ತುಮಕೂರು : ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಖೋಟಾ ನೋಟು ಚಲಾವಣೆ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಚಿಲ್ಲರೆ ಅಂಗಡಿಯಲ್ಲಿ 500ರ ಖೋಟಾ ನೋಟು ಚಲಾವಣೆ ಮಾಡಿದ ಆರೋಪದಡಿ ಭದ್ರಾವತಿ ಮೂಲದ ರುದ್ರೇಶ್ (41) ಎಂಬಾತನನ್ನು ಹುಳಿಯಾರು ಪೊಲೀಸರು ಬಂಧಿಸಿದ್ದಾರೆ. ಕಳೆದ ಬುಧವಾರವೇ ಆರೋಪಿಯನ್ನು ಬಂಧಿಸಲಾಗಿದ್ದು, ಪ್ರಕರಣದ ತನಿಖೆ ಮುಂದುವರಿದಿದೆ.
ಚಿಕ್ಕನಾಯಕನಹಳ್ಳಿ ತಾಲೂಕಿನ ಹೊಸಹಳ್ಳಿ ಕೈಮರದಲ್ಲಿರುವ ಅಂಜನಾ ಶೆಟ್ಟಿ ಅವರ ಚಿಲ್ಲರೆ ಅಂಗಡಿಗೆ ಬಂದ ಆರೋಪಿಗಳು ಸಿಗರೇಟ್ ಪ್ಯಾಕ್ ಖರೀದಿಸಿ 500ರ ಖೋಟಾ ನೋಟು ನೀಡಿ ಚಿಲ್ಲರೆ ಪಡೆದು ಸ್ಥಳದಿಂದ ಪರಾರಿಯಾಗಿದ್ದರು. ಬಳಿಕ ಅಂಗಡಿ ಮಾಲೀಕರು ನೋಟನ್ನು ಪರಿಶೀಲಿಸಿದಾಗ ಅದು ಖೋಟಾ ಎಂದು ಖಚಿತವಾಗಿದ್ದು, ತಕ್ಷಣವೇ ಹುಳಿಯಾರು ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ದೂರಿನ ಆಧಾರದಲ್ಲಿ ತನಿಖೆ ಆರಂಭಿಸಿದ ಹುಳಿಯಾರು ಪೊಲೀಸರು ಆರೋಪಿಗಳು ಕಾರಿನಲ್ಲಿ ತೆರಳಿರುವ ಮಾಹಿತಿ ಪಡೆದು ಕಾರ್ಯಾಚರಣೆ ನಡೆಸಿದರು. ಮಾದನಾಯಕನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಗಂಗೊಂಡನಹಳ್ಳಿಯಲ್ಲಿ ಭದ್ರಾವತಿ ಮೂಲದ ರುದ್ರೇಶ್ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪ್ರಕರಣದಲ್ಲಿ ಭಾಗಿಯಾಗಿದ್ದ ಮತ್ತೊಬ್ಬ ಆರೋಪಿಗಾಗಿ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ. ಬಂಧಿತ ರುದ್ರೇಶ್ನನ್ನು ಹುಳಿಯಾರು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದು, ಖೋಟಾ ನೋಟು ಎಲ್ಲಿಂದ ಬಂದಿದೆ, ಇನ್ನೂ ಎಷ್ಟು ಕಡೆ ಚಲಾವಣೆ ಮಾಡಲಾಗಿದೆ ಎಂಬ ಬಗ್ಗೆ ತನಿಖೆ ಮುಂದುವರಿದಿದೆ.
ಇದನ್ನೂ ಓದಿ : ಫಾರೆಸ್ಟ್ ವಿಜಿಲೆನ್ಸ್ ಅಧಿಕಾರಿಗಳ ಕಾರ್ಯಾಚರಣೆ : ಪ್ರಾಣಿ ಬೇಟೆಗೆ ತಯಾರಿಸುತ್ತಿದ್ದ ಸ್ಫೋಟಕ ವಸ್ತುಗಳು ವಶಕ್ಕೆ



















