ಮುಂಬೈ : ಮಹಾರಾಷ್ಟ್ರ ರಾಜಕೀಯದಲ್ಲಿ ಮತ್ತೊಮ್ಮೆ ಭಾರಿ ಸಂಚಲನ ಮೂಡಿಸುವಂತಹ ವಿದ್ಯಮಾನವೊಂದು ನಡೆದಿದೆ. ಆಡಳಿತಾರೂಢ ಎನ್ಸಿಪಿ ಮತ್ತು ಶರದ್ ಪವಾರ್ ನೇತೃತ್ವದ ವಿರೋಧ ಪಕ್ಷದ ಎನ್ಸಿಪಿ (ಎಸ್ಪಿ) ಬಣಗಳ ಪ್ರಮುಖ ನಾಯಕರು ಮಂಗಳವಾರ ತಡರಾತ್ರಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಮುಂಬೈನಲ್ಲಿರುವ ಮುಖ್ಯಮಂತ್ರಿಗಳ ಅಧಿಕೃತ ನಿವಾಸ ‘ವರ್ಷಾ’ದಲ್ಲಿ ನಡೆದ ಈ ರಹಸ್ಯ ಸಭೆಯು ಮಹಾರಾಷ್ಟ್ರ ರಾಜಕಾರಣದ ಸಮೀಕರಣಗಳು ಬದಲಾಗಲಿವೆಯೇ ಮತ್ತು ಶರದ್ ಪವಾರ್ ಬಣದ ನಾಯಕರು ಆಡಳಿತಾರೂಢ ಎನ್ಡಿಎ ಮೈತ್ರಿಕೂಟದತ್ತ ಮುಖ ಮಾಡಿದ್ದಾರೆಯೇ ಎಂಬ ಹೊಸ ಚರ್ಚೆಗಳನ್ನು ಹುಟ್ಟುಹಾಕಿದೆ.
ಎರಡೂ ಬಣಗಳ ವಿಲೀನದ ಗುಸುಗುಸು
ಮೂಲಗಳ ಪ್ರಕಾರ, ಶರದ್ ಪವಾರ್ ನೇತೃತ್ವದ ಎನ್ಸಿಪಿ (ಎಸ್ಪಿ) ಪಕ್ಷದ ಹಿರಿಯ ನಾಯಕ ಜಯಂತ್ ಪಾಟೀಲ್ ಅವರು ಸಿಎಂ ಫಡ್ನವೀಸ್ ಅವರನ್ನು ಭೇಟಿ ಮಾಡಿದ್ದರು. ಇದರ ಬೆನ್ನಲ್ಲೇ ಆಡಳಿತಾರೂಢ ಎನ್ಸಿಪಿ ಬಣದ ನಾಯಕರಾದ ಪ್ರಫುಲ್ ಪಟೇಲ್ ಮತ್ತು ಸುನಿಲ್ ತತ್ಕರೆ ಕೂಡ ಮುಖ್ಯಮಂತ್ರಿಗಳ ನಿವಾಸಕ್ಕೆ ಭೇಟಿ ನೀಡಿದ್ದರು. ಈ ನಾಯಕರು ಜಂಟಿಯಾಗಿ ಸಭೆ ನಡೆಸದಿದ್ದರೂ, ಶರದ್ ಪವಾರ್ ಬಣದ ನಾಯಕರು ಹಾಗೂ ಅಜಿತ್ ಪವಾರ್ ಬಣದ ನಾಯಕರು ಒಂದೇ ರಾತ್ರಿ ಮುಖ್ಯಮಂತ್ರಿಗಳನ್ನು ಭೇಟಿಯಾಗಿರುವುದು ಎನ್ಸಿಪಿಯ ಉಭಯ ಬಣಗಳು ಮತ್ತೆ ಒಂದಾಗಲಿವೆಯೇ ಎಂಬ ರಾಜಕೀಯ ವದಂತಿಗಳಿಗೆ ಭಾರಿ ಪುಷ್ಟಿ ನೀಡಿದೆ. ಪವಾರ್ ಬಣದ ಬಹುತೇಕ ಸಂಸದರು ಮತ್ತು ಶಾಸಕರು ಅಭಿವೃದ್ಧಿ ಅನುದಾನಕ್ಕಾಗಿ ಸರ್ಕಾರದ ಭಾಗವಾಗಲು ಒಲವು ಹೊಂದಿದ್ದಾರೆ ಎನ್ನಲಾಗಿದೆ.
ಸಂಸತ್ ಅಧಿವೇಶನದ ಲಿಂಕ್
ಈ ಮಹತ್ವದ ಭೇಟಿಯ ಹಿಂದೆ ಕೇವಲ ರಾಜ್ಯ ರಾಜಕಾರಣವಷ್ಟೇ ಅಲ್ಲದೆ ದೆಹಲಿಯ ರಾಜಕೀಯ ಲೆಕ್ಕಾಚಾರವೂ ಅಡಗಿದೆ ಎನ್ನಲಾಗುತ್ತಿದೆ. ಜುಲೈ 20ರಿಂದ ಆರಂಭವಾಗಲಿರುವ ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಕೇಂದ್ರ ಸರ್ಕಾರವು ಲೋಕಸಭಾ ಸೀಟುಗಳ ಸಂಖ್ಯೆಯನ್ನು 850ಕ್ಕೆ ಹೆಚ್ಚಿಸುವ ಹಾಗೂ ಕ್ಷೇತ್ರ ಪುನರ್ವಿಂಗಡಣೆ (Delimitation) ಪ್ರಕ್ರಿಯೆಗೆ ಸಂಬಂಧಿಸಿದ ‘131 ನೇ ಸಂವಿಧಾನ ತಿದ್ದುಪಡಿ ಮಸೂದೆ’ಯನ್ನು ಮಂಡಿಸಲು ಸಿದ್ಧತೆ ನಡೆಸಿದೆ. ಈ ಮಸೂದೆ ಅಂಗೀಕಾರವಾಗಲು ಲೋಕಸಭೆಯಲ್ಲಿ ಮೂರನೇ ಎರಡರಷ್ಟು ಬಹುಮತದ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಕೇಂದ್ರದ ಬಿಜೆಪಿ ಸರ್ಕಾರವು ಶರದ್ ಪವಾರ್ ನೇತೃತ್ವದ ಎನ್ಸಿಪಿ (ಎಸ್ಪಿ) ಮತ್ತು ಡಿಎಂಕೆ ಪಕ್ಷಗಳ ಬೆಂಬಲ ಕೋರುತ್ತಿದೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಪಿ. ಚಿದಂಬರಂ ಇತ್ತೀಚೆಗೆ ಆರೋಪಿಸಿದ್ದರು.
ಹಳೇ ಒಪ್ಪಂದಕ್ಕೆ ಮರುಜೀವ?
ಕಳೆದ ಜನವರಿಯಲ್ಲಿ ಎನ್ಸಿಪಿ ನಾಯಕ ಅಜಿತ್ ಪವಾರ್ ಅವರು ವಿಮಾನ ಅಪಘಾತದಲ್ಲಿ ನಿಧನರಾಗುವ ಮುನ್ನವೇ ಎನ್ಸಿಪಿಯ ಉಭಯ ಬಣಗಳ ವಿಲೀನ ಪ್ರಕ್ರಿಯೆ ಮತ್ತು ಮೈತ್ರಿಕೂಟ ಸೇರುವ ಸೂತ್ರಗಳು ಬಹುತೇಕ ಅಂತಿಮ ಹಂತಕ್ಕೆ ತಲುಪಿದ್ದವು ಎಂದು ಮೂಲಗಳು ಹೇಳುತ್ತವೆ. ಆದರೆ ಅಜಿತ್ ಪವಾರ್ ಅವರ ಅಕಾಲಿಕ ನಿಧನದ ನಂತರ ಈ ಪ್ರಕ್ರಿಯೆಗೆ ಹಿನ್ನಡೆಯಾಗಿತ್ತು. ಇದೀಗ ಮತ್ತೆ ಉಭಯ ಬಣಗಳ ನಾಯಕರು ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ಸಭೆ ನಡೆಸಿರುವುದು ಮಹಾರಾಷ್ಟ್ರದಲ್ಲಿ ಯಾವುದೇ ಕ್ಷಣದಲ್ಲಾದರೂ ಮತ್ತೊಂದು ದೊಡ್ಡ ರಾಜಕೀಯ ಪಲ್ಲಟ ಸಂಭವಿಸಬಹುದು ಎಂಬ ಸೂಚನೆ ನೀಡಿದೆ.
ಇದನ್ನೂ ಓದಿ : ‘ಯಾರಾದ್ರು ಲಂಚ ಕೇಳಿದ್ರೆ, ರಾಜ್ಯ ಆಳುತ್ತಿರುವುದು “ನಮ್ಮ ವಿಜಯ್” ಅಂತ ಹೇಳಿ’ : ತಮಿಳುನಾಡು ಸಿಎಂ ಹೇಳಿಕೆ ವೈರಲ್!


















