ಬಾಂಗ್ಲಾದೇಶ : ಬಾಂಗ್ಲಾದೇಶದ ಮಾಜಿ ನಾಯಕ ಹಾಗೂ ಸ್ಟಾರ್ ಆಲ್ರೌಂಡರ್ ಶಕೀಬ್ ಅಲ್ ಹಸನ್ ಅವರ ಮಗುರಾ ಜಿಲ್ಲೆಯಲ್ಲಿರುವ ನಿವಾಸದ ಮೇಲೆ ಅಪರಿಚಿತ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ. ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಅವರು ದೆಹಲಿಯಿಂದ ನಡೆಸಿದ ವರ್ಚುವಲ್ ಸುದ್ದಿಗೋಷ್ಠಿಯಲ್ಲಿ ಶಕೀಬ್ ಭಾಗವಹಿಸಿದ ಕೆಲವೇ ಗಂಟೆಗಳಲ್ಲಿ ಈ ಆಘಾತಕಾರಿ ಘಟನೆ ನಡೆದಿದ್ದು, ಬಾಂಗ್ಲಾದೇಶದಲ್ಲಿ ರಾಜಕೀಯ ಉದ್ವಿಗ್ನತೆ ಮತ್ತಷ್ಟು ಹೆಚ್ಚಾಗಿದೆ.
ಬುಧವಾರ ರಾತ್ರಿ ಸ್ಥಳೀಯ ಕಾಲಮಾನ ಸುಮಾರು ಎಂಟು ಮುಕ್ಕಾಲು ಗಂಟೆ ಸುಮಾರಿಗೆ ಶಕೀಬ್ ಅಲ್ ಹಸನ್ ಅವರ ಮನೆಗೆ ನುಗ್ಗಿದ ಅಪರಿಚಿತ ದುಷ್ಕರ್ಮಿಗಳ ಗುಂಪೊಂದು, ಏಕಾಏಕಿ ಕಲ್ಲು ಮತ್ತು ಇಟ್ಟಿಗೆಗಳನ್ನು ತೂರಿ ದಾಂಧಲೆ ನಡೆಸಿದೆ. ಕಿಟಕಿ ಗಾಜುಗಳನ್ನು ಪುಡಿಪುಡಿ ಮಾಡಿರುವ ದುಷ್ಕರ್ಮಿಗಳು, ಮನೆಯನ್ನು ಸುಟ್ಟುಹಾಕುವ ಯತ್ನ ಮಾಡಿದ್ದಾರೆ. ಸ್ಥಳೀಯ ಮಾಧ್ಯಮಗಳ ವರದಿಯ ಪ್ರಕಾರ, ನಿವಾಸದ ಮೇಲೆ ಪೆಟ್ರೋಲ್ ಬಾಂಬ್ಗಳನ್ನು ಸಹ ಎಸೆಯಲಾಗಿದೆ. ದಾಳಿಯ ಸಮಯದಲ್ಲಿ ಪಟಾಕಿ ಸಿಡಿಸಿದಂತಹ ಭಾರಿ ಸ್ಫೋಟದ ಶಬ್ದಗಳು ಕೇಳಿಬಂದಿವೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಘಟನೆ ಕುರಿತು ಪ್ರತಿಕ್ರಿಯಿಸಿರುವ ಮಗುರಾ ಸದರ್ ಪೊಲೀಸ್ ಠಾಣೆಯ ಅಧಿಕಾರಿ ಅಬ್ದುಲ್ಲಾ ಅಲ್ ಮಾಮುನ್, ದುಷ್ಕರ್ಮಿಗಳು ಕಿಟಕಿಗಳನ್ನು ಧ್ವಂಸಗೊಳಿಸಿ, ಬೆಂಕಿ ಹಚ್ಚಲು ಯತ್ನಿಸಿರುವುದನ್ನು ಖಚಿತಪಡಿಸಿದ್ದಾರೆ. ಆದರೆ ಪೆಟ್ರೋಲ್ ಬಾಂಬ್ ಬಳಕೆಯ ಬಗ್ಗೆ ಪೊಲೀಸರು ಅಧಿಕೃತವಾಗಿ ಇನ್ನೂ ದೃಢಪಡಿಸಿಲ್ಲ. ಸದ್ಯ ಯಾವುದೇ ಪ್ರಾಣಹಾನಿ ವರದಿಯಾಗಿಲ್ಲ. ಮುಂಜಾಗ್ರತಾ ಕ್ರಮವಾಗಿ ಇದೀಗ ಮನೆಯ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದೆ.
ಮಾಜಿ ಪ್ರಧಾನಿ ಶೇಖ್ ಹಸೀನಾ ಸುದ್ದಿಗೋಷ್ಠಿಯಲ್ಲಿ ಭಾಗಿ
ಈ ದಾಳಿಗೂ ಮುನ್ನ, ದೆಹಲಿಯಿಂದ ಶೇಖ್ ಹಸೀನಾ ಅವರು ಸೌತ್ ಏಷ್ಯಾ ಫಾರಿನ್ ಕರೆಸ್ಪಾಂಡೆಂಟ್ಸ್ ಕ್ಲಬ್ ಆಯೋಜಿಸಿದ್ದ ವರ್ಚುವಲ್ ಮಾಧ್ಯಮ ಸಂವಾದದಲ್ಲಿ ಮಾತನಾಡಿದ್ದರು. ಈ ಕಾರ್ಯಕ್ರಮದಲ್ಲಿ ಶಕೀಬ್ ಅಲ್ ಹಸನ್ ಕೂಡ ಉಪಸ್ಥಿತರಿದ್ದರು. ಜುಲೈ-ಆಗಸ್ಟ್ ತಿಂಗಳಲ್ಲಿ ನಡೆದ ವಿದ್ಯಾರ್ಥಿಗಳ ಪ್ರತಿಭಟನೆ ಮತ್ತು ಆಂದೋಲನವು ಒಂದು “ಪೂರ್ವನಿಯೋಜಿತ ಆಡಳಿತ ಬದಲಾವಣೆಯ ತಂತ್ರ” ಎಂದು ಹಸೀನಾ ಇದೇ ವೇಳೆ ಸಮರ್ಥಿಸಿಕೊಂಡಿದ್ದರು. ಹಸೀನಾ ಅವರ ಈ ಕಾರ್ಯಕ್ರಮದಲ್ಲಿ ಶಕೀಬ್ ಕಾಣಿಸಿಕೊಂಡಿದ್ದೇ ಅವರ ಮೇಲಿನ ದಾಳಿಗೆ ಪ್ರಮುಖ ಕಾರಣ ಎಂದು ಶೇಖ್ ಹಸೀನಾ ಅವರ ‘ಅವಾಮಿ ಲೀಗ್’ ಪಕ್ಷ ಆರೋಪಿಸಿದೆ. ಪಕ್ಷವು ತನ್ನ ಎಕ್ಸ್ ಖಾತೆಯಲ್ಲಿ ದಾಳಿಯ ವಿಡಿಯೋವನ್ನು ಹಂಚಿಕೊಂಡಿದ್ದು, ಬಾಂಗ್ಲಾದೇಶದಲ್ಲಿ ನವ-ಫ್ಯಾಸಿಸಂ ಆವರಿಸುತ್ತಿದೆ ಎಂದು ಕಿಡಿಕಾರಿದೆ.
ಮುಂದುವರಿದ ರಾಜಕೀಯ ಬಿಕ್ಕಟ್ಟು ಮತ್ತು ವಿರೋಧ
ಬಾಂಗ್ಲಾದೇಶದಲ್ಲಿ ಶೇಖ್ ಹಸೀನಾ ಅಧಿಕಾರ ಕಳೆದುಕೊಂಡ ಬಳಿಕ ರಾಜಕೀಯ ವಾತಾವರಣವು ಸಂಪೂರ್ಣವಾಗಿ ಕಲುಷಿತಗೊಂಡಿದೆ. ಹಸೀನಾ ಅವರ ವರ್ಚುವಲ್ ಸುದ್ದಿಗೋಷ್ಠಿಯನ್ನು ವಿರೋಧ ಪಕ್ಷಗಳಾದ ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿ (ಬಿಎನ್ಪಿ), ಜಮಾತ್-ಎ-ಇಸ್ಲಾಮಿ ಮತ್ತು ನ್ಯಾಷನಲ್ ಸಿಟಿಜನ್ ಪಾರ್ಟಿ ತೀವ್ರವಾಗಿ ಖಂಡಿಸಿದ್ದವು. ಜೊತೆಗೆ, ಹಸೀನಾ ಅವರ ಹೇಳಿಕೆಗಳನ್ನು ಪ್ರಸಾರ ಮಾಡದಂತೆ ಮಾಧ್ಯಮಗಳಿಗೆ ಎಚ್ಚರಿಕೆ ಕೂಡ ನೀಡಿದ್ದವು. ಇದೇ ಸಂದರ್ಭದಲ್ಲಿ ಶಕೀಬ್ ಅವರು ಹಸೀನಾ ಬೆಂಬಲಕ್ಕೆ ನಿಂತಿರುವುದು ವಿರೋಧಿಗಳ ಆಕ್ರೋಶಕ್ಕೆ ಕಾರಣವಾಗಿದೆ ಎನ್ನಲಾಗಿದೆ. ಆದರೆ, ದಾಳಿಗೂ ಹಾಗೂ ಶಕೀಬ್ ಅವರ ಮಾಧ್ಯಮ ಸಂವಾದದ ಭಾಗವಹಿಸುವಿಕೆಗೂ ಇರುವ ಸಂಬಂಧವನ್ನು ಪೊಲೀಸರು ಅಧಿಕೃತವಾಗಿ ದೃಢಪಡಿಸಿಲ್ಲ.
ತಾಯ್ನಾಡಿಗೆ ಮರಳದ ಸ್ಟಾರ್ ಆಟಗಾರ
ವಿಶ್ವ ಕ್ರಿಕೆಟ್ನ ಅತ್ಯುತ್ತಮ ಆಲ್ರೌಂಡರ್ಗಳಲ್ಲಿ ಒಬ್ಬರಾದ ಶಕೀಬ್ ಅಲ್ ಹಸನ್, ೨೦೨೪ರ ಸಾರ್ವತ್ರಿಕ ಚುನಾವಣೆಯಲ್ಲಿ ಅವಾಮಿ ಲೀಗ್ ಪಕ್ಷದಿಂದ ಮಗುರಾ-೧ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾಗಿದ್ದರು. ಆಗಸ್ಟ್ ತಿಂಗಳಲ್ಲಿ ಬಾಂಗ್ಲಾದೇಶದಲ್ಲಿ ನಡೆದ ಭಾರಿ ರಾಜಕೀಯ ಪಲ್ಲಟದ ಬಳಿಕ ಅವಾಮಿ ಲೀಗ್ ಪಕ್ಷವನ್ನು ರಾಜಕೀಯ ಚಟುವಟಿಕೆಗಳಿಂದ ನಿರ್ಬಂಧಿಸಲಾಗಿದೆ. ಹಸೀನಾ ಸರ್ಕಾರ ಪತನವಾದಾಗಿನಿಂದ ಶಕೀಬ್ ಬಾಂಗ್ಲಾದೇಶಕ್ಕೆ ಮರಳಿಲ್ಲ. ಪ್ರಸ್ತುತ ಅವರ ಮೇಲೆ ಕೊಲೆ ಪ್ರಕರಣ ಸೇರಿದಂತೆ ಹಲವು ಕ್ರಿಮಿನಲ್ ಮೊಕದ್ದಮೆಗಳು ದಾಖಲಾಗಿವೆ. ತಮಗೆ ಸೂಕ್ತ ಭದ್ರತೆ ಮತ್ತು ಕಿರುಕುಳ ನೀಡದ ಭರವಸೆ ಸಿಕ್ಕರೆ ಮಾತ್ರ ತಾಯ್ನಾಡಿಗೆ ಮರಳಿ ಕಾನೂನು ಪ್ರಕ್ರಿಯೆ ಎದುರಿಸುವುದಾಗಿ ಶಕೀಬ್ ಈ ಹಿಂದೆಯೇ ಸ್ಪಷ್ಟಪಡಿಸಿದ್ದಾರೆ. ಸದ್ಯ ಅವರು ತಮ್ಮ ಕುಟುಂಬದೊಂದಿಗೆ ಅಮೆರಿಕದಲ್ಲಿ ನೆಲೆಸಿದ್ದು, ಕೆರಿಬಿಯನ್ ಪ್ರೀಮಿಯರ್ ಲೀಗ್ ಮತ್ತು ಲಂಕಾ ಪ್ರೀಮಿಯರ್ ಲೀಗ್ನಂತಹ ವಿವಿಧ ಫ್ರಾಂಚೈಸಿ ಕ್ರಿಕೆಟ್ ಟೂರ್ನಿಗಳಲ್ಲಿ ಆಡುತ್ತಿದ್ದಾರೆ.
ಇದನ್ನೂ ಓದಿ : ಅಲ್ಜಾರಿ ಜೋಸೆಫ್ ವಿವಾದ : ಕೋಚ್ ಡ್ಯಾರೆನ್ ಸಾಮಿ ವಿರುದ್ಧ ಹರಿಹಾಯ್ದ ದಿಗ್ಗಜ ವಿವಿಯನ್ ರಿಚರ್ಡ್ಸ್!



















