ನಾಗ್ಪುರ : 1947ರ ಭಾರತ ವಿಭಜನೆಯ ನಂತರ ಪಾಕಿಸ್ತಾನದಿಂದ ಭಾರತಕ್ಕೆ ವಲಸೆ ಬಂದವರನ್ನು ‘ನಿರಾಶ್ರಿತರು’ ಎಂದು ಕರೆಯುವುದು ತಪ್ಪು, ಬದಲಿಗೆ ಅವರನ್ನು ‘ಸಂಘರ್ಷದ ಯೋಧರು’ ಎಂದು ಕರೆಯಬೇಕು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಸರಸಂಘಚಾಲಕ ಮೋಹನ್ ಭಾಗವತ್ ಪ್ರತಿಪಾದಿಸಿದ್ದಾರೆ. ತಮ್ಮ ಮಾತೃಭೂಮಿ ಮತ್ತು ಧರ್ಮದ ಮೇಲಿನ ಅಪಾರ ಪ್ರೀತಿಯಿಂದಾಗಿ ಅವರು ತಲೆಮಾರುಗಳಿಂದ ಗಳಿಸಿದ್ದ ಆಸ್ತಿ, ಭೂಮಿ ಮತ್ತು ವ್ಯವಹಾರಗಳನ್ನು ಪಾಕಿಸ್ತಾನದಲ್ಲೇ ಬಿಟ್ಟು ಭಾರತಕ್ಕೆ ಬಂದಿದ್ದಾರೆ. ಅವರು ಅನುಭವಿಸಿದ ಕಷ್ಟ ಮತ್ತು ನೋವುಗಳು ಸಣ್ಣದೇನಲ್ಲ ಎಂದು ಭಾಗವತ್ ಹೇಳಿದ್ದಾರೆ. ನಾಗ್ಪುರದಲ್ಲಿ ನಡೆದ ಸಿಂಧೂ ಎಜುಕೇಶನ್ ಸೊಸೈಟಿಯ 75ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಈ ಮಾತುಗಳನ್ನಾಡಿದ್ದಾರೆ.
ಮಾತೃಭೂಮಿ ಮತ್ತು ಧರ್ಮವನ್ನು ಆರಿಸಿಕೊಂಡ ಯೋಧರು
ವಿಭಜನೆಯ ನಂತರ ಗಡಿ ದಾಟಿ ಭಾರತಕ್ಕೆ ಬಂದವರೆಲ್ಲರೂ ವಿವೇಚನೆಯಿಂದಲೇ ಈ ನಿರ್ಧಾರ ಕೈಗೊಂಡಿದ್ದರು. ಯಾವುದೇ ಭಯವಿಲ್ಲದೆ ಭಾರತದಲ್ಲಿ ಬದುಕಬೇಕು ಮತ್ತು ತಮ್ಮ ಧರ್ಮವನ್ನು ಮುಕ್ತವಾಗಿ ಪಾಲಿಸಬೇಕು ಎಂಬ ಏಕೈಕ ಉದ್ದೇಶ ಅವರದಾಗಿತ್ತು. “ಅವರನ್ನು ನಿರಾಶ್ರಿತರು ಎನ್ನುವುದು ಆ ಕಾಲದಲ್ಲಿ ಬಳಸಿದ ತಪ್ಪು ಪದವಾಗಿದೆ. ಅವರು ತಮ್ಮ ದೇಶ ಮತ್ತು ಧರ್ಮದ ಮೇಲಿನ ಭಕ್ತಿಯಿಂದಾಗಿ ಹೋರಾಡಿದ ಸಂಘರ್ಷದ ಯೋಧರು. ಕೇವಲ ಅವರದ್ದೇ ತಪ್ಪಿನಿಂದಾಗಿ ಆ ಯುದ್ಧದಲ್ಲಿ (ವಿಭಜನೆ) ನಾವೆಲ್ಲರೂ ಸೋಲಲಿಲ್ಲ, ಬದಲಿಗೆ ಅಖಂಡ ಭಾರತವನ್ನು ಉಳಿಸಿಕೊಳ್ಳುವ ಹೋರಾಟದಲ್ಲಿ ನಾವೆಲ್ಲರೂ ಸೋತಿದ್ದೆವು. ಆದರೆ ಆ ಸಂದರ್ಭದಲ್ಲಿ ಅವರು ಸಂಪತ್ತು ಅಥವಾ ವೃತ್ತಿಜೀವನವನ್ನು ಆರಿಸಿಕೊಳ್ಳದೆ, ತಮ್ಮ ದೇಶ ಮತ್ತು ಧರ್ಮವನ್ನು ಆರಿಸಿಕೊಂಡರು,” ಎಂದು ಭಾಗವತ್ ಅವರು ಶ್ಲಾಘಿಸಿದ್ದಾರೆ.
ಪರಿಸ್ಥಿತಿಗೆ ಶರಣಾಗದೆ ಎದ್ದು ನಿಲ್ಲಿ
ಜೀವನದ ಕಷ್ಟಕಾರ್ಪಣ್ಯಗಳ ಕುರಿತು ಮಾತನಾಡಿದ ಆರ್ಎಸ್ಎಸ್ ಮುಖ್ಯಸ್ಥ ಭಾಗವತ್, ಎಂತಹದೇ ಪ್ರತಿಕೂಲ ಪರಿಸ್ಥಿತಿ ಎದುರಾದರೂ ಯಾರೂ ಕೂಡ ವಿಧಿ ಅಥವಾ ಸಂದರ್ಭಗಳಿಗೆ ಶರಣಾಗಬಾರದು. ಕಷ್ಟದ ಸಮಯದಲ್ಲಿ ಧೃತಿಗೆಡದೆ ಮರಳಿ ಎದ್ದು ನಿಲ್ಲಲು ಪ್ರಯತ್ನಿಸಬೇಕು ಎಂದು ಕರೆ ನೀಡಿದ್ದಾರೆ. ಕಷ್ಟದ ಸಮಯದಿಂದ ಹೊರಬರಲು ಪ್ರಾಮಾಣಿಕ ಪ್ರಯತ್ನ ಮಾಡುವ ವ್ಯಕ್ತಿಯು ಅಂತಿಮವಾಗಿ ಯಶಸ್ವಿಯಾಗುತ್ತಾನೆ. ಆದರೆ ತೊಂದರೆಗಳನ್ನು ಕಂಡು ಓಡಿಹೋಗುವ ವ್ಯಕ್ತಿ ಈಗಾಗಲೇ ಸೋಲನ್ನು ಒಪ್ಪಿಕೊಂಡಿರುತ್ತಾನೆ ಎಂದು ಅವರು ನೆರೆದಿದ್ದ ಸಭಿಕರಿಗೆ ಧೈರ್ಯ ತುಂಬಿದ್ದಾರೆ.
ಶಿಕ್ಷಣ ಕೇವಲ ಉದ್ಯೋಗಕ್ಕಾಗಿ ಇರಬಾರದು
ಸಿಂಧೂ ಎಜುಕೇಶನ್ ಸೊಸೈಟಿಯ 75 ವರ್ಷಗಳ ಸುದೀರ್ಘ ಪಯಣವನ್ನು ಶ್ಲಾಘಿಸಿದ ಭಾಗವತ್, ಶಿಕ್ಷಣ ವ್ಯವಸ್ಥೆಯು ಕೇವಲ ಉದ್ಯೋಗ ಪಡೆಯುವ ಸಾಧನವಾಗಬಾರದು ಎಂದು ಆಶಿಸಿದ್ದಾರೆ. ಶಿಕ್ಷಣದಲ್ಲಿ ಉದ್ಯೋಗದಷ್ಟೇ ಮೌಲ್ಯಗಳು ಮತ್ತು ಸಾಮಾಜಿಕ ಜಾಗೃತಿಯೂ ಮುಖ್ಯವಾಗಿದೆ. ಯಾವುದು ಸರಿ, ಯಾವುದು ತಪ್ಪು ಎಂಬುದನ್ನು ಗುರುತಿಸುವ ಸಾಮರ್ಥ್ಯವನ್ನು ಶಿಕ್ಷಣವು ವಿದ್ಯಾರ್ಥಿಗಳಲ್ಲಿ ಬೆಳೆಸಬೇಕು. ಇಂತಹ ಮೌಲ್ಯಾಧಾರಿತ ಶಿಕ್ಷಣವು ಕೇವಲ ಪಠ್ಯಪುಸ್ತಕಗಳಿಂದ ಬರುವುದಿಲ್ಲ, ಬದಲಿಗೆ ಶಿಕ್ಷಕರ ನಡವಳಿಕೆ ಮತ್ತು ಅವರು ವಿದ್ಯಾರ್ಥಿಗಳಿಗೆ ಧಾರೆ ಎರೆಯುವ ಸಂಸ್ಕಾರದಿಂದ ಮೂಡುತ್ತದೆ. ಸಮಾಜದ ಕಲ್ಯಾಣಕ್ಕಾಗಿ ಮಿಡಿಯುವ ಉತ್ತಮ ಮಾನವ ಸಂಪನ್ಮೂಲ ಮತ್ತು ಜವಾಬ್ದಾರಿಯುತ ತಲೆಮಾರನ್ನು ಸೃಷ್ಟಿಸುವುದೇ ಶಿಕ್ಷಣದ ನೈಜ ಉದ್ದೇಶವಾಗಬೇಕು ಎಂದು ಅವರು ಒತ್ತಿ ಹೇಳಿದ್ದಾರೆ.
ಇದನ್ನೂ ಓದಿ : ಕ್ವಾರಿ ದುರಂತ : ಮೃತರ ಕುಟುಂಬಗಳಿಗೆ ತಕ್ಷಣ ಪರಿಹಾರ ನೀಡಿ – ಹೆಚ್.ಡಿ ಕುಮಾರಸ್ವಾಮಿ ಆಗ್ರಹ!



















