ನವದೆಹಲಿ : ಮಧ್ಯಪ್ರಾಚ್ಯದಲ್ಲಿ ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವೆ ನಡೆಯುತ್ತಿರುವ ಭೀಕರ ಯುದ್ಧವು ಜಾಗತಿಕ ಮಟ್ಟದಲ್ಲಿ ತೀವ್ರ ಇಂಧನ ಬಿಕ್ಕಟ್ಟನ್ನು ಸೃಷ್ಟಿಸಿದೆ. ಪ್ರಮುಖ ಕಡಲ ಮಾರ್ಗವಾದ ಹೊರ್ಮುಜ್ ಜಲಸಂಧಿಯ ದಿಗ್ಬಂಧನದಿಂದಾಗಿ ತೈಲ ಪೂರೈಕೆಯಲ್ಲಿ ಭಾರಿ ವ್ಯತ್ಯಯ ಉಂಟಾಗಿದ್ದು, ಇಂಧನ ಉಳಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮನೆಯಿಂದಲೇ ಕೆಲಸ (ವರ್ಕ್ ಫ್ರಂ ಹೋಮ್) ಮಾಡುವಂತೆ, ಶಾಲೆಗಳನ್ನು ಆನ್ಲೈನ್ ಮಾಡುವಂತೆ, ವರ್ಚುವಲ್ ಸಭೆಗಳನ್ನು ನಡೆಸುವಂತೆ, ಚಿನ್ನ ಖರೀದಿಸದಂತೆ ದೇಶದ ಜನತೆಗೆ ಕರೆ ನೀಡಿದ್ದಾರೆ.

ತನ್ನ ಕಚ್ಚಾ ತೈಲದ ಅಗತ್ಯಕ್ಕಾಗಿ ಶೇ.85-90ರಷ್ಟು ಆಮದನ್ನೇ ಅವಲಂಬಿಸಿರುವ ಭಾರತಕ್ಕೆ ಪ್ರಧಾನಿಯವರ ಈ ಕರೆಯು ಸದ್ಯದ ಮಟ್ಟಿಗೆ ಅನಿವಾರ್ಯವಾದರೂ, ಇದು ಕೇವಲ ಅಲ್ಪಾವಧಿಯ ಪರಿಹಾರವಷ್ಟೇ ಆಗಿದೆ. ಬದಲಾಗುತ್ತಿರುವ ಜಾಗತಿಕ ರಾಜಕೀಯ ಸಮೀಕರಣಗಳ ನಡುವೆ ಭವಿಷ್ಯದ ಇಂಧನ ಭದ್ರತೆಗಾಗಿ ದಶಕಗಳಿಂದ ನೆನೆಗುದಿಗೆ ಬಿದ್ದಿರುವ ಮೂರು ಬೃಹತ್ ಅಂತಾರಾಷ್ಟ್ರೀಯ ಪೈಪ್ಲೈನ್ ಯೋಜನೆಗಳು ಭಾರತಕ್ಕೆ ಶಾಶ್ವತ ಪರಿಹಾರ ಒದಗಿಸಬಲ್ಲವು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಆ ಮೂರು ಪ್ರಮುಖ ಯೋಜನೆಗಳ ವಿವರ ಇಲ್ಲಿದೆ.
ಓಮನ್-ಭಾರತ ಆಳಸಮುದ್ರ ಪೈಪ್ಲೈನ್ (ಒಐಡಿಎಂಪಿಪಿ)
ಭಾರತದ ಬಹುನಿರೀಕ್ಷಿತ ಹಾಗೂ ಅತ್ಯಂತ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಓಮನ್-ಭಾರತ ಆಳಸಮುದ್ರ ಬಹೂಪಯೋಗಿ ಪೈಪ್ಲೈನ್ ಪ್ರಮುಖವಾದದ್ದು. 1990ರ ದಶಕದಲ್ಲೇ ಈ ಬಗ್ಗೆ ಚರ್ಚೆಗಳು ಆರಂಭವಾಗಿದ್ದವು. ಓಮನ್ನ ರಾಸ್ ಅಲ್ ಜಿಫಾನ್ನಿಂದ ಗುಜರಾತ್ನ ಪೋರಬಂದರ್ವರೆಗಿನ ಒಟ್ಟು 1,600 ಕಿಲೋಮೀಟರ್ ಉದ್ದದ ಈ ಪೈಪ್ಲೈನ್, ಸಮುದ್ರದ ತಳದಲ್ಲಿ ಬರೋಬ್ಬರಿ 3,500 ಮೀಟರ್ ಆಳದಲ್ಲಿ ಹಾದುಹೋಗಲಿದೆ.
ನೈಸರ್ಗಿಕ ಅನಿಲ ಸಾಗಣೆಗಾಗಿ ವಿನ್ಯಾಸಗೊಳಿಸಲಾಗಿರುವ ಈ ಮಾರ್ಗವು ಯಾವುದೇ ಭೂಗಡಿಗಳು ಮತ್ತು ರಾಜಕೀಯ ಸೂಕ್ಷ್ಮ ಪ್ರದೇಶಗಳನ್ನು ಹಾದುಹೋಗುವುದಿಲ್ಲ. ಹೊರ್ಮುಜ್ ಜಲಸಂಧಿಯಂತಹ ಅಪಾಯಕಾರಿ ಕಡಲ ಮಾರ್ಗಗಳನ್ನು ಇದು ತಪ್ಪಿಸುವುದರಿಂದ ಇಂಧನ ಪೂರೈಕೆಯಲ್ಲಿ ಯಾವುದೇ ವ್ಯತ್ಯಯ ಉಂಟಾಗುವುದಿಲ್ಲ. ಅಂದಾಜು 5 ರಿಂದ 6 ಬಿಲಿಯನ್ ಡಾಲರ್ ವೆಚ್ಚದ ಈ ಯೋಜನೆಯು ಕಾರ್ಯಗತಗೊಂಡರೆ, ಮುಂದಿನ ಎರಡು ದಶಕಗಳ ಕಾಲ ದ್ರವೀಕೃತ ನೈಸರ್ಗಿಕ ಅನಿಲಕ್ಕಿಂತ (ಎಲ್ಎನ್ಜಿ) ಅತ್ಯಂತ ಕಡಿಮೆ ದರದಲ್ಲಿ ಭಾರತಕ್ಕೆ ಇಂಧನ ಲಭ್ಯವಾಗಲಿದೆ.
ಭಾರತ-ಶ್ರೀಲಂಕಾ ಗಡಿಯಾಚೆಗಿನ ತೈಲ ಪೈಪ್ಲೈನ್
ಇಂಧನ ಭದ್ರತೆಯ ದೃಷ್ಟಿಯಿಂದ ಕಾರ್ಯಸಾಧುವಾಗಿರುವ ಮತ್ತೊಂದು ಪ್ರಮುಖ ಯೋಜನೆಯೆಂದರೆ ಭಾರತ-ಶ್ರೀಲಂಕಾ ತೈಲ ಪೈಪ್ಲೈನ್. 2026ರಲ್ಲಿ ಈ ಬಗ್ಗೆ ಭಾರತ, ಶ್ರೀಲಂಕಾ ಮತ್ತು ಯುಎಇ ನಡುವೆ ಮಾತುಕತೆಗಳು ಪುನರಾರಂಭಗೊಂಡಿವೆ. ಏಪ್ರಿಲ್ 19ರಂದು ಕೊಲಂಬೊದಲ್ಲಿ ನಡೆದ ಸಭೆಯಲ್ಲಿ ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಮತ್ತು ಶ್ರೀಲಂಕಾ ಅಧ್ಯಕ್ಷ ಅನುರ ಕುಮಾರ ದಿಸ್ಸಾನಾಯಕೆ ಈ ಬಗ್ಗೆ ಮಹತ್ವದ ಚರ್ಚೆ ನಡೆಸಿದ್ದಾರೆ. ತಮಿಳುನಾಡಿನ ನಾಗಪಟ್ಟಣಂನಿಂದ ಶ್ರೀಲಂಕಾದ ಟ್ರಿಂಕೋಮಲಿಗೆ ಸಂಪರ್ಕ ಕಲ್ಪಿಸುವ ಹಾಗೂ ಭವಿಷ್ಯದಲ್ಲಿ ಕೊಲಂಬೊಗೆ ವಿಸ್ತರಿಸುವ ಗುರಿಯನ್ನು ಈ ಯೋಜನೆ ಹೊಂದಿದೆ. ಇದು ಕೇವಲ ಇಂಧನ ಪೂರೈಕೆಗೆ ಸೀಮಿತವಾಗದೆ, ಟ್ರಿಂಕೋಮಲಿಯನ್ನು ದಕ್ಷಿಣ ಏಷ್ಯಾದ ಪ್ರಮುಖ ಇಂಧನ ಶೇಖರಣಾ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸುವ ದೃಷ್ಟಿಕೋನವನ್ನು ಹೊಂದಿದೆ. ಯುಎಇಯ ಬಂಡವಾಳ ಮತ್ತು ತಾಂತ್ರಿಕ ನೆರವಿನೊಂದಿಗೆ ಈ ಯೋಜನೆ ಸಾಕಾರಗೊಂಡರೆ ಬಿಕ್ಕಟ್ಟಿನ ಸಮಯದಲ್ಲಿ ಅಗ್ಗದ ವೆಚ್ಚದಲ್ಲಿ ಇಂಧನ ಲಭ್ಯತೆ ಖಾತ್ರಿಯಾಗಲಿದೆ.
ರಾಜಕೀಯ ಅಡೆತಡೆಗಳ ಸುಳಿಯಲ್ಲಿ ‘ತಾಪಿ’ ಗ್ಯಾಸ್ ಪೈಪ್ಲೈನ್
ತುರ್ಕಮೆನಿಸ್ತಾನ್, ಅಫ್ಘಾನಿಸ್ತಾನ, ಪಾಕಿಸ್ತಾನ ಮತ್ತು ಭಾರತವನ್ನು ಬೆಸೆಯುವ 1,814 ಕಿಲೋಮೀಟರ್ ಉದ್ದದ ‘ತಾಪಿ’ (TAPI) ಅನಿಲ ಪೈಪ್ಲೈನ್ ಭೌತಿಕವಾಗಿ ಕೊಂಚ ಪ್ರಗತಿ ಕಂಡಿದ್ದರೂ, ರಾಜಕೀಯ ಕಾರಣಗಳಿಂದಾಗಿ ಅನಿಶ್ಚಿತತೆಯಲ್ಲಿದೆ. ತುರ್ಕಮೆನಿಸ್ತಾನದ ಗಲ್ಕಿನಿಶ್ ಅನಿಲ ಕ್ಷೇತ್ರದಿಂದ ದಕ್ಷಿಣ ಏಷ್ಯಾಕ್ಕೆ ಪ್ರತಿ ವರ್ಷ 33 ಬಿಲಿಯನ್ ಘನ ಮೀಟರ್ ನೈಸರ್ಗಿಕ ಅನಿಲವನ್ನು ತರುವ ಗುರಿ ಈ ಯೋಜನೆಗಿದೆ. ಪ್ರಸ್ತುತ ತುರ್ಕಮೆನಿಸ್ತಾನದಲ್ಲಿ ತನ್ನ ಪಾಲಿನ ಕಾಮಗಾರಿ ಮುಕ್ತಾಯಗೊಂಡಿದ್ದು, ತಾಲಿಬಾನ್ ಆಡಳಿತವಿರುವ ಅಫ್ಘಾನಿಸ್ತಾನದಲ್ಲೂ ಹೆರಾತ್ ನಗರದವರೆಗೆ ಕಾಮಗಾರಿ ಭರದಿಂದ ಸಾಗುತ್ತಿದೆ. 2026ರ ಅಂತ್ಯದ ವೇಳೆಗೆ ಹೆರಾತ್ ವಿಭಾಗದ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಆದರೆ, ಈ ಪೈಪ್ಲೈನ್ ಭಾರತವನ್ನು ತಲುಪಲು ಪಾಕಿಸ್ತಾನದ ಮೂಲಕವೇ ಹಾದುಹೋಗಬೇಕಿದೆ. ಭಾರತ ಮತ್ತು ಪಾಕಿಸ್ತಾನದ ನಡುವಿನ ಭೌಗೋಳಿಕ-ರಾಜಕೀಯ ವೈಷಮ್ಯ ಹಾಗೂ ನಂಬಿಕೆಯ ಕೊರತೆಯಿಂದಾಗಿ ಈ ಯೋಜನೆಯು ಮುಂದಿನ ದಿನಗಳಲ್ಲಿ ಕಾರ್ಯಗತಗೊಳ್ಳುವುದು ತೀರಾ ಅನುಮಾನವಾಗಿದೆ.
ಕೊರೊನಾ ಸಾಂಕ್ರಾಮಿಕದ ಮಾದರಿಯಲ್ಲಿಯೇ ಪ್ರಸ್ತುತ ಇಂಧನ ಬಿಕ್ಕಟ್ಟನ್ನು ಎದುರಿಸಲು ಇಂಧನ ಉಳಿತಾಯದ ಮಂತ್ರ ಜಪಿಸುವುದು ತಾತ್ಕಾಲಿಕವಾಗಿ ಉತ್ತಮ ನಡೆಯೇ ಸರಿ. ಆದರೆ ದೀರ್ಘಾವಧಿಯಲ್ಲಿ ದೇಶದ ಆರ್ಥಿಕತೆಗೆ ಇಂಧನ ಕೊರತೆ ಭಾರಿ ಪೆಟ್ಟು ನೀಡುವ ಅಪಾಯವಿದೆ. ಹೀಗಾಗಿ ಭೌಗೋಳಿಕ-ರಾಜಕೀಯ ಸಂಘರ್ಷಗಳನ್ನು ಮೆಟ್ಟಿ ನಿಂತು, ನೆರೆಹೊರೆಯ ರಾಷ್ಟ್ರಗಳ ವಿಶ್ವಾಸದೊಂದಿಗೆ ಈ ಬೃಹತ್ ಪೈಪ್ಲೈನ್ ಯೋಜನೆಗಳಿಗೆ ಮರುಜೀವ ನೀಡಿದರೆ ಮಾತ್ರ ಭಾರತವು ತನ್ನ ಇಂಧನ ಭದ್ರತೆಯನ್ನು ಕಾಯ್ದುಕೊಳ್ಳಲು ಸಾಧ್ಯ.
ಇದನ್ನೂ ಓದಿ : ಸರ್ಕಾರಿ ಶಾಲೆಗೆ 5 ಮಿನಿ ಬಸ್, 1 ಆಂಬ್ಯುಲೆನ್ಸ್ ಕೊಡುಗೆ ನೀಡಿದ ಜಯಶೀಲ ಶೆಟ್ಟಿ ಘಟಪ್ರಭ!



















