ನವದೆಹಲಿ : ದೇಶದ ಅಭಿವೃದ್ಧಿಗೆ ಅಡ್ಡಿಪಡಿಸುತ್ತಾ, ಸಮಾಜವನ್ನು ತಪ್ಪುದಾರಿಗೆ ಎಳೆಯುತ್ತಿರುವ ‘ನಕ್ಸಲ್ ಮನಸ್ಥಿತಿಯವರನ್ನು’ (ಬುದ್ಧಿಜೀವಿ/ನಗರ ನಕ್ಸಲರು) ಗುರುತಿಸಿ, ಸಂಪೂರ್ಣವಾಗಿ ಪ್ರತ್ಯೇಕಿಸುವ ಸಮಯ ಬಂದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನತೆಗೆ ಕರೆ ನೀಡಿದ್ದಾರೆ.
ಇಂದು (ಶನಿವಾರ) ಕೆಂಪು ಕೋಟೆಯ ಆವರಣದಲ್ಲಿ ನಡೆದ ಭಾರತದ 80ನೇ ಸ್ವಾತಂತ್ರ್ಯದಿನದ ಧ್ವಜಾರೋಹಣ ನೆರವೇರಿಸಿ ದೇಶವನ್ನುದ್ದೇಶಿಸಿ ಮಾತನಾಡಿದ ಅವರು, ಕಾಡಿನಲ್ಲಿ ಬಂದೂಕು ಹಿಡಿದು ಹಿಂಸೆ ಹರಡುತ್ತಿದ್ದ ನಕ್ಸಲರನ್ನು ತಡೆದು, ಅವರ ಪ್ರಭಾವವನ್ನು ಬಹುತೇಕ ಅಂತ್ಯಗೊಳಿಸಲಾಗಿದೆ. ಆದರೆ ಈಗ ಅಧಿಕಾರದ ಕಾರಿಡಾರ್ಗಳಲ್ಲಿ ಹಾಗೂ ಸರ್ಕಾರದ ಕಮಿಟಿಗಳಲ್ಲಿ ಸಲಹೆಗಾರರಾಗಿ ಕುಳಿತುಕೊಂಡಿರುವ ‘ನಕ್ಸಲ್ ಮನಸ್ಥಿತಿಯವರು’ ದೇಶದ ಭದ್ರತೆ ಮತ್ತು ಶಾಂತಿಗೆ ಹೊಸ ರೀತಿಯಲ್ಲಿ ಅಡಚಣೆಯಾಗಿದ್ದಾರೆ ಎಂದು ಪ್ರಧಾನಿ ತೀವ್ರ ಕಳವಳ ವ್ಯಕ್ತಪಡಿಸಿದರು.
ಅರಣ್ಯದಲ್ಲಿದ್ದ ನಕ್ಸಲರ ವಿರುದ್ಧ ಹೋರಾಡಲು ಈವರೆಗೆ 3,500ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿ ಪ್ರಾಣತ್ಯಾಗ ಮಾಡಿದ್ದಾರೆ. ಈ ತ್ಯಾಗವು ಯುದ್ಧದಲ್ಲಿ ಸಂಭವಿಸುವ ಸಾವುಗಳಿಗಿಂತಲೂ ಅಧಿಕವಾಗಿದೆ ಎಂದು ಉಲ್ಲೇಖಿಸಿದ ಪ್ರಧಾನಿ, 2014ರಲ್ಲಿ ಅಧಿಕಾರಕ್ಕೆ ಬಂದ ನಂತರ ಮಾವೋವಾದಿ ಹಿಂಸಾಚಾರವನ್ನು ಕೊನೆಯುಸಿರೆಳೆಯುವಂತೆ ಮಾಡಿದ್ದೇವೆ. ಆದರೆ ಈಗ ಸದ್ದಿಲ್ಲದೆ ಸಮಾಜದಲ್ಲಿ ಅಶಾಂತಿ ಬಿತ್ತಲು ಕಾಯುತ್ತಿರುವ ಬುದ್ಧಿಜೀವಿ ನಕ್ಸಲರನ್ನು ಮಟ್ಟಹಾಕಿ, ಯುವಜನತೆಯನ್ನು ಅಭಿವೃದ್ಧಿಯ ಮುಖ್ಯವಾಹಿನಿಗೆ ತರುವುದು ಇಂದಿನ ತುರ್ತು ಅಗತ್ಯವಾಗಿದೆ ಎಂದು ಹೇಳಿದರು.
“ಕ್ರೆಡಿಟ್ ನಿಮ್ಮದೇ ಇರಲಿ, ಬೆಂಬಲ ನೀಡಿ”
ಇದೇ ವೇಳೆ ‘ನಾರಿ ಶಕ್ತಿ ವಂದನ್ ಅಧಿನಿಯಮ’ (ಮಹಿಳಾ ಮೀಸಲಾತಿ ಮಸೂದೆ) ಕುರಿತೂ ಪ್ರಸ್ತಾಪಿಸಿದ ಪ್ರಧಾನಿ ಮೋದಿ, ರಾಜ್ಯ ವಿಧಾನಸಭೆಗಳು ಹಾಗೂ ಲೋಕಸಭೆಯಲ್ಲಿ ಶೇಕಡಾ 33ರಷ್ಟು ಮಹಿಳಾ ಪ್ರಾತಿನಿಧ್ಯವನ್ನು ಶೀಘ್ರವಾಗಿ ಖಾತರಿಪಡಿಸಲು ಎಲ್ಲಾ ರಾಜಕೀಯ ಪಕ್ಷಗಳು ಒಗ್ಗಟ್ಟಿನಿಂದ ಮುಂದೆ ಬರಬೇಕು ಎಂದು ಬಹಿರಂಗ ಮನವಿ ಮಾಡಿದರು.
ಸ್ಥಳೀಯ ಪಂಚಾಯಿತಿಗಳು ಹಾಗೂ ಪಾಲಿಕೆಗಳಲ್ಲಿ ಮಹಿಳಾ ಜನಪ್ರತಿನಿಧಿಗಳು ಅದ್ಭುತ ನಾಯಕತ್ವವನ್ನು ಪ್ರದರ್ಶಿಸುತ್ತಿದ್ದಾರೆ. ಆದರೆ ಕಳೆದ 40 ವರ್ಷಗಳಿಂದ ಸಂಸತ್ತು ಮತ್ತು ಶಾಸನಸಭೆಗಳಲ್ಲಿ ಮಹಿಳೆಯರಿಗೆ ಸಿಗಬೇಕಾದ ಸೂಕ್ತ ಪ್ರಾತಿನಿಧ್ಯ ರಾಜಕೀಯ ಆಟಗಳಿಗೆ ಬಲಿಯಾಗುತ್ತಾ ಬಂದಿದೆ. ಈ ಐತಿಹಾಸಿಕ ಹೆಜ್ಜೆಯ ಸಂಪೂರ್ಣ ‘ಕ್ರೆಡಿಟ್’ ಅನ್ನು ರಾಜಕೀಯ ಪಕ್ಷಗಳೇ ತೆಗೆದುಕೊಳ್ಳಲಿ, ಆದರೆ ಯಾವುದೇ ವಿಳಂಬವಿಲ್ಲದೆ ಮಹಿಳೆಯರ ಹಕ್ಕನ್ನು ಅವರಿಗೆ ನೀಡಲು ಎಲ್ಲರೂ ಕೈಜೋಡಿಸಬೇಕು ಎಂದು ಪ್ರಧಾನಿ ಕೋರಿದರು.
ಪ್ರಸ್ತುತ ಈ ಮೀಸಲಾತಿ ಮಸೂದೆಯ ಜಾರಿ ಮತ್ತು ಕ್ಷೇತ್ರ ಪುನರ್ವಿಂಗಡಣೆ (Delimitation) ಕುರಿತಂತೆ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ಭಿನ್ನಾಭಿಪ್ರಾಯಗಳಿದ್ದು, ಈ ಎಲ್ಲ ಗೊಂದಲಗಳನ್ನು ಬದಿಗೊತ್ತಿ ಒಮ್ಮತದ ನಿರ್ಧಾರಕ್ಕೆ ಬರಲು ಪ್ರಧಾನಿ ಕರೆ ನೀಡಿದ್ದಾರೆ.
ಇದನ್ನೂ ಓದಿ ; ಸಿಸಿಬಿ ACP ಎಚ್.ಎನ್. ಧರ್ಮೇಂದ್ರಗೆ ರಾಷ್ಟ್ರಪತಿಗಳ ವಿಶಿಷ್ಠ ಸೇವಾ ಪದಕ ಗೌರವ!



















