ಬೆಂಗಳೂರು : ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ ಅವರು ರಾಜ್ಯ ಮಹಿಳಾ ನಿಲಯ ಮತ್ತು ಸ್ವೀಕಾರ ಕೇಂದ್ರಕ್ಕೆ ಮೂರನೇ ಬಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೇಂದ್ರದಲ್ಲಿರುವ ಮಹಿಳೆಯರಿಗೆ ಸಿಗುತ್ತಿರುವ ಸೌಲಭ್ಯಗಳು, ಸುರಕ್ಷತೆ, ಆರೋಗ್ಯ ಸೇವೆ, ಆಹಾರ, ದೈನಂದಿನ ಆರೈಕೆ ಬಗ್ಗೆ ಪರಿಶೀಲನೆ ನಡೆಸಿದ ಅವರು, ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಈ ಹಿಂದೆ ಕೇಂದ್ರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ದೂರದರ್ಶನದ ವ್ಯವಸ್ಥೆ ಇಲ್ಲದಿರುವುದು, ಕುಡಿಯುವ ನೀರು ಮತ್ತು ಬಿಸಿನೀರಿನ ಸೌಲಭ್ಯಗಳ ಕೊರತೆ ಹಾಗೂ ಕೆಲವು ಸಿಬ್ಬಂದಿ ಕಿರುಕುಳ ನೀಡುತ್ತಿದ್ದಾರೆ ಎಂಬ ದೂರುಗಳು ಕೇಳಿಬಂದಿದ್ದವು. ಆದರೆ ಈ ಬಾರಿ ಪರಿಶೀಲನೆ ನಡೆಸಿದಾಗ ಕೇಂದ್ರದ ಸೌಲಭ್ಯಗಳು ಮತ್ತು ಒಟ್ಟಾರೆ ವ್ಯವಸ್ಥೆಯಲ್ಲಿ ಸಾಕಷ್ಟು ಸುಧಾರಣೆ ಕಂಡುಬಂದಿದೆ ಎಂದು ಡಾ. ನಾಗಲಕ್ಷ್ಮಿ ಚೌಧರಿ ತಿಳಿಸಿದ್ದಾರೆ.
ಪ್ರಸ್ತುತ ರಾಜ್ಯ ಮಹಿಳಾ ನಿಲಯದಲ್ಲಿ ಒಟ್ಟು 39 ಮಹಿಳೆಯರು ವಾಸವಾಗಿದ್ದು, ಅವರಲ್ಲಿ 31 ಮಂದಿಗೆ ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳಿವೆ. ಹೀಗಾಗಿ ಅವರ ಆರೋಗ್ಯ, ಪೌಷ್ಟಿಕ ಆಹಾರ ಮತ್ತು ದಿನನಿತ್ಯದ ಆರೈಕೆಗೆ ವಿಶೇಷ ಗಮನ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಈಗ ಕೇಂದ್ರದಲ್ಲಿ ಕುಡಿಯುವ ನೀರು ಮತ್ತು ಬಿಸಿನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ. ಜುಲೈ ತಿಂಗಳಿನಿಂದ ವಾರಕ್ಕೆ ಒಂದು ಬಾರಿ ಮಾಂಸಾಹಾರ ನೀಡಲಾಗುತ್ತಿದೆ. ಹಲವು ಮಹಿಳೆಯರಲ್ಲಿ ರಕ್ತಹೀನತೆ ಕಂಡುಬಂದಿರುವ ಹಿನ್ನೆಲೆಯಲ್ಲಿ ಪ್ರತಿದಿನ ಮೊಟ್ಟೆ ನೀಡುವುದರ ಜೊತೆಗೆ ಕಬ್ಬಿಣದ ಮಾತ್ರೆಗಳನ್ನು ನೀಡುವಂತೆ ಸೂಚಿಸಲಾಗಿದೆ.
ಕೇಂದ್ರದಲ್ಲಿರುವ ಮಹಿಳೆಯರಿಗೆ ಪ್ರತಿ ಮೂರು ತಿಂಗಳಿಗೊಮ್ಮೆ ವೈದ್ಯಕೀಯ ತಪಾಸಣೆ ನಡೆಸಲಾಗುತ್ತಿದೆ. ಆರೋಗ್ಯ ಮತ್ತು ಸುರಕ್ಷತೆಯ ದೃಷ್ಟಿಯಿಂದ ಮಹಿಳೆಯರನ್ನು ಆಸ್ಪತ್ರೆಗೆ ಕರೆದೊಯ್ಯಲು ಸಾರ್ವಜನಿಕ ಸಾರಿಗೆಯನ್ನೇ ಅವಲಂಬಿಸದೆ, ಸರ್ಕಾರದಿಂದ ಪ್ರತ್ಯೇಕ ವಾಹನ ಒದಗಿಸುವಂತೆ ಮಹಿಳಾ ಆಯೋಗ ಶಿಫಾರಸು ಮಾಡಲಿದೆ ಎಂದು ಡಾ. ನಾಗಲಕ್ಷ್ಮಿ ಚೌಧರಿ ತಿಳಿಸಿದ್ದಾರೆ. ಮಹಿಳೆಯರು ಕೇಂದ್ರದಿಂದ ಹೊರಬಂದ ನಂತರವೂ ಅವರ ಸುರಕ್ಷತೆ ಮತ್ತು ಪುನರ್ವಸತಿ ಮುಂದುವರಿಯಬೇಕು ಎಂದು ಅವರು ಒತ್ತಿ ಹೇಳಿದ್ದಾರೆ. ಬಿಡುಗಡೆಯಾದ ಬಳಿಕ ಎರಡು ವರ್ಷಗಳ ಕಾಲ ಪುನರ್ವಸತಿ ಮತ್ತು ಸುರಕ್ಷತಾ ಮೇಲ್ವಿಚಾರಣೆ ನಡೆಸಲು ನಿರ್ಧರಿಸಲಾಗಿದ್ದು, ಮೊದಲ ವರ್ಷದಲ್ಲಿ ಪ್ರತಿ ಮೂರು ತಿಂಗಳಿಗೊಮ್ಮೆ ಹಾಗೂ ಎರಡನೇ ವರ್ಷದಲ್ಲಿ ಪ್ರತಿ ಆರು ತಿಂಗಳಿಗೊಮ್ಮೆ ಪರಿಶೀಲನೆ ನಡೆಸುವ ವ್ಯವಸ್ಥೆ ಇರಲಿದೆ.
ಇನ್ನು, ಕೇಂದ್ರದಲ್ಲಿ ವಾಸಿಸುವ ಮಹಿಳೆಯರ ಹಾಜರಾತಿ, ರಜೆ, ಬಿಡುಗಡೆ ಹಾಗೂ ಇತರೆ ವಿವರಗಳಿಗೆ ಸಂಬಂಧಿಸಿದಂತೆ ಸಮಗ್ರ ವರದಿ ಸಿದ್ಧಪಡಿಸಿ ಉಪ ಆಯುಕ್ತರ ನೇತೃತ್ವದ ನಿರ್ವಹಣಾ ಸಮಿತಿಗೆ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಈ ಹಿಂದೆ ಜಾರಿಯಲ್ಲಿದ್ದ ಎಸ್ಒಪಿ ಪ್ರಕಾರ ಮಹಿಳೆಯರಿಗೆ ಗೃಹ ಕೆಲಸ ಕೈಗೊಳ್ಳಲು ಅವಕಾಶವಿತ್ತು, ಆದರೆ ಕಳೆದ ಐದು ವರ್ಷಗಳಿಂದ ಈ ಅವಕಾಶ ನೀಡಲಾಗುತ್ತಿಲ್ಲ ಎಂಬ ವಿಚಾರವೂ ಪರಿಶೀಲನೆ ವೇಳೆ ಗಮನಕ್ಕೆ ಬಂದಿದೆ. ಈ ಬಗ್ಗೆ ಅಧಿಕಾರಿಗಳು ಪರಿಶೀಲನೆ ನಡೆಸಿ, ಅನ್ವಯವಾಗುವ ನಿಯಮಗಳನ್ನು ಸರಿಯಾಗಿ ಜಾರಿಗೊಳಿಸುವಂತೆ ಡಾ. ನಾಗಲಕ್ಷ್ಮಿ ಚೌಧರಿ ಸೂಚಿಸಿದ್ದಾರೆ.
ಹಾಗೆಯೇ ಮಹಿಳೆಯರ ಸುರಕ್ಷತೆ, ಗೌರವ, ಆರೋಗ್ಯ ಸೇವೆ, ಪುನರ್ವಸತಿ ಮತ್ತು ಒಟ್ಟಾರೆ ಕ್ಷೇಮಾಭಿವೃದ್ಧಿಯೇ ಅತ್ಯಂತ ಪ್ರಮುಖ ಆದ್ಯತೆಯಾಗಬೇಕು ಎಂದು ಡಾ. ನಾಗಲಕ್ಷ್ಮಿ ಚೌಧರಿ ಪುನರುಚ್ಚರಿಸಿದ್ದಾರೆ. ಮಹಿಳೆಯರು ಕೇಂದ್ರದಿಂದ ಹೊರಬಂದ ಬಳಿಕವೂ ಅವರ ಜೀವನ ಸುಗಮವಾಗುವಂತೆ ನಿರಂತರ ಬೆಂಬಲ ನೀಡಬೇಕು ಎಂದು ಅವರು ತಿಳಿಸಿದ್ದಾರೆ. ಅಗತ್ಯವಿರುವ ಎಲ್ಲ ಕ್ರಮಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದು, ಮಹಿಳಾ ನಿಲಯದಲ್ಲಿರುವ ಪ್ರತಿಯೊಬ್ಬರ ಆರೋಗ್ಯ, ಸುರಕ್ಷತೆ ಮತ್ತು ಗೌರವವನ್ನು ಕಾಪಾಡುವುದು ಅಧಿಕಾರಿಗಳ ಪ್ರಮುಖ ಜವಾಬ್ದಾರಿಯಾಗಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ : ವಯಸ್ಸಿನ ಮಿತಿಯಿಲ್ಲದ ‘ಬಿಗ್ ಬಾಸ್-13’ ಅಗ್ನಿಪರೀಕ್ಷೆ..!


















