ಟೆಹ್ರಾನ್ : ಅಮೆರಿಕ-ಇಸ್ರೇಲ್- ಇರಾನ್ ನಡುವಿನ ಭೀಕರ ಯುದ್ಧದ ಬಳಿಕ ಜಾಗತಿಕವಾಗಿ ತೀವ್ರ ಕುತೂಹಲ ಕೆರಳಿಸಿರುವ ಹೊರ್ಮುಜ್ ಜಲಸಂಧಿಯ ಸಂಚಾರಕ್ಕೆ ಸಂಬಂಧಿಸಿದಂತೆ ಇರಾನ್ ಮಹತ್ವದ ನಿರ್ಧಾರವೊಂದನ್ನು ಪ್ರಕಟಿಸಿದೆ. ಈ ಆಯಕಟ್ಟಿನ ಜಲಸಂಧಿಯ ಮೂಲಕ ಹಾದುಹೋಗುವ ವಾಣಿಜ್ಯ ಹಡಗುಗಳಿಗೆ ಹೊಸದಾಗಿ ‘ಸೇವಾ ಶುಲ್ಕ’ ವಿಧಿಸಲು ನಾವು ಯೋಜಿಸುತ್ತಿದ್ದೇವೆ ಎಂದು ಚೀನಾದಲ್ಲಿರುವ ಇರಾನ್ ರಾಯಭಾರಿ ಅಬ್ದುಲ್ರೆಜಾ ರಹಮಾನಿ ಫಾಜ್ಲಿ ತಿಳಿಸಿದ್ದಾರೆ. ಇದೇ ವೇಳೆ, ಯುದ್ಧದ ಸಮಯದಲ್ಲಿ ಇರಾನ್ ಬೆನ್ನಿಗೆ ನಿಂತಿದ್ದ ಮಿತ್ರ ರಾಷ್ಟ್ರಗಳಿಗೆ ಈ ಶುಲ್ಕದಲ್ಲಿ “ವಿಶೇಷ” ರಿಯಾಯಿತಿ ನೀಡುವುದಾಗಿಯೂ ಅವರು ಭರವಸೆ ನೀಡಿದ್ದಾರೆ.
ಬೀಜಿಂಗ್ನಲ್ಲಿ ನಡೆದ ವಿಶ್ವ ಸಂಸ್ಥೆ ಜಾಗತಿಕ ಶಾಂತಿ ವೇದಿಕೆಯಲ್ಲಿ (ವರ್ಲ್ಡ್ ಪೀಸ್ ಫೋರಂ) ಮಾತನಾಡಿದ ರಾಯಭಾರಿ ಫಾಜ್ಲಿ, ಜಾಗತಿಕ ತೈಲ ಸಾರಿಗೆಯ ಪ್ರಮುಖ ಹೆದ್ದಾರಿಯಾಗಿರುವ ಹೊರ್ಮುಜ್ ಜಲಸಂಧಿಯ ಸಂಚಾರ ನಿರ್ವಹಣೆಗಾಗಿ ಇರಾನ್ ಪ್ರಸ್ತುತ ಒಮಾನ್ ದೇಶದೊಂದಿಗೆ ಸೇರಿ ಹೊಸ ಒಪ್ಪಂದಗಳನ್ನು ರೂಪಿಸುತ್ತಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಜಲಸಂಧಿಯನ್ನು ಬಳಸುವ ಹಡಗುಗಳ ಮೇಲೆ ಇರಾನ್ ಯಾವುದೇ ರೀತಿಯ ಶುಲ್ಕ ವಿಧಿಸಬಾರದು ಎಂಬ ಅಮೆರಿಕದ ತೀವ್ರ ಆಕ್ಷೇಪದ ನಡುವೆಯೂ ಇರಾನ್ ಈ ಪ್ರಕಟಣೆ ಹೊರಡಿಸಿರುವುದು ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದೆ.
ಇದು ‘ಟೋಲ್’ ಅಲ್ಲ, ಸುರಕ್ಷತೆಯ ಸೇವಾ ಶುಲ್ಕ
ಇತ್ತೀಚೆಗೆ ಅಮೆರಿಕ ಮತ್ತು ಇರಾನ್ ನಡುವಿನ ಯುದ್ಧವನ್ನು ಕೊನೆಗೊಳಿಸಲು ನೆರವಾಗಿದ್ದ ಆರಂಭಿಕ ಕದನ ವಿರಾಮ ಒಪ್ಪಂದದ ಪ್ರಕಾರ, ವಾಣಿಜ್ಯ ಹಡಗುಗಳಿಗೆ 60 ದಿನಗಳ ಕಾಲ ಯಾವುದೇ ಶುಲ್ಕವಿಲ್ಲದೆ ಹೊರ್ಮುಜ್ ಜಲಸಂಧಿಯಲ್ಲಿ ಉಚಿತವಾಗಿ ಸಂಚರಿಸಲು ಅವಕಾಶ ನೀಡಲಾಗಿತ್ತು. ಆದರೆ ಈ ತಾತ್ಕಾಲಿಕ ಅವಧಿ ಮುಗಿದ ನಂತರ ಯಾವ ವ್ಯವಸ್ಥೆ ಜಾರಿಗೆ ಬರಲಿದೆ ಎಂಬುದು ಯಾರಿಗೂ ತಿಳಿದಿರಲಿಲ್ಲ. ಈ ಗೊಂದಲಕ್ಕೆ ತೆರೆ ಎಳೆದಿರುವ ರಾಯಭಾರಿ ಫಾಜ್ಲಿ, “ಹೊರ್ಮುಜ್ ಜಲಸಂಧಿಯು ನಮ್ಮ ಪ್ರಾದೇಶಿಕ ಜಲಪ್ರದೇಶದ ಭಾಗವಾಗಿರುವುದರಿಂದ, ನಾವು ಖಂಡಿತವಾಗಿಯೂ ಸೇವಾ ಶುಲ್ಕವನ್ನು ವಸೂಲಿ ಮಾಡುತ್ತೇವೆ” ಎಂದಿದ್ದಾರೆ. ಆದರೆ ಇದನ್ನು ಹಡಗುಗಳ ಮೇಲಿನ ಬಲವಂತದ ‘ಟೋಲ್ ಅಥವಾ ಸುಂಕ’ ಎಂದು ಪರಿಗಣಿಸಬಾರದು, ಬದಲಿಗೆ ಜಲಸಂಧಿಯಲ್ಲಿ ಸುರಕ್ಷಿತ ಸಂಚಾರವನ್ನು ಖಾತ್ರಿಪಡಿಸುವುದು, ಹಡಗುಗಳ ಚಲನವಲನಗಳ ಮೇಲೆ ನಿಗಾ ಇಡುವುದು ಮತ್ತು ಭಾರಿ ಕಡಲ ಸಂಚಾರದಿಂದ ಉಂಟಾಗುವ ಪರಿಸರ ಮಾಲಿನ್ಯದ ಪರಿಣಾಮಗಳನ್ನು ನಿಭಾಯಿಸುವುದಕ್ಕಾಗಿ ಈ ಸೇವಾ ಶುಲ್ಕವನ್ನು ಬಳಸಲಾಗುವುದು ಎಂದು ಅವರು ವಿವರಿಸಿದ್ದಾರೆ.
ಜಾಗತಿಕ ತೈಲ ಮಾರುಕಟ್ಟೆಯ ಜೀವಾಳ
ವಿಶ್ವದ ಒಟ್ಟು ಕಚ್ಚಾ ತೈಲ ಮತ್ತು ದ್ರವೀಕೃತ ನೈಸರ್ಗಿಕ ಅನಿಲ (LNG) ರಫ್ತಿನ ಬಹುತೇಕ ಐದನೇ ಒಂದು ಭಾಗದಷ್ಟು ಪಾಲು ಇದೇ ಹೊರ್ಮುಜ್ ಜಲಸಂಧಿಯ ಮೂಲಕವೇ ಸಾಗುತ್ತದೆ. ಇತ್ತೀಚಿನ ಮಧ್ಯಪ್ರಾಚ್ಯ ಸಂಘರ್ಷದ ಸಮಯದಲ್ಲಿ ಇರಾನ್ ಈ ಜಲಮಾರ್ಗವನ್ನು ಸಂಪೂರ್ಣವಾಗಿ ನಿರ್ಬಂಧಿಸಿತ್ತು, ಇದರಿಂದಾಗಿ ಜಾಗತಿಕ ಇಂಧನ ಬೆಲೆಗಳು ಗಗನಕ್ಕೇರಿದ್ದವು. ಯುದ್ಧ ನಿಲ್ಲಿಸಲು ಅಮೆರಿಕದೊಂದಿಗೆ ಪ್ರಾಥಮಿಕ ಒಪ್ಪಂದಕ್ಕೆ ಬಂದ ನಂತರ ಇರಾನ್ ಈ ಆಯಕಟ್ಟಿನ ಜಲಮಾರ್ಗವನ್ನು ಮರುಮುಕ್ತಗೊಳಿಸಿತ್ತು. ಪ್ರಸ್ತುತ ಉಭಯ ದೇಶಗಳ ನಡುವೆ ಶಾಶ್ವತ ಶಾಂತಿ ಒಪ್ಪಂದಕ್ಕಾಗಿ ಮಾತುಕತೆಗಳು ಮುಂದುವರಿದಿದ್ದು, ಈ ನಡುವೆಯೇ ಇರಾನ್ನ ಈ ಶುಲ್ಕ ನೀತಿ ಜಾಗತಿಕ ವ್ಯಾಪಾರ ವಲಯದಲ್ಲಿ ಹೊಸ ಚರ್ಚೆಯನ್ನು ಹುಟ್ಟುಹಾಕಿದೆ.
ಇದನ್ನೂ ಓದಿ : ಶೋಪಿಯಾನ್ ತೋಟದಲ್ಲಿ ಉಗ್ರರ ಬೇಟೆ : ತಪ್ಪಿಸಿಕೊಳ್ಳುವ ಹಾದಿಗಳನ್ನು ಬಂದ್ ಮಾಡಿದ ಭಾರತೀಯ ಸೇನೆ!



















