ನವದೆಹಲಿ : ಹೊರ್ಮುಜ್ ಜಲಸಂಧಿಯಲ್ಲಿನ ದಾಳಿ ಭೀತಿಯನ್ನು ಯಶಸ್ವಿಯಾಗಿ ಎದುರಿಸಿ ಇನ್ನು ನಾವು ಸುರಕ್ಷಿತ ಎಂದೇ ಆ ಭಾರತೀಯ ನಾವಿಕ ಭಾವಿಸಿದ್ದರು. ಹಡಗು ಸುರಕ್ಷಿತವಾಗಿ ದಾಟಿತು ಎಂದು ತನ್ನ ಕುಟುಂಬಕ್ಕೆ ಕಳುಹಿಸಿದ ಸಂದೇಶವೇ ಅವರ ಕೊನೆಯ ಸಂದೇಶವಾಗಿತ್ತು. ಇದಾದ ಕೆಲವೇ ಕ್ಷಣಗಳಲ್ಲಿ ಇರಾನಿ ಪಡೆಗಳ ದಾಳಿಗೆ ಅವರು ಬಲಿಯಾದರು.
ಹೌದು, ಓಮಾನ್ ಕರಾವಳಿಯ ಹತ್ತಿರದ ಹೊರ್ಮುಜ್ ಜಲಸಂಧಿಯಲ್ಲಿ ಸೈಪ್ರಸ್ ಧ್ವಜ ಹೊತ್ತ ‘ಜಿಎಫ್ಎಕ್ಸ್ ಗ್ಯಾಲಕ್ಸಿ’ (GFX Galaxy) ವಾಣಿಜ್ಯ ಹಡಗಿನ ಮೇಲೆ ನಡೆದ ದಾಳಿಯಲ್ಲಿ ಮಹಾರಾಷ್ಟ್ರದ ಪುಣೆ ಮೂಲದ ಮರೈನ್ ಇಂಜಿನಿಯರ್ ಹೆರಂಬ್ ಕರ್ಮಾರ್ಕರ್ (30) ಸಾವನ್ನಪ್ಪಿದ್ದಾರೆ.
ಕಳೆದ ಭಾನುವಾರ ಈ ಸರಕು ಸಾಗಣೆ ಹಡಗಿನ ಮೇಲೆ ದಾಳಿ ನಡೆದಾಗ ನೌಕೆಯಲ್ಲಿದ್ದ ಭಾರತೀಯ ಸಿಬ್ಬಂದಿ ಪೈಕ ಹೆರಂಬ್ ಕೂಡ ಒಬ್ಬರಾಗಿದ್ದರು. ತಾವು ಗಲ್ಫ್ ವಲಯವನ್ನು ಸುರಕ್ಷಿತವಾಗಿ ದಾಟಿದ್ದೇವೆ ಎಂದು ಹೆರಂಬ್ ತಮ್ಮ ಕುಟುಂಬಕ್ಕೆ ಮೊಬೈಲ್ನಲ್ಲಿ ಸಂದೇಶ ಕಳುಹಿಸಿದ್ದರು. ಆದರೆ, ದುರದೃಷ್ಟವಶಾತ್ ಆ ಸಂದೇಶವೇ ಅವರ ಜೀವನದ ಕೊನೆಯ ಸಂವಹನವಾಯಿತು. ಬುಧವಾರ ಹೆರಂಬ್ ಅವರ ಕುಟುಂಬದವರು ಅವರು ಸಾವನ್ನಪ್ಪಿರುವುದನ್ನು ಅಧಿಕೃತವಾಗಿ ಖಚಿತಪಡಿಸಿದ್ದಾರೆ. ಈ ಘಟನೆಯು ಕುಟುಂಬಸ್ಥರಲ್ಲಿ ತೀವ್ರ ಆಘಾತ ಉಂಟುಮಾಡಿದೆ.
ಕುಟುಂಬದ ಆಕ್ರಂದನ
ಅಕಾಲಿಕವಾಗಿ ಮಗನನ್ನು ಕಳೆದುಕೊಂಡ ಕುಟುಂಬವು ಇದೀಗ ಅವರ ಮೃತದೇಹಕ್ಕಾಗಿ ಕಾಯುತ್ತಿದೆ. “ಹೆರಂಬ್ ಅವರಿಗೆ ಕೇವಲ 30 ವರ್ಷ ವಯಸ್ಸಾಗಿತ್ತು. ಭಾರತ ಸರ್ಕಾರಕ್ಕೆ ನಮ್ಮ ಏಕೈಕ ವಿನಂತಿಯೆಂದರೆ, ಅವರ ಮೃತದೇಹವನ್ನು ಯಾವುದೇ ಹಾನಿಯಾಗದಂತೆ ಸುರಕ್ಷಿತವಾಗಿ ನಮ್ಮ ದೇಶಕ್ಕೆ ತಂದು ನಮಗೆ ಹಸ್ತಾಂತರಿಸಬೇಕು,” ಎಂದು ಹೆರಂಬ್ ಅವರ ಮಾವ ವಿವೇಕ್ ಟಂಡನ್ ಅವರು ಭಾವುಕರಾಗಿ ವಿನಂತಿಸಿಕೊಂಡಿದ್ದಾರೆ.
ವಾಣಿಜ್ಯ ಹಡಗುಗಳ ಮೇಲೆ ನಡೆಯುತ್ತಿರುವ ಸರಣಿ ದಾಳಿಗಳ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ಭಾರತ ಸರ್ಕಾರ, ಈ ದಾಳಿಯನ್ನು ಕಠಿಣ ಪದಗಳಲ್ಲಿ ಖಂಡಿಸಿದೆ. ಹಡಗಿನಲ್ಲಿದ್ದ 10 ಭಾರತೀಯ ಪ್ರಜೆಗಳನ್ನು ಯಶಸ್ವಿಯಾಗಿ ರಕ್ಷಿಸಲಾಗಿದ್ದು, ಓಮಾನ್ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಅಲ್ಲಿನ ಸ್ಥಳೀಯ ಅಧಿಕಾರಿಗಳೊಂದಿಗೆ ಮತ್ತು ಹಡಗಿನ ಆಡಳಿತ ಮಂಡಳಿಯೊಂದಿಗೆ ನಿರಂತರ ಸಂಪರ್ಕದಲ್ಲಿದೆ.
ರಕ್ಷಣಾ ಕಾರ್ಯಾಚರಣೆಯ ಮೇಲ್ವಿಚಾರಣೆಯನ್ನು ನಡೆಸಲಾಗುತ್ತಿದ್ದು, ಸಂತ್ರಸ್ತರಿಗೆ ಅಗತ್ಯವಿರುವ ಎಲ್ಲಾ ರೀತಿಯ ನೆರವನ್ನು ನೀಡಲಾಗುತ್ತಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ. ಈ ದಾಳಿ ನಡೆಸಿದ್ದು ಇರಾನ್ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಎಂದು ಯುಎಸ್ ಸೆಂಟ್ರಲ್ ಕಮಾಂಡ್ ಹೇಳಿದೆ. ನಾವು ಸತತ ಎಚ್ಚರಿಕೆ ನೀಡಿದ ಹೊರತಾಗಿಯೂ ಅನಧಿಕೃತ ಹಾದಿಯಲ್ಲಿ ನೌಕೆ ಸಾಗಿದ ಕಾರಣ ದಾಳಿ ನಡೆಸಬೇಕಾಯಿತು ಎಂದು ಹೇಳುವ ಮೂಲಕ ಇರಾನ್ ಪಡೆ ತನ್ನ ನಡೆಯನ್ನು ಸಮರ್ಥಿಸಿಕೊಂಡಿದೆ.
ಇದನ್ನೂ ಓದಿ : ಪೆಟ್ರೋಲ್ ಬಂಕ್ನಲ್ಲಿ ಮಾರಾಮಾರಿ – ಯುವಕನ ಕಾಲು, ತಲೆಗೆ ಕೊಡಲಿ ಏಟು.. ಎರಡೂ ಕೈಗಳು ಕಟ್!



















