ಪುಣೆ: ಮಹಾರಾಷ್ಟ್ರದ ಪುಣೆಯ ಐತಿಹಾಸಿಕ ಲೋಹಗಢ ಕೋಟೆಯಲ್ಲಿ ಜೂನ್ 18ರಂದು ಉದ್ಯಮಿ ಕೇತನ್ ಅಗರ್ವಾಲ್ ಅವರನ್ನು ಕೋಟೆಯಿಂದ ಕೆಳಗ್ಗೆ ತಳ್ಳಿ ಸ್ವತಃ ಭಾವಿ ಪತ್ನಿ ಹಾಗೂ ಆಕೆಯ ಪ್ರಿಯಕರನೇ ಕೊಂದಿರುವ ಪ್ರಕರಣದ ಮತ್ತಷ್ಟು ಅಂಶಗಳು ಬಯಲಾಗುತ್ತಿವೆ. ಕೇತನ್ ಕಾಲು ಜಾರಿ ಬಿದ್ದು ಸಾವನ್ನಪ್ಪಿದ್ದಾನೆ ಎಂದು ಪೊಲೀಸರಿಗೆ ಸಿಯಾ ಗೋಯಲ್ ಸುಳ್ಳು ಕಥೆ ಹೇಳಿ ನಂಬಿಸಿದ್ದಳು. ಆದರೆ, ಜೂನ್ ತಿಂಗಳ ಧಗಧಗಿಸುವ ಬಿಸಿಲಿನಲ್ಲಿ ಒಬ್ಬ ವ್ಯಕ್ತಿ ಧರಿಸಿದ್ದ ‘ಹೂಡಿ’ (ಟೋಪಿ ಇರುವಂಥ ಜಾಕೆಟ್) ಹಾಗೂ ಆತ ಬಿಟ್ಟು ಹೋಗಿದ್ದ ಒಂದು ಮೊಬೈಲ್ ಫೋನ್ ಇಡೀ ಕೊಲೆ ರಹಸ್ಯವನ್ನು ಜಗತ್ತಿನ ಮುಂದೆ ಬಯಲು ಮಾಡಿದೆ.
33 ಡಿಗ್ರಿ ಸೆಲ್ಸಿಯಸ್ ಬಿಸಿಲಲ್ಲಿ ಹೂಡಿ ಧರಿಸಿದ್ದ ಹಂತಕ
ಲೋಹಗಢ ಕೋಟೆಯ ಟಿಕೆಟ್ ಕೌಂಟರ್ ಬಳಿ ಅಳವಡಿಸಲಾಗಿದ್ದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದ ತನಿಖಾಧಿಕಾರಿಗಳಿಗೆ ಒಂದು ವಿಚಿತ್ರ ಸಂಗತಿ ಕಣ್ಣಿಗೆ ಬಿತ್ತು. ಜೂನ್ 18ರಂದು ಅಲ್ಲಿನ ಉಷ್ಣಾಂಶ ಬರೋಬ್ಬರಿ 33 ಡಿಗ್ರಿ ಸೆಲ್ಸಿಯಸ್ ಇತ್ತು. ಅಂತಹ ಸೆಖೆಯ ವಾತಾವರಣದಲ್ಲೂ ಒಬ್ಬ ಯುವಕ ಶಾರ್ಟ್ಸ್ ಹಾಗೂ ತಲೆಗೆ ಹೂಡಿ ಜಾಕೆಟ್ ಧರಿಸಿ, ಅದರ ಮೇಲೆ ಹೆಡ್ಸೆಟ್ ಸಿಕ್ಕಿಸಿಕೊಂಡು ಕೇತನ್ ಮತ್ತು ಸಿಯಾ ದಂಪತಿಯನ್ನು ಹಿಂಬಾಲಿಸುತ್ತಿದ್ದ. ಹೂಡಿಯನ್ನು ಮುಖದ ಮುಂದೆ ಎಳೆದುಕೊಂಡಿದ್ದರಿಂದ ಆತನ ಮುಖ ಕಾಣಿಸುತ್ತಿರಲಿಲ್ಲ. ಮತ್ತೊಂದು ದೃಶ್ಯದಲ್ಲಿ ಸಿಯಾ ದಿಢೀರನೆ ಹಿಂದೆ ತಿರುಗಿ ನೋಡಿದಾಗ, ಆ ಹೂಡಿ ಧರಿಸಿದ ಯುವಕ ತಕ್ಷಣವೇ ಕೆಳಗೆ ಕುಳಿತುಕೊಂಡು ಮುಖ ಮುಚ್ಚಿಕೊಳ್ಳಲು ಯತ್ನಿಸಿದ್ದ. ಈ ಅಸಹಜ ನಡವಳಿಕೆಯೇ ಪೊಲೀಸರ ಸಂಶಯಕ್ಕೆ ಮೂಲ ಕಾರಣವಾಯಿತು.

ಅಂಗಡಿಯಲ್ಲೇ ಫೋನ್ ಬಿಟ್ಟು ಹೋಗಿದ್ದ
ಸಿಸಿಟಿವಿ ದೃಶ್ಯದಲ್ಲಿದ್ದ ಯುವಕ ಸಿಯಾಳ ಪ್ರಿಯಕರ ಚೇತನ್ ಚೌಧರಿ ಎಂದು ಪತ್ತೆ ಹಚ್ಚಿದ ಪೊಲೀಸರು ಆತನ ತಾಂತ್ರಿಕ ದಾಖಲೆಗಳನ್ನು ಪರಿಶೀಲಿಸಿದಾಗ ಮತ್ತೊಂದು ಚಾಣಾಕ್ಷ ನಡೆ ಬೆಳಕಿಗೆ ಬಂತು. ಚೇತನ್ ಜೂನ್ 18 ರಂದು ಪೊಲೀಸರು ತನ್ನ ಲೋಕೇಶನ್ ಟ್ರ್ಯಾಕ್ ಮಾಡಬಾರದು ಎಂಬ ಕಾರಣಕ್ಕೆ ತನ್ನ ಮೊಬೈಲ್ ಫೋನ್ ಅನ್ನು ತನ್ನ ಅಂಗಡಿಯಲ್ಲೇ ಬಿಟ್ಟು ಹೋಗಿದ್ದ. ಅಷ್ಟೇ ಅಲ್ಲದೆ, ಬೆಳಗ್ಗೆ 7 ಗಂಟೆಯಿಂದ ಸಂಜೆ 5.40ರವರೆಗೆ ಆ ಫೋನ್ನ ಇಂಟರ್ನೆಟ್ ಸಂಪರ್ಕವನ್ನೂ ಕಡಿತಗೊಳಿಸಿದ್ದ. ಆ ದಿನ ಆತನ ಮೊಬೈಲ್ಗೆ ಬಂದಿದ್ದ ಕರೆಗಳಿಗೆ ಆತನ ಅಂಗಡಿಯ ಕೆಲಸಗಾರರೇ ಉತ್ತರಿಸಿದ್ದರು. ಆದರೆ ತಾನು ಟ್ರ್ಯಾಕ್ ಆಗಬಾರದೆಂದು ತನ್ನ ಕೆಲಸಗಾರನೊಬ್ಬನ ಫೋನ್ ಅನ್ನು ಆತ ರಹಸ್ಯವಾಗಿ ಕೋಟೆಗೆ ತಂದಿದ್ದ ಎಂಬುದು ಪೊಲೀಸರ ತನಿಖೆಯಲ್ಲಿ ಸಾಬೀತಾಗಿದೆ.
ಮದುವೆ ಮುರಿಯಲು ಇಷ್ಟವಿರಲಿಲ್ಲ, ಅದಕ್ಕೆ ಕೊಲೆ ಮಾಡಿದೆವು!
ಪೊಲೀಸರ ತೀವ್ರ ವಿಚಾರಣೆಯ ವೇಳೆ ಆರೋಪಿಗಳು ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಕೇತನ್ನನ್ನು ಬಿಟ್ಟು ಇಬ್ಬರೂ ಓಡಿಹೋಗಬಹುದಿತ್ತಲ್ಲಾ ಎಂದು ಪೊಲೀಸರು ಪ್ರಶ್ನಿಸಿದಾಗ ಚೇತನ್ ಆಘಾತಕಾರಿ ಕಾರಣ ನೀಡಿದ್ದಾನೆ. “ನಿಶ್ಚಿತಾರ್ಥ ಮುರಿದು ಓಡಿಹೋದರೆ ತನ್ನ ಕುಟುಂಬದ ಗೌರವಕ್ಕೆ ಧಕ್ಕೆ ಬರುತ್ತದೆ ಎಂದು ಸಿಯಾ ಭಾವಿಸಿದ್ದಳು. ಮದುವೆ ನಿಲ್ಲಿಸಲು ಆಕೆಗೆ ಇಷ್ಟವಿರಲಿಲ್ಲ, ಹಾಗಾಗಿ ಕೇತನ್ನನ್ನು ಜಗತ್ತಿನಿಂದಲೇ ಇಲ್ಲವಾಗಿಸಲು ನಿರ್ಧರಿಸಿದೆವು” ಎಂದು ಆತ ಹೇಳಿಕೆ ನೀಡಿದ್ದಾನೆ. ಇವರಿಬ್ಬರ ಕಾಲ್ ರೆಕಾರ್ಡ್ಸ್ ಪರಿಶೀಲಿಸಿದಾಗ ಕಳೆದ ಕೆಲವು ತಿಂಗಳುಗಳಲ್ಲಿ ಇವರಿಬ್ಬರ ನಡುವೆ ಸಾವಿರಾರು ಕರೆಗಳು ವಿನಿಮಯವಾಗಿರುವುದು ಪತ್ತೆಯಾಗಿದೆ.
ಕೋಟೆಗೆ ಬರಲು ಸಿಯಾಳ ಸತತ ಹಠ
ಕೇತನ್ ಕುಟುಂಬಸ್ಥರ ಹೇಳಿಕೆಯ ಪ್ರಕಾರ, ಸಿಯಾಗೆ ಈ ಮದುವೆ ಇಷ್ಟವಿರಲಿಲ್ಲ ಮತ್ತು ಮದುವೆಯನ್ನು ಒಂದು ವರ್ಷ ಮುಂದೂಡುವಂತೆ ಆಕೆ ಕೇಳಿಕೊಂಡಿದ್ದಳು. ಆದರೂ ಮದುವೆ ನಿಶ್ಚಿತವಾದ ಕಾರಣ, ಕೇತನ್ನನ್ನು ಮುಗಿಸಲು ಆಕೆ ಮೇ 31 ಮತ್ತು ಜೂನ್ 4ರಂದೂ ಲೋಹಗಢ ಕೋಟೆಗೆ ಬರಲು ತೀವ್ರ ಹಠ ಹಿಡಿದಿದ್ದಳು. ಜೂನ್ 14ರಂದು ಆಕೆ ಮೊದಲ ಬಾರಿಗೆ ಆತನನ್ನು ಕಂದಕಕ್ಕೆ ತಳ್ಳಿದಾಗ ಆತ ಪೊದೆ ಹಿಡಿದು ಬದುಕುಳಿದಿದ್ದ. ಆಗ ‘ಹಾವು ಬಂತು’ ಎಂದು ಸುಳ್ಳು ಹೇಳಿ ಆಕೆಯೇ ಆತನನ್ನು ರಕ್ಷಿಸಿದಂತೆ ನಾಟಕವಾಡಿದ್ದಳು. ಆದರೆ ಕೊನೆಗೆ ಜೂನ್ 18ರಂದು ಪ್ರಿಯಕರ ಚೇತನ್ ಜೊತೆಗೂಡಿ ಕೇತನ್ನನ್ನು 400 ಅಡಿ ಆಳದ ಪ್ರಪಾತಕ್ಕೆ ತಳ್ಳಿ ಸಿಯಾ ತನ್ನ ಕ್ರೂರ ಸಂಚನ್ನು ಯಶಸ್ವಿಯಾಗಿ ಮುಗಿಸಿದ್ದಳು. ಸದ್ಯ ಇಬ್ಬರೂ ಕಂಬಿ ಎಣಿಸುತ್ತಿದ್ದಾರೆ.
ಇದನ್ನೂ ಓದಿ : ಪ್ರೀತಿಯ ನಾಟಕವಾಡಿ ಕೋಟಿ ಕುಬೇರನನ್ನೇ ಕಂದಕಕ್ಕೆ ತಳ್ಳಿದ ಭಾವಿ ಪತ್ನಿ



















