ಬೆಂಗಳೂರು : ಸ್ಟಾರ್ಟಪ್ ಕಂಪನಿಗಳಿಗೆ ಕಡಿಮೆ ಸಮಯದಲ್ಲಿ ದೊಡ್ಡ ಮೊತ್ತದ ಸಾಲ ಹಾಗೂ ಹೂಡಿಕೆ ವ್ಯವಸ್ಥೆ ಮಾಡಿಕೊಡುವುದಾಗಿ ನಂಬಿಸಿ, ನಕಲಿ ಬ್ಯಾಂಕ್ ಮತ್ತು ಖಾತೆಗಳ ಮೂಲಕ ಕೋಟಿ ಕೋಟಿ ರೂಪಾಯಿ ವಂಚನೆ ನಡೆಸಿದ ಜಾಲವನ್ನು ಸೈಬರ್ ಕ್ರೈಂ ಪೊಲೀಸರು ಬಯಲಿಗೆಳೆದಿದ್ದಾರೆ.
ಉದ್ಯಮ ಆರಂಭಿಸಲು ಅಥವಾ ವಿಸ್ತರಿಸಲು ಹಣದ ಅವಶ್ಯಕತೆ ಇರುವ ಸ್ಟಾರ್ಟಪ್ ಕಂಪನಿಗಳ ಮಾಲೀಕರನ್ನೇ ಈ ಜಾಲ ಪ್ರಮುಖವಾಗಿ ಗುರಿಯಾಗಿಸಿಕೊಂಡಿತ್ತು. ಆರೋಪಿಗಳು ಅಸ್ತಿತ್ವದಲ್ಲೇ ಇಲ್ಲದ ಬ್ಯಾಂಕ್ ಹೆಸರನ್ನು ಬಳಸಿ ನಕಲಿ ಬ್ಯಾಂಕ್ ಖಾತೆಗಳನ್ನು ಸೃಷ್ಟಿಸಿ, ಅದನ್ನೇ ನಿಜವಾದ ಹಣಕಾಸು ಸಂಸ್ಥೆಯಂತೆ ತೋರಿಸುತ್ತಿದ್ದರು. ಜೊತೆಗೆ “ಸ್ಟಾರ್ಟಪ್ ಕಂಪನಿಗಳಿಗೆ ಸಾಲ ಹಾಗೂ ಹೂಡಿಕೆ ಬೇಕಿದ್ದರೆ ಸಂಪರ್ಕಿಸಿ” ಎಂದು ಹೇಳಿ ಉದ್ಯಮಿಗಳ ವಿಶ್ವಾಸ ಗಳಿಸುತ್ತಿದ್ದರು.
ಸಾಲ ಮಂಜೂರು ಮಾಡುವ ಮೊದಲು ಒಟ್ಟು ಮೊತ್ತದ ಶೇಕಡಾ 20ರಷ್ಟು ಹಣವನ್ನು ಮುಂಗಡವಾಗಿ ಠೇವಣಿ ಮಾಡಬೇಕು ಎಂದು ಷರತ್ತು ವಿಧಿಸಿ, ಹಣ ಪಡೆದ ಬಳಿಕ ಯಾವುದೇ ಸಾಲ ನೀಡದೇ ಸಂಪರ್ಕ ಕಡಿತಗೊಳಿಸುತ್ತಿದ್ದರು ಎಂದು ತನಿಖೆಯಲ್ಲಿ ತಿಳಿದುಬಂದಿದೆ.
ಈ ರೀತಿಯ ಮೋಸದ ಮೂಲಕ ಹಲವಾರು ಸ್ಟಾರ್ಟಪ್ ಕಂಪನಿಗಳಿಂದ ಒಟ್ಟು ಸುಮಾರು 7.5 ಕೋಟಿ ರೂಪಾಯಿ ಹಣ ಪಡೆದು ವಂಚನೆ ಮಾಡಿರುವ ಆರೋಪ ಕೇಳಿಬಂದಿದೆ. ವಂಚನೆಗಾಗಿ ಬುದ್ಧ ಕೋ-ಆಪರೇಟಿವ್ ಸೊಸೈಟಿ ಹೆಸರನ್ನು ದುರುಪಯೋಗಪಡಿಸಿಕೊಂಡಿದ್ದು, ಚಂದ್ರಕಾಂತ್ ಎಂಬುವವರ ಹೆಸರಲ್ಲಿ ಸೊಸೈಟಿ ನೋಂದಣಿಯಾಗಿದೆ ಎಂದು ನಕಲಿ ದಾಖಲೆಗಳನ್ನು ತೋರಿಸಿ ಉದ್ಯಮಿಗಳನ್ನು ನಂಬಿಸುತ್ತಿದ್ದರು ಎನ್ನಲಾಗಿದೆ.
ಪ್ರಕರಣದಲ್ಲಿ ಚಂದ್ರಕಾಂತ್, ಜೀತ್ ಸಿಂಗ್ ಹಾಗೂ ಸಾದಿಕ್ ಪಾಷಾ ಸೇರಿದಂತೆ ಹಲವರು ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ. ಸೈಬರ್ ಕ್ರೈಂ ಪೊಲೀಸರು ಸಾದಿಕ್ ಪಾಷಾ ಎಂಬಾತನನ್ನು ಬಂಧಿಸಿದ್ದು, ವಿಚಾರಣೆ ಮುಂದುವರಿದಿದೆ. ತನಿಖೆ ವೇಳೆ ಆರೋಪಿಗಳು ತೋರಿಸಿದ್ದ ಬ್ಯಾಂಕ್ ಕುರಿತು ಪರಿಶೀಲನೆ ನಡೆಸಿದಾಗ, ಅಂತಹ ಯಾವುದೇ ಬ್ಯಾಂಕ್ ಅಸ್ತಿತ್ವದಲ್ಲೇ ಇಲ್ಲ ಎಂಬುದು ಬೆಳಕಿಗೆ ಬಂದಿದೆ.
ಸದ್ಯ ಪ್ರಕರಣದ ಪ್ರಮುಖ ಆರೋಪಿ ಚಂದ್ರಕಾಂತ್ ತಲೆಮರೆಸಿಕೊಂಡಿದ್ದು, ಆತನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಈ ಜಾಲದ ಮೂಲಕ ಇನ್ನಷ್ಟು ಜನರು ವಂಚನೆಗೆ ಒಳಗಾಗಿರುವ ಸಾಧ್ಯತೆ ಇರುವ ಹಿನ್ನೆಲೆ, ಪ್ರಕರಣದ ತನಿಖೆಯನ್ನು ಸೈಬರ್ ಕ್ರೈಂ ಪೊಲೀಸರು ಮತ್ತಷ್ಟು ತೀವ್ರಗೊಳಿಸಿದ್ದಾರೆ.
ಇದನ್ನೂ ಓದಿ : ‘ನನ್ನ ಮಗಳೇ ಅಪರಾಧಿಯಾಗಿದ್ದರೆ ಅವಳನ್ನು ಆ ಕೋಟೆಯಿಂದಲೇ ಕೆಳಗೆ ತಳ್ಳಿ’ : ಸಿಯಾ ಪೋಷಕರು



















