ಬೆಂಗಳೂರು : ಅರಬ್ಬಿ ಸಮುದ್ರದಲ್ಲಿ ಉಂಟಾದ ಮೇಲ್ಸುಳಿಗಾಳಿಯ ಪರಿಣಾಮವಾಗಿ ಶುಕ್ರವಾರ ಸಂಜೆ ಬೆಂಗಳೂರು ನಗರದಲ್ಲಿ ಭಾರೀ ಮಳೆಯಾಗಿದೆ. ಮಳೆಯಿಂದ ನಗರದ ಹಲವು ಪ್ರಮುಖ ರಸ್ತೆಗಳು ಮತ್ತು ಅಂಡರ್ಪಾಸ್ಗಳು ಜಲಾವೃತಗೊಂಡು ಸಂಚಾರ ಅಸ್ತವ್ಯಸ್ತಗೊಂಡಿದೆ.
ನಗರದ ನಾಯಂಡಹಳ್ಳಿ ಪ್ರದೇಶದಲ್ಲಿ ಅತಿ ಹೆಚ್ಚು 40 ಮಿಮೀ ಮಳೆ ದಾಖಲಾಗಿದ್ದು, ಕಾಟನ್ಪೇಟೆ, ಸಂಪಂಗಿರಾಮನಗರ, ಹಂಪಿನಗರ, ಪುಲಿಕೇಶಿನಗರ ಹಾಗೂ ಚಾಮರಾಜಪೇಟೆ ಪ್ರದೇಶಗಳಲ್ಲೂ ಉತ್ತಮ ಮಳೆಯಾಗಿದೆ.
ಕೆಂಪೇಗೌಡ ಬಸ್ ನಿಲ್ದಾಣ, ಜಯನಗರ, ಹೆಬ್ಬಾಳ, ಇಂದಿರಾನಗರ, ಬನಶಂಕರಿ, ವಿಜಯನಗರ ಹಾಗೂ ಶಾಂತಿನಗರ ಸೇರಿದಂತೆ ಹಲವು ಭಾಗಗಳಲ್ಲಿ ಧಾರಾಕಾರ ಮಳೆ ಸುರಿದಿದೆ. ಗಾಂಧಿಬಜಾರ್ ರಸ್ತೆ, ಅರಮನೆ ರಸ್ತೆ ಮತ್ತು ಶೇಷಾದ್ರಿಪುರ ಮುಖ್ಯರಸ್ತೆ ಸೇರಿದಂತೆ ಅನೇಕ ಕಡೆ ನೀರು ನಿಂತು ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು.
ಮಾಗಡಿ ರಸ್ತೆಯ ಮೆಟ್ರೋ ರೈಲು ನಿಲ್ದಾಣಕ್ಕೆ ಮಳೆ ನೀರು ನುಗ್ಗಿದ ಪರಿಣಾಮ ಪ್ರಯಾಣಿಕರು ತೊಂದರೆ ಅನುಭವಿಸಿದರು. ಮುನ್ನೆಚ್ಚರಿಕಾ ಕ್ರಮವಾಗಿ ಕೆ.ಆರ್. ವೃತ್ತದ ಅಂಡರ್ಪಾಸ್ ಅನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಯಿತು.
ಇದೇ ವೇಳೆ ಹೆಬ್ಬಾಳ, ಹೊರವರ್ತುಲ ರಸ್ತೆ, ಸಿಲ್ಕ್ ಬೋರ್ಡ್, ವೈಟ್ಫೀಲ್ಡ್ ಹಾಗೂ ತುಮಕೂರು ರಸ್ತೆಯಲ್ಲಿ ಕಿಲೋಮೀಟರ್ಗಟ್ಟಲೆ ವಾಹನಗಳು ಸಾಲುಗಟ್ಟಿ ನಿಂತು ಭಾರೀ ಟ್ರಾಫಿಕ್ ಜಾಮ್ ಉಂಟಾಯಿತು. ಶಿವಾನಂದ ಸರ್ಕಲ್ ರೈಲ್ವೆ ಅಂಡರ್ಪಾಸ್ನಲ್ಲಿ ಸುಮಾರು ಎರಡು ಅಡಿ ನೀರು ನಿಂತಿದ್ದರಿಂದ ವಾಹನ ಸವಾರರು ಸಂಕಷ್ಟ ಎದುರಿಸಿದರು. ಕೆಲವು ತಗ್ಗು ಪ್ರದೇಶಗಳ ಮನೆಗಳಿಗೆ ಮಳೆ ನೀರು ನುಗ್ಗಿ ಸ್ಥಳೀಯರು ಪರದಾಡುವಂತಾಯಿತು.
ಅತಿ ಹೆಚ್ಚು ಮಳೆ ದಾಖಲಾಗಿದ ಪ್ರದೇಶಗಳು
- ನಾಯಂಡಹಳ್ಳಿ – 40 ಮಿಮೀ
- ಕಾಟನ್ಪೇಟೆ – 39 ಮಿಮೀ
- ಸಂಪಂಗಿರಾಮನಗರ – 37 ಮಿಮೀ
- ಹಂಪಿನಗರ – 37 ಮಿಮೀ
- ಪುಲಿಕೇಶಿನಗರ – 34 ಮಿಮೀ
- ಚಾಮರಾಜಪೇಟೆ – 34 ಮಿಮೀ
ಹವಾಮಾನ ಇಲಾಖೆ ಎಚ್ಚರಿಕೆ
ನಗರದಲ್ಲಿ ಇಂದು ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಮೇ 31 ಹಾಗೂ ಜೂನ್ 1ರಂದು ಸಹ ಮಳೆ ಮುಂದುವರಿಯುವ ಸಾಧ್ಯತೆ ಇದ್ದು, ಸಂಜೆ ಅಥವಾ ರಾತ್ರಿ ವೇಳೆಯಲ್ಲಿ ಗುಡುಗು-ಮಿಂಚು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ನಗರದಲ್ಲಿ ಗರಿಷ್ಠ ತಾಪಮಾನ 33 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ ತಾಪಮಾನ 22 ಡಿಗ್ರಿ ಸೆಲ್ಸಿಯಸ್ ದಾಖಲಾಗುವ ಸಾಧ್ಯತೆ ಇದೆ.



















