ಕೋಲ್ಕತ್ತಾ: ಪಶ್ಚಿಮ ಬಂಗಾಳದ ನೂತನ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರ ಆಪ್ತ ಸಹಾಯಕ ಚಂದ್ರನಾಥ್ ರಥ್ ಅವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ವೃತ್ತಿಪರ ಹಂತಕರನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪಶ್ಚಿಮ ಬಂಗಾಳ, ಉತ್ತರ ಪ್ರದೇಶ ಹಾಗೂ ಬಿಹಾರ ಪೊಲೀಸರು ಜಂಟಿಯಾಗಿ ನಡೆಸಿದ ಕಾರ್ಯಾಚರಣೆಯಲ್ಲಿ ವಿಶಾಲ್ ಶ್ರೀವಾಸ್ತವ, ರಾಜ್ ಸಿಂಗ್ ಮತ್ತು ಮಯಾಂಕ್ ಮಿಶ್ರಾ ಎಂಬುವವರನ್ನು ಬಿಹಾರ ಮತ್ತು ಉತ್ತರ ಪ್ರದೇಶದಲ್ಲಿ ಸೆರೆಹಿಡಿಯಲಾಗಿದೆ. ಕೋಲ್ಕತ್ತಾ ಸಮೀಪದ ಬಾಲಿ ಟೋಲ್ ಬೂತ್ನಲ್ಲಿ ಹಂತಕರು ಮಾಡಿದ್ದ ಒಂದೇ ಒಂದು ‘ಯುಪಿಐ’ (UPI) ಪಾವತಿಯ ಸುಳಿವು ಅವರನ್ನು ಪೊಲೀಸರ ಬಲೆಗೆ ಬೀಳುವಂತೆ ಮಾಡಿದೆ.
ಭೀಕರ ಹತ್ಯೆ ನಡೆದಿದ್ದು ಹೇಗೆ?
ಬುಧವಾರ ರಾತ್ರಿ 10 ರಿಂದ 10.10ರ ಸುಮಾರಿಗೆ ಚಂದ್ರನಾಥ್ ರಥ್ ಅವರು ತಮ್ಮ ‘ಮಹೀಂದ್ರ ಸ್ಕಾರ್ಪಿಯೋ’ ಕಾರಿನಲ್ಲಿ ಮನೆಗೆ ಹಿಂದಿರುಗುತ್ತಿದ್ದಾಗ ಈ ಭೀಕರ ಹತ್ಯೆ ನಡೆದಿತ್ತು. ಉತ್ತರ 24 ಪರಗಣ ಜಿಲ್ಲೆಯ ಮಧ್ಯಮಗ್ರಾಮದಲ್ಲಿರುವ ಅವರ ಮನೆಯಿಂದ ಕೇವಲ 200 ಮೀಟರ್ ದೂರದಲ್ಲಿ ಈ ಘಟನೆ ಸಂಭವಿಸಿತ್ತು. ಬೆಳ್ಳಿ ಬಣ್ಣದ ನಿಸ್ಸಾನ್ ಮೈಕ್ರಾ ಕಾರಿನಲ್ಲಿ ಬಂದ ದುಷ್ಕರ್ಮಿಗಳು ಚಂದ್ರನಾಥ್ ಅವರ ಕಾರನ್ನು ಅಡ್ಡಗಟ್ಟಿದ್ದಾರೆ. ಬಳಿಕ ಬೈಕ್ನಲ್ಲಿ ಬಂದ ಇತರ ಹಂತಕರು ಕಾರಿನ ಮುಂಭಾಗದ ಸೀಟಿನಲ್ಲಿದ್ದ ಚಂದ್ರನಾಥ್ ಅವರ ಮೇಲೆ ಅತ್ಯಂತ ಸನಿಹದಿಂದ (ಪಾಯಿಂಟ್-ಬ್ಲಾಂಕ್ ರೇಂಜ್) ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದರು.

ಹಂತಕರನ್ನು ಹಿಡಿದುಕೊಟ್ಟ ಸಿಸಿಟಿವಿ ಮತ್ತು ಯುಪಿಐ
ಹತ್ಯೆಯ ಬಳಿಕ ನಿಸ್ಸಾನ್ ಕಾರನ್ನು ಸ್ಥಳದಲ್ಲೇ ಬಿಟ್ಟು, ಬೇರೊಂದು ಕೆಂಪು ಕಾರು ಹಾಗೂ ಬೈಕ್ ಬಳಸಿ ಹಂತಕರು ಪರಾರಿಯಾಗಿದ್ದರು. ತನಿಖೆ ಆರಂಭಿಸಿದ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಆರೋಪಿಗಳು ಟೋಲ್ ಪ್ಲಾಜಾ ಮೂಲಕ ಪರಾರಿಯಾಗಿರುವುದು ಬೆಳಕಿಗೆ ಬಂದಿದೆ. ಈ ಮೂವರೂ ಒಂದೇ ಕಾರಿನಲ್ಲಿ ಪ್ರಯಾಣಿಸುತ್ತಿದ್ದು, ಟೋಲ್ ಬೂತ್ನಲ್ಲಿ ಯುಪಿಐ ಮೂಲಕ ಹಣ ಪಾವತಿಸಿದ್ದರು. ಇದೇ ನಿರ್ಣಾಯಕ ಸುಳಿವು ಪೊಲೀಸರು ಹಂತಕರ ಜಾಡು ಹಿಡಿಯಲು ಸಹಾಯ ಮಾಡಿತು.
ಬಂಧಿತರಾದ ಮೂವರೂ ವೃತ್ತಿಪರ ಹಂತಕರಾಗಿದ್ದಾರೆ. ಇವರಲ್ಲಿ ಬಿಹಾರದ ಬಕ್ಸರ್ ಮೂಲದ ವಿಶಾಲ್ ವಿರುದ್ಧ ಕೊಲೆ, ಸುಲಿಗೆ ಸೇರಿದಂತೆ 15ಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣಗಳಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಉಳಿದಿಬ್ಬರು ಉತ್ತರ ಪ್ರದೇಶದವರಾಗಿದ್ದಾರೆ.
ಕದ್ದ ವಾಹನ, ನಕಲಿ ನಂಬರ್ ಪ್ಲೇಟ್ ಬಳಕೆ
ಕೃತ್ಯಕ್ಕೆ ಬಳಸಿದ್ದ ನಿಸ್ಸಾನ್ ಮೈಕ್ರಾ ಕಾರು ಹಾಗೂ ಎರಡು ಬೈಕ್ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಮೂರೂ ವಾಹನಗಳು ಕಳುವಾದವುಗಳಾಗಿದ್ದು, ಕಾರಿಗೆ ನಕಲಿ ನಂಬರ್ ಪ್ಲೇಟ್ ಅಳವಡಿಸಲಾಗಿತ್ತು ಎಂದು ಪಶ್ಚಿಮ ಬಂಗಾಳದ ಡಿಜಿಪಿ ಸಿದ್ದನಾಥ್ ಗುಪ್ತಾ ಸ್ಪಷ್ಟಪಡಿಸಿದ್ದಾರೆ. ವಶಪಡಿಸಿಕೊಂಡಿರುವ ಒಂದು ಬೈಕ್ 2012ರಲ್ಲೇ ವಿಭಾಷ್ ಕುಮಾರ್ ಭಟ್ಟಾಚಾರ್ಯ ಎಂಬುವವರ ಹೆಸರಿನಲ್ಲಿ ನೋಂದಣಿಯಾಗಿತ್ತು ಎಂಬುದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ.
ಮಮತಾ ಬ್ಯಾನರ್ಜಿ ಸೋಲಿಸಿದ್ದಕ್ಕೇ ಈ ಕೊಲೆ: ಸುವೇಂದು ಅಧಿಕಾರಿ ಗಂಭೀರ ಆರೋಪ
ಇದೊಂದು ಪೂರ್ವನಿಯೋಜಿತ ಕೊಲೆಯಾಗಿದ್ದು, ಇತ್ತೀಚಿನ ವಿಧಾನಸಭಾ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಅಧಿನಾಯಕಿ ಮಮತಾ ಬ್ಯಾನರ್ಜಿ ಅವರನ್ನು ಭವಾನಿಪುರ ಕ್ಷೇತ್ರದಲ್ಲಿ ಸೋಲಿಸಿದ್ದೇ ಈ ಹತ್ಯೆಗೆ ಕಾರಣ ಎಂದು ಸಿಎಂ ಸುವೇಂದು ಅಧಿಕಾರಿ ಗಂಭೀರ ಆರೋಪ ಮಾಡಿದ್ದರು. ಮೃತರ ಕುಟುಂಬವನ್ನು ಭೇಟಿಯಾದ ಬಳಿಕ ಮಾತನಾಡಿದ್ದ ಅವರು, “ಅವರು ನನ್ನ ಆಪ್ತರಾಗಿದ್ದರು ಮತ್ತು ನಾನು ಮಮತಾ ಬ್ಯಾನರ್ಜಿ ಅವರನ್ನು ಭವಾನಿಪುರದಲ್ಲಿ ಮಣಿಸಿದ್ದೆ. ಇದೇ ಕೊಲೆಗೆ ಪ್ರಮುಖ ಕಾರಣವಿರಬಹುದು. ರಾಜ್ಯದಲ್ಲಿನ 15 ವರ್ಷಗಳ ಮಹಾ-ಜಂಗಲ್ ರಾಜ್ಗೆ ಇದು ಕನ್ನಡಿ ಹಿಡಿದಿದೆ” ಎಂದು ಕಿಡಿಕಾರಿದ್ದರು. ಮೃತ ಚಂದ್ರನಾಥ್ ಅವರ ತಾಯಿ ಕೂಡಾ ಟಿಎಂಸಿಯ ‘ಗುಂಡಾಗಿರಿ’ಯೇ ತನ್ನ ಮಗನ ಸಾವಿಗೆ ಕಾರಣ ಎಂದು ನೇರ ಆರೋಪ ಮಾಡಿದ್ದರು.



















