ಬೆಂಗಳೂರು : ಪ್ರತಿ ತಿಂಗಳು ಮೊದಲ ತಾರೀಖಿನಂದು ಹಣಕಾಸಿಗೆ ಸಂಬಂಧಿಸಿದ ಹಲವು ನಿಯಮಗಳು (Financial Changes) ಬದಲಾಗುತ್ತವೆ. ಅದರಂತೆ, ಇಂದಿನಿಂದ (ಜೂನ್ 1) ಹಣಕಾಸಿಗೆ ಸಂಬಂಧಿಸಿದಂತೆ ಹಲವು ನಿಯಮಗಳು ಬದಲಾಗಿವೆ. ಅದರಲ್ಲೂ, ಮುಂಗಡ ತೆರಿಗೆ ಪಾವತಿಸುವವರು, ಉದ್ಯೋಗಿಗಳ ಭತ್ಯೆಗೆ ಸಂಬಂಧಿಸಿದ ನಿಯಮಗಳು ಬದಲಾಗಿವೆ. ಹಾಗಾದರೆ, ಇಂದಿನಿಂದ ಯಾವೆಲ್ಲ ನಿಯಮಗಳು ಬದಲಾಗಿವೆ ಎಂಬುದನ್ನು ತಿಳಿಯೋಣ ಬನ್ನಿ.
ಆದಾಯ ತೆರಿಗೆ ಮತ್ತು ಮುಂಗಡ ತೆರಿಗೆ
2026-27ನೇ ಸಾಲಿನ ಮೊದಲ ಮುಂಗಡ ತೆರಿಗೆಯನ್ನು (Advance Tax) ಪಾವತಿಸಲು ಜೂನ್ 15, 2026 ಕೊನೆಯ ದಿನಾಂಕವಾಗಿದೆ. 10 ಸಾವಿರ ರೂಪಾಯಿಗಿಂತ ಹೆಚ್ಚು ತೆರಿಗೆ ಬಾಧ್ಯತೆ ಇರುವವರು ಗಡುವಿನೊಳಗೆ ಶೇ. 15ರಷ್ಟು ಮುಂಗಡ ತೆರಿಗೆಯನ್ನು ಪಾವತಿಸಬೇಕು ಎಂದು ಆದಾಯ ತೆರಿಗೆ ಇಲಾಖೆ ಸೂಚಿಸಿದೆ. ತಪ್ಪಿದರೆ ಮಾಸಿಕ ಶೇ. 1ರಷ್ಟು ಬಡ್ಡಿ ದಂಡ ವಿಧಿಸಲಾಗುತ್ತದೆ ಎಂದು ಕೂಡ ತಿಳಿಸಲಾಗಿದೆ.
ವೇತನದಾರರಿಗೆ ವಿನಾಯಿತಿಗಳು
ಸಂಬಳ ಪಡೆಯುವ ಉದ್ಯೋಗಿಗಳ ಮಕ್ಕಳ ಶಿಕ್ಷಣ ಭತ್ಯೆ ವಿನಾಯಿತಿಯನ್ನು ಪ್ರತಿ ಮಗುವಿಗೆ ತಿಂಗಳಿಗೆ 100 ರೂ.ನಿಂದ 3 ಸಾವಿರ ರೂ.ಗೆ ಹೆಚ್ಚಿಸಲಾಗಿದೆ ಮತ್ತು ಹಾಸ್ಟೆಲ್ ಭತ್ಯೆಯನ್ನು 9,000 ರೂ.ಗೆ ಏರಿಸಲಾಗಿದೆ. ಬೆಂಗಳೂರು, ಪುಣೆ, ಹೈದರಾಬಾದ್ ಮತ್ತು ಅಹಮದಾಬಾದ್ ಸೇರಿದಂತೆ ಪ್ರಮುಖ ನಗರಗಳನ್ನು ಶೇ. 50ರಷ್ಟು ಮನೆ ಬಾಡಿಗೆ ಭತ್ಯೆ (HRA) ವಿನಾಯಿತಿ ವರ್ಗಕ್ಕೆ ಸೇರಿಸಲಾಗಿದೆ.
ಯುಪಿಐ ಸುರಕ್ಷತೆ
ಡಿಜಿಟಲ್ ವಂಚನೆ ತಡೆಗಟ್ಟುವ ದಿಸೆಯಲ್ಲಿ ಇನ್ನು ಮುಂದೆ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವಾಗ ಅಥವಾ ಮೊಬೈಲ್ ಸಂಖ್ಯೆ ನಮೂದಿಸುವಾಗ, ಫಲಾನುಭವಿಯ ಬ್ಯಾಂಕ್ ಖಾತೆಯಲ್ಲಿ ನೋಂದಣಿಯಾಗಿರುವ ಹೆಸರು ಸ್ಕ್ರೀನ್ ಮೇಲೆ ಕಾಣಿಸಲಿದೆ. ಹೊಸ ನಿಯಮದ ಜಾರಿಯಿಂದ, ಜನ ತಾವು ಯಾರಿಗೆ ದುಡ್ಡು ಕಳುಹಿಸುತ್ತಿದ್ದೇವೆ ಎಂಬುದರ ಬಗ್ಗೆ ನಿಖರ ಮಾಹಿತಿ ದೊರೆಯುತ್ತದೆ.
ಪ್ಯಾನ್ ಕಾರ್ಡ್ ಕಡ್ಡಾಯ
ಬ್ಯಾಂಕ್ ಅಥವಾ ಪೋಸ್ಟ್ ಆಫೀಸ್ ಖಾತೆಗಳಲ್ಲಿ ಒಂದು ಹಣಕಾಸು ವರ್ಷದಲ್ಲಿ ಒಟ್ಟು ನಗದು ಜಮೆ ಅಥವಾ ನಗದು ಹಿಂಪಡೆಯುವಿಕೆಯು 10 ಲಕ್ಷ ರೂಪಾಯಿ ಅಥವಾ ಅದಕ್ಕಿಂತ ಹೆಚ್ಚಾದರೆ ಪ್ಯಾನ್ ಕಾರ್ಡ್ ನೀಡುವುದು ಕಡ್ಡಾಯ. ಬ್ಯಾಂಕ್ ಅಥವಾ ಬ್ಯಾಂಕೇತರ ಹಣಕಾಸು ಸಂಸ್ಥೆಗಳಲ್ಲಿ ಒಂದೇ ಸಲ 50 ಸಾವಿರ ರೂ.ಗಿಂತ ಹೆಚ್ಚು ಹೆಚ್ಚು ಅಥವಾ ಒಂದು ವರ್ಷದಲ್ಲಿ ಒಟ್ಟು 5 ಲಕ್ಷ ರೂ.ಗಿಂತ ಹೆಚ್ಚಿನ ಮೊತ್ತವನ್ನು ನಿಶ್ಚಿತ ಠೇವಣಿ (ಎಫ್ ಡಿ) ಇರಿಸಲು ಪ್ಯಾನ್ ಬೇಕು.
ಇದನ್ನೂ ಓದಿ : ಸ್ವಯಂಪ್ರೇರಿತ ಲೈಂಗಿಕ ವೃತ್ತಿ ಕಾನೂನು ಬಾಹಿರವಲ್ಲ, ವಯಸ್ಕರಿಗೆ ಕಿರುಕುಳ ನೀಡುವಂತಿಲ್ಲ ; ಸುಪ್ರೀಂ ಕೋರ್ಟ್



















