ಶ್ರೀಹರಿಕೋಟಾ: ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಖಾಸಗಿ ವಲಯದ ಶಕ್ತಿಯನ್ನು ಜಗತ್ತಿಗೆ ಸಾರುವ ಚೊಚ್ಚಲ ಕಕ್ಷೀಯ ಪ್ರಯೋಗ ‘ಮಿಷನ್ ಆಗಮನ್’ ಕೊನೆಗೂ ಭವ್ಯ ಯಶಸ್ಸು ಕಂಡಿದೆ. ಹೈದರಾಬಾದ್ ಮೂಲದ ಸ್ಕೈರೂಟ್ ಏರೋಸ್ಪೇಸ್ (Skyroot Aerospace) ಸಂಸ್ಥೆ ನಿರ್ಮಿಸಿರುವ, ದೇಶದ ಮೊದಲ ಖಾಸಗಿ ಕಕ್ಷೀಯ ರಾಕೆಟ್ ‘ವಿಕ್ರಮ್-1’ ಇಂದು(ಶನಿವಾರ) ಮಧ್ಯಾಹ್ನ 12:05:30ಕ್ಕೆ ಆಂಧ್ರಪ್ರದೇಶದ ಶ್ರೀಹರಿಕೋಟಾ ಉಡಾವಣಾ ಕೇಂದ್ರದಿಂದ ಯಶಸ್ವಿಯಾಗಿ ನಭಕ್ಕೆ ಜಿಗಿದಿದೆ. ಈ ಐತಿಹಾಸಿಕ ಉಡಾವಣೆಯೊಂದಿಗೆ ಜಾಗತಿಕ ಬಾಹ್ಯಾಕಾಶ ಮಾರುಕಟ್ಟೆಯಲ್ಲಿ ಭಾರತದ ಖಾಸಗಿ ಉದ್ಯಮದ ಹೊಸ ಯುಗ ಅಧಿಕೃತವಾಗಿ ಆರಂಭವಾಗಿದೆ.
ಕೊನೇ ಕ್ಷಣದ ಆತಂಕ
ಬೆಳಗ್ಗೆಯಿಂದಲೇ ಶ್ರೀಹರಿಕೋಟಾದ ನಿಯಂತ್ರಣ ಕೊಠಡಿಯಲ್ಲಿ ಆತಂಕ ಮತ್ತು ಉತ್ಸಾಹದ ವಾತಾವರಣ ಮನೆಮಾಡಿತ್ತು. ನಿಗದಿತ ಸಮಯವಾದ ಬೆಳಿಗ್ಗೆ 11.30ಕ್ಕೆ ಕೆಲವೇ ನಿಮಿಷಗಳು ಬಾಕಿ ಇರುವಾಗ ತಾಂತ್ರಿಕ ತಂಡವು ಉಡಾವಣೆಯನ್ನು ‘ಪ್ಲಾನ್ಡ್ ಹೋಲ್ಡ್’ (ಯೋಜಿತ ತಡೆ) ಅಡಿಯಲ್ಲಿ ಇರಿಸಿದಾಗ ಸಣ್ಣದೊಂದು ಆತಂಕ ಎದುರಾಗಿತ್ತು. ಆದರೆ, ಹವಾಮಾನ ಮುಕ್ತವಾದ ಮಧ್ಯಾಹ್ನ 12.05ರ ಸುಮಾರಿಗೆ ಎಲ್ಲಾ ಸವಾಲುಗಳನ್ನು ಮೆಟ್ಟಿ ನಿಂತು ರಾಕೆಟ್ ಉಡಾವಣೆಯಾಗುತ್ತಿದ್ದಂತೆ ವಿಜ್ಞಾನಿಗಳಲ್ಲಿ ಹರ್ಷೋದ್ಗಾರ ಮುಗಿಲು ಮುಟ್ಟಿತು. ಈ ಯಶಸ್ಸಿನ ಮೂಲಕ ಸ್ಕೈರೂಟ್ ಸಂಸ್ಥೆಯು ಕಕ್ಷೀಯ ರಾಕೆಟ್ಗಳನ್ನು ಯಶಸ್ವಿಯಾಗಿ ಅಭಿವೃದ್ಧಿಪಡಿಸಿ ಉಡಾವಣೆ ಮಾಡಿದ ವಿಶ್ವದ ಕೆಲವೇ ಕೆಲವು ಗಣ್ಯ ಖಾಸಗಿ ಕಂಪನಿಗಳ ಸಾಲಿಗೆ ಸೇರ್ಪಡೆಯಾಗಿದೆ.
ತಾಂತ್ರಿಕ ದೈತ್ಯ, ವಿಶಿಷ್ಟ ಪೇಲೋಡ್ಗಳು
ಏಳು ಮಹಡಿಗಳಷ್ಟು ಎತ್ತರವಿರುವ ಈ ಬಹುಹಂತದ ‘ವಿಕ್ರಮ್-1’ ರಾಕೆಟ್ ಅನ್ನು ಸಂಪೂರ್ಣವಾಗಿ ಕಾರ್ಬನ್ ಕಾಂಪೋಸಿಟ್ ರಚನೆಯಿಂದ ನಿರ್ಮಿಸಲಾಗಿದೆ. ಇದು ಸಂಸ್ಥೆಯೇ ಸ್ವತಃ ಅಭಿವೃದ್ಧಿಪಡಿಸಿದ 3ಡಿ-ಪ್ರಿಂಟೆಡ್ ಎಂಜಿನ್ಗಳು ಮತ್ತು ಗರಿಷ್ಠ ತಳ್ಳುಸಾಮರ್ಥ್ಯದ ಘನ-ಇಂಧನ ಬೂಸ್ಟರ್ಗಳನ್ನು ಒಳಗೊಂಡಿದೆ. ಕೆಳಮಟ್ಟದ ಭೂಕಕ್ಷೆಗೆ (LEO) 350 ಕೆಜಿವರೆಗಿನ ಸಣ್ಣ ಉಪಗ್ರಹಗಳನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿರುವ ಈ ರಾಕೆಟ್, ತನ್ನ ಚೊಚ್ಚಲ ಹಾರಾಟದಲ್ಲಿ 450 ಕಿಲೋಮೀಟರ್ ಕಕ್ಷೆಯನ್ನು ತಲುಪುವ ಗುರಿ ಹೊಂದಿದೆ. ಇದು ಗ್ರಹಾ ಸ್ಪೇಸ್, ಕಾಸ್ಮೋಸರ್ವ್, ಡಿಕ್ಯೂಬ್ಡ್ ಸಂಸ್ಥೆಗಳ ತಾಂತ್ರಿಕ ಉಪಗ್ರಹಗಳ ಜೊತೆಗೆ ಭಾರತೀಯ ವೈಜ್ಞಾನಿಕ ಕ್ಷೇತ್ರದ ಧ್ರುವತಾರೆಗಳಾದ ಸರ್ ಸಿ.ವಿ. ರಾಮನ್, ಡಾ. ವಿಕ್ರಮ್ ಸಾರಾಭಾಯ್ ಹಾಗೂ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಕಿರುಚಿತ್ರಗಳ ಕಲಾಕೃತಿಯನ್ನು ಬಾಹ್ಯಾಕಾಶಕ್ಕೆ ಹೊತ್ತೊಯ್ದಿದೆ.
ಪ್ರಧಾನಿ ಮೋದಿ ಸಂದೇಶವೂ ರವಾನೆ
ಭಾರತೀಯ ಬಾಹ್ಯಾಕಾಶ ಕಾರ್ಯಕ್ರಮದ ಪಿತಾಮಹ ವಿಕ್ರಮ್ ಸಾರಾಭಾಯ್ ಅವರ ಹೆಸರನ್ನು ಈ ರಾಕೆಟ್ಗೆ ಇಡಲಾಗಿದ್ದು, ಇದು 2022ರ ನವೆಂಬರ್ನಲ್ಲಿ ನಡೆದ ವಿಕ್ರಮ್-ಎಸ್ ಉಪಕಕ್ಷೀಯ ಮಿಷನ್ನ ಮುಂದಿನ ಯಶಸ್ವಿ ಹೆಜ್ಜೆಯಾಗಿದೆ. ಈ ಐತಿಹಾಸಿಕ ಸಾಧನೆಯನ್ನು ಶ್ಲಾಘಿಸಿರುವ ಪ್ರಧಾನಿ ನರೇಂದ್ರ ಮೋದಿ, ಇದು ಭಾರತದ ಬಾಹ್ಯಾಕಾಶ ಪಯಣದಲ್ಲಿ ‘ಹೊಸ ಇತಿಹಾಸ’ ಎಂದು ಬಣ್ಣಿಸಿದ್ದಾರೆ. ದೇಶದ ಯುವಕರ ಉದ್ಯಮಶೀಲತೆಯ ಮನೋಭಾವಕ್ಕೆ ಇದು ಸಾಕ್ಷಿ ಎಂದಿರುವ ಪ್ರಧಾನಿ, ಇಡೀ ತಂಡಕ್ಕೆ ಶುಭ ಕೋರಿದ್ದಾರೆ. ರಾಕೆಟ್ನೊಂದಿಗೆ ಪ್ರಧಾನಿಯವರು ಬರೆದಿರುವ ‘ವಂದೇ ಮಾತರಂ’ ಎಂಬ ಸಂದೇಶದ ಕಾರ್ಡ್ ಹಾಗೂ ಈ ರಾಕೆಟ್ನ ನಿರ್ಮಾಣದಲ್ಲಿ ಹಗಲಿರುಳು ಶ್ರಮಿಸಿದ ಎಂಜಿನಿಯರ್ಗಳು ಮತ್ತು ತಂತ್ರಜ್ಞರ ಸಹಿ ಇರುವ ಸ್ಮರಣಿಕೆಯನ್ನು ಸಹ ಕಕ್ಷೆಗೆ ಕಳುಹಿಸುವ ಮೂಲಕ ಇಡೀ ತಂಡದ ಶ್ರಮವನ್ನು ಗೌರವಿಸಲಾಗಿದೆ.



















