ಢಾಕಾ: ಮುಸ್ಲಿಮರೇ ಬಹುಸಂಖ್ಯಾತರಾಗಿರುವ ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಮೇಲಿನ ದೌರ್ಜನ್ಯ ಮತ್ತು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಘಟನೆಗಳು ಮತ್ತೊಮ್ಮೆ ಮುಂಚೂಣಿಗೆ ಬಂದಿವೆ. ಶ್ರೀರಾಮನ ಚಿತ್ರಕ್ಕೆ ಅಪಚಾರ ಎಸಗಿರುವ ಹಾಗೂ ಬೃಹತ್ ಶ್ರೀರಾಮನ ವಿಗ್ರಹ ನಿರ್ಮಾಣ ಕಾಮಗಾರಿಕೆ ತಡೆ ಒಡ್ಡಿರುವುದನ್ನು ವಿರೋಧಿಸಿ ರಾಜಧಾನಿ ಢಾಕಾದಲ್ಲಿ ಸಾವಿರಾರು ಹಿಂದೂಗಳು ಪಂಜಿನ ಮೆರವಣಿಗೆ ನಡೆಸಿ, ಬೃಹತ್ ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಪ್ರತಿಭಟನಾಕಾರರು ‘ಜೈ ಶ್ರೀರಾಮ್‘ ಘೋಷಣೆಗಳನ್ನು ಕೂಗುವ ಮೂಲಕ ಆಕ್ರೋಶ ಹೊರಹಾಕಿದ್ದಾರೆ.
ಉತ್ತರ ಬಾಂಗ್ಲಾದೇಶದ ಗೈಬಂಧ ಜಿಲ್ಲೆಯ ಪಲಾಶ್ಬರಿಯಲ್ಲಿರುವ ಶ್ರೀ ಶ್ರೀ ರಾಧಾ ಗೋವಿಂದ ದೇವಸ್ಥಾನದ ಸಂಕೀರ್ಣದಲ್ಲಿ ಸುಮಾರು 22 ಕೋಟಿ ಟಾಕಾ (ಅಂದಾಜು 15.6 ಕೋಟಿ ರೂಪಾಯಿ) ವೆಚ್ಚದಲ್ಲಿ 81 ಅಡಿ ಎತ್ತರದ ಭವ್ಯ ಶ್ರೀರಾಮನ ಮೂರ್ತಿಯನ್ನು ನಿರ್ಮಿಸಲಾಗುತ್ತಿತ್ತು. ಇದರೊಂದಿಗೆ 50 ಅಡಿಯ ಕೃಷ್ಣ ಹಾಗೂ 30 ಅಡಿಯ ಶಿವನ ಮೂರ್ತಿಗಳ ನಿರ್ಮಾಣಕ್ಕೂ ಯೋಜನೆ ರೂಪಿಸಲಾಗಿತ್ತು. ಈಗಾಗಲೇ ಶ್ರೀರಾಮನ ಮೂರ್ತಿಯ ಶೇಕಡಾ 80ರಷ್ಟು ಕೆಲಸ ಪೂರ್ಣಗೊಂಡಿದೆ. ಆದರೆ, ಸ್ಥಳೀಯ ಇಸ್ಲಾಮಿಕ್ ಮೂಲಭೂತವಾದಿ ಸಂಘಟನೆಗಳು ಈ ಯೋಜನೆಗೆ ತೀವ್ರ ವಿರೋಧ ವ್ಯಕ್ತಪಡಿಸಿ, ಬುಲ್ಡೋಜರ್ ಮೂಲಕ ಮೂರ್ತಿಯನ್ನು ಧ್ವಂಸಗೊಳಿಸುವುದಾಗಿ ಬೆದರಿಕೆ ಹಾಕಿದ್ದವು. ಸಾಮಾಜಿಕ ಸಾಮರಸ್ಯ ಮತ್ತು ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಉದ್ದೇಶದಿಂದ ಸದ್ಯಕ್ಕೆ ದೇವಸ್ಥಾನದ ಸಮಿತಿ ಈ ಕಾಮಗಾರಿಯನ್ನು ಸ್ಥಗಿತಗೊಳಿಸಿದೆ. ಇದರ ನಡುವೆ, ಮೂಲಭೂತವಾದಿಗಳ ಗುಂಪೊಂದು ಶ್ರೀರಾಮನ ಚಿತ್ರದ ಮೇಲೆ ಪಾದರಕ್ಷೆ ಇಟ್ಟು ಅಪಚಾರ ಎಸಗಿದೆ. ಇದರಿಂದ ಹಿಂದೂ ಸಮುದಾಯ ರೊಚ್ಚಿಗೆದ್ದಿದೆ.
ರಸ್ತೆಗಿಳಿದ ಹಿಂದೂ ಸಂಘಟನೆಗಳು: 72 ಗಂಟೆಗಳ ಗಡುವು
ಧಾರ್ಮಿಕ ನಿಂದನೆ ಎಸಗಿದವರನ್ನು ಬಂಧಿಸುವಂತೆ ಆಗ್ರಹಿಸಿ ಹಿಂದೂ ಮಹಾಜೋತ್ ಸಂಘಟನೆಯ ನೇತೃತ್ವದಲ್ಲಿ ಢಾಕಾದ ಪ್ರಮುಖ ಶಾಬಾಗ್ ವೃತ್ತದಿಂದ ರಾಷ್ಟ್ರೀಯ ಪ್ರೆಸ್ ಕ್ಲಬ್ವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆಯನ್ನು ಆಯೋಜಿಸಲಾಗಿತ್ತು. ರಂಗ್ಪುರದಲ್ಲೂ ಪ್ರತಿಭಟನೆ ನಡೆಸಲು ಯತ್ನಿಸಿದ ಹಿಂದೂಗಳನ್ನು ಪೊಲೀಸರು ತಡೆದಾಗ ಸಣ್ಣ ಮಟ್ಟದ ಸಂಘರ್ಷ ಏರ್ಪಟ್ಟಿದೆ. ಸದ್ಯ ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದ್ದರೂ ಯಾರನ್ನೂ ಬಂಧಿಸದ ಕಾರಣ ಪ್ರತಿಭಟನಾಕಾರರು ತಾರಿಕ್ ರೆಹಮಾನ್ ನೇತೃತ್ವದ ಬಿಎನ್ಪಿ ಸರ್ಕಾರದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತಪ್ಪಿತಸ್ಥರನ್ನು ಬಂಧಿಸಲು 72 ಗಂಟೆಗಳ ಗಡುವು ನೀಡಲಾಗಿದ್ದು, ವಿಗ್ರಹ ನಿರ್ಮಾಣಕ್ಕೆ ಅವಕಾಶ ನೀಡದಿದ್ದರೆ ದೇಶದ ಎಲ್ಲಾ 64 ಜಿಲ್ಲೆಗಳಲ್ಲೂ ರಾಮ ಮಂದಿರಗಳನ್ನು ನಿರ್ಮಿಸುವುದಾಗಿ ಹಿಂದೂ ಮಹಾಜೋತ್ ಎಚ್ಚರಿಕೆ ನೀಡಿದೆ. ಅಲ್ಲದೆ, ಶನಿವಾರ ಧಾರ್ಮಿಕ ವ್ಯವಹಾರಗಳ ಸಚಿವಾಲಯಕ್ಕೆ ಮನವಿ ಪತ್ರ ಸಲ್ಲಿಸಲು ನಿರ್ಧರಿಸಲಾಗಿದ್ದು, ರಾಷ್ಟ್ರೀಯ ಪೂಜಾ ಆಚರಣಾ ಸಮಿತಿಯು ದೇಶಾದ್ಯಂತ ಪ್ರತಿಭಟನೆಗೆ ಕರೆ ನೀಡಿದೆ.
ಅಲ್ಪಸಂಖ್ಯಾತರ ಹಕ್ಕುಗಳ ರಕ್ಷಣೆಗೆ ಹೆಚ್ಚಿದ ಕೂಗ
ಬಾಂಗ್ಲಾದೇಶದ ಒಟ್ಟು ಜನಸಂಖ್ಯೆಯಲ್ಲಿ ಹಿಂದೂಗಳು ಶೇಕಡಾ 8ರಷ್ಟಿದ್ದು, ದೇಶದ ಅತಿ ದೊಡ್ಡ ಧಾರ್ಮಿಕ ಅಲ್ಪಸಂಖ್ಯಾತ ಸಮುದಾಯವಾಗಿದ್ದಾರೆ. ಹಿಂದಿನ ಮುಹಮ್ಮದ್ ಯೂನುಸ್ ಸರ್ಕಾರದ ಅವಧಿಯಿಂದಲೇ ಹಿಂದೂಗಳ ಮೇಲಿನ ದಾಳಿಗಳು ಹೆಚ್ಚಾಗಿದ್ದು, ಫೆಬ್ರವರಿಯಲ್ಲಿ ಅಧಿಕಾರ ವಹಿಸಿಕೊಂಡ ಪ್ರಧಾನಿ ತಾರಿಕ್ ರೆಹಮಾನ್ “ದೇಶ ಎಲ್ಲರಿಗೂ ಸೇರಿದ್ದು” ಎಂದು ಭರವಸೆ ನೀಡಿದ್ದರೂ ಪರಿಸ್ಥಿತಿ ಬದಲಾಗಿಲ್ಲ. ಈ ವರ್ಷದ ಜನವರಿಯಿಂದ ಮಾರ್ಚ್ ಅವಧಿಯಲ್ಲೇ ಸುಮಾರು 133 ಕೋಮು ಹಿಂಸಾಚಾರದ ಘಟನೆಗಳು ದಾಖಲಾಗಿರುವುದು ಬಾಂಗ್ಲಾದೇಶದಲ್ಲಿ ಹಿಂದೂಗಳ ಭದ್ರತೆ ಮತ್ತು ಹಕ್ಕುಗಳ ಬಗ್ಗೆ ಜಾಗತಿಕ ಮಟ್ಟದಲ್ಲಿ ಕಳವಳ ಮೂಡಿಸಿದೆ.



















