ಬೆಂಗಳೂರು : ರಾಜ್ಯದ ವಿದ್ಯುತ್ ವಿತರಣಾ ಕ್ಷೇತ್ರದಲ್ಲಿ ಮಹತ್ವದ ಬೆಳವಣಿಗೆಯೊಂದು ನಡೆದಿದ್ದು, ಖಾಸಗಿ ಸಂಸ್ಥೆಯಾದ ಟಾಟಾ ಪವರ್ ರಾಜ್ಯದಲ್ಲಿ ವಿದ್ಯುತ್ ಪೂರೈಕೆ ಪರವಾನಗಿ ಕೋರಿ ಕೆಇಅರ್ ಸಿ (KERC)ಗೆ ಅರ್ಜಿ ಸಲ್ಲಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ. ರಾಜ್ಯದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಖಾಸಗಿ ಕಂಪನಿಯೊಂದು ನೇರವಾಗಿ ವಿದ್ಯುತ್ ಪೂರೈಕೆ (Power Supply/Distribution Licence)ಗಾಗಿ ಅರ್ಜಿ ಸಲ್ಲಿಸಿರುವುದು ವಿಶೇಷ.
ಯಾವ ಭಾಗಗಳಿಗೆ ಅರ್ಜಿ?
ಮಾಹಿತಿಯ ಪ್ರಕಾರ, ಟಾಟಾ ಪವರ್ ಕಂಪನಿ ರಾಜ್ಯದ ಮೂರು ಪ್ರಮುಖ ವಿದ್ಯುತ್ ವಿತರಣಾ ವಿಭಾಗಗಳಲ್ಲಿ ಸೇವೆ ನೀಡಲು ಅವಕಾಶ ಕೋರಿದೆ. ಬೆಸ್ಕಾಂ ವ್ಯಾಪ್ತಿ, ಹೆಸ್ಕಾಂ ವ್ಯಾಪ್ತಿ, ಚೆಸ್ಕಾಂ ವ್ಯಾಪ್ತಿ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಗೆ ಪರವಾನಗಿ ನೀಡುವಂತೆ KERCಗೆ ಮನವಿ ಮಾಡಲಾಗಿದೆ ಎನ್ನಲಾಗಿದೆ.
ಖಾಸಗೀಕರಣಕ್ಕೆ ದಾರಿ?
ಸದ್ಯ ರಾಜ್ಯದಲ್ಲಿ ವಿದ್ಯುತ್ ವಿತರಣೆ ಮತ್ತು ಪೂರೈಕೆ ಸಂಪೂರ್ಣವಾಗಿ ಸರ್ಕಾರಿ ಎಸ್ಕಾಂಗಳ ಮೂಲಕ ನಡೆಯುತ್ತಿದೆ. ಆದರೆ ವಿದ್ಯುತ್ ಕಾಯ್ದೆಯ ಪ್ರಕಾರ ಖಾಸಗಿ ಸಂಸ್ಥೆಗಳಿಗೂ ವಿದ್ಯುತ್ ವಿತರಣಾ ಪರವಾನಗಿ ನೀಡಲು ಅವಕಾಶವಿದೆ. ಇದೇ ವಿಧಾನದ ಅಡಿಯಲ್ಲಿ ಟಾಟಾ ಪವರ್ ಅರ್ಜಿಯನ್ನು KERC ಪರಿಶೀಲಿಸುತ್ತಿದೆ. ಹಿರಿಯ ಅಧಿಕಾರಿಗಳ ಪ್ರಕಾರ, ಕಾನೂನುಬದ್ಧ ಅಡೆತಡೆಗಳಿಲ್ಲದಿದ್ದರೆ ಖಾಸಗಿ ಕಂಪನಿಗೆ ಅವಕಾಶ ಸಿಗುವ ಸಾಧ್ಯತೆಯನ್ನು ತಳ್ಳಿಹಾಕಲು ಆಗುವುದಿಲ್ಲ ಎಂಬ ಮಾತು ಕೇಳಿಬರುತ್ತಿದೆ.
ಜನರಲ್ಲಿ ಏನು ಆತಂಕ?
ಈ ಬೆಳವಣಿಗೆ ಸಾರ್ವಜನಿಕ ವಲಯದಲ್ಲಿ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ವಿದ್ಯುತ್ ದರ ಏರಿಕೆಯಾಗುತ್ತದೆಯೇ? ಸರ್ಕಾರಿ ಎಸ್ಕಾಂಗಳ ಸ್ಥಿತಿ ಏನು? ಗ್ರಾಮೀಣ ಭಾಗಗಳಲ್ಲಿ ಸೇವೆ ಕುಂಠಿತವಾಗಬಹುದೇ? ಖಾಸಗೀಕರಣದಿಂದ ಸೇವಾ ಗುಣಮಟ್ಟ ಹೆಚ್ಚುತ್ತದೆಯೇ? ಎಂಬೆಲ್ಲ ಚರ್ಚೆ ನಡೆಯುತ್ತಿದ್ದು, ಇದಕ್ಕೆ ಸ್ಪಷ್ಟ ಉತ್ತರ KERC ಅಂತಿಮ ನಿರ್ಧಾರ ನಂತರವೇ ಸಿಗಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮುಂದಿನ ದಿನಗಳಲ್ಲಿ ರಾಜ್ಯ ಸರ್ಕಾರ KERC ಅರ್ಜಿಯ ಪರಿಶೀಲನೆ ನಡೆಸಿ ಸಾರ್ವಜನಿಕ ಆಕ್ಷೇಪಣೆ, ತಾಂತ್ರಿಕ ವರದಿ ಹಾಗೂ ಕಾನೂನು ಅಭಿಪ್ರಾಯಗಳ ಆಧಾರದಲ್ಲಿ ಅಂತಿಮ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ. ರಾಜ್ಯದ ವಿದ್ಯುತ್ ಕ್ಷೇತ್ರದಲ್ಲಿ ಇದು ದೊಡ್ಡ ನೀತಿ ಬದಲಾವಣೆಗೆ ಮುನ್ನುಡಿಯಾಗಬಹುದೆಂಬ ಚರ್ಚೆ ಆರಂಭವಾಗಿದೆ.
ಮುಷ್ಕರದ ಎಚ್ಚರಿಕೆ :
ಇನ್ನು, KERC ಖಾಸಗೀಕರಣಕ್ಕೆ ನೌಕರರು ಅಕ್ರೋಶ ವ್ಯಕ್ತಪಡಿಸಿ, ಮುಷ್ಕರದ ಎಚ್ಚರಿಕೆ ನೀಡಿದ್ದಾರೆ. ಖಾಸಗೀಕರಣದಿಂದ ನೌಕರರ ಉದ್ಯೋಗ ಭವಿಷ್ಯಕ್ಕೆ ಧಕ್ಕೆಯಾಗಬಹುದು. ಖಾಸಗಿ ಕಂಪನಿಗಳಿಗೆ ವಿದ್ಯುತ್ ವಿತರಣಾ ಹಕ್ಕು ನೀಡಿದರೆ ಉದ್ಯೋಗ ಕಡಿತ, ವರ್ಗಾವಣೆ ಮತ್ತು ಸೇವಾ ನಿಯಮಗಳಲ್ಲಿ ಬದಲಾವಣೆ ಸಂಭವಿಸಬಹುದು ಎಂಬ ಭಯ ನೌಕರರಲ್ಲಿ ಇದೆ. ಇದೇ ಕಾರಣಕ್ಕೆ ಬೆಸ್ಕಾಂ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಕುಮಾರ್ ಅವರು ಮುಷ್ಕರದ ಎಚ್ಚರಿಕೆ ನೀಡಿದ್ದಾರೆ.
ಈ ಅರ್ಜಿಯ ಮೂಲಕ ಬೆಂಗಳೂರು ಗ್ರಾಮಾಂತರ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಚಿತ್ರದುರ್ಗ, ಶಿವಮೊಗ್ಗ, ದಕ್ಷಿಣ ಕನ್ನಡ, ಉಡುಪಿ, ಬಳ್ಳಾರಿ, ಕಲಬುರಗಿ, ರಾಯಚೂರು ಮತ್ತು ಯಾದಗಿರಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ವಿದ್ಯುತ್ ಪೂರೈಕೆ ಮಾಡಲು ಅವಕಾಶ ಕೋರುವುದಾಗಿ ತಿಳಿದುಬಂದಿದೆ. ರಾಜ್ಯದ ಇತಿಹಾಸದಲ್ಲೇ ಮೊದಲ ಬಾರಿಗೆ ಖಾಸಗಿ ಕಂಪನಿಯೊಂದು ಈ ಮಟ್ಟದಲ್ಲಿ ವಿದ್ಯುತ್ ವಿತರಣಾ ಪರವಾನಿಗೆಗಾಗಿ ಅರ್ಜಿ ಸಲ್ಲಿಸಿರುವುದು ವಿಶೇಷವಾಗಿದೆ.
ಪ್ರಸ್ತುತ ರಾಜ್ಯದಲ್ಲಿ ಸರ್ಕಾರಿ ಸ್ವಾಮ್ಯದ ಎಸ್ಕಾಂಗಳೇ ವಿದ್ಯುತ್ ವಿತರಣೆಯನ್ನು ನಿರ್ವಹಿಸುತ್ತಿವೆ. ಈಗ ಖಾಸಗಿ ಸಂಸ್ಥೆಯ ಪ್ರವೇಶದಿಂದ ವಿದ್ಯುತ್ ಕ್ಷೇತ್ರದಲ್ಲಿ ಸ್ಪರ್ಧಾತ್ಮಕ ವ್ಯವಸ್ಥೆ ಆರಂಭವಾಗುವ ಸಾಧ್ಯತೆ ಇದೆ.
ಸರ್ಕಾರದ ವಲಯದಿಂದ ನೋಡಿದರೆ, ಎಸ್ಕಾಂಗಳ ಆಡಳಿತಾತ್ಮಕ ವೆಚ್ಚ ಕಡಿಮೆ ಮಾಡುವುದು, ಲೈನ್ ಲಾಸ್ ನಿಯಂತ್ರಿಸುವುದು ಹಾಗೂ ಗ್ರಾಹಕರಿಗೆ ಉತ್ತಮ ಸೇವೆ ಒದಗಿಸುವುದು ಖಾಸಗೀಕರಣದ ಪ್ರಮುಖ ಉದ್ದೇಶಗಳೆಂದು ಹೇಳಲಾಗುತ್ತಿದೆ.
ಇನ್ನೊಂದೆಡೆ ಗ್ರಾಹಕರಲ್ಲೂ ಆತಂಕ ಹೆಚ್ಚಾಗಿದೆ. ಖಾಸಗಿ ಕಂಪನಿಗಳು ಲಾಭದ ಉದ್ದೇಶಕ್ಕೆ ಹೆಚ್ಚು ಒತ್ತು ನೀಡುವ ಕಾರಣ ವಿದ್ಯುತ್ ದರ ಏರಿಕೆ ಸಂಭವಿಸಬಹುದು, ಗ್ರಾಮೀಣ ಪ್ರದೇಶಗಳಿಗೆ ಸಮಾನ ಸೇವೆ ಸಿಗದೇ ಹೋಗಬಹುದು ಎಂಬ ಚರ್ಚೆಗಳು ನಡೆಯುತ್ತಿವೆ. ಆದರೆ ವಿದ್ಯುತ್ ಕಾಯ್ದೆ ಪ್ರಕಾರ ಖಾಸಗಿ ಕಂಪನಿಗಳಿಗೆ ವಿತರಣಾ ಪರವಾನಿಗೆ ನೀಡಲು ಅವಕಾಶವಿದ್ದು, ಅಂತಿಮ ನಿರ್ಧಾರವನ್ನು ಕೆಇಅರ್ ಸಿ ತೆಗೆದುಕೊಳ್ಳಬೇಕಿದೆ. ಸದ್ಯ ಟಾಟಾ ಪವರ್ ಸಲ್ಲಿಸಿರುವ ಅರ್ಜಿ ಪರಿಶೀಲನಾ ಹಂತದಲ್ಲಿದ್ದು, ಇನ್ನೂ ಯಾವುದೇ ಅಂತಿಮ ಅನುಮೋದನೆ ನೀಡಲಾಗಿಲ್ಲ. ಈ ಬೆಳವಣಿಗೆ ಮುಂದಿನ ದಿನಗಳಲ್ಲಿ ಕರ್ನಾಟಕದ ವಿದ್ಯುತ್ ಕ್ಷೇತ್ರದ ಸ್ವರೂಪವನ್ನೇ ಬದಲಾಯಿಸಬಹುದಾದ ಮಹತ್ವದ ಹೆಜ್ಜೆಯಾಗಿ ಪರಿಗಣಿಸಲಾಗುತ್ತಿದೆ.
ಇದನ್ನೂ ಓದಿ : ಟ್ರಾಫಿಕ್ ನಿಯಂತ್ರಣಕ್ಕೆ GBA ಹೊಸ ಹೆಜ್ಜೆ.. ನಗರದಲ್ಲಿ 5 ಹೊಸ ಫ್ಲೈಓವರ್ಗಳಿಗೆ ಟೆಂಡರ್ ಆಹ್ವಾನ!



















