ಭೋಪಾಲ್ : ದೇಶಾದ್ಯಂತ ಭಾರಿ ಸದ್ದು ಮಾಡುತ್ತಿರುವ ಮಧ್ಯಪ್ರದೇಶದ ಭೋಪಾಲ್ನ ನಟಿ, ಮಾಡೆಲ್ ತ್ವಿಷಾ ಶರ್ಮಾ ಸಾವಿನ ಪ್ರಕರಣಕ್ಕೆ ಇದೀಗ ಮತ್ತೊಂದು ಆಘಾತಕಾರಿ ತಿರುವು ಸಿಕ್ಕಿದೆ. ಪ್ರಕರಣದ ಪ್ರಮುಖ ಸಾಕ್ಷಿಯಾಗಿರುವ ನೀರಜ್ ದುಬೆ ಎಂಬವರ ಮೇಲೆ ತ್ವಿಷಾರ ಪತಿಯ ಸ್ನೇಹಿತರು ಭೀಕರ ಹಲ್ಲೆ ನಡೆಸಿದ್ದಾರೆ. ಕೋರ್ಟ್ನಲ್ಲಿ ಸಾಕ್ಷಿ ಹೇಳದಂತೆ ಹೆದರಿಸಿ, ಬೆದರಿಕೆ ಹಾಕಲು ಈ ದಾಳಿ ನಡೆಸಲಾಗಿದ್ದು, ಹಲ್ಲೆಯ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ವರದಕ್ಷಿಣೆ ಕಿರುಕುಳ ಮತ್ತು ಕೊಲೆ ಆರೋಪದ ತನಿಖೆ ತೀವ್ರಗೊಂಡಿರುವಂತೆಯೇ ಈ ಘಟನೆ ನಡೆದಿರುವುದು ಆತಂಕಕ್ಕೆ ಕಾರಣವಾಗಿದೆ.

ತ್ವಿಷಾ ಶರ್ಮಾ ಅವರ ಪತಿ, ಮುಖ್ಯ ಆರೋಪಿ ಸಮರ್ಥ್ ಸಿಂಗ್ ನಿವಾಸದ ಬಳಿಯೇ ನೀರಜ್ ದುಬೆ ಅವರು ಸಲೂನ್ ನಡೆಸುತ್ತಿದ್ದಾರೆ. ಮೇ 30ರಂದು ನೀರಜ್ ತಮ್ಮ ಪಾರ್ಲರ್ ಬಳಿ ಇದ್ದಾಗ ಕಾರಿನಲ್ಲಿ ಬಂದ ಸಮರ್ಥ್ ಸಿಂಗ್ನ ನಾಲ್ಕೈದು ಜನ ಸ್ನೇಹಿತರು ಇವರನ್ನು ಸುತ್ತುವರಿದಿದ್ದಾರೆ. ಬಳಿಕ “ಈ ಕೊಲೆ ಪ್ರಕರಣದಲ್ಲಿ ನೀನೇಕೆ ಸಾಕ್ಷಿ ಹೇಳಲು ಹೋಗುತ್ತಿದ್ದೀಯಾ?” ಎಂದು ಪ್ರಶ್ನಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ನೀರಜ್ ಅವರು ಇದಕ್ಕೆ ಪ್ರತಿರೋಧ ಒಡ್ಡಿದಾಗ, ಗೂಂಡಾಗಳು ಒಟ್ಟಾಗಿ ಸೇರಿ ಅವರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳಲ್ಲಿ ಅರ್ಧ ಡಜನ್ ಮಂದಿ ನೀರಜ್ ಅವರನ್ನು ಹಿಡಿದು ಮನಬಂದಂತೆ ಹೊಡೆಯುತ್ತಿರುವುದು ಮತ್ತು ಅವರಿಂದ ತಪ್ಪಿಸಿಕೊಳ್ಳಲು ನೀರಜ್ ಯತ್ನಿಸುತ್ತಿರುವುದು ಸ್ಪಷ್ಟವಾಗಿ ದಾಖಲಾಗಿದೆ.
ಪೊಲೀಸರ ಮೊರೆ ಹೋದ ಸಾಕ್ಷಿ
ಘಟನೆ ನಡೆದ ತಕ್ಷಣ ತೀವ್ರ ಭಯಭೀತರಾದ ನೀರಜ್ ದುಬೆ ಅವರು ಕಟಾರಾ ಹಿಲ್ಸ್ ಪೊಲೀಸ್ ಠಾಣೆಗೆ ಧಾವಿಸಿ ಲಿಖಿತ ದೂರು ನೀಡಿದ್ದಾರೆ. “ದಾಳಿಕೋರರು ನನಗೆ ಪ್ರಾಣ ಬೆದರಿಕೆ ಹಾಕಿದ್ದಾರೆ. ಕೋರ್ಟ್ಗೆ ಹೋದರೆ ಜೀವ ಸಹಿತ ಬಿಡುವುದಿಲ್ಲ ಎಂದು ಎಚ್ಚರಿಸಿದ್ದಾರೆ. ಸದ್ಯ ನನ್ನ ಪ್ರಾಣಕ್ಕೆ ಅಪಾಯವಿದ್ದು, ಪೊಲೀಸರು ನನಗೆ ಸೂಕ್ತ ರಕ್ಷಣೆ ನೀಡಬೇಕು ಮತ್ತು ನ್ಯಾಯ ಒದಗಿಸಬೇಕು” ಎಂದು ಅವರು ಮಾಧ್ಯಮಗಳ ಮುಂದೆ ಅಳಲು ತೋಡಿಕೊಂಡಿದ್ದಾರೆ. ದೂರು ದಾಖಲಿಸಿಕೊಂಡಿರುವ ಪೊಲೀಸರು, ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಹಲ್ಲೆಕೋರರನ್ನು ಗುರುತಿಸುವ ಕಾರ್ಯದಲ್ಲಿ ತೊಡಗಿದ್ದು, ಶೀಘ್ರದಲ್ಲೇ ಕಠಿಣ ಕಾನೂನು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.

ಅಪರಾಧ ಸ್ಥಳ ಮರುಸೃಷ್ಟಿ
ಏಪ್ರಿಲ್ 12ರಂದು ತ್ವಿಷಾ ಶರ್ಮಾ ಅವರು ತಮ್ಮ ಗಂಡನ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದರು. ಮಗಳ ಸಾವಿಗೆ ವರದಕ್ಷಿಣೆ ಕಿರುಕುಳವೇ ಕಾರಣ ಎಂದು ತ್ವಿಷಾ ಪೋಷಕರು ನೀಡಿದ ದೂರಿನ ಮೇರೆಗೆ ಪೊಲೀಸರು ಪತಿ ಸಮರ್ಥ್ ಸಿಂಗ್ ಮತ್ತು ಅತ್ತೆ ಗಿರಿಬಾಲಾ ಸಿಂಗ್ ಅವರನ್ನು ಈಗಾಗಲೇ ಬಂಧಿಸಿದ್ದಾರೆ. ತನಿಖೆಯ ಭಾಗವಾಗಿ ಇತ್ತೀಚೆಗಷ್ಟೇ ಪೊಲೀಸರು ವಿಧಿವಿಜ್ಞಾನ ಪ್ರಯೋಗಾಲಯದ (ಎಫ್ಎಸ್ಎಲ್) ತಜ್ಞರೊಂದಿಗೆ ಕಟಾರಾ ಹಿಲ್ಸ್ನಲ್ಲಿರುವ ಅವರ ಮನೆಗೆ ಆರೋಪಿಗಳನ್ನು ಕರೆತಂದು, 80 ಕೆಜಿ ತೂಕದ ಡಮ್ಮಿ ಬಳಸಿ ಅಪರಾಧ ನಡೆದ ರಾತ್ರಿಯ ಘಟನಾವಳಿಗಳನ್ನು ಮರುಸೃಷ್ಟಿ (ಕ್ರೈಮ್ ಸೀನ್ ರಿಕ್ರೀಯೇಷನ್) ಮಾಡಿದ್ದರು. ಈ ತನಿಖೆ ಪ್ರಗತಿಯಲ್ಲಿರುವಾಗಲೇ ಸಾಕ್ಷಿ ನಾಶಪಡಿಸಲು ಈ ಹಲ್ಲೆ ನಡೆದಿರುವುದು ಪ್ರಕರಣದ ಗಂಭೀರತೆಯನ್ನು ಹೆಚ್ಚಿಸಿದೆ.
ಇದನ್ನೂ ಓದಿ : ಬಿಜೆಪಿಗೆ ಅಣ್ಣಾಮಲೈ ಗುಡ್ಬೈ – ದಿಢೀರ್ ರಾಜೀನಾಮೆ ಸಲ್ಲಿಸಿದ್ದೇಕೆ ತಮಿಳುನಾಡು ಸಿಂಗಂ?



















