ಮುಂಬೈ : ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2026ರ ರೋಚಕ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ ತಂಡ ಭರ್ಜರಿ ಜಯ ಸಾಧಿಸಿದೆ. ಗಾಯದಿಂದ ಚೇತರಿಸಿಕೊಂಡು ತಂಡಕ್ಕೆ ಮರಳಿದ ಸ್ಟಾರ್ ಬ್ಯಾಟರ್ ರೋಹಿತ್ ಶರ್ಮಾ ಅವರ ಸ್ಫೋಟಕ ಆಟ ಈ ಪಂದ್ಯದ ಪ್ರಮುಖ ಆಕರ್ಷಣೆಯಾಗಿತ್ತು. ಅವರ ಈ ಪ್ರದರ್ಶನವನ್ನು ‘ಪೈಸಾ ವಸೂಲ್’ ಎಂದು ಭಾರತದ ಮಾಜಿ ಸ್ಪಿನ್ನರ್ ಹರ್ಭಜನ್ ಸಿಂಗ್ ಬಣ್ಣಿಸಿದ್ದಾರೆ.
ಟಾಸ್ ವೇಳೆ ನಾಯಕ ಸೂರ್ಯಕುಮಾರ್ ಯಾದವ್ ಅವರು ರೋಹಿತ್ ಶರ್ಮಾ ಪ್ಲೇಯಿಂಗ್ ಇಲೆವೆನ್ನಲ್ಲಿ ಆಡುತ್ತಿರುವ ಬಗ್ಗೆ ಘೋಷಿಸುತ್ತಿದ್ದಂತೆಯೇ, ವಾಂಖೆಡೆ ಕ್ರೀಡಾಂಗಣದಲ್ಲಿ ಅಭಿಮಾನಿಗಳ ಹರ್ಷೋದ್ಗಾರ ಮುಗಿಲುಮುಟ್ಟಿತ್ತು. ಅಭಿಮಾನಿಗಳ ನಿರೀಕ್ಷೆಯನ್ನು ಹುಸಿಗೊಳಿಸದ ರೋಹಿತ್, ಲಕ್ನೋ ತಂಡ ನೀಡಿದ್ದ 229 ರನ್ಗಳ ಬೃಹತ್ ಗುರಿಯನ್ನು ಬೆನ್ನಟ್ಟುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಕೇವಲ 44 ಎಸೆತಗಳನ್ನು ಎದುರಿಸಿದ ಅವರು, 6 ಆಕರ್ಷಕ ಬೌಂಡರಿ ಹಾಗೂ 7 ಭರ್ಜರಿ ಸಿಕ್ಸರ್ಗಳ ನೆರವಿನಿಂದ 84 ರನ್ ಸಿಡಿಸಿ ಅಬ್ಬರಿಸಿದರು. ಅವರ ಈ ಸ್ಫೋಟಕ ಆರಂಭದ ನೆರವಿನಿಂದ ಮುಂಬೈ ಇಂಡಿಯನ್ಸ್ ತಂಡವು 18.4 ಓವರ್ಗಳಲ್ಲಿ ಕೇವಲ 4 ವಿಕೆಟ್ ಕಳೆದುಕೊಂಡು ಗುರಿ ತಲುಪುವ ಮೂಲಕ 6 ವಿಕೆಟ್ಗಳ ಭರ್ಜರಿ ಗೆಲುವು ದಾಖಲಿಸಿತು.
ಮೈದಾನಕ್ಕೆ ಮರುಜೀವ
ರೋಹಿತ್ ಅವರ ಈ ಅಮೋಘ ಆಟದ ಕುರಿತು ಪ್ರತಿಕ್ರಿಯಿಸಿರುವ ಹರ್ಭಜನ್ ಸಿಂಗ್, ರೋಹಿತ್ ಮರಳುವಿಕೆಯಿಂದ ಮೈದಾನಕ್ಕೆ ಮರುಜೀವ ಬಂದಂತಾಯಿತು ಎಂದಿದ್ದಾರೆ. ಕ್ರೀಡಾಂಗಣದ ಮೂಲೆ ಮೂಲೆಯಲ್ಲೂ ರೋಹಿತ್ ಹೆಸರಿನ ಜಯಘೋಷ ಮೊಳಗುತ್ತಿತ್ತು. ಅವರು ಅದ್ಭುತ ಇನ್ನಿಂಗ್ಸ್ ಆಡುವ ಮೂಲಕ ಎಲ್ಲರನ್ನೂ ರಂಜಿಸಿದ್ದಾರೆ. ಪಂದ್ಯ ಮುಗಿದು ಹಿಂದಿರುಗುತ್ತಿದ್ದ ಬಹುತೇಕ ಅಭಿಮಾನಿಗಳು, ಕೇವಲ ರೋಹಿತ್ ಶರ್ಮಾ ಅವರ ಬ್ಯಾಟಿಂಗ್ ನೋಡಿದ್ದಕ್ಕೇ ನಮ್ಮ ಟಿಕೆಟ್ ಹಣ ‘ಪೈಸಾ ವಸೂಲ್’ ಆಯಿತು ಎಂದು ಸಂತಸ ವ್ಯಕ್ತಪಡಿಸಿದ್ದಾಗಿ ಹರ್ಭಜನ್ ಪ್ರಸಾರಕರೊಂದಿಗೆ ಮಾತನಾಡುತ್ತಾ ತಿಳಿಸಿದ್ದಾರೆ.
ಇದೇ ವೇಳೆ, ರೋಹಿತ್ ಶರ್ಮಾ ಅವರ ಸ್ನಾಯು ಸೆಳೆತದ ಗಾಯ (ಹ್ಯಾಮ್ಸ್ಟ್ರಿಂಗ್) ಇನ್ನಷ್ಟು ಬೇಗನೇ ಗುಣಮುಖವಾಗಬೇಕಿತ್ತು ಎಂದು ಹರ್ಭಜನ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ. ರೋಹಿತ್ ಈ ಹಿಂದಿನ ಪಂದ್ಯಗಳಲ್ಲೂ ಆಡಿದ್ದರೆ ಮುಂಬೈ ತಂಡ ಖಂಡಿತವಾಗಿಯೂ ಕೆಲವು ಪಂದ್ಯಗಳನ್ನು ಗೆದ್ದು ಪ್ಲೇ-ಆಫ್ ಹಾದಿಯನ್ನು ಸುಗಮಗೊಳಿಸಿಕೊಳ್ಳುತ್ತಿತ್ತು. ಆದಾಗ್ಯೂ, ಮುಂಬೈ ತಂಡ ತನ್ನ ಮುಂದಿನ ಎಲ್ಲಾ ಪಂದ್ಯಗಳನ್ನು ಗೆದ್ದು ಕನಿಷ್ಠ 14 ಅಂಕಗಳನ್ನು ತಲುಪುವತ್ತ ಗಮನಹರಿಸಬೇಕು. ಆ ಬಳಿಕ ಮಳೆ ಅಥವಾ ನೆಟ್ ರನ್ ರೇಟ್ನಂತಹ ಅಂಶಗಳು ಪ್ಲೇ-ಆಫ್ ಲೆಕ್ಕಾಚಾರದಲ್ಲಿ ಬದಲಾವಣೆ ತರುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ ಎಂದು ಅವರು ವಿಶ್ಲೇಷಿಸಿದ್ದಾರೆ.
ಲಕ್ನೋ ವಿರುದ್ಧದ ಈ ಮಹತ್ವದ ಗೆಲುವಿನ ಹೊರತಾಗಿಯೂ, ಮುಂಬೈ ಇಂಡಿಯನ್ಸ್ ತಂಡವು ಸದ್ಯ 6 ಅಂಕಗಳು ಹಾಗೂ -0.649 ನೆಟ್ ರನ್ ರೇಟ್ನೊಂದಿಗೆ ಅಂಕಪಟ್ಟಿಯಲ್ಲಿ ಒಂಬತ್ತನೇ ಸ್ಥಾನದಲ್ಲೇ ಮುಂದುವರಿದಿದೆ. ತನ್ನ ಗೆಲುವಿನ ಲಯವನ್ನು ಮುಂದುವರಿಸುವ ವಿಶ್ವಾಸದಲ್ಲಿರುವ ಮುಂಬೈ ಪಡೆ, ಮೇ 10ರ ಭಾನುವಾರದಂದು ಶಹೀದ್ ವೀರ್ ನಾರಾಯಣ್ ಸಿಂಗ್ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ರಜತ್ ಪಾಟಿದಾರ್ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡವನ್ನು ಎದುರಿಸಲು ಸಜ್ಜಾಗಿದೆ.
ಇದನ್ನೂ ಓದಿ : ಲಕ್ನೋ ತಂಡಕ್ಕೆ ಪದಾರ್ಪಣೆ ಮಾಡಿದ ಮಧ್ಯಪ್ರದೇಶದ ಬ್ಯಾಟರ್ ಅಕ್ಷತ್ ರಘುವಂಶಿ!


















