ಮುಂಬೈ : ರಾಷ್ಟ್ರೀಯ ಗೀತೆ ‘ವಂದೇ ಮಾತರಂ’ ಕುರಿತ ಚರ್ಚೆಯು ಇದೀಗ ರಾಜಕೀಯ ವಲಯವನ್ನು ದಾಟಿ ಬಾಲಿವುಡ್ ಅಂಗಳಕ್ಕೂ ಕಾಲಿಟ್ಟಿದ್ದು, ಹಿರಿಯ ನಟಿ ಶರ್ಮಿಳಾ ಟ್ಯಾಗೋರ್ ಹಾಗೂ ನಟಿ, ಬಿಜೆಪಿ ಸಂಸದೆ ಕಂಗನಾ ರಣಾವತ್ ನಡುವಿನ ಭಿನ್ನಾಭಿಪ್ರಾಯಕ್ಕೆ ಕಾರಣವಾಗಿದೆ.
ವಂದೇ ಮಾತರಂ ಗೀತೆಯನ್ನು ಕೇವಲ ಅದರ ಮೊದಲ ಎರಡು ಪ್ಯಾರಾಗಳಿಗೆ ಸೀಮಿತಗೊಳಿಸುವುದು ಸೂಕ್ತ ಎಂಬ ಶರ್ಮಿಳಾ ಟ್ಯಾಗೋರ್ ಅವರ ಇತ್ತೀಚಿನ ಹೇಳಿಕೆಗೆ ಕಂಗನಾ ರಣಾವತ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ಜನರನ್ನು ಹಿಂದೂ-ಮುಸ್ಲಿಂ ಮನಸ್ಥಿತಿಯಿಂದ ಹೊರಬರುವಂತೆ ಕರೆ ನೀಡಿರುವ ಕಂಗನಾ, ಈ ಗೀತೆಯನ್ನು ಕೇವಲ ಧಾರ್ಮಿಕ ಚೌಕಟ್ಟಿನಲ್ಲಿ ನೋಡದೆ, ಕಲಾತ್ಮಕವಾಗಿ ಹಾಗೂ ಸ್ವಾತಂತ್ರ್ಯ ಹೋರಾಟದ ಸಂಕೇತವಾಗಿ ಗ್ರಹಿಸಬೇಕು ಎಂದು ಬಲವಾಗಿ ಪ್ರತಿಪಾದಿಸಿದ್ದಾರೆ.
ವಂದೇ ಮಾತರಂ ಕುರಿತು ಶರ್ಮಿಳಾ ಟ್ಯಾಗೋರ್ ಹೇಳಿದ್ದೇನು?
ಇತ್ತೀಚೆಗೆ ಐಎಎನ್ಎಸ್ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ್ದ ಹಿರಿಯ ನಟಿ ಶರ್ಮಿಳಾ ಟ್ಯಾಗೋರ್, ಏಕದೇವೋಪಾಸನೆಯನ್ನು (ಒಬ್ಬನೇ ದೇವರು ಎಂದು ನಂಬುವ ಪದ್ಧತಿ) ಪಾಲಿಸುವ ವಿವಿಧ ಧರ್ಮದ ಜನರಿಗೆ ವಂದೇ ಮಾತರಂ ಗೀತೆಯ ಮುಂದಿನ ಸಾಲುಗಳನ್ನು ಒಪ್ಪಿಕೊಳ್ಳುವುದು ಕಷ್ಟವಾಗಬಹುದು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು.

ಗೀತೆಯ ಮೊದಲ ಎರಡು ಸಾಲುಗಳು ಕೇವಲ ಮಾತೃಭೂಮಿಯ ವರ್ಣನೆ ಮತ್ತು ಪ್ರಶಂಸೆಯನ್ನು ಹೊಂದಿವೆ. ಆದರೆ ನಂತರದ ಸಾಲುಗಳಲ್ಲಿ ಬರುವ ‘ವಂದೇ ಕಾಳಿ, ವಂದೇ ದುರ್ಗಾ’ ಎಂಬಂತಹ ಹಿಂದೂ ದೇವತೆಗಳ ಉಲ್ಲೇಖವು ಇತರ ಧರ್ಮದವರಿಗೆ ಮುಜುಗರ ತರಬಹುದು. ಹೀಗಾಗಿ ದೇಶದ ಎಲ್ಲಾ ಧಾರ್ಮಿಕ ನಂಬಿಕೆಯ ಜನರನ್ನು ಒಗ್ಗೂಡಿಸಿಕೊಂಡು ಹೋಗುವ ನಿಟ್ಟಿನಲ್ಲಿ ಗೀತೆಯ ಮೊದಲ ಎರಡು ಪ್ಯಾರಾಗಳನ್ನಷ್ಟೇ ಉಳಿಸಿಕೊಳ್ಳುವುದು ಅತ್ಯಂತ ಸೂಕ್ತ ಎಂಬುದು ಶರ್ಮಿಳಾ ಅವರ ವಾದವಾಗಿತ್ತು.
ಕಲೆಯನ್ನು ಸಂಕುಚಿತಗೊಳಿಸದಿರಿ ಎಂದ ಕಂಗನಾ
ಶರ್ಮಿಳಾ ಟ್ಯಾಗೋರ್ ಅವರ ಈ ಸಂದರ್ಶನದ ವಿಡಿಯೋವನ್ನು ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡಿರುವ ಕಂಗನಾ ರಣಾವತ್, ಹಿರಿಯ ನಟಿಯ ಕಲಾತ್ಮಕ ದೃಷ್ಟಿಕೋನದ ಬಗ್ಗೆ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಶರ್ಮಿಳಾ ಜಿ ಅವರ ಅಭಿಪ್ರಾಯ ವ್ಯಕ್ತಪಡಿಸುವ ಹಕ್ಕನ್ನು ತಾನು ಗೌರವಿಸುವುದಾಗಿ ತಿಳಿಸಿರುವ ಕಂಗನಾ, ಆದರೆ ಓರ್ವ ಕಲಾವಿದೆಯಾಗಿ ಕಲೆ ಮತ್ತು ಕಾವ್ಯದ ಬಗ್ಗೆ ಅವರ ಈ ಸಂಕುಚಿತ ದೃಷ್ಟಿಕೋನವನ್ನು ಕಂಡು ತಮಗೆ ಆಘಾತವಾಗಿದೆ ಎಂದು ಬರೆದುಕೊಂಡಿದ್ದಾರೆ. ಕಾವ್ಯ ಅಥವಾ ಹಾಡಿನಲ್ಲಿ ಬರುವ ಪದಗಳು ಕೇವಲ ರೂಪಕಗಳಾಗಿರುತ್ತವೆ. ಅಪೇಕ್ಷಿತ ಪರಿಣಾಮವನ್ನು ಬೀರಲು ಕವಿ ತನ್ನ ಅಗಾಧವಾದ ಕಲ್ಪನಾಶಕ್ತಿಯನ್ನು ಬಳಸಿಕೊಂಡು ವಿಶಿಷ್ಟವಾದ ಹೋಲಿಕೆಗಳನ್ನು ನೀಡುತ್ತಾನೆ. ಬಂಕಿಮ್ ಚಂದ್ರ ಚಟರ್ಜಿ ಅವರಂತಹ ಶ್ರೇಷ್ಠ ಕಲಾಕೃತಿಯನ್ನು ಕೇವಲ ಧಾರ್ಮಿಕ ಆಚರಣೆಗೆ ಸೀಮಿತಗೊಳಿಸುವುದು ಕಲೆಗೆ ಮಾಡುವ ಅಪಚಾರ ಎಂದು ಅವರು ತೀವ್ರ ಅಸಮ್ಮತಿ ಸೂಚಿಸಿದ್ದಾರೆ.
ಶಕ್ತಿ ಎಂದರೆ ಕೇವಲ ದೇವಿಯಲ್ಲ, ಅದು ಸ್ವಾತಂತ್ರ್ಯದ ಕಿಚ್ಚು
ಗೀತೆಯ ಸಾಹಿತ್ಯದ ಹಿಂದಿನ ನೈಜ ಉದ್ದೇಶವನ್ನು ವಿವರಿಸಿರುವ ಕಂಗನಾ, ವಂದೇ ಮಾತರಂ ಕೇವಲ ಒಂದು ಧಾರ್ಮಿಕ ಗೀತೆಯಲ್ಲ, ಅದು ಭಾರತೀಯ ಸ್ವಾತಂತ್ರ್ಯ ಸಂಗ್ರಾಮದ ಜೀವನಾಡಿ ಎಂದು ಬಣ್ಣಿಸಿದ್ದಾರೆ. ಬಂಕಿಮ್ ಚಂದ್ರ ಚಟರ್ಜಿ ಅವರು ದೇಶವಾಸಿಗಳಲ್ಲಿ ಅಡಗಿರುವ ‘ಶಕ್ತಿ’ಯನ್ನು ಜಾಗೃತಗೊಳಿಸಲು ಈ ಗೀತೆಯನ್ನು ರಚಿಸಿದರು ಎಂದು ಅವರು ಸ್ಮರಿಸಿದ್ದಾರೆ. ಸ್ವಾಮಿ ವಿವೇಕಾನಂದರು ಯುವಕರಿಗೆ ‘ಉಕ್ಕಿನಂತಹ ಸ್ನಾಯು, ಕಬ್ಬಿಣದಂತಹ ನರಗಳು ಬೇಕು’ ಎಂದು ಕರೆ ನೀಡಿದಾಗ ಅವರು ಹವಾಮಾನ ವರದಿ ಹೇಳುತ್ತಿರಲಿಲ್ಲ, ಬದಲಾಗಿ ದೇಶದ ಶಕ್ತಿ ಜಾಗೃತಗೊಳ್ಳುವಂತೆ ಆಗ್ರಹಿಸುತ್ತಿದ್ದರು ಎಂದು ಕಂಗನಾ ಅತ್ಯುತ್ತಮ ಉದಾಹರಣೆ ನೀಡಿದ್ದಾರೆ.
ವೈದ್ಯರು ಕೂಡ ಮನುಷ್ಯನ ದೇಹದ ಸಾಮರ್ಥ್ಯವನ್ನು ಶಕ್ತಿ ಎಂದೇ ಕರೆಯುತ್ತಾರೆ. ಹೀಗಾಗಿ ಪ್ರತಿಯೊಂದನ್ನೂ ಧರ್ಮದ ಕನ್ನಡಕದಿಂದ ನೋಡುವುದನ್ನು ಬಿಟ್ಟು, ಹಿಂದೂ-ಮುಸ್ಲಿಂ ಮನಸ್ಥಿತಿಯಿಂದ ಹೊರಬನ್ನಿ ಎಂದು ಕಂಗನಾ ಮನವಿ ಮಾಡಿದ್ದಾರೆ. ಅಲ್ಲದೆ, ತಮ್ಮ ಬರಹದ ಕೊನೆಯಲ್ಲಿ “ನಾನು ನಿಮ್ಮನ್ನು ತುಂಬಾ ಪ್ರೀತಿಸುತ್ತೇನೆ, ನೀವು ಯಾವಾಗಲೂ ನೀಡುವ ಪ್ರೀತಿಯ ಆಲಿಂಗನ ನನಗಿಷ್ಟ” ಎಂದು ಶರ್ಮಿಳಾ ಮೇಲಿನ ತಮ್ಮ ವೈಯಕ್ತಿಕ ಗೌರವಕ್ಕೆ ಯಾವುದೇ ಚ್ಯುತಿಯಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.
ರಾಷ್ಟ್ರಗೀತೆಯ ಸ್ಥಾನಮಾನದ ಬಗ್ಗೆ ಮುಕೇಶ್ ಖನ್ನಾ ವಿವಾದಾತ್ಮಕ ಹೇಳಿಕೆ
‘ವಂದೇ ಮಾತರಂ’ ಗೀತೆಯ ಸುತ್ತಲಿನ ಈ ಚರ್ಚೆಯು ಮತ್ತೊಂದು ವಿವಾದದ ಬೆನ್ನಲ್ಲೇ ಮುನ್ನೆಲೆಗೆ ಬಂದಿರುವುದು ವಿಶೇಷ. ಇತ್ತೀಚೆಗಷ್ಟೇ ಹಿರಿಯ ನಟ ಮುಕೇಶ್ ಖನ್ನಾ ಕೂಡ ಇದೇ ವಿಚಾರವಾಗಿ ಮಾತನಾಡಿ, ‘ಜನ ಗಣ ಮನ’ ಬದಲಿಗೆ ‘ವಂದೇ ಮಾತರಂ’ ಗೀತೆಯನ್ನೇ ರಾಷ್ಟ್ರಗೀತೆಯಾಗಿ ಘೋಷಿಸಬೇಕು ಎಂದು ಆಗ್ರಹಿಸಿದ್ದರು. ‘ಜನ ಗಣ ಮನ’ ಗೀತೆಯು ಬ್ರಿಟಿಷ್ ರಾಣಿ ಎಲಿಜಬೆತ್ ಅವರನ್ನು ಹೊಗಳುವ ಉದ್ದೇಶದಿಂದ ರವೀಂದ್ರನಾಥ ಟ್ಯಾಗೋರ್ ಅವರಿಂದ ರಚಿಸಲ್ಪಟ್ಟಿತ್ತು ಎಂಬ ಗಂಭೀರ ಆರೋಪ ಮಾಡಿದ್ದ ಅವರು, ವಂದೇ ಮಾತರಂ ಗೀತೆಯೇ ಭಾರತದ ನೈಜ ಅಸ್ಮಿತೆಯನ್ನು ಪ್ರತಿಬಿಂಬಿಸುತ್ತದೆ ಎಂದು ಪ್ರತಿಪಾದಿಸಿದ್ದರು.
ಕಾಂಗ್ರೆಸ್ ಕಾರ್ಯಕಾರಿ ಸಮಿತಿ 1937ರಲ್ಲೇ ವಂದೇ ಮಾತರಂ ಗೀತೆಯ ಮೊದಲ ಎರಡು ಪ್ಯಾರಾಗಳನ್ನು ಮಾತ್ರ ಹಾಡುವ ನಿರ್ಧಾರ ತಳೆದಿತ್ತು. ಅದನ್ನೇ ಮುಂದುವರಿಸುವುದಾಗಿ ಇತ್ತೀಚೆಗೆ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಸಭೆಯಲ್ಲೂ ನಿರ್ಣಯ ಕೈಗಳ್ಳಲಾಗಿತ್ತು. ಇದೀಗ ಅದೇ ಹಳೆಯ ಚರ್ಚೆ ಮನರಂಜನಾ ಲೋಕದಲ್ಲೂ ಪ್ರತಿಧ್ವನಿಸುತ್ತಿದ್ದು, ಕಲೆ, ಧರ್ಮ ಮತ್ತು ರಾಷ್ಟ್ರೀಯತೆಯ ನಡುವಿನ ಸೂಕ್ಷ್ಮ ಗೆರೆಗಳ ಕುರಿತು ಹೊಸ ಸಂವಾದಕ್ಕೆ ಮುನ್ನುಡಿ ಬರೆದಿದೆ.
ಇದನ್ನೂ ಓದಿ : 2ನೇ ಟೆಸ್ಟ್ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾ ಕ್ಯಾಂಪ್ನಲ್ಲಿ ಆತಂಕ : ತಾಲೀಮು ತಪ್ಪಿಸಿಕೊಂಡ ರಾಹುಲ್, ಕುಲದೀಪ್



















