ನವದೆಹಲಿ : ಕೋಲಾಹಲದಲ್ಲೇ ಮುಂದುವರಿದ ಸಂಸತ್ತಿನ ಮುಂಗಾರು ಅಧಿವೇಶನದ ಕೊನೆಯ ವಾರದಲ್ಲೂ ಗದ್ದಲ, ಗೊಂದಲ ಶಮನಗೊಂಡಿಲ್ಲ. ಇದೇ ಗುರುವಾರ ಅಧಿವೇಶನ ಕೊನೆಗೊಳ್ಳಲಿದ್ದು, ಇಂದು ಕೂಡ ಸಂಸತ್ ಭವನದ ಮುಂದೆ ಹೈಡ್ರಾಮಾ ನಡೆದಿದೆ. ‘ಮಕರ ದ್ವಾರ’ದ ಹೊರಭಾಗದಲ್ಲಿ ಪ್ರತಿಪಕ್ಷ ಮತ್ತು ಆಡಳಿತಾರೂಢ ಎನ್ಡಿಎ ಸಂಸದರು ಎದುರುಬದುರಾಗಿ ನಿಂತು ಪರಸ್ಪರರ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಭಾರಿ ಪ್ರತಿಭಟನೆ ನಡೆಸಿದರು. ಪರಿಸ್ಥಿತಿ ಕೈಮೀರದಂತೆ ತಡೆಯಲು ಭದ್ರತಾ ಸಿಬ್ಬಂದಿ ಇತ್ತಂಡಗಳ ನಡುವೆ ಸಾಲಾಗಿ ನಿಂತು ತಡೆಯೊಡ್ಡುವಂತಾಯಿತು.
ದೆಹಲಿಯಲ್ಲಿ ವಿದ್ಯಾರ್ಥಿಗಳ ಮೇಲಿನ ಪೊಲೀಸ್ ದೌರ್ಜನ್ಯ ಮತ್ತು ಅಯೋಧ್ಯೆಯ ರಾಮಮಂದಿರ ದೇಣಿಗೆ ಅಕ್ರಮದ ಕುರಿತು ವಿಪಕ್ಷಗಳು ಪ್ರತಿಭಟಿಸುತ್ತಿದ್ದರೆ, ಆಡಳಿತ ಪಕ್ಷವು ಜಾರ್ಖಂಡ್ನಲ್ಲಿ ವಿದ್ಯಾರ್ಥಿಗಳ ಮೇಲಿನ ಲಾಠಿಚಾರ್ಜ್ ವಿಚಾರ ಮುಂದಿಟ್ಟುಕೊಂಡು ರಾಹುಲ್ ಗಾಂಧಿ ವಿರುದ್ಧ ತಿರುಗಿಬಿದ್ದಿದೆ.
ವಿಪಕ್ಷಗಳ ಪ್ರಮುಖ ಎರಡು ಬೇಡಿಕೆಗಳು
ದೆಹಲಿಯ ಜಂತರ್ ಮಂತರ್ನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ಮೇಲಿನ ಪೊಲೀಸ್ ಕ್ರಮಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಅಮಿತ್ ಶಾ ಸಂಸತ್ತಿಗೆ ಆಗಮಿಸಿ ಸಷ್ಟನೆ ನೀಡಬೇಕು ಮತ್ತು ಅಯೋಧ್ಯೆಯ ರಾಮಮಂದಿರ ದೇಣಿಗೆ ಹಂಚಿಕೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಕುರಿತು ಸದನದಲ್ಲಿ ಚರ್ಚೆ ನಡೆಸಬೇಕು ಎಂದು ಕಾಂಗ್ರೆಸ್, ಸಮಾಜವಾದಿ ಪಕ್ಷ ಸೇರಿದಂತೆ ‘ಇಂಡಿಯಾ’ ಒಕ್ಕೂಟದ ಸಂಸದರು ಪಟ್ಟು ಹಿಡಿದಿದ್ದಾರೆ. ವಿಪಕ್ಷಗಳ ಸತತ ಗದ್ದಲದಿಂದಾಗಿ ಲೋಕಸಭೆ ಕಲಾಪ ಪದೇಪದೇ ಮುಂದೂಡಲ್ಪಟ್ಟಿದೆ. ಗೃಹ ಸಚಿವರು ಉತ್ತರಿಸಲು ಸಿದ್ಧರಿದ್ದಾರೆ, ಕಲಾಪ ನಡೆಯಲು ಸಹಕರಿಸಿ ಎಂದು ಸಭಾಪತಿ ಓಂ ಬಿರ್ಲಾ ಮನವಿ ಮಾಡಿದರೂ ಸದನದಲ್ಲಿ ಶಾಂತಿ ನೆಲಸಿಲ್ಲ.
ಎನ್ಡಿಎ ತಿರುಗೇಟು
ಮತ್ತೊಂದೆಡೆ, ಕಾಂಗ್ರೆಸ್ ಮಿತ್ರಪಕ್ಷ ಆಡಳಿತದಲ್ಲಿರುವ ಜಾರ್ಖಂಡ್ನಲ್ಲಿ ಉದ್ಯೋಗಾಕಾಂಕ್ಷಿ ವಿದ್ಯಾರ್ಥಿಗಳ ಮೇಲೆ ಸೋಮವಾರ ನಡೆದ ಲಾಠಿಪ್ರಹಾರವನ್ನು ಖಂಡಿಸಿ ಬಿಜೆಪಿ ಸಂಸದರು ಧರಣಿ ಆರಂಭಿಸಿದ್ದಾರೆ. ರಾಹುಲ್ ಗಾಂಧಿ ಅವರು ಚರ್ಚೆಯಿಂದ ಓಡಿಹೋಗುತ್ತಿದ್ದಾರೆ ಮತ್ತು ದ್ವಂದ್ವ ನೀತಿ ಅನುಸರಿಸುತ್ತಿದ್ದಾರೆ ಎಂದು ಅನುರಾಗ್ ಠಾಕೂರ್ ಹಾಗೂ ಕಂಗನಾ ರಣಾವತ್ ಸೇರಿದಂತೆ ಹಲವು ನಾಯಕರು ಆರೋಪಿಸಿದ್ದಾರೆ.
ಪ್ರತಿಭಟನೆ ವೇಳೆ ಬಿಜೆಪಿ ಸಂಸದ ಮುಕೇಶ್ ದಲಾಲ್ “ನಾಚಿಕೆಯಾಗಬೇಕು ರಾಹುಲ್ ಗಾಂಧಿ. ಜಾರ್ಖಂಡ್ ನಲ್ಲಿ ವಿದ್ಯಾರ್ಥಿಗಳ ಮೇಲಾದ ದೌರ್ಜನ್ಯಕ್ಕೆ ರಾಹುಲ್ ಗಾಂಧಿ ಉತ್ತರ ನೀಡಲಿ” ಎಂದು ಘೋಷಣೆ ಕೂಗುತ್ತಿದ್ದಾಗ, ಅಲ್ಲಿಗೆ ಬಂದ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ “ರಾಹುಲ್ ಗಾಂಧಿ ಈಗಾಗಲೇ ಜಾರ್ಖಂಡ್ ವಿದ್ಯಾರ್ಥಿಗಳನ್ನು ಭೇಟಿಯಾಗಿದ್ದಾರೆ” ಎಂದು ನಗುತ್ತಲೇ ಟಾಂಗ್ ನೀಡಿ ಮುನ್ನಡೆದಿದ್ದಾರೆ.
ರಾಹುಲ್ ಗಾಂಧಿ ಸ್ಪಷ್ಟನೆ
ಜಾರ್ಖಂಡ್ನಲ್ಲಿ ವಿದ್ಯಾರ್ಥಿಗಳ ಮೇಲಿನ ಬಲಪ್ರಯೋಗವನ್ನು ತಾವು ಖಂಡಿಸುವುದಾಗಿ ಸೋಮವಾರವೇ ತಿಳಿಸಿರುವ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ, ವಿದ್ಯಾರ್ಥಿಗಳ ಜೊತೆ ಸರ್ಕಾರ ಮಾತುಕತೆ ನಡೆಸಿ ಸಮಸ್ಯೆ ಪರಿಹರಿಸಬೇಕು ಎಂದಿದ್ದಾರೆ.
ಇನ್ನು ಕಾಂಗ್ರೆಸ್ ಸಂಸದ ಮಾಣಿಕಂ ಠಾಗೋರ್ ಮಾತನಾಡಿ, ದೆಹಲಿ ಪೊಲೀಸ್ ಇಲಾಖೆ ಗೃಹ ಸಚಿವಾಲಯದ ಅಡಿಯಲ್ಲೇ ಬರುವುದರಿಂದ ಅಮಿತ್ ಶಾ ಅವರೇ ಹೊಣೆ ಹೊರಬೇಕು, ಜಾರ್ಖಂಡ್ ಘಟನೆಗೆ ಅಲ್ಲಿನ ಸರ್ಕಾರ ಉತ್ತರಿಸುತ್ತದೆ ಎಂದು ಸಮರ್ಥಿಸಿಕೊಂಡಿದ್ದಾರೆ. ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಮಾತನಾಡಿ, ಸರ್ಕಾರ ಚರ್ಚೆಯಿಂದ ಓಡಿಹೋಗುತ್ತಿದ್ದು, ಶಿಕ್ಷಣ ಮತ್ತು ರಾಮಮಂದಿರದಂತಹ ಸೂಕ್ಷ್ಮ ವಿಚಾರಗಳ ಕುರಿತು ಸಂಸತ್ತಿನಲ್ಲಿ ತಕ್ಷಣವೇ ಚರ್ಚೆಗೆ ಅವಕಾಶ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಇದನ್ನೂ ಓದಿ : ಬೆಂಗಳೂರು ಮತದಾರರ ಪಟ್ಟಿಯಿಂದ ಪ್ರಕಾಶ್ ರಾಜ್ ಹೆಸರು ಡಿಲೀಟ್ : SIR ವಿರುದ್ಧ ನಟ ಆಕ್ರೋಶ!


















