲ್ಲ ಮತದಾರರ ಹೆಸರನ್ನು ಒಳಗೊಂಡ ಕರಡು ಪಟ್ಟಿಯನ್ನು ಇಂದು ಬಿಡುಗಡೆ ಮಾಡಲಾಗುತ್ತದೆ.
ಇದರ ಜೊತೆಗೆ 1 ಕೋಟಿ 7 ಲಕ್ಷ 96 ಸಾವಿರದ 415 ಮಂದಿಯನ್ನು ಎಎಸ್ಡಿಡಿ ಪಟ್ಟಿಗೆ ಸೇರ್ಪಡೆ ಮಾಡಲಾಗಿದೆ. ಈ ಸಂಬಂಧ ಮುಖ್ಯ ಚುನಾವಣಾಧಿಕಾರಿ ಅನ್ಬು ಕುಮಾರ್ ಅವರು ಇಂದು ಮಧ್ಯಾಹ್ನ 3 ಗಂಟೆಗೆ ಸುದ್ದಿಗೋಷ್ಠಿ ನಡೆಸಿ ಎಸ್ಐಆರ್ ಪ್ರಕ್ರಿಯೆ ಹಾಗೂ ಕರಡು ಮತದಾರರ ಪಟ್ಟಿಗೆ ಸಂಬಂಧಿಸಿದ ಮಾಹಿತಿ ನೀಡಲಿದ್ದಾರೆ.
ಎಸ್ಐಆರ್ ಪ್ರಕ್ರಿಯೆಯಲ್ಲಿ ಎನ್ಯುಮರೇಷನ್ ಪೂರ್ಣಗೊಂಡಿರುವ 4,46,35,899 ಮತದಾರರ ಮಾಹಿತಿಯನ್ನು ಪರಿಶೀಲಿಸಲಾಗಿದ್ದು, ಈ ಪೈಕಿ 43,80,740 ಮತದಾರರ ಮಾಹಿತಿಯಲ್ಲಿ ವ್ಯತ್ಯಾಸ ಕಂಡುಬಂದಿದೆ. 2002ರ ಮತದಾರರ ಪಟ್ಟಿಯಲ್ಲಿರುವ ಮಾಹಿತಿ ಹಾಗೂ ಎಸ್ಐಆರ್ ಫಾರಂನಲ್ಲಿ ನೀಡಿರುವ ಮಾಹಿತಿಯಲ್ಲಿ ವ್ಯತ್ಯಾಸ ಕಂಡುಬಂದಿರುವ ಹಿನ್ನೆಲೆಯಲ್ಲಿ ಈ ಮತದಾರರಿಗೆ ದಾಖಲೆಗಳನ್ನು ಸಲ್ಲಿಸುವಂತೆ ಚುನಾವಣಾ ಆಯೋಗ ನೋಟಿಸ್ ಜಾರಿ ಮಾಡಲಿದೆ. ವ್ಯತ್ಯಾಸ ಕಂಡುಬಂದಿರುವ 43,80,740 ಮತದಾರರ ಪೈಕಿ 20,35,312 ಮಂದಿಯ ಮಾಹಿತಿಯಲ್ಲಿ ವ್ಯತ್ಯಾಸ ಕಂಡುಬಂದಿದ್ದರೆ, ಉಳಿದ 23,45,428 ಮತದಾರರ ಮ್ಯಾಪಿಂಗ್ನಲ್ಲಿ ತಪ್ಪು ಕಂಡುಬಂದಿದೆ. ಹೀಗಾಗಿ ಈ ಎಲ್ಲ ಮತದಾರರ ದಾಖಲೆಗಳನ್ನು ಪರಿಶೀಲಿಸಲು ಆಯೋಗ ಮುಂದಾಗಿದೆ.
ಆಗಸ್ಟ್ 24ರಿಂದ ಅಕ್ಟೋಬರ್ 22ರವರೆಗೆ ಒಟ್ಟು 58 ದಿನಗಳ ಕಾಲ ನೋಟಿಸ್ ಜಾರಿ ಹಾಗೂ ಮತದಾರರಿಂದ ಪ್ರತಿಕ್ರಿಯೆ ಪಡೆಯುವ ಪ್ರಕ್ರಿಯೆ ನಡೆಯಲಿದೆ. ನೋಟಿಸ್ ಪಡೆಯಲಿರುವ ಮತದಾರರ ಸಂಖ್ಯೆಯಲ್ಲಿ ಬೆಂಗಳೂರಿನವರೇ ಅತಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಬೆಂಗಳೂರಿನಲ್ಲಿ ಎಸ್ಐಆರ್ ಪ್ರಕ್ರಿಯೆ ನಡೆಸಲಾಗಿರುವ ಸುಮಾರು 56 ಲಕ್ಷ ಮತದಾರರ ಪೈಕಿ 24.05 ಲಕ್ಷ ಮಂದಿಗೆ ಇಂದಿನಿಂದ ದಾಖಲೆಗಳನ್ನು ಸಲ್ಲಿಸುವಂತೆ ನೋಟಿಸ್ ನೀಡಲಾಗುತ್ತದೆ. ಎಸ್ಐಆರ್ನಲ್ಲಿ ನೀಡಿರುವ ಮಾಹಿತಿಯಲ್ಲಿ ವ್ಯತ್ಯಾಸ ಹಾಗೂ ಮ್ಯಾಪಿಂಗ್ನಲ್ಲಿ ತಪ್ಪು ಕಂಡುಬಂದಿರುವ ಹಿನ್ನೆಲೆಯಲ್ಲಿ ಈ ನೋಟಿಸ್ ಜಾರಿ ಮಾಡಲಾಗುತ್ತಿದೆ. ಈಗಾಗಲೇ ಬೆಂಗಳೂರಿನಲ್ಲಿ 47 ಲಕ್ಷ ಮತದಾರರನ್ನು ಎಎಸ್ಡಿಡಿ ಪಟ್ಟಿಗೆ ಸೇರ್ಪಡೆ ಮಾಡಲಾಗಿದೆ.
ಬೆಂಗಳೂರಿನ ನಾಲ್ಕು ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ನೋಟಿಸ್ ಪಡೆಯಲಿರುವ ಮತದಾರರ ಸಂಖ್ಯೆಯೂ ಬಿಡುಗಡೆಯಾಗಿದ್ದು, ಬೆಂಗಳೂರು ಉತ್ತರದಲ್ಲಿ 6,13,003, ಬೆಂಗಳೂರು ಕೇಂದ್ರದಲ್ಲಿ 4,29,364, ಬೆಂಗಳೂರು ನಗರದಲ್ಲಿ 9,45,998 ಹಾಗೂ ಬೆಂಗಳೂರು ದಕ್ಷಿಣದಲ್ಲಿ 4,17,625 ಮತದಾರರಿಗೆ ನೋಟಿಸ್ ನೀಡಲಾಗುತ್ತದೆ. ಈ ನಾಲ್ಕು ಕ್ಷೇತ್ರಗಳನ್ನು ಸೇರಿಸಿ ಬೆಂಗಳೂರಿನಲ್ಲಿ ಒಟ್ಟು 24,05,990 ಮತದಾರರಿಗೆ ಇಂದಿನಿಂದ ನೋಟಿಸ್ ಜಾರಿಯಾಗಲಿದೆ.
ಇಂದು ಮಧ್ಯಾಹ್ನ 3 ಗಂಟೆಗೆ ನಡೆಯಲಿರುವ ಚುನಾವಣಾ ಆಯೋಗದ ಸುದ್ದಿಗೋಷ್ಠಿಯಲ್ಲಿ ಎಸ್ಐಆರ್ ಕರಡು ಮತದಾರರ ಪಟ್ಟಿ, ಎಎಸ್ಡಿಡಿ ಪಟ್ಟಿಗೆ ಸೇರ್ಪಡೆಯಾದ ಮತದಾರರು, ನೋಟಿಸ್ ಜಾರಿ ಹಾಗೂ ದಾಖಲೆ ಪರಿಶೀಲನೆಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿ ಹೊರಬೀಳಲಿದೆ. ಕರಡು ಪಟ್ಟಿಯಲ್ಲಿ ಹೆಸರು, ಮಾಹಿತಿ ಅಥವಾ ಮ್ಯಾಪಿಂಗ್ಗೆ ಸಂಬಂಧಿಸಿದಂತೆ ವ್ಯತ್ಯಾಸ ಕಂಡುಬಂದಿರುವ ಮತದಾರರು ನಿಗದಿತ ಅವಧಿಯಲ್ಲಿ ಅಗತ್ಯ ದಾಖಲೆಗಳನ್ನು ಸಲ್ಲಿಸಿ ತಮ್ಮ ವಿವರಗಳನ್ನು ಪರಿಶೀಲಿಸಿಕೊಳ್ಳಬೇಕಾಗಿದೆ.
ಇದನ್ನೂ ಓದಿ : ಒತ್ತಡ ನಿವಾರಣೆಗೆ ಕ್ರೀಡೆ ಮುಖ್ಯ.. ಎಲ್ಲರೂ ಸೇರೋಣ, ಜೊತೆಯಾಗಿ ಆಡೋಣ : ಕೆ.ವಿ. ಪ್ರಭಾಕರ್



















