ಸೂರತ್: ಪತ್ನಿ ಮತ್ತು ಆಕೆಯ ಕಡೆಯವರಿಂದ ನಿರಂತರವಾಗಿ ಎದುರಿಸುತ್ತಿರುವ ಮಾನಸಿಕ ಕಿರುಕುಳ ಹಾಗೂ ಸುಳ್ಳು ಪ್ರಕರಣಗಳ ಕಾನೂನು ಹೋರಾಟದಿಂದ ಬೇಸತ್ತ ಗುಜರಾತ್ನ ವ್ಯಕ್ತಿಯೊಬ್ಬರು ತಮಗೆ ದಯಾಮರಣ ನೀಡುವಂತೆ ಕೋರಿ ಜಿಲ್ಲಾಡಳಿತದ ಮೆಟ್ಟಿಲೇರಿದ್ದಾರೆ. ಸೂರತ್ ನಿವಾಸಿಯಾದ ಕಿರೀಟ್ ಪಟೇಲ್ ಎಂಬವರೇ ಈ ವಿಲಕ್ಷಣ ಹೆಜ್ಜೆ ಇಟ್ಟ ದುರ್ದೈವಿ ಪತಿ ಆಗಿದ್ದು, ಇವರ ಈ ನಡೆ ಈಗ ಕೌಟುಂಬಿಕ ಕಲಹಗಳಲ್ಲಿ ಪುರುಷರಿಗಿರುವ ಕಾನೂನು ರಕ್ಷಣೆ ಮತ್ತು ಮಾನಸಿಕ ಆರೋಗ್ಯದ ಕುರಿತು ಸಾರ್ವಜನಿಕ ವಲಯದಲ್ಲಿ ದೊಡ್ಡ ಚರ್ಚೆಯನ್ನು ಹುಟ್ಟುಹಾಕಿದೆ.
ಕಿರೀಟ್ ಪಟೇಲ್ ಸೂರತ್ ಜಿಲ್ಲಾಧಿಕಾರಿ ಕಚೇರಿಗೆ ಸಲ್ಲಿಸಿರುವ ಅಧಿಕೃತ ಅರ್ಜಿಯಲ್ಲಿ ತಮ್ಮ ಪತ್ನಿಯ ಕರಾಳ ಮುಖವನ್ನು ಅನಾವರಣಗೊಳಿಸಿದ್ದಾರೆ. ದಂಪತಿಗಳಿಬ್ಬರಿಗೂ ಇದು ಮೂರನೇ ವಿವಾಹವಾಗಿದ್ದು, 2024ರ ನ.14ರಂದು ಇವರ ಮದುವೆ ನಡೆದಿತ್ತು. ಕಿರೀಟ್ ಪಟೇಲ್ ತಮ್ಮ ಪತ್ನಿಯನ್ನು ‘ಲೂಟೇರಿ ದುಲ್ಹನ್’ (ದೋಚುವ ಕನ್ಯೆ) ಎಂದು ಬಣ್ಣಿಸಿದ್ದು, ಆಕೆ ಈ ಹಿಂದೆ ಮದುವೆಯಾಗಿದ್ದ ಪತಿಯರಿಗೂ ಇದೇ ರೀತಿ ಕಾನೂನಿನ ಹೆದರಿಕೆ ಹಾಕಿ ಹಣ ವಸೂಲಿ ಮಾಡಿದ್ದಾಳೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಸದ್ಯ ತನಗೆ ಆಕೆಯ ಮನೆಯವರು ನಿರಂತರವಾಗಿ ಹಣಕ್ಕಾಗಿ ಬೇಡಿಕೆ ಇಟ್ಟು ಮಾನಸಿಕವಾಗಿ ಹಿಂಸಿಸುತ್ತಿದ್ದಾರೆ ಎನ್ನುವುದು ಪಟೇಲ್ ಅವರ ವಾದವಾಗಿದೆ.
ಮಹಿಳಾ ಪರ ಕಾನೂನುಗಳ ದುರ್ಬಳಕೆ
ತಮ್ಮ ನಡುವೆ ಸಣ್ಣಪುಟ್ಟ ಜಗಳಗಳಾದಾಗಲೂ ಪತ್ನಿಯು ಮಹಿಳಾ ರಕ್ಷಣಾ ಕಾಯ್ದೆಗಳನ್ನು ಅಸ್ತ್ರವಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಕಿರೀಟ್ ಪಟೇಲ್ ದೂರಿದ್ದಾರೆ. ತಾವೇ ಜಗಳಕ್ಕೆ ಪ್ರಚೋದನೆ ನೀಡಿ, ನಂತರ ತಕ್ಷಣವೇ ಪೊಲೀಸರಿಗೆ ಅಥವಾ ಮಹಿಳಾ ಸಹಾಯವಾಣಿಗೆ ಕರೆ ಮಾಡಿ ತಮ್ಮ ವಿರುದ್ಧ ಗೃಹ ಹಿಂಸಾಚಾರದ ಸುಳ್ಳು ಮೊಕದ್ದಮೆಗಳನ್ನು ಹೂಡುತ್ತಿದ್ದಾರೆ ಎಂದು ಪಟೇಲ್ ಅಳಲು ತೋಡಿಕೊಂಡಿದ್ದಾರೆ. ಇಷ್ಟೇ ಅಲ್ಲದೆ, ತಮ್ಮ ಮೊದಲನೇ ಪತ್ನಿಯ ಮಗನಿಗೆ ಪ್ರಸ್ತುತ ಪತ್ನಿಯು ದೈಹಿಕವಾಗಿ ಹಾನಿ ಮಾಡಲು ಯತ್ನಿಸಿದ್ದಾಳೆ ಮತ್ತು ಈ ಕುರಿತು ಪೊಲೀಸರಿಗೆ ದೂರು ನೀಡಿದರೂ ಯಾವುದೇ ಎಫ್ಐಆರ್ ದಾಖಲಾಗಿಲ್ಲ ಎಂದು ಅವರು ವ್ಯವಸ್ಥೆಯ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
ಗಂಡಸರಿಗಿಲ್ಲವೇ ಕಾನೂನು ರಕ್ಷಣೆ?
ಪೊಲೀಸ್ ಠಾಣೆ ಹಾಗೂ ಸರ್ಕಾರಿ ಕಚೇರಿಗಳಿಗೆ ಸತತವಾಗಿ ಅಲೆದಾಡಿದರೂ ತಮಗೆ ಕೇವಲ ಭರವಸೆಗಳು ಸಿಕ್ಕಿವೆಯೇ ವಿನಃ ಯಾವುದೇ ನ್ಯಾಯ ಸಿಕ್ಕಿಲ್ಲ ಎಂದು ಪಟೇಲ್ ಹತಾಶೆ ವ್ಯಕ್ತಪಡಿಸಿದ್ದಾರೆ. ಕೌಟುಂಬಿಕ ಬಿಕ್ಕಟ್ಟುಗಳಲ್ಲಿ ಪುರುಷರ ಪರವಾಗಿ ಯಾವುದೇ ಬಲವಾದ ಕಾನೂನು ರಕ್ಷಣೆ ಇಲ್ಲದಿರುವುದೇ ತಮ್ಮ ಈ ದುಸ್ಥಿತಿಗೆ ಕಾರಣ ಎಂದು ಅವರು ಅರ್ಜಿಯಲ್ಲಿ ಬರೆದುಕೊಂಡಿದ್ದಾರೆ. ಜಿಲ್ಲಾಧಿಕಾರಿ ಕಚೇರಿಯ ಸ್ವೀಕೃತಿ ಮುದ್ರೆ ಹೊಂದಿರುವ ಈ ಅರ್ಜಿಯಲ್ಲಿ, ತಮಗೆ ಈ ನರಕಯಾತನೆಯಿಂದ ಮುಕ್ತಿ ಪಡೆಯಲು ದಯಾಮರಣ ಬಿಟ್ಟರೆ ಬೇರೆ ಯಾವುದೇ ಮಾರ್ಗ ಕಾಣಿಸುತ್ತಿಲ್ಲ. ದಯವಿಟ್ಟು ನನಗೆ ದಯಾಮರಣ ಕಲ್ಪಿಸಿ ಎಂದು ಬೇಡಿಕೊಂಡಿದ್ದಾರೆ.
ತಮ್ಮ ದೂರಿಗೆ ಸಂಬಂಧಿಸಿದಂತೆ ಅಧಿಕಾರಿಗಳು ತಕ್ಷಣವೇ ಸೂಕ್ತ ತನಿಖೆ ನಡೆಸಿ ನ್ಯಾಯ ಒದಗಿಸದಿದ್ದರೆ, ತಾವು ಯಾವುದೇ ಕ್ಷಣದಲ್ಲಾದರೂ ಬೇರೆ ರೀತಿಯ ನಿರ್ಧಾರ ಕೈಗೊಳ್ಳಬೇಕಾಗುತ್ತದೆ ಎಂದು ಕಿರೀಟ್ ಪಟೇಲ್ ಎಚ್ಚರಿಕೆಯನ್ನೂ ನೀಡಿದ್ದಾರೆ. ಈ ಅರ್ಜಿಯ ಕುರಿತು ಸೂರತ್ ಜಿಲ್ಲಾಡಳಿತ ಅಥವಾ ಪೊಲೀಸ್ ಇಲಾಖೆ ಇನ್ನೂ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ. ಆದಾಗ್ಯೂ, ವಿವಾಹದ ಹೆಸರಿನಲ್ಲಿ ನಡೆಯುವ ಇಂತಹ ವಂಚನೆಗಳು ಮತ್ತು ಪುರುಷರ ಮೇಲಾಗುವ ಮಾನಸಿಕ ದೌರ್ಜನ್ಯಗಳ ತಡೆಗೆ ಕಟ್ಟುನಿಟ್ಟಿನ ತನಿಖೆ ನಡೆಯಬೇಕು ಎಂಬ ಒತ್ತಾಯ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.



















