ಮುಂಬೈ : ಮದುವೆಯ ಹೆಸರಿನಲ್ಲಿ ಅಮಾಯಕ ಯುವಕರನ್ನು ವಂಚಿಸಿ ಲಕ್ಷಾಂತರ ರೂಪಾಯಿ ದೋಚುತ್ತಿದ್ದ ಬೃಹತ್ ಜಾಲವೊಂದು ಇದೀಗ ಮಹಾರಾಷ್ಟ್ರದ ಬೀಡ್ ಜಿಲ್ಲೆಯಲ್ಲಿ ಬಯಲಾಗಿದೆ. ಈಗಾಗಲೇ 8 ಮಂದಿಯನ್ನು ಮದುವೆಯಾಗಿ ಅವರಿಂದ ಲಕ್ಷಾಂತರ ರೂಪಾಯಿ ಹಣ ಹಾಗೂ ಚಿನ್ನಾಭರಣಗಳನ್ನು ಲೂಟಿ ಮಾಡಿ ಪರಾರಿಯಾಗಿದ್ದ ‘ಲೂಟಿಕೋರ ವಧು’ವಿನ ಬಣ್ಣ, 9ನೇ ಮದುವೆಯ ಬಳಿಕ ಜಗಜ್ಜಾಹೀರಾಗಿದೆ.
ಬೀಡ್ ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿ ವಧು ಸಿಗದೆ ಪರದಾಡುತ್ತಿದ್ದ ಅವಿವಾಹಿತ ಯುವಕರನ್ನೇ ಈ ಗ್ಯಾಂಗ್ ವ್ಯವಸ್ಥಿತವಾಗಿ ಗುರಿಯಾಗಿಸಿಕೊಳ್ಳುತ್ತಿತ್ತು. ಮದುವೆ ಮಾಡಿಸುವ ಏಜೆಂಟರ ಸೋಗಿನಲ್ಲಿ ಬರುತ್ತಿದ್ದ ದಲ್ಲಾಳಿಗಳು, ಯುವಕರನ್ನು ನಂಬಿಸಿ ಬಲೆಯಲ್ಲಿ ಕೆಡವುತ್ತಿದ್ದರು. ಮದುವೆ ನಿಶ್ಚಯಿಸುವ ನೆಪದಲ್ಲಿ ಯುವಕರಿಂದ ಲಕ್ಷಾಂತರ ರೂಪಾಯಿ ಹಣವನ್ನು ವಸೂಲಿ ಮಾಡಲಾಗುತ್ತಿತ್ತು. ವಿವಾಹವಾದ ಕೆಲವೇ ದಿನಗಳಲ್ಲಿ ಈ ‘ಖತರ್ನಾಕ್ ವಧು’ ಮನೆಯಲ್ಲಿದ್ದ ನಗದು, ಬೆಲೆಬಾಳುವ ವಸ್ತುಗಳು ಹಾಗೂ ಚಿನ್ನಾಭರಣಗಳೊಂದಿಗೆ ನಾಪತ್ತೆಯಾಗುತ್ತಿದ್ದಳು.
9ನೇ ಪತಿಯಿಂದ ಬಯಲಾಯ್ತು ವಂಚನೆ
ಬೀಡ್ ಜಿಲ್ಲೆಯ ಉಮಾಪುರ್ ಗ್ರಾಮದ ಯೋಗೇಶ್ ಶಿಂಧೆ ಎಂಬವರೇ ಈ ವಧುವಿನ 9ನೇ ಹರಕೆಯ ಕುರಿಯಾಗಿದ್ದರು. ದಲ್ಲಾಳಿಗಳ ಮಾತು ನಂಬಿ, ಲಕ್ಷಾಂತರ ರೂಪಾಯಿ ಹಣ ನೀಡಿ ಯೋಗೇಶ್ ಈಕೆಯನ್ನು ವಿವಾಹವಾಗಿದ್ದರು. ಆದರೆ, ಮದುವೆಯಾದ ಕೆಲವೇ ದಿನಗಳಲ್ಲಿ ವಧು ಮತ್ತು ಆಕೆಯ ಕಡೆಯ ದಲ್ಲಾಳಿಗಳು ದಿಢೀರ್ ನಾಪತ್ತೆಯಾಗಿದ್ದಾರೆ. ಬಳಿಕ ಈಕೆಯ ಅಸಹಜ ನಡವಳಿಕೆಗಳ ಬಗ್ಗೆ ಅನುಮಾನಗೊಂಡು ಹಿನ್ನೆಲೆ ವಿಚಾರಿಸಿದಾಗ, ಈಕೆ ಈಗಾಗಲೇ ಎಂಟು ಮಂದಿಯನ್ನು ಇದೇ ರೀತಿ ಮದುವೆಯಾಗಿ ವಂಚಿಸಿರುವ ಆಘಾತಕಾರಿ ವಿಚಾರ ಬೆಳಕಿಗೆ ಬಂದಿದೆ.
ಮದುವೆಗೂ ಮುನ್ನ ಈಕೆಯ ಹಿಂದಿನ ವಿವಾಹಗಳ ಬಗ್ಗೆ ತನಗೆ ಯಾವುದೇ ಮಾಹಿತಿ ನೀಡಿರಲಿಲ್ಲ ಎಂದು ಯೋಗೇಶ್ ಆರೋಪಿಸಿದ್ದಾರೆ. “ನಾನು ಲಕ್ಷಾಂತರ ರೂಪಾಯಿ ಕಳೆದುಕೊಂಡು ಮೋಸ ಹೋಗಿದ್ದೇನೆ. ನನಗೀಗ ಆತ್ಮಹತ್ಯೆಯೊಂದೇ ದಾರಿ. ನನಗೆ ನ್ಯಾಯ ಒದಗಿಸಿ” ಎಂದು ನೊಂದ ಯೋಗೇಶ್ ಕಣ್ಣೀರು ಹಾಕಿದ್ದಾರೆ.
ಪೊಲೀಸ್ ತನಿಖೆ ಚುರುಕು
ಈ ಸರಣಿ ವಂಚನೆಯಿಂದ ಕಂಗೆಟ್ಟ ಯೋಗೇಶ್, ಬೀಡ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳನ್ನು (SP) ಭೇಟಿಯಾಗಿ ನ್ಯಾಯಕ್ಕಾಗಿ ಅಂಗಲಾಚಿದ್ದಾರೆ. ಸದ್ಯ ಚಕ್ಲಂಬಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಗ್ರಾಮೀಣ ಭಾಗದಲ್ಲಿ ನಡೆಯುತ್ತಿದ್ದ ಈ ವ್ಯವಸ್ಥಿತ ದಂಧೆಯನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು, ತಲೆಮರೆಸಿಕೊಂಡಿರುವ ವಧು ಹಾಗೂ ಆಕೆಗೆ ಸಾಥ್ ನೀಡುತ್ತಿದ್ದ ದಲ್ಲಾಳಿಗಳ ಪತ್ತೆಗಾಗಿ ತೀವ್ರ ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ. ಈ ಜಾಲದಿಂದ ಇನ್ನೆಷ್ಟು ಜನ ಯುವಕರು ಮೋಸ ಹೋಗಿದ್ದಾರೆ ಎಂಬುದು ತನಿಖೆಯ ಬಳಿಕವಷ್ಟೇ ತಿಳಿದುಬರಬೇಕಿದೆ.
ಇದನ್ನೂ ಓದಿ : “ಈ ಹುದ್ದೆಗೆ ಹೇಳಿ ಮಾಡಿಸಿದಂತಿದ್ದೀರಿ ಎಂದಿದ್ದರು ಕೊಹ್ಲಿ” : RCB ಕೋಚ್ ಆಗಿದ್ದರ ಹಿಂದಿನ ರಹಸ್ಯ ಬಿಚ್ಚಿಟ್ಟ DK



















