ನವದೆಹಲಿ : ಹನಿಮೂನ್ಗೆ ತೆರಳಿದ್ದ ವೇಳೆ ಪತಿ ರಾಜಾ ರಘುವಂಶಿಯನ್ನು ಕೊಲೆ ಮಾಡಿದ ಆರೋಪ ಎದುರಿಸುತ್ತಿರುವ ಸೋನಂ ರಘುವಂಶಿಗೆ ನೀಡಲಾಗಿದ್ದ ಜಾಮೀನನ್ನು ಸುಪ್ರೀಂ ಕೋರ್ಟ್ ಇಂದು ರದ್ದುಪಡಿಸಿದೆ.
ಮೇಘಾಲಯದಲ್ಲಿ ನಡೆದಿದ್ದ ರಾಜಾ ರಘುವಂಶಿ ಕೊಲೆ ಪ್ರಕರಣದಲ್ಲಿ ಸೋನಂ ಪ್ರಮುಖ ಆರೋಪಿಯಾಗಿದ್ದು, ಆಕೆಯ ವಿರುದ್ಧದ ಆರೋಪಗಳು ಗಂಭೀರವಾಗಿವೆ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದೆ. ನ್ಯಾಯಮೂರ್ತಿಗಳಾದ ಎಂ.ಎಂ. ಸುಂದರೇಶ್ ಮತ್ತು ಪಿ.ಬಿ. ವರಾಳೆ ಅವರನ್ನೊಳಗೊಂಡ ಪೀಠ ಈ ಆದೇಶ ನೀಡಿದೆ.
ಸೋನಂ ವಿರುದ್ಧದ ಆರೋಪಗಳು “ಬಹಳ ಗಂಭೀರವಾಗಿವೆ” ಎಂದು ನ್ಯಾಯಾಲಯ ಹೇಳಿದೆ. ಇದೇ ವೇಳೆ, ವಿಚಾರಣೆ ಆರು ತಿಂಗಳೊಳಗೆ ಪೂರ್ಣಗೊಳ್ಳದಿದ್ದರೆ ಮತ್ತೆ ಜಾಮೀನಿಗಾಗಿ ಅರ್ಜಿ ಸಲ್ಲಿಸಲು ಸೋನಂಗೆ ಅವಕಾಶವಿದೆ ಎಂದು ಸುಪ್ರೀಂಕೋರ್ಟ್ ತಿಳಿಸಿದೆ. ಅಲ್ಲದೆ, ಮೂರು ವಾರಗಳ ಒಳಗಾಗಿ ಪೊಲೀಸರ ಮುಂದೆ ಶರಣಾಗುವಂತೆ ಸೋನಂಗೆ ನ್ಯಾಯಾಲಯ ಕಾಲಾವಕಾಶ ನೀಡಿದೆ.
ಪ್ರಕರಣದ ಹಿನ್ನೆಲೆ :
ರಾಜಾ ರಘುವಂಶಿ ಮತ್ತು ಸೋನಂ ರಘುವಂಶಿ ಕಳೆದ ವರ್ಷದ ಮೇ 11ರಂದು ವಿವಾಹವಾಗಿದ್ದರು. ಮದುವೆಯಾದ ಕೇವಲ ಒಂಬತ್ತು ದಿನಗಳ ಬಳಿಕ, ಮೇ 20ರಂದು ಇಬ್ಬರೂ ಮೇಘಾಲಯಕ್ಕೆ ಹನಿಮೂನ್ಗೆ ತೆರಳಿದ್ದರು. ಅವರ ಬಳಿ ಒನ್ವೇ ಟಿಕೆಟ್ ಇತ್ತು. ಈ ದಂಪತಿ ಈಶಾನ್ಯ ಭಾರತದ ಹಲವು ಪ್ರದೇಶಗಳಲ್ಲಿ ಮೂರು ದಿನಗಳ ಕಾಲ ಸುತ್ತಾಡಿದ್ದರು. ಬಳಿಕ ಇಬ್ಬರೂ ನಾಪತ್ತೆಯಾಗಿದ್ದರು. ಕುಟುಂಬಸ್ಥರಿಗೆ ಸಂಪರ್ಕ ಸಾಧ್ಯವಾಗದ ಹಿನ್ನೆಲೆಯಲ್ಲಿ ಪೊಲೀಸರನ್ನು ಸಂಪರ್ಕಿಸಿದ್ದರು. ಆರಂಭದಲ್ಲಿ ನಾಪತ್ತೆಯಾಗಿದ್ದ ದಂಪತಿಯನ್ನು ಪತ್ತೆಹಚ್ಚಲು ಆರಂಭವಾದ ತನಿಖೆ, ಜೂನ್ 2ರಂದು ರಾಜಾ ರಘುವಂಶಿಯ ಮೃತದೇಹ ಕಂದಕವೊಂದರಲ್ಲಿ ಪತ್ತೆಯಾದ ಬಳಿಕ ಕೊಲೆ ತನಿಖೆಯಾಗಿ ಬದಲಾಗಿತ್ತು.
ಘಟನೆ ನಡೆದ ಸುಮಾರು ಹತ್ತು ದಿನಗಳ ಬಳಿಕ ರಾಜಾ ಅವರ ಮೃತದೇಹ ಪತ್ತೆಯಾಗಿತ್ತು. ಬಳಿಕ ಜೂನ್ 7ರ ರಾತ್ರಿ ಸೋನಂ ಗಾಜಿಯಾಬಾದ್ನ ಘಾಜಿಪುರದಲ್ಲಿರುವ ಧಾಬಾವೊಂದರಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಅವರನ್ನು ಚಿಕಿತ್ಸೆಗಾಗಿ ಘಾಜಿಪುರ ಮೆಡಿಕಲ್ ಕಾಲೇಜಿಗೆ ದಾಖಲಿಸಲಾಗಿತ್ತು. ಬಳಿಕ ಸೋನಂ ಪೊಲೀಸರ ಮುಂದೆ ಶರಣಾಗಿದ್ದರು. ಪ್ರಕರಣದ ತನಿಖೆ ಮುಂದುವರಿದಂತೆ ಸೋನಂ ಅವರ ಪ್ರಿಯಕರ ರಾಜ್ ಸಿಂಗ್ ಕುಶ್ವಾಹನನ್ನೂ ಪೊಲೀಸರು ಬಂಧಿಸಿದ್ದರು.
ಇದನ್ನೂ ಓದಿ : ಜಂತರ್ ಮಂತರ್ನಲ್ಲಿ ಯುವತಿಗೆ ಕಪಾಳಮೋಕ್ಷ ಮಾಡಿದ ದೆಹಲಿ ಪೊಲೀಸ್ ಅಧಿಕಾರಿ ವರ್ಗಾವಣೆ!


















