ನವದೆಹಲಿ : ವಿವಿಧ ರಾಜಕೀಯ ಪಕ್ಷಗಳ ನಾಯಕರು ಇದೀಗ ಜೆನ್ ಜೀ ಪೀಳಿಕೆಯನ್ನು ತಲುಪಲು ಯತ್ನಿಸುತ್ತಿರುವಂತೆಯೇ ಕಾಂಗ್ರೆಸ್ ನಾಯಕ ಹಾಗೂ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ನವ ಪೀಳಿಗೆಗಾಗಿಯೇ ಇನ್ಸ್ಟಾಗ್ರಾಮ್ನಲ್ಲಿ ‘ಆಸ್ಕ್ ಮಿ ಎನಿಥಿಂಗ್’ (AMA) ಅಂದರೆ “ಏನನ್ನಾದರೂ ಕೇಳಿ” ಎಂಬ ಪ್ರಶೋತ್ತರ ಸರಣಿಯನ್ನು ನಡೆಸಿದ್ದಾರೆ. ಈ ವೇಳೆ ದೇಶದ ಶಿಕ್ಷಣ ವ್ಯವಸ್ಥೆಯ ಪತನ, ವಿದ್ಯಾರ್ಥಿಗಳ ಹೋರಾಟ ಹಾಗೂ ರಾಜಕೀಯ ಸೇರಿದಂತೆ ಹಲವು ವಿಷಯಗಳ ಕುರಿತು ಯುವಜನರು ಕೇಳಿದ ಪ್ರಶ್ನೆಗಳಿಗೆ ಮುಕ್ತವಾಗಿ ಉತ್ತರಿಸಿದ್ದಾರೆ.
“ನಾನು ನಿಮ್ಮ ಮಾತುಗಳನ್ನು ಕೇಳಲು ಬಂದಿದ್ದೇನೆ” ಎಂದು ಎಕ್ಸ್ (ಟ್ವಿಟರ್) ಮೂಲಕ ಯುವಜನರನ್ನು ಆಹ್ವಾನಿಸಿದ್ದ ರಾಹುಲ್ ಗಾಂಧಿ, ಕೇವಲ ವಿಪಕ್ಷಗಳ ಆಡಳಿತವಿರುವ ರಾಜ್ಯಗಳಷ್ಟೇ ಅಲ್ಲದೆ, ತಮ್ಮದೇ ಮೈತ್ರಿಕೂಟದ (ಇಂಡಿಯಾ ಒಕ್ಕೂಟ) ಆಡಳಿತವಿರುವ ಜಾರ್ಖಂಡ್ನಲ್ಲಿ ನಡೆಯುತ್ತಿರುವ ವಿದ್ಯಾರ್ಥಿ ಪ್ರತಿಭಟನೆಯ ಬಗ್ಗೆಯೂ ಉಲ್ಲೇಖಿಸಿ, “ಕೇಂದ್ರ, ಕಾಂಗ್ರೆಸ್ ಅಥವಾ ಜಾರ್ಖಂಡ್ ಯಾವುದೇ ಸರ್ಕಾರವಾಗಿದ್ದರೂ ವಿದ್ಯಾರ್ಥಿಗಳ ಧ್ವನಿಗೆ ಕಿವಿಗೊಡಬೇಕು” ಎಂದು ಪ್ರತಿಪಾದಿಸಿದರು.
ಇದೇ ವೇಳೆ ದೇಶದ ಶಿಕ್ಷಣ ವ್ಯವಸ್ಥೆಯು ಯುವಕರ ಚಿಂತನಾ ಶಕ್ತಿಯನ್ನು ನಾಶಪಡಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ರಾಷ್ಟ್ರೀಯ ಸ್ವಯಂಸೇವಕ ಸಂಘವು (ಆರ್ಎಸ್ಎಸ್) ಶಿಕ್ಷಣ ರಂಗವನ್ನು ಕಬಳಿಸಿದ ನಂತರ ಯುವಕರು ಸ್ವತಂತ್ರವಾಗಿ ಆಲೋಚಿಸುವುದನ್ನೇ ತಡೆಯುವ ಕೆಲಸವಾಗುತ್ತಿದೆ ಎಂದು ಆರೋಪಿಸಿದ್ದಾರೆ. ಇದಲ್ಲದೆ ಶಿಕ್ಷಣ ಪಡೆಯಲು ಹೋರಾಡುತ್ತಿರುವ ಯುವತಿಯರನ್ನು ಭಾರತದ ಶಕ್ತಿ ಎಂದು ಬಣ್ಣಿಸಿದ ಅವರು, ಪ್ರತಿಯೊಂದು ಕ್ಷೇತ್ರದಲ್ಲೂ ಮಹಿಳೆಯರಿಗೆ ಸಮಾನ ಹಾಗೂ ಅದಕ್ಕಿಂತ ಹೆಚ್ಚಿನ ಅವಕಾಶ ಸಿಗಬೇಕು ಎಂದು ಬೆಂಬಲ ಸೂಚಿಸಿದ್ದಾರೆ.
ಬ್ಯಾಟ್ಮ್ಯಾನ್, ಬಿಜೆಪಿಯ ನೆಚ್ಚಿನ ರಾಜಕಾರಣಿ
ಪ್ರಶೋತ್ತರ ವೇಳೆಯಲ್ಲಿ ಹರಿದುಬಂದ ತಮಾಷೆಯ ಹಾಗೂ ಆಸಕ್ತಿಕರ ಪ್ರಶ್ನೆಗಳಿಗೂ ರಾಹುಲ್ ಗಾಂಧಿ ತಮ್ಮದೇ ಚಾಕಚಕ್ಯತೆಯ ಶೈಲಿಯಲ್ಲಿ ಉತ್ತರಿಸಿ ಗಮನ ಸೆಳೆದಿದ್ದಾರೆ.. “ನೀವು ಬ್ಯಾಟ್ಮ್ಯಾನಾ?” ಎಂದು ಯುವಜನರೊಬ್ಬರು ಕೇಳಿದ ಲಘು ಪ್ರಶ್ನೆಗೆ, “ಇಲ್ಲಿಯವರೆಗೆ ನನ್ನನ್ನು ಹಾಗೂ ಬ್ಯಾಟ್ಮ್ಯಾನ್ನನ್ನು ಯಾರೂ ಒಂದೇ ಕೋಣೆಯಲ್ಲಿ ಒಟ್ಟಿಗೆ ನೋಡಿಲ್ಲ, ಹಾಗಾಗಿ ನೀವೇ ಆಲೋಚಿಸಿ!” ಎಂದು ತಮಾಷೆಯಾಗಿ ಉತ್ತರಿಸಿದ್ದು ಜಾಲತಾಣಗಳಲ್ಲಿ ವೈರಲ್ ಆಗಿದೆ.
ಇನ್ನು ಬಿಜೆಪಿಯಲ್ಲಿ ನಿಮಗಿಷ್ಟವಾದ ರಾಜಕಾರಣಿ ಯಾರು ಎಂಬ ಪ್ರಶ್ನೆಗೆ, ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರ ಹೆಸರನ್ನು ಹೇಳಿದ್ದಾರೆ. “ಅವರ ಜೊತೆಗಿನ ಒಡನಾಟ ಚೆನ್ನಾಗಿದೆ. ಅವರು ಸೈನಿಕ, ಇತಿಹಾಸ ತಜ್ಞರು. ಹಲೋ ಅಮರಿಂದರ್ ಅಂಕಲ್” ಎಂದು ಹೇಳಿ, ಅವರನ್ನು ಸ್ಮರಿಸಿದ್ದಾರೆ. ಜೊತೆಗೆ ಬುದ್ಧ, ಗುರುನಾನಕ್, ಬಸವಣ್ಣ, ಬಿರ್ಸಾ ಮುಂಡಾ, ಪೆರಿಯಾರ್, ಅಂಬೇಡ್ಕರ್ ಹಾಗೂ ಗಾಂಧೀಜಿಯವರ ತತ್ವಶಾಸ್ತ್ರಗಳು ತಮ್ಮ ಚಿಂತನೆಯನ್ನು ರೂಪಿಸಿವೆ ಎಂದು ತಿಳಿಸಿದ್ದಾರೆ. ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಪ್ರಮುಖ ನಾಯಕರು ಇನ್ಸ್ಟಾಗ್ರಾಮ್ ಮೂಲಕ ಯುವಜನರನ್ನು ತಲುಪಲು ಮುಂದಾಗುತ್ತಿರುವ ಬೆನ್ನಲ್ಲೇ, ರಾಹುಲ್ ಗಾಂಧಿ ಅವರ ಈ ಹೊಸ ಪ್ರಯತ್ನ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಇದನ್ನೂ ಓದಿ : UPI ಮೂಲಕ 2 ಸಾವಿರ ರೂ. ಕಳುಹಿಸಲು ಶುಲ್ಕ ಪಾವತಿಸಬೇಕಾ? ಇಲ್ಲಿದೆ ವಾಸ್ತವ



















