ಛತ್ತರಪುರ (ಮಧ್ಯಪ್ರದೇಶ) : ಅಭಿವೃದ್ಧಿಯ ಹೆಸರಿನಲ್ಲಿ ತಮ್ಮ ಒಕ್ಕಲೆಬ್ಬಿಸುವಿಕೆ ವಿರುದ್ಧ ಮಧ್ಯಪ್ರದೇಶದ ಛತ್ತರಪುರ ಜಿಲ್ಲೆಯಲ್ಲಿ ಬುಡಕಟ್ಟು ಜನಾಂಗದ ಕುಟುಂಬಗಳು ಜೀವನ್ಮರಣ ಹೋರಾಟಕ್ಕೆ ಇಳಿದಿವೆ. ದೇಶದ ಮಹತ್ವಾಕಾಂಕ್ಷಿ ‘ಕೆನ್-ಬೆಟ್ವಾ ನದಿ ಜೋಡಣೆ ಯೋಜನೆ’ಯಿಂದ ಸಂತ್ರಸ್ತರಾಗಿರುವ ಆದಿವಾಸಿಗಳು, ತಮಗೆ ನ್ಯಾಯ ಸಿಗಬೇಕು ಎಂದು ಆಗ್ರಹಿಸಿ ಸಾಂಕೇತಿಕವಾಗಿ ಚಿತೆಯ ಮೇಲೆ ಮಲಗುವ ಮತ್ತು ಕುತ್ತಿಗೆಗೆ ನೇಣು ಹಗ್ಗ ಹಾಕಿಕೊಳ್ಳುವ ಮೂಲಕ ಪ್ರತಿಭಟನೆ ಆರಂಭಿಸಿದ್ದಾರೆ. ಸರ್ಕಾರದ ಭರವಸೆಗಳು ಕೇವಲ ಕಾಗದದ ಮೇಲಷ್ಟೇ ಉಳಿದಿದ್ದು, ತಮ್ಮ ಭೂಮಿ, ಜೀವನೋಪಾಯ ಮತ್ತು ಸಾಂಸ್ಕೃತಿಕ ಅಸ್ಮಿತೆ ಅಪಾಯದಲ್ಲಿದೆ ಎಂದು ಪ್ರತಿಭಟನಾಕಾರರು ಆತಂಕ ವ್ಯಕ್ತಪಡಿಸಿದ್ದಾರೆ.
ಜೈ ಕಿಸಾನ್ ಸಂಘಟನೆಯ ನಾಯಕ ಅಮಿತ್ ಭಟ್ನಾಗರ್ ನೇತೃತ್ವದಲ್ಲಿ ನಡೆಯುತ್ತಿರುವ ಈ ಚಳವಳಿಯು ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದ್ದು, ಪ್ರತಿಭಟನಾಕಾರರು ತಮ್ಮ ಹಕ್ಕುಗಳಿಗಾಗಿ ವಿಶಿಷ್ಟ ಮಾರ್ಗಗಳನ್ನು ಆರಿಸಿಕೊಂಡಿದ್ದಾರೆ. ಮೊದಲ ಹಂತದಲ್ಲಿ ‘ಚಿತಾ ಸತ್ಯಾಗ್ರಹ’ ನಡೆಸಿ ಸಾಂಕೇತಿಕವಾಗಿ ಚಿತೆಯ ಮೇಲೆ ಮಲಗಿದ್ದ ಆದಿವಾಸಿಗಳು, ಭೂಮಿ ಮತ್ತು ಕಾಡನ್ನು ಕಳೆದುಕೊಂಡ ನಾವು ಈಗಾಗಲೇ ಸತ್ತಂತಾಗಿದ್ದೇವೆ ಎಂದು ಆಕ್ರೋಶ ಹೊರಹಾಕಿದ್ದರು.
ನಂತರ ಇಡೀ ಮೈಗೆ ಮಣ್ಣು ಬಳಿದುಕೊಂಡು ‘ಮಣ್ಣಿನ ಸತ್ಯಾಗ್ರಹ’ ನಡೆಸಿದ್ದ ಅವರು, ತದನಂತರ ಬಾರಾನಾ ನದಿಯ ನೀರಿನಲ್ಲಿ ಗಂಟೆಗಟ್ಟಲೆ ನಿಂತು ‘ಜಲ ಸತ್ಯಾಗ್ರಹ’ ನಡೆಸಿದ್ದರು. ಸದ್ಯ ಹೋರಾಟವು ಅತ್ಯಂತ ಆತಂಕಕಾರಿ ಘಟ್ಟ ತಲುಪಿದ್ದು, ಮಹಿಳೆಯರು ಕುತ್ತಿಗೆಗೆ ನೇಣು ಹಗ್ಗ ಬಿಗಿದುಕೊಂಡು ‘ಫಾಸ್ ಸತ್ಯಾಗ್ರಹ’ (ನೇಣು ಸತ್ಯಾಗ್ರಹ) ಆರಂಭಿಸಿದ್ದಾರೆ. ಸರ್ಕಾರಕ್ಕೆ ನ್ಯಾಯ ನೀಡಲು ಸಾಧ್ಯವಾಗದಿದ್ದರೆ ನಮಗೆ ದಯಾಮರಣಕ್ಕೆ ಅನುಮತಿ ಕೊಡಿ ಎಂದು ಬುಡಕಟ್ಟು ಮಹಿಳೆಯರು ಆಗ್ರಹಿಸುತ್ತಿದ್ದಾರೆ.
ಅಪೂರ್ಣ ಪುನರ್ವಸತಿ, ಭ್ರಷ್ಟಾಚಾರದ ಆರೋಪ
ಸುಮಾರು 44,605 ಕೋಟಿ ರೂಪಾಯಿ ವೆಚ್ಚದ ಕೆನ್-ಬೆಟ್ವಾ ನದಿ ಜೋಡಣೆ ಯೋಜನೆಯು ಲಕ್ಷಾಂತರ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಮತ್ತು ಕೋಟ್ಯಂತರ ಜನರಿಗೆ ಕುಡಿಯುವ ನೀರು ಒದಗಿಸುವ ಗುರಿ ಹೊಂದಿದ್ದರೂ, ಸ್ಥಳೀಯ ಆದಿವಾಸಿಗಳ ಪಾಲಿಗೆ ಇದು ಶಾಪವಾಗಿ ಪರಿಣಮಿಸಿದೆ. ಭೂಸ್ವಾಧೀನ ಕಾಯ್ದೆ 2013 ರ ನಿಯಮಗಳನ್ನು ಉಲ್ಲಂಘಿಸಿ, ಸಂಪೂರ್ಣ ಪರಿಹಾರ ನೀಡದೆ ಅಧಿಕಾರಿಗಳು ಬಲವಂತವಾಗಿ ಭೂಮಿಯನ್ನು ವಶಪಡಿಸಿಕೊಳ್ಳುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಮೈನಾಲಿ ಸೇರಿದಂತೆ ಹಲವು ಗ್ರಾಮಗಳ ನೂರಾರು ಸಂತ್ರಸ್ತ ಕುಟುಂಬಗಳ ಹೆಸರುಗಳನ್ನು ಪುನರ್ವಸತಿ ಪಟ್ಟಿಯಿಂದ ಉದ್ದೇಶಪೂರ್ವಕವಾಗಿ ಕೈಬಿಡಲಾಗಿದ್ದು, ಯೋಜನೆಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ ಎಂದು ಪ್ರತಿಭಟನಾಕಾರರು ದೂರಿದ್ದಾರೆ. ಸಂಪೂರ್ಣ ಪುನರ್ವಸತಿ ಪ್ರಕ್ರಿಯೆ ಮುಗಿಯುವವರೆಗೆ ಅಣೆಕಟ್ಟು ನಿರ್ಮಾಣ ಕಾಮಗಾರಿಯನ್ನು ನಿಲ್ಲಿಸಬೇಕು ಮತ್ತು ಫಲಾನುಭವಿಗಳ ಪಟ್ಟಿಯನ್ನು ಬಹಿರಂಗಪಡಿಸಬೇಕು ಎಂದು ಅವರು ಪಟ್ಟು ಹಿಡಿದಿದ್ದಾರೆ.
ಮುಂಚೂಣಿಯಲ್ಲಿ ಮಹಿಳೆಯರು
ಈ ಇಡೀ ಹೋರಾಟದಲ್ಲಿ ಬುಡಕಟ್ಟು ಮಹಿಳೆಯರು ಮುಂಚೂಣಿಯಲ್ಲಿದ್ದು, ಚಳವಳಿಯ ಪ್ರಮುಖ ಶಕ್ತಿಯಾಗಿ ಹೊರಹೊಮ್ಮಿದ್ದಾರೆ. ಇವರಿಗೆ ಕಾಡು, ನದಿ ಮತ್ತು ಜಮೀನುಗಳು ಕೇವಲ ಆರ್ಥಿಕ ಮೂಲಗಳಲ್ಲ, ಬದಲಿಗೆ ಅವರ ತಲೆಮಾರುಗಳ ಸಾಂಸ್ಕೃತಿಕ ಮತ್ತು ಸಾಮಾಜಿಕ ಜೀವನದ ಭಾಗವಾಗಿವೆ. ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿದ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಉಮಂಗ್ ಸಿಂಘಾರ್ ಅವರು ಪ್ರತಿಭಟನಾಕಾರರಿಗೆ ಕಾಂಗ್ರೆಸ್ ಪಕ್ಷದ ಸಂಪೂರ್ಣ ಬೆಂಬಲ ಘೋಷಿಸಿದ್ದಾರೆ. ಸಂತ್ರಸ್ತರ ಮೇಲಿನ ಪೊಲೀಸ್ ದೌರ್ಜನ್ಯದ ಬಗ್ಗೆ ತನಿಖೆಯಾಗಬೇಕು ಎಂದು ಒತ್ತಾಯಿಸಿರುವ ಅವರು, ಸರ್ಕಾರಿ ಅಧಿಕಾರಿಗಳು ಮತ್ತು ರೈತ ಸಂಘಟನೆಗಳ ಪ್ರತಿನಿಧಿಗಳನ್ನೊಳಗೊಂಡ ಜಂಟಿ ಸಮಿತಿ ರಚಿಸಿ ಪರಿಹಾರದ ಸಮಸ್ಯೆಯನ್ನು ಬಗೆಹರಿಸುವಂತೆ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಆಡಳಿತ ಮಂಡಳಿಯ ಸಮರ್ಥನೆ
ಪ್ರತಿಭಟನಾಕಾರರ ಆರೋಪಗಳನ್ನು ತಳ್ಳಿಹಾಕಿರುವ ಛತ್ತರಪುರ ಜಿಲ್ಲಾಧಿಕಾರಿ ಪಾರ್ಥ್ ಜೈಸ್ವಾಲ್, ಸಂತ್ರಸ್ತರ ಸಮಸ್ಯೆಗಳನ್ನು ಆಲಿಸಲು ಅಧಿಕಾರಿಗಳ ತಂಡ ನಿರಂತರವಾಗಿ ಮಾತುಕತೆ ನಡೆಸುತ್ತಿದೆ ಎಂದು ತಿಳಿಸಿದ್ದಾರೆ. ಕಳೆದ ಏಪ್ರಿಲ್ ತಿಂಗಳಿನಲ್ಲಿ ಪ್ರತಿಭಟನಾಕಾರರು ಇಟ್ಟಿದ್ದ ಬೇಡಿಕೆಗಳನ್ನು ಈಗಾಗಲೇ ಈಡೇರಿಸಲಾಗಿದ್ದು, ಮಧ್ಯಪ್ರದೇಶ ಸರ್ಕಾರವು ಇತ್ತೀಚೆಗಷ್ಟೇ ಪುನರ್ವಸತಿ ಪ್ಯಾಕೇಜ್ ಅನ್ನು ಮತ್ತಷ್ಟು ಹೆಚ್ಚಿಸಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಅಲ್ಲದೆ, ಪ್ರಸ್ತುತ ಪ್ರತಿಭಟನೆ ನಡೆಸುತ್ತಿರುವವರಲ್ಲಿ ಹೆಚ್ಚಿನವರು ನೆರೆಯ ಪನ್ನಾ ಜಿಲ್ಲೆಗೆ ಸೇರಿದವರಾಗಿದ್ದಾರೆ ಎಂದು ಆಡಳಿತ ಮಂಡಳಿ ಹೇಳಿದೆ. ಆದರೆ, ಕೇವಲ ಹಣಕಾಸಿನ ನೆರವು ನೀಡುವುದಷ್ಟೇ ಪುನರ್ವಸತಿಯಲ್ಲ, ತಮ್ಮ ಜೀವನೋಪಾಯ ಮತ್ತು ಸಮುದಾಯದ ಅಸ್ತಿತ್ವವನ್ನು ರಕ್ಷಿಸುವುದು ಸರ್ಕಾರದ ಕರ್ತವ್ಯ ಎಂದು ಆದಿವಾಸಿಗಳು ಆಗ್ರಹಿಸುತ್ತಿದ್ದಾರೆ.
ಇದನ್ನೂ ಓದಿ : ಜಮೀನಿನ ಚೆಕ್ ಬಂದಿ ವಿಚಾರಕ್ಕೆ ಜೋಡಿ ಕೊಲೆ ; ಮನೆಗೆ ನುಗ್ಗಿ ಹತ್ಯೆಗೈದ ದುಷ್ಕರ್ಮಿಗಳು!



















