ಇಸ್ಲಾಮಾಬಾದ್ : ಕಳೆದ ವರ್ಷ ಜಮ್ಮು ಕಾಶ್ಮೀರದ ಪಹಲ್ಗಾಮ್ ಉಗ್ರರ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನ ನಡುವೆ ತೀವ್ರಗೊಂಡಿದ್ದ ಸಂಘರ್ಷಕ್ಕೆ ಸಂಬಂಧಿಸಿ ಪಾಕಿಸ್ತಾನಿ ಅಧಿಕಾರಿಯೊಬ್ಬರು ನೀಡಿರುವ ಹಾಸ್ಯಾಸ್ಪದ ಹೇಳಿಕೆ ಇದೀಗ ಭಾರಿ ಸುದ್ದಿಯಾಗಿದೆ.
ಪಾಕಿಸ್ತಾನದ ಸ್ಥಳೀಯ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ, ಅಲ್ಲಿನ ಸೇನಾಧಿಕಾರಿ ಕ್ಯಾಪ್ಟನ್ ಮುನೀಬ್ ಜಮಾಲ್ ಎಂಬವರು, ಪಾಕಿಸ್ತಾನದ ‘ಫತಾಹ್-1’ (Fatah-1) ಗೈಡೆಡ್ ಆರ್ಟಿಲರಿ ರಾಕೆಟ್ ಭಾರತದ 2 ಪ್ರಮುಖ ಮಿಲಿಟರಿ ವಾಯುನೆಲೆಗಳ ಮೇಲೆ ಯಶಸ್ವಿಯಾಗಿ ದಾಳಿ ನಡೆಸಿತ್ತು ಎಂದು ಹೇಳಿಕೊಂಡಿದ್ದಾನೆ. ಆದರೆ, ಅವರು ಉಲ್ಲೇಖಿಸಿರುವ ಆ ಎರಡು ವಾಯುನೆಲೆಗಳು ಭಾರತದಲ್ಲಿ ಅಸ್ತಿತ್ವದಲ್ಲೇ ಇಲ್ಲದಿರುವುದು ಪಾಕಿಸ್ತಾನದ ಸುಳ್ಳನ್ನು ಜಗತ್ತಿನ ಎದುರು ಮತ್ತೊಮ್ಮೆ ಬೆತ್ತಲಾಗಿಸಿದೆ.
ರಾಜೌರಿ ಮತ್ತು ಮಾಮುನ್ ವಾಯುನೆಲೆಗಳು ಎಲ್ಲಿವೆ?
ಸಂದರ್ಶನದಲ್ಲಿ ಆ್ಯಂಕರ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಕ್ಯಾಪ್ಟನ್ ಮುನೀಬ್, “ನಮಗೆ ಭಾರತದ ರಾಜೌರಿ ಮತ್ತು ಮಾಮುನ್ ವಾಯುನೆಲೆಗಳನ್ನು ಗುರಿಯಾಗಿಸುವ ಜವಾಬ್ದಾರಿ ನೀಡಲಾಗಿತ್ತು, ನಾವು ಅದನ್ನು ಯಶಸ್ವಿಯಾಗಿ ಧ್ವಂಸಗೊಳಿಸಿದ್ದೇವೆ” ಎಂದು ಹೇಳಿದ್ದಾರೆ. ವಾಸ್ತವ ಏನೆಂದರೆ, ಜಮ್ಮು ಮತ್ತು ಕಾಶ್ಮೀರದ ‘ರಾಜೌರಿ’ ಎಂಬುದು ಕೇವಲ ಒಂದು ಜಿಲ್ಲೆಯಾಗಿದ್ದು, ಅಲ್ಲಿ ಭಾರತೀಯ ವಾಯುಪಡೆು ಯಾವುದೇ ವಾಯುನೆಲೆಯನ್ನು ಹೊಂದಿಲ್ಲ. ಇನ್ನು ಪಂಜಾಬ್ನ ಪಠಾಣ್ಕೋಟ್ ಬಳಿ ಇರುವ ‘ಮಾಮುನ್’ ಎಂಬುದು ಕೇವಲ ಮಿಲಿಟರಿ ಕಂಟೋನ್ಮೆಂಟ್ (ದಂಡುಪ್ರದೇಶ) ಪ್ರದೇಶವಾಗಿದೆ. ಹೀಗೆ ಭಾರತದಲ್ಲಿ ಅಸ್ತಿತ್ವದಲ್ಲೇ ಇಲ್ಲದ ವಾಯುನೆಲೆಗಳನ್ನು ಧ್ವಂಸ ಮಾಡಿದ್ದೇವೆ ಎಂದು ಬೀಗುತ್ತಿರುವ ಪಾಕ್ ಅಧಿಕಾರಿಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದ್ದು, ನೆಟ್ಟಿಗರು ಇವರ ಜ್ಞಾನಕ್ಕೆ ತಲೆ ಚಚ್ಚಿಕೊಳ್ಳುತ್ತಿದ್ದಾರೆ.
ಮುಂದಿನ ಟಾರ್ಗೆಟ್ ಅಟ್ಲಾಂಟಿಸ್ ದ್ವೀಪವೇ?: ಲೇವಡಿ
ಪಾಕಿಸ್ತಾನಿ ಅಧಿಕಾರಿಯ ಈ ಹೇಳಿಕೆ ಹೊರಬೀಳುತ್ತಿದ್ದಂತೆ ಎಕ್ಸ್ (ಟ್ವಿಟರ್) ಸೇರಿದಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೋಲ್ಗಳ ಸುರಿಮಳೆಯೇ ಆಗುತ್ತಿದೆ. ನೆಟ್ಟಿಗರೊಬ್ಬರು ಲೇವಡಿ ಮಾಡುತ್ತಾ, “ಪುರಾತತ್ವ ಶಾಸ್ತ್ರಜ್ಞರು, ಭೂಪಟ ತಯಾರಕರು, ಗೂಗಲ್ ಮ್ಯಾಪ್ಸ್ ಮತ್ತು ಭಾರತೀಯ ವಾಯುಪಡೆಯು ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಈ ಪೌರಾಣಿಕ ‘ರಾಜೌರಿ ಮತ್ತು ಮಾಮುನ್’ ವಾಯುನೆಲೆಗಳನ್ನು ಹುಡುಕಬೇಕಾಗಿದೆ. ಯಾರಿಗಾದರೂ ಇದರ ಲೊಕೇಶನ್ ಸಿಕ್ಕರೆ ದಯವಿಟ್ಟು ಭಾರತ ಸರ್ಕಾರಕ್ಕೆ ಕಳುಹಿಸಿ” ಎಂದು ತಮಾಷೆ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರ, “ಫತಾಹ್-1 ಕ್ಷಿಪಣಿಗಳು ಈ ವಾಯುನೆಲೆಗಳ ಮೇಲೆ ಎಷ್ಟು ಭೀಕರವಾಗಿ ದಾಳಿ ಮಾಡಿವೆ ಎಂದರೆ, ಅವು ಜಗತ್ತಿನ ಭೂಪಟದಿಂದಲೇ ಕಣ್ಮರೆಯಾಗಿವೆ! ಇವರ ಮುಂದಿನ ಟಾರ್ಗೆಟ್ ಕಳೆದುಹೋದ ಅಟ್ಲಾಂಟಿಸ್ ನಗರವೇ ಇರಬಹುದು” ಎಂದು ಪಾಕ್ ಸೇನೆಯನ್ನು ಅಣಕಿಸಿದ್ದಾರೆ.
ಕಳೆದ 2025ರ ಮೇ ತಿಂಗಳಲ್ಲಿ ಭಾರತದ ‘ಆಪರೇಷನ್ ಸಿಂದೂರ’ಕ್ಕೆ ಪ್ರತಿಯಾಗಿ ಪಾಕಿಸ್ತಾನವು ‘ಆಪರೇಷನ್ ಬುನ್ಯಾನ್ ಉಲ್ ಮರ್ಸೂಸ್’ ಹೆಸರಿನಲ್ಲಿ ಭಾರತದ ಗಡಿ ಭಾಗಗಳಾದ ಜಮ್ಮು-ಕಾಶ್ಮೀರ, ಪಂಜಾಬ್, ರಾಜಸ್ಥಾನ ಮತ್ತು ಗುಜರಾತ್ನ ಸುಮಾರು 26 ಪ್ರದೇಶಗಳನ್ನು ಗುರಿಯಾಗಿಸಿ ಡ್ರೋನ್ ಹಾಗೂ ಕ್ಷಿಪಣಿ ದಾಳಿ ನಡೆಸಿತ್ತು. ಆಗ ಭಾರತದ ಉಧಂಪುರ್, ಪಠಾಣ್ಕೋಟ್ ಮತ್ತು ಆದಂಪುರ್ ವಾಯುನೆಲೆಗಳ ಮೇಲೆ ದಾಳಿ ಮಾಡಿರುವುದಾಗಿ ಪಾಕ್ ಹೇಳಿಕೊಂಡಿತ್ತು. ಆದರೆ ಪಾಕಿಸ್ತಾನ ಉಡಾಯಿಸಿದ್ದ ಫತಾಹ್-1 ಕ್ಷಿಪಣಿಯ ಅವಶೇಷಗಳು ಹರ್ಯಾಣದ ಸಿರ್ಸಾ, ರಾಜಸ್ಥಾನದ ಬಾರ್ಮರ್ ಮತ್ತು ಪಂಜಾಬ್ನ ಜಲಂಧರ್ನ ಕೃಷಿ ಜಮೀನುಗಳಲ್ಲಿ ಬಿದ್ದಿರುವುದು ಪತ್ತೆಯಾಗಿತ್ತು. ಅಷ್ಟೇ ಅಲ್ಲದೆ, ಶ್ರೀನಗರದ ದಾಲ್ ಸರೋವರದಲ್ಲೂ ಇದರ ಅವಶೇಷಗಳು ಪತ್ತೆಯಾಗಿದ್ದವು. ಪಾಕಿಸ್ತಾನವು ಭಾರತದ ಆಯಕಟ್ಟಿನ ಪ್ರದೇಶದ ಮೇಲೆ ಉಡಾಯಿಸಿದ್ದ ಮತ್ತೊಂದು ಅತ್ಯಾಧುನಿಕ ‘ಫತಾಹ್-II’ ಕ್ಷಿಪಣಿಯನ್ನು ಭಾರತದ ವಾಯು ರಕ್ಷಣಾ ವ್ಯವಸ್ಥೆಯು ಸಿರ್ಸಾ ಬಳಿಯೇ ಹೊಡೆದುರುಳಿಸಿ ಪಾಕಿಸ್ತಾನದ ತಂತ್ರವನ್ನು ಧೂಳೀಪಟ ಮಾಡಿತ್ತು.
ಇದನ್ನೂ ಓದಿ : ಮೋಟೋರೋಲಾ ಎಡ್ಜ್ 70 ಪ್ರೊ ಪ್ಲಸ್ ಭಾರತಕ್ಕೆ ಲಗ್ಗೆ : ಪ್ರೀಮಿಯಂ ಸ್ಮಾರ್ಟ್ಫೋನ್ ಕ್ರಾಂತಿ!



















