ಚೆನ್ನೈ : ತಮಿಳುನಾಡಿನ ಎಲ್ಲಾ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಬಿಸಿಯೂಟ ಯೋಜನೆಯಡಿ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾಪವು ರಾಜ್ಯ ಸರ್ಕಾರದ ಪರಿಶೀಲನೆಯಲ್ಲಿದೆ. ಶಾಲಾ ಶಿಕ್ಷಣ ಸಚಿವ ರಾಜ್ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರಿಗೆ ಪ್ರಸ್ತಾಪ ಸಲ್ಲಿಸಿದ್ದು, ಸದ್ಯದಲ್ಲೇ ಅಧಿಕೃತ ನಿರ್ಧಾರ ಹೊರಬೀಳುವ ಸಾಧ್ಯತೆಯಿದೆ.
ಪ್ರಸ್ತಾಪದ ಕುರಿತು ಮಾತನಾಡಿದ ಶಿಕ್ಷಣ ಸಚಿವ ರಾಜ್ಮೋಹನ್, ತಮಿಳುನಾಡಿನ ಪ್ರತಿಯೊಂದು ಪ್ರಮುಖ ಪಕ್ಷಗಳ ಆಡಳಿತಾವಧಿಯೂ ಶಾಲಾ ಪೌಷ್ಟಿಕಾಂಶ ಕಾರ್ಯಕ್ರಮವನ್ನು ತನ್ನದೇ ರೀತಿಯಲ್ಲಿ ಬಲಪಡಿಸಿದೆ ಎಂದಿದ್ದಾರೆ. “ಮಾಜಿ ಸಿಎಂ ಕೆ. ಕಾಮರಾಜರ್ ಬಿಸಿಯೂಟ ಯೋಜನೆಯನ್ನು ಪರಿಚಯಿಸಿದರೆ, ಕರುಣಾನಿಧಿ ಅವರು ಮೊಟ್ಟೆಯನ್ನು ಸೇರಿಸಿದರು. ಎಂ.ಜಿ. ರಾಮಚಂದ್ರನ್ ಅವರು ಇದನ್ನು ಪೌಷ್ಟಿಕ ಆಹಾರ ಯೋಜನೆಯನ್ನಾಗಿ ಪರಿವರ್ತಿಸಿದರೆ, ಜಯಲಲಿತಾ ಅವರು ವಾರದಾದ್ಯಂತ ಮೊಟ್ಟೆ ವಿತರಣೆಯನ್ನು ವಿಸ್ತರಿಸಿದರು. ಅದೇ ಮಾದರಿಯಲ್ಲಿ, ಸರ್ಕಾರಿ ಶಾಲೆಗಳಲ್ಲಿ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಬೇಕೆಂಬ ಆಸೆ ನನ್ನದಾಗಿದೆ” ಎಂದು ಅವರು ತಿಳಿಸಿದ್ದಾರೆ.
ಪೌಷ್ಟಿಕಾಂಶ ಹಾಗೂ ಶಾಲಾ ಹಾಜರಾತಿ ಹೆಚ್ಚಳಕ್ಕೆ ಕ್ರಮ
ಶಾಲಾ ಮಕ್ಕಳಲ್ಲಿ ಪೌಷ್ಟಿಕಾಂಶ ಹೆಚ್ಚಿಸುವುದು ಹಾಗೂ ಶಾಲೆಗೆ ಮಕ್ಕಳ ಹಾಜರಾತಿಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಹಲವು ಕ್ರಮಗಳನ್ನು ಕೈಗೊಂಡ ಸುದೀರ್ಘ ಇತಿಹಾಸವನ್ನು ತಮಿಳುನಾಡು ಸರ್ಕಾರ ಹೊಂದಿದೆ. 1950ರಲ್ಲಿ ಆರಂಭವಾದ ಈ ಬಿಸಿಯೂಟ ಯೋಜನೆಗೆ ತದನಂತರ ಬಂದ ಸರ್ಕಾರಗಳು ಹೊಸ ಮೆರುಗು ನೀಡುತ್ತಲೇ ಬಂದಿವೆ. 2022ರ ಸೆಪ್ಟೆಂಬರ್ನಲ್ಲಿ ಆರಂಭವಾದ ‘ಪೆರುಂತಲೈವಾರ್ ಕಾಮರಾಜರ್ ಉಪಾಹಾರ ಯೋಜನೆ’ಯ ಮೂಲಕ ಪ್ರಾಥಮಿಕ ಶಾಲಾ ಮಕ್ಕಳಿಗೆ ಬೆಳಗಿನ ಉಪಹಾರವನ್ನೂ ನೀಡಲಾಗುತ್ತಿದೆ. ಈಗ ಚಿಕನ್ ಬಿರಿಯಾನಿ ಸೇರ್ಪಡೆಯಾದರೆ, ಇದು ರಾಜ್ಯದ ಬಿಸಿಯೂಟದ ಇತಿಹಾಸದಲ್ಲೇ ಅತ್ಯಂತ ಮಹತ್ವದ ಬದಲಾವಣೆಯಾಗಲಿದೆ.
ಬೆಳಗಿನ ಉಪಾಹಾರದ ಮೆನುವಿನಲ್ಲೂ ಬದಲಾವಣೆ
ಇಷ್ಟೇ ಅಲ್ಲದೆ, ಪ್ರಸ್ತುತ ನೀಡಲಾಗುತ್ತಿರುವ ಬೆಳಗಿನ ಉಪಾಹಾರದ ಮೆನುವನ್ನೂ ಸಂಪೂರ್ಣವಾಗಿ ಬದಲಾಯಿಸಲು ಸರ್ಕಾರ ನಿರ್ಧರಿಸಿದೆ. ಸದ್ಯಕ್ಕೆ ಪ್ರತಿ ವಿದ್ಯಾರ್ಥಿಗೆ ಸುಮಾರು 15 ರೂಪಾಯಿ ವೆಚ್ಚ ಮಾಡಲಾಗುತ್ತಿದ್ದು, ಪದೇ ಪದೇ ನೀಡಲಾಗುವ ಗೋಧಿ ಮತ್ತು ರವೆಯ ಉಪ್ಪಿಟ್ಟಿನ ಬದಲಿಗೆ ಮಕ್ಕಳಿಗೆ ಇಷ್ಟವಾಗುವ ಹಾಗೂ ಹೆಚ್ಚು ಪೌಷ್ಟಿಕಾಂಶಯುಕ್ತವಾದ ಪರ್ಯಾಯ ಉಪಾಹಾರವನ್ನು ನೀಡಲು ಶಿಕ್ಷಣ ಇಲಾಖೆ ಯೋಜನೆ ರೂಪಿಸುತ್ತಿದೆ ಎಂದೂ ಸಚಿವರು ತಿಳಿಸಿದ್ದಾರೆ.
ಇದನ್ನೂ ಓದಿ : ‘ಪ್ರಧಾನಿ ಹುದ್ದೆ ಬಿಟ್ಟು ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಆಗಿ’ : ಮೋದಿಗೆ ದೀಪ್ಕೆ ಟಾಂಗ್!



















