ಬೆಂಗಳೂರು : ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ತಂಡ ತೀರಾ ಕಳಪೆ ಪ್ರದರ್ಶನ ನೀಡಿ ಹೀನಾಯ ಸೋಲು ಕಂಡ ಬೆನ್ನಲ್ಲೇ, ಡೆಲ್ಲಿ ತಂಡದ ಮುಖ್ಯ ಕೋಚ್ ಹೇಮಂಗ್ ಬದಾನಿ ತೀವ್ರ ಟೀಕೆಗೆ ಗುರಿಯಾಗಿದ್ದಾರೆ. ಭಾರತ ತಂಡದ ಮಾಜಿ ನಾಯಕ ಕ್ರಿಸ್ ಶ್ರೀಕಾಂತ್ ಅವರು ಬದಾನಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಕೇವಲ ತಂಡದ ಕಳಪೆ ಪ್ರದರ್ಶನ ಮಾತ್ರವಲ್ಲದೆ, ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ಕೆ) ತಂಡದ ಕೋಚ್ ಸ್ಟೀಫನ್ ಫ್ಲೆಮಿಂಗ್ ಕುರಿತು ಬದಾನಿ ಈ ಹಿಂದೆ ನೀಡಿದ್ದ ಹೇಳಿಕೆಯನ್ನು ಮುಂದಿಟ್ಟುಕೊಂಡು ಶ್ರೀಕಾಂತ್ ತರಾಟೆಗೆ ತೆಗೆದುಕೊಂಡಿದ್ದಾರೆ. ಡೆಲ್ಲಿ ತಂಡದ ಸತತ ಮೂರನೇ ಸೋಲು ಇದಾಗಿದ್ದು, ಕೋಚ್ ಬದಾನಿ ಅವರ ಕಾರ್ಯತಂತ್ರಗಳ ಬಗ್ಗೆ ಇದೀಗ ಪ್ರಶ್ನೆಗಳು ಎದ್ದಿವೆ.
ಫ್ಲೆಮಿಂಗ್ ಬಗ್ಗೆ ಬದಾನಿ ನೀಡಿದ್ದ ಹೇಳಿಕೆಯಲ್ಲೇನಿತ್ತು?
2025ರಲ್ಲಿ ಮಾಜಿ ಕ್ರಿಕೆಟಿಗ ಯೋ ಮಹೇಶ್ ಅವರೊಂದಿಗಿನ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಹೇಮಂಗ್ ಬದಾನಿ, ಸ್ಟೀಫನ್ ಫ್ಲೆಮಿಂಗ್ ಅವರ ಕೋಚಿಂಗ್ ಸಾಮರ್ಥ್ಯವನ್ನು ಪ್ರಶ್ನಿಸಿದ್ದರು. ಫ್ಲೆಮಿಂಗ್ ನಿಜಕ್ಕೂ ಅಂತಹ ಶ್ರೇಷ್ಠ ಕೋಚ್ ಆಗಿದ್ದರೆ ಐಪಿಎಲ್ ಹೊರತುಪಡಿಸಿ ಬೇರೆ ಟೂರ್ನಿಗಳಲ್ಲಿ ಯಾಕೆ ಗೆದ್ದಿಲ್ಲ ಎಂದು ಬದಾನಿ ಪ್ರಶ್ನಿಸಿದ್ದರು.
ಸಿಎಸ್ಕೆ ತಂಡದ ಯಶಸ್ಸಿಗೆ ಸಂಪೂರ್ಣವಾಗಿ ಎಂ.ಎಸ್. ಧೋನಿ ಅವರೇ ಕಾರಣ, ಧೋನಿಯೇ ಆ ತಂಡದ ಆಧಾರಸ್ತಂಭ, ಹೀಗಿರುವಾಗ ಫ್ಲೆಮಿಂಗ್ ಅವರನ್ನು ಉತ್ತಮ ಕೋಚ್ ಎಂದರೆ ನಾನು ಒಪ್ಪುವುದಿಲ್ಲ ಎಂದು ಬದಾನಿ ವಿವಾದಾತ್ಮಕವಾಗಿ ಮಾತನಾಡಿದ್ದರು. ಇದೀಗ ಡೆಲ್ಲಿ ತಂಡ ಆಡಿರುವ ಎಂಟು ಪಂದ್ಯಗಳಲ್ಲಿ ಕೇವಲ ಮೂರರಲ್ಲಿ ಗೆದ್ದು ಅಂಕಪಟ್ಟಿಯಲ್ಲಿ 7ನೇ ಸ್ಥಾನಕ್ಕೆ ಕುಸಿದಿರುವುದು ಅವರ ಈ ಹಳೆಯ ಹೇಳಿಕೆ ಮತ್ತೆ ಮುನ್ನೆಲೆಗೆ ಬರುವಂತೆ ಮಾಡಿದೆ.
ಶ್ರೀಕಾಂತ್ ತೀಕ್ಷ್ಣ ವಾಗ್ದಾಳಿ
ಬದಾನಿ ಅವರ ಹಿಂದಿನ ಹೇಳಿಕೆಯನ್ನು ಕಟುವಾಗಿ ಟೀಕಿಸಿದ ಕ್ರಿಸ್ ಶ್ರೀಕಾಂತ್, ಇತರರ ಬಗ್ಗೆ ಮಾತನಾಡುವ ಮೊದಲು ನಿಮ್ಮ ತಂಡದ ಕಡೆ ಗಮನಹರಿಸಿ ಎಂದು ಕಿಡಿಕಾರಿದ್ದಾರೆ. ಜೀವನದಲ್ಲಿ ಎಂದಿಗೂ ಅತಿಯಾಗಿ ಮಾತನಾಡಬಾರದು, ಬದಾನಿ ಅತಿಯಾಗಿ ಮಾತನಾಡಿದರು, ಈಗ ಅವರು ಸುಮ್ಮನಿದ್ದು ನಡೆಯುತ್ತಿರುವುದನ್ನು ನೋಡಬೇಕಾಗಿದೆ ಎಂದು ಶ್ರೀಕಾಂತ್ ಚಾಟಿ ಬೀಸಿದ್ದಾರೆ.
ಫ್ಲೆಮಿಂಗ್ ಅವರ ಸಾಧನೆಯನ್ನು ಪ್ರಶ್ನಿಸಲು ನೀವ್ಯಾರು? ನಿಮ್ಮ ಸಾಧನೆ ಏನು? ನೀವು ಏನಾದರೂ ವಿಶೇಷ ಸಾಧನೆ ಮಾಡಿದ್ದೀರಾ? ಖಂಡಿತ ಇಲ್ಲ. ಇತರರ ಬಗ್ಗೆ ಮಾತನಾಡುವ ಬದಲು ನಿಮ್ಮ ಕೆಲಸದ ಬಗ್ಗೆ ನೀವು ಗಮನಹರಿಸಬೇಕಿತ್ತು ಎಂದು ಶ್ರೀಕಾಂತ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಡೆಲ್ಲಿಯ ಕಳಪೆ ಆಟ
ಆರ್ಸಿಬಿ ವಿರುದ್ಧದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಬ್ಯಾಟಿಂಗ್ ವಿಭಾಗ ಸಂಪೂರ್ಣವಾಗಿ ವಿಫಲವಾಯಿತು. ಕೇವಲ 9 ರನ್ ಆಗುವಷ್ಟರಲ್ಲಿ ಪ್ರಮುಖ 6 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಡೆಲ್ಲಿ, ಅಂತಿಮವಾಗಿ 75 ರನ್ಗಳಿಗೆ ಸರ್ವಪತನ ಕಂಡಿತು. ಇದು ಐಪಿಎಲ್ ಇತಿಹಾಸದಲ್ಲಿ ಡೆಲ್ಲಿ ತಂಡದ ಮೂರನೇ ಅತಿ ಕಡಿಮೆ ಮೊತ್ತವಾಗಿದೆ.
ಅಭಿಷೇಕ್ ಪೊರೆಲ್ ಅವರ 30 ರನ್ಗಳ ಹೋರಾಟದಿಂದಾಗಿ ಡೆಲ್ಲಿ ತಂಡ ಅಲ್ಪ ಮೊತ್ತದ ಮುಖಭಂಗದಿಂದ ಕೊಂಚ ಪಾರಾಯಿತು. ಈ ಗುರಿಯನ್ನು ಆರ್ಸಿಬಿ ಕೇವಲ 6.3 ಓವರ್ಗಳಲ್ಲಿ ಬೆನ್ನತ್ತಿ ಭರ್ಜರಿ ಜಯ ಸಾಧಿಸಿತು. ಈ ಪಂದ್ಯದಲ್ಲಿ ಅನುಭವಿ ಪೃಥ್ವಿ ಶಾ ಅವರನ್ನು ಕೈಬಿಟ್ಟು, 18 ವರ್ಷದ ಯುವ ಆಟಗಾರ ಸಾಹಿಲ್ ಪಾರೀಖ್ಗೆ ಅವಕಾಶ ನೀಡಿದ್ದನ್ನು ಮತ್ತು ಕೆ.ಎಲ್. ರಾಹುಲ್ ಬದಲು ಯುವ ಆಟಗಾರನಿಗೆ ಮೊದಲ ಸ್ಟ್ರೈಕ್ ನೀಡಿದ್ದನ್ನು ಶ್ರೀಕಾಂತ್ ತೀವ್ರವಾಗಿ ಪ್ರಶ್ನಿಸಿದ್ದಾರೆ. ಕಳೆದ ಬಾರಿಯಂತೆ ಈ ಬಾರಿಯೂ ಡೆಲ್ಲಿ ತಂಡ ಪ್ಲೇಆಫ್ ರೇಸ್ನಿಂದ ಹೊರಬೀಳುವ ಆತಂಕ ಎದುರಿಸುತ್ತಿದೆ.
ಇದನ್ನೂ ಓದಿ : SHR ವಿರುದ್ಧ ರೋಹಿತ್ ಕಣಕ್ಕಿಳಿಯಲಿದ್ದಾರೆಯೇ? ಮುಂಬೈ ಇಂಡಿಯನ್ಸ್ ಬಿಗ್ ಅಪ್ಡೇಟ್!


















