ನವದೆಹಲಿ : ಗ್ರಾಹಕರ ಒಪ್ಪಿಗೆಯಿಲ್ಲದೆ ಕಡ್ಡಾಯವಾಗಿ ‘ಸರ್ವಿಸ್ ಚಾರ್ಜ್’ (ಸೇವಾ ಶುಲ್ಕ) ವಸೂಲಿ ಮಾಡುತ್ತಿರುವ ರೆಸ್ಟೋರೆಂಟ್, ಹೋಟೆಲ್ಗಳ ವಿರುದ್ಧ ಕೇಂದ್ರ ಸರ್ಕಾರ ಸಮರ ಸಾರಿದೆ. ಗ್ರಾಹಕ ರಕ್ಷಣೆ ಕಾಯ್ದೆಯನ್ನು ಉಲ್ಲಂಘಿಸಿ ಬಿಲ್ಲುಗಳಲ್ಲಿ ಆಟೋಮ್ಯಾಟಿಕ್ ಆಗಿ ಸರ್ವಿಸ್ ಚಾರ್ಜ್ ಸೇರಿಸುವ ರೆಸ್ಟೋರೆಂಟ್ಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಸ್ಪಷ್ಟಪಡಿಸಿದ್ದಾರೆ.
41 ರೆಸ್ಟೋರೆಂಟ್ಗಳ ವಿರುದ್ಧ ಸುಮೊಟೊ ಪ್ರಕರಣ
ರಾಷ್ಟ್ರೀಯ ಗ್ರಾಹಕ ಸಹಾಯವಾಣಿಗೆ (National Consumer Helpline) ಬಂದ ಸಾಲು ಸಾಲು ದೂರುಗಳ ಆಧಾರದ ಮೇಲೆ, ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರವು (CCPA) ದೇಶಾದ್ಯಂತ ಇರುವ 41 ಪ್ರಮುಖ ರೆಸ್ಟೋರೆಂಟ್ಗಳ ವಿರುದ್ಧ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು (ಸುಮೊಟೊ) ತನಿಖೆ ಆರಂಭಿಸಿದೆ. ಗ್ರಾಹಕರಿಗೆ ಮಾಹಿತಿ ನೀಡದೆ ಅಥವಾ ಅವರ ಸಮ್ಮತಿಯಿಲ್ಲದೆ ಬಿಲ್ನಲ್ಲಿ ಸೇವಾ ಶುಲ್ಕ ಸೇರಿಸುವುದು ಮತ್ತು ಅದನ್ನು ತೆಗೆದುಹಾಕಲು ಕೋರಿದಾಗ ನಿರಾಕರಿಸುವುದು ನ್ಯಾಯಸಮ್ಮತವಲ್ಲದ ವ್ಯಾಪಾರ ಎಂದು ಪ್ರಾಧಿಕಾರ ಪರಿಗಣಿಸಿದೆ.

ಹೈಕೋರ್ಟ್ ಆದೇಶದ ಬೆನ್ನಲ್ಲೇ ಸರ್ಕಾರದ ಕಠಿಣ ಹೆಜ್ಜೆ
ಈ ಹಿಂದೆ ಜುಲೈ 2022 ರಲ್ಲಿಯೇ ಸಿಎಸ್ಪಿಎ ನಿಯಮಾವಳಿಗಳನ್ನು ಹೊರಡಿಸಿ ಸರ್ವಿಸ್ ಚಾರ್ಜ್ ಕಡ್ಡಾಯವಲ್ಲ ಎಂದು ತಿಳಿಸಿತ್ತು. ಆದರೆ ರೆಸ್ಟೋರೆಂಟ್ ಸಂಘಟನೆಗಳು ಇದನ್ನು ದೆಹಲಿ ಹೈಕೋರ್ಟ್ನಲ್ಲಿ ಪ್ರಶ್ನಿಸಿದ್ದವು. ಮಾರ್ಚ್ 2025ರಲ್ಲಿ ದೆಹಲಿ ಹೈಕೋರ್ಟ್ ಸರ್ಕಾರದ ಮಾರ್ಗದರ್ಶಿ ಸೂತ್ರಗಳನ್ನು ಎತ್ತಿಹಿಡಿದು ತೀರ್ಪು ನೀಡಿದ್ದರಿಂದ, ಸದ್ಯ ಸರ್ಕಾರ ಸಂಪೂರ್ಣ ಕಾನೂನು ಬಲದೊಂದಿಗೆ ಅಕ್ರಮ ಸರ್ವಿಸ್ ಚಾರ್ಜ್ ವಸೂಲಿ ವಿರುದ್ಧ ಸಮರಕ್ಕಿಳಿದಿದೆ.
ಟಿಪ್ಸ್ ನೀಡುವುದು ಗ್ರಾಹಕರ ಇಷ್ಟ; ಬಲವಂತಕ್ಕಿಲ್ಲ ಅವಕಾಶ!
ಗ್ರಾಹಕರು ತಮಗೆ ಸಿಕ್ಕ ಸೇವೆಗೆ ಮೆಚ್ಚಿ ಸ್ವಇಚ್ಛೆಯಿಂದ ನೀಡುವ ‘ಟಿಪ್ಸ್’ ಅಥವಾ ಬಕ್ಷೀಸ್ಗೆ ಸರ್ಕಾರದ ವಿರೋಧವಿಲ್ಲ. ಆದರೆ, ಅದನ್ನು ಬಿಲ್ನಲ್ಲಿ ಕಡ್ಡಾಯವಾಗಿ ಸೇರಿಸುವುದು, ಸರ್ವಿಸ್ ಚಾರ್ಜ್ ನೀಡದಿದ್ದರೆ ಸೇವೆ ನಿರಾಕರಿಸುವುದು ಅಥವಾ ಸರ್ವಿಸ್ ಚಾರ್ಜ್ ಮೇಲೆ ಜಿಎಸ್ಟಿ (GST) ವಿಧಿಸುವುದು ಸಂಪೂರ್ಣ ಕಾನೂನುಬಾಹಿರ.
ಗ್ರಾಹಕರು ತಾವು ಸೇವಿಸಿದ ಆಹಾರ ಮತ್ತು ಅದಕ್ಕೆ ಸಂಬಂಧಿಸಿದ ಅಧಿಕೃತ ತೆರಿಗೆಗೆ ಮಾತ್ರ ಹಣ ಪಾವತಿಸಲು ಬದ್ಧರಾಗಿದ್ದಾರೆ. ಬಿಲ್ನಲ್ಲಿ ನಿಮ್ಮ ಒಪ್ಪಿಗೆಯಿಲ್ಲದೆ ಸರ್ವಿಸ್ ಚಾರ್ಜ್ ಹಾಕಿದ್ದರೆ ಅದನ್ನು ತೆಗೆಯಲು ಕೋರಬಹುದು, ರೆಸ್ಟೋರೆಂಟ್ ನಿರಾಕರಿಸಿದರೆ ತಕ್ಷಣ ರಾಷ್ಟ್ರೀಯ ಗ್ರಾಹಕ ಸಹಾಯವಾಣಿಗೆ ದೂರು ನೀಡಬಹುದು.
ಇದನ್ನೂ ಓದಿ : ತಮಿಳುನಾಡು ಸಿಎಂ ವಿಜಯ್ಗೆ ಬೆದರಿಕೆ ಆರೋಪ : ಡಿಎಂಕೆ ಶಾಸಕ ಮಾರ್ಕಂಡೇಯನ್ ಬಂಧನ!



















