ನವದೆಹಲಿ : ತಮಿಳುನಾಡು ಬಿಜೆಪಿ ಮಾಜಿ ಅಧ್ಯಕ್ಷ ಕೆ. ಅಣ್ಣಾಮಲೈ ಅವರು ಕೇಸರಿ ಪಡೆಗೆ ವಿದಾಯ ಹೇಳಿ, ತಮ್ಮದೇ ಆದ ರಾಜಕೀಯ ಪಕ್ಷವನ್ನು ಸ್ಥಾಪಿಸಲು ಸಜ್ಜಾಗಿದ್ದಾರೆ ಎಂಬ ವದಂತಿಗಳಿಗೆ ಪುಷ್ಟಿ ನೀಡುವಂಥ ಬೆಳವಣಿಗೆಗಳು ನಡೆಯುತ್ತಿವೆ. ಬಿಜೆಪಿ ಹೈಕಮಾಂಡ್ ನೀಡಿರುವ ಎಲ್ಲಾ ಆಫರ್ಗಳನ್ನು ತಿರಸ್ಕರಿಸಿರುವ ಅಣ್ಣಾಮಲೈ ಅವರು, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ತುರ್ತು ಸಭೆ ನಡೆಸಲು ಸಮಯಾವಕಾಶ ಕೋರಿದ್ದಾರೆ.
ದ್ರಾವಿಡ ರಾಜಕಾರಣದ ಭದ್ರಕೋಟೆಯಾಗಿರುವ ತಮಿಳುನಾಡಿನಲ್ಲಿ ರಾಷ್ಟ್ರೀಯತೆಯ ಸಿದ್ಧಾಂತದ ಹಿನ್ನೆಲೆಯುಳ್ಳ ಹೊಸ ಪ್ರಾದೇಶಿಕ ಪಕ್ಷವನ್ನು ಕಟ್ಟಲು ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ತೆರೆಮರೆಯ ಸಿದ್ಧತೆ ನಡೆಸುತ್ತಿರುವುದು ದೇಶದ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ.
ಹೈಕಮಾಂಡ್ ಆಫರ್ಗಳನ್ನೆಲ್ಲಾ ತಿರಸ್ಕರಿಸಿದ ಅಣ್ಣಾಮಲೈ
ಈಗಾಗಲೇ ಅಣ್ಣಾಮಲೈ ಅವರು ಬಿಜೆಪಿಯ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಮತ್ತು ತಮಿಳುನಾಡು ಬಿಜೆಪಿ ಉಸ್ತುವಾರಿ ನಿತಿನ್ ನಬೀನ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಈ ವೇಳೆ ಪಕ್ಷದ ಕೇಂದ್ರ ನಾಯಕತ್ವವು ಅವರಿಗೆ ನೀಡಲು ಮುಂದಾಗಿದ್ದ ಕೇಂದ್ರ ಸಚಿವ ಸ್ಥಾನದ ಜವಾಬ್ದಾರಿ ಅಥವಾ ರಾಜ್ಯಸಭಾ ಸದಸ್ಯತ್ವದ ಆಫರ್ಗಳನ್ನು ಅವರು ನಯವಾಗಿಯೇ ನಿರಾಕರಿಸಿದ್ದಾರೆ ಎನ್ನಲಾಗಿದೆ.
ಇದೇ ವೇಳೆ ತಮಿಳುನಾಡಿನಲ್ಲಿ ಅಧಿಕಾರದಲ್ಲಿರುವ ನಟ ವಿಜಯ್ ಅವರ ‘ತಮಿಳಗ ವೆಟ್ರಿ ಕಳಗಂ’ (TVK) ಸೇರಿದಂತೆ ಯಾವುದೇ ಇತರ ರಾಜಕೀಯ ಪಕ್ಷಗಳನ್ನು ಸೇರುವುದಿಲ್ಲ ಎಂದು ಸ್ಪಷ್ಟಪಡಿಸಿರುವ ಅವರು, ಸ್ವತಂತ್ರ ರಾಜಕೀಯ ಅಸ್ತಿತ್ವ ಕಂಡುಕೊಳ್ಳಲು ದೃಢ ನಿರ್ಧಾರ ಮಾಡಿದ್ದಾರೆ ಎಂದು ವಿಶ್ವಾಸಾರ್ಹ ಮೂಲಗಳು ತಿಳಿಸಿವೆ.
ಮೈತ್ರಿ ಮತ್ತು ಸಿದ್ಧಾಂತಗಳ ನಡುವಿನ ಘರ್ಷಣೆ
ಅಣ್ಣಾಮಲೈ ಅವರು ಬಿಜೆಪಿ ತೊರೆಯಲು ಎಐಎಡಿಎಂಕೆ (AIADMK) ಪಕ್ಷದೊಂದಿಗಿನ ಮೈತ್ರಿ ಮತ್ತು ಸಿದ್ಧಾಂತಗಳ ನಡುವಿನ ಭಿನ್ನಾಭಿಪ್ರಾಯವೇ ಮುಖ್ಯ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ. ತಮಿಳುನಾಡಿನಲ್ಲಿ ದ್ರಾವಿಡ ರಾಜಕೀಯ ಸಂಪ್ರದಾಯಕ್ಕೆ ತಾವು ವಿರೋಧಿಯಲ್ಲ ಎಂದು ಬಿಂಬಿಸಿಕೊಳ್ಳಲು ಬಿಜೆಪಿ ಹೈಕಮಾಂಡ್ ನಡೆಸುತ್ತಿರುವ ಪ್ರಯತ್ನಗಳು ಅಣ್ಣಾಮಲೈ ಅವರಿಗೆ ಇಷ್ಟವಿರಲಿಲ್ಲ. ಇದರ ಜೊತೆಗೆ, ಇತ್ತೀಚೆಗೆ ಕೇಂದ್ರ ಶಿಕ್ಷಣ ಸಚಿವಾಲಯವು ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ 9ನೇ ತರಗತಿ ವಿದ್ಯಾರ್ಥಿಗಳಿಗೆ ತ್ರಿಭಾಷಾ ಸೂತ್ರವನ್ನು ಕಡ್ಡಾಯಗೊಳಿಸಿ ಹೊರಡಿಸಿದ್ದ ಆದೇಶವನ್ನು ಹಿಂಪಡೆಯುವಂತೆ ಅಣ್ಣಾಮಲೈ ಬಹಿರಂಗವಾಗಿಯೇ ಒತ್ತಾಯಿಸಿದ್ದರು. ಈ ಹಿಂದೆ ನಿರ್ಧರಿಸಿದಂತೆ 2029-30ರಿಂದ ಈ ನಿಯಮ ಜಾರಿಗೆ ತರುವಂತೆ ಅವರು ಕೇಂದ್ರಕ್ಕೆ ಮನವಿ ಮಾಡಿದ್ದು, ಕೇಂದ್ರ ಮತ್ತು ಅಣ್ಣಾಮಲೈ ನಡುವಿನ ಭಿನ್ನಮತವನ್ನು ಸಾಬೀತುಪಡಿಸಿತ್ತು.
ಕೊಯಮತ್ತೂರಿನಲ್ಲಿ ಅಭಿಮಾನಿ ಬಳಗ ಸಕ್ರಿಯ
ಅಣ್ಣಾಮಲೈ ಅವರ ಈ ಮುಂದಿನ ಹೆಜ್ಜೆಗೆ ಪೂರಕವೆಂಬಂತೆ ಕೊಯಮತ್ತೂರಿನಾದ್ಯಂತ ಅವರ ಬೆಂಬಲಿಗರು ಭಾರಿ ಸಂಖ್ಯೆಯ ಪೋಸ್ಟರ್ಗಳನ್ನು ಅಂಟಿಸಿದ್ದಾರೆ. ಅಣ್ಣಾಮಲೈ ಅವರ ಭಾವಚಿತ್ರವಿರುವ ಈ ಪೋಸ್ಟರ್ಗಳಲ್ಲಿ “ಭಯವಿಲ್ಲದ ಮನಸ್ಸುಗಳಿಗೆ ಯಾವುದೇ ಮಿತಿಗಳಿಲ್ಲ” ಎಂಬ ಸಾಲುಗಳನ್ನೂ ಬರೆಯಲಾಗಿದ್ದು, ಇದು ಹೊಸ ಪಕ್ಷ ರಚನೆಯ ಮುನ್ಸೂಚನೆ ಎಂದೇ ಬಿಂಬಿತವಾಗುತ್ತಿದೆ. ಅಲ್ಲದೆ, ಇತ್ತೀಚೆಗೆ ನಡೆದ ಬಿಜೆಪಿಯ ಎರಡು ಪ್ರಮುಖ ರಾಜ್ಯ ಕಾರ್ಯಕಾರಿಣಿ ಸಭೆಗಳಿಗೆ ಅಣ್ಣಾಮಲೈ ಗೈರಾಗಿದ್ದಾರೆ. ಮತ್ತೊಂದೆಡೆ ಅವರ ಅಭಿಮಾನಿ ಬಳಗವಾದ ‘ಅಣ್ಣಾಮಲೈ ಅನ್ಬು ಕೂಟಂ’ ರಾಜ್ಯಾದ್ಯಂತ ಹೊಸ ಸದಸ್ಯರು, ಪದಾಧಿಕಾರಿಗಳನ್ನು ನೋಂದಾಯಿಸಿಕೊಳ್ಳುತ್ತಿರುವುದು ಅವರ ರಾಜಕೀಯ ಮರುಜನ್ಮಕ್ಕೆ ವೇದಿಕೆ ಸಿದ್ಧವಾಗುತ್ತಿರುವುದನ್ನು ಖಚಿತಪಡಿಸಿದೆ.
ಎಐಎಡಿಎಂಕೆ ಒತ್ತಡಕ್ಕೆ ಮಣಿದಿತ್ತೇ ಹೈಕಮಾಂಡ್?
ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ತಮಿಳುನಾಡಿನ ದ್ರಾವಿಡ ನಾಯಕರಾದ ಸಿ.ಎನ್. ಅಣ್ಣಾದೊರೈ ಮತ್ತು ಜೆ. ಜಯಲಲಿತಾ ಅವರ ಕುರಿತು ಅಣ್ಣಾಮಲೈ ಮಾಡಿದ್ದ ಟೀಕೆಗಳು ಎಐಎಡಿಎಂಕೆ ಮತ್ತು ಬಿಜೆಪಿ ನಡುವಿನ ಮೈತ್ರಿಯಲ್ಲಿ ಬಿರುಕು ಮೂಡಿಸಿತ್ತು. ಅಣ್ಣಾಮಲೈ ಅವರ ಆಕ್ರಮಣಕಾರಿ ಶೈಲಿಯಿಂದ ಬೇಸತ್ತಿದ್ದ ಎಐಎಡಿಎಂಕೆ ನಾಯಕರು, ಅವರನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಗಿಳಿಸುವಂತೆ ದೆಹಲಿ ನಾಯಕರಿಗೆ ಒತ್ತಡ ಹೇರಿದ್ದರು ಎನ್ನಲಾಗಿದೆ. ಮೈತ್ರಿ ಉಳಿಸಿಕೊಳ್ಳುವ ಸಲುವಾಗಿ ಬಿಜೆಪಿ ಹೈಕಮಾಂಡ್ ಅಣ್ಣಾಮಲೈ ಅವರನ್ನು ಅಧ್ಯಕ್ಷ ಸ್ಥಾನದಿಂದ ಮುಕ್ತಗೊಳಿಸಿತ್ತು. ಇದೇ ಅಸಮಾಧಾನವನ್ನು ಮನಸ್ಸಿನಲ್ಲಿಟ್ಟುಕೊಂಡಿರುವ ಅಣ್ಣಾಮಲೈ, ಈಗ ತಮಿಳುನಾಡು ರಾಜಕಾರಣದಲ್ಲಿ ದ್ರಾವಿಡ ಪಕ್ಷಗಳಿಗೆ ಪರ್ಯಾಯವಾಗಿ ಸ್ವಂತ ಬಲದ ಮೇಲೆ ಹೊಸ ಇತಿಹಾಸ ಸೃಷ್ಟಿಸಲು ಮುಂದಾಗಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ : ತೃಣಮೂಲ ಕಾಂಗ್ರೆಸ್ನಲ್ಲಿ ಬಂಡಾಯದ ಬಿರುಗಾಳಿ : ಉಚ್ಚಾಟಿತ ನಾಯಕನ ಬೆನ್ನಿಗೆ ನಿಂತ ಶಾಸಕರು.. ಪಕ್ಷ ಇಬ್ಭಾಗ?



















