ಮುಂಬೈ: ಪೆಟ್ರೋಲ್, ಡೀಸೆಲ್ ದರ ಏರಿಕೆಯಿಂದ ಕಂಗಾಲಾಗಿ ಜನರು ಪರ್ಯಾಯ ಇಂಧನದ ಮೊರೆ ಹೋಗಿರುವಂತೆಯೇ, ಇದೀಗ ಆಟೋ ಹಾಗೂ ಕ್ಯಾಬ್ಗಳಲ್ಲಿ ಹೆಚ್ಚಾಗಿ ಬಳಕೆಯಾಗುವ ಸಿಎನ್ಜಿ ದರವೂ ಮತ್ತೆ ಹೆಚ್ಚಳವಾಗಿದೆ. ಮುಂಬೈ ಮಹಾನಗರ ಪ್ರದೇಶದಲ್ಲಿ ಸಿಎನ್ಜಿ ದರವನ್ನು ಪ್ರತಿ ಕೆಜಿಗೆ 2 ರೂಪಾಯಿ ಹೆಚ್ಚಿಸಲಾಗಿದ್ದು, ಈ ಹೊಸ ದರಗಳು ತಕ್ಷಣದಿಂದಲೇ ಜಾರಿಗೆ ಬಂದಿವೆ. ಜಾಗತಿಕ ಇಂಧನ ಮಾರುಕಟ್ಟೆಯಲ್ಲಿನ ಏರಿಳಿತಗಳ ಪರಿಣಾಮವಾಗಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಸಾರಿಗೆ ವೆಚ್ಚದ ಮೇಲೆ ಇದು ತೀವ್ರ ಪರಿಣಾಮ ಬೀರುವ ಆತಂಕ ಮೂಡಿಸಿದೆ.
ಸರ್ಕಾರಿ ಸ್ವಾಮ್ಯದ ಅನಿಲ ವಿತರಕ ಸಂಸ್ಥೆಯಾದ ಮಹಾನಗರ್ ಗ್ಯಾಸ್ ಲಿಮಿಟೆಡ್ (MGL), ಮುಂಬೈ ಸೇರಿದಂತೆ ಠಾಣೆ, ನವಿ ಮುಂಬೈ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಈ ಪರಿಷ್ಕೃತ ದರವನ್ನು ಪ್ರಕಟಿಸಿದೆ. ಈ ಜಾರಿಯೊಂದಿಗೆ ಮುಂಬೈನಲ್ಲಿ ಸಿಎನ್ಜಿ ಬೆಲೆ ಪ್ರತಿ ಕೆಜಿಗೆ 86 ರೂ.ಗೆ ತಲುಪಿದೆ. ಗಮನಾರ್ಹ ಅಂಶವೆಂದರೆ, ಕಳೆದ ಮೇ 14 ರಂದು ಸಹ ಕೆಜಿಗೆ 2 ರೂ. ಹೆಚ್ಚಿಸಲಾಗಿತ್ತು. ಕೇವಲ ಒಂದು ತಿಂಗಳ ಅವಧಿಯಲ್ಲಿ ಒಟ್ಟು 4 ರೂ.ಗಳಷ್ಟು ಭಾರೀ ಏರಿಕೆ ಕಂಡಿರುವುದು ಆಟೋ-ಟ್ಯಾಕ್ಸಿ ಚಾಲಕರು, ದೈನಂದಿನ ಪ್ರಯಾಣಿಕರು ಮತ್ತು ವಾಣಿಜ್ಯ ವಾಹನಗಳ ಮಾಲೀಕರಲ್ಲಿ ತೀವ್ರ ಕಳವಳ ಮೂಡಿಸಿದೆ. ಆದಾಗ್ಯೂ, ಮನೆಗಳಿಗೆ ಪೂರೈಕೆಯಾಗುವ ಪಿಎನ್ಜಿ ಮತ್ತು ಗೃಹಬಳಕೆಯ ಎಲ್ಪಿಜಿ ಸಿಲಿಂಡರ್ ದರಗಳಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ.
ದೆಹಲಿಯಲ್ಲೂ ಸಿಎನ್ಜಿ ದರ ಜಿಗಿತ
ಕೇವಲ ಮುಂಬೈ ಮಾತ್ರವಲ್ಲದೆ, ರಾಷ್ಟ್ರ ರಾಜಧಾನಿ ದೆಹಲಿಯಲ್ಲೂ ಸಿಎನ್ಜಿ ಬೆಲೆ ಸರಣಿ ಏರಿಕೆ ಕಾಣುತ್ತಿದೆ. ಕಳೆದ ಮೇ 26ರಂದು ದೆಹಲಿಯಲ್ಲಿ ಸಿಎನ್ಜಿ ದರವನ್ನು ಕೆಜಿಗೆ 2 ರೂಪಾಯಿ ಹೆಚ್ಚಿಸಲಾಗಿದ್ದು, ಅಲ್ಲಿನ ಚಿಲ್ಲರೆ ದರ ಈಗ 83.09 ರೂಪಾಯಿಗೆ ತಲುಪಿದೆ. ಮೇ 15ರಿಂದ ಜಾರಿಗೆ ಬರುವಂತೆ ದೆಹಲಿಯಲ್ಲಿ ಕೇವಲ 11 ದಿನಗಳ ಅವಧಿಯಲ್ಲಿ ಇದು ನಾಲ್ಕನೇ ಬಾರಿ ಆಗಿರುವ ದರ ಪರಿಷ್ಕರಣೆಯಾಗಿದ್ದು, ಒಟ್ಟಾರೆಯಾಗಿ ಕೇವಲ ಎರಡು ವಾರಗಳಲ್ಲಿ ಸಿಎನ್ಜಿ ದರ 7 ರೂಪಾಯಿಗಳಷ್ಟು ದುಬಾರಿಯಾಗಿದೆ.
ಜಾಗತಿಕ ತೈಲ ಮಾರುಕಟ್ಟೆ ಒತ್ತಡ
ಈ ಹಠಾತ್ ದರ ಏರಿಕೆಗೆ ಜಾಗತಿಕ ಮಟ್ಟದಲ್ಲಿ ಕಚ್ಚಾ ತೈಲ ಬೆಲೆಗಳು ಸತತವಾಗಿ ಹೆಚ್ಚುತ್ತಿರುವುದೇ ಪ್ರಮುಖ ಕಾರಣ ಎಂದು ತಜ್ಞರು ವಿಶ್ಲೇಷಿಸಿದ್ದಾರೆ. ಅಮೆರಿಕ ಮತ್ತು ಇರಾನ್ ನಡುವಿನ ಉದ್ವಿಗ್ನತೆಯಿಂದಾಗಿ ವಿಶ್ವದ ಪ್ರಮುಖ ತೈಲ ಸಾರಿಗೆ ಮಾರ್ಗ ‘ಹೊರ್ಮುಜ್ ಜಲಸಂಧಿ’ಯಲ್ಲಿ ಉಂಟಾಗಿರುವ ತೈಲ ಪೂರೈಕೆ ವ್ಯತ್ಯಯದ ಆತಂಕವು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತಲ್ಲಣ ಸೃಷ್ಟಿಸಿದೆ. ಭಾರತವು ತನ್ನ ಇಂಧನ ಅಗತ್ಯತೆಯ ಶೇ.85ರಷ್ಟನ್ನು ಆಮದಿನ ಮೂಲಕವೇ ಪೂರೈಸಿಕೊಳ್ಳುವುದರಿಂದ, ಜಾಗತಿಕ ಮಾರುಕಟ್ಟೆಯ ಈ ಏರಿಳಿತಗಳು ನೇರವಾಗಿ ದೇಶೀಯ ಇಂಧನ ದರಗಳ ಮೇಲೆ ಪ್ರಭಾವ ಬೀರುತ್ತಿವೆ ಎಂದು ಸರ್ಕಾರಿ ಅಧಿಕಾರಿಗಳು ಸಮರ್ಥಿಸಿಕೊಂಡಿದ್ದಾರೆ.
ಅಗತ್ಯ ವಸ್ತುಗಳ ಬೆಲೆ ಏರಿಕೆಯ ಭೀತಿ
ದೇಶದ ಪ್ರಮುಖ ವಾಣಿಜ್ಯ ನಗರಿಗಳಲ್ಲಿ ಸಿಎನ್ಜಿ ದರ ಸತತವಾಗಿ ಏರಿಕೆಯಾಗುತ್ತಿರುವುದು ಕೇವಲ ವಾಹನ ಸವಾರರಿಗೆ ಮಾತ್ರವಲ್ಲದೆ, ಸಾಮಾನ್ಯ ಗ್ರಾಹಕರಿಗೂ ಹೊರೆಯಾಗುವ ಸಾಧ್ಯತೆಯಿದೆ. ಸಾರಿಗೆ ಮತ್ತು ಲಾಜಿಸ್ಟಿಕ್ಸ್ ವೆಚ್ಚಗಳು ಗಣನೀಯವಾಗಿ ಹೆಚ್ಚಾಗುವುದರಿಂದ, ಮುಂದಿನ ದಿನಗಳಲ್ಲಿ ತರಕಾರಿ, ಹಣ್ಣು ಹಾಗೂ ದಿನಸಿ ಸೇರಿದಂತೆ ನಿತ್ಯಬಳಕೆಯ ಅಗತ್ಯ ವಸ್ತುಗಳ ಬೆಲೆಗಳೂ ದುಬಾರಿಯಾಗಬಹುದು ಎಂದು ಆರ್ಥಿಕ ವಿಶ್ಲೇಷಕರು ಎಚ್ಚರಿಸಿದ್ದಾರೆ.



















