ಚೆನ್ನೈ: ತಮಿಳುನಾಡು ವಿಧಾನಸಭೆ ಚುನಾವಣೆಯ ಕಣ ದಿನೇ ದಿನೆ ರಂಗೇರಿದ್ದು, ನಟನೆಯಿಂದ ರಾಜಕೀಯಕ್ಕೆ ಮೊದಲ ಬಾರಿಗೆ ಪಾದಾರ್ಪಣೆ ಮಾಡಿರುವ ‘ದಳಪತಿ’ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (TVK) ಇಂದು ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಪಕ್ಷದ ಅಧ್ಯಕ್ಷ, ನಟ ವಿಜಯ್ ಅವರು ಈ ಬಾರಿ ಎರಡು ವಿಧಾನಸಭಾ ಕ್ಷೇತ್ರಗಳಿಂದ ಸ್ಪರ್ಧಿಸುವ ಮೂಲಕ ಅಚ್ಚರಿಗೆ ಕಾರಣರಾಗಿದ್ದಾರೆ.

2 ಕ್ಷೇತ್ರಗಳಿಂದ ವಿಜಯ್ ಕಣಕ್ಕೆ
ಭಾನುವಾರ ಪಕ್ಷದ ಅಭ್ಯರ್ಥಿಗಳ ಹೆಸರುಗಳನ್ನು ಘೋಷಿಸಿದ ವಿಜಯ್, ತಾವು ಪೆರಂಬೂರ್ ಮತ್ತು ತಿರುಚ್ಚಿ ಪೂರ್ವ ಕ್ಷೇತ್ರಗಳಿಂದ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ. ಪ್ರಸ್ತುತ ಈ ಎರಡೂ ಕ್ಷೇತ್ರಗಳು ಆಡಳಿತಾರೂಢ ಡಿಎಂಕೆ ವಶದಲ್ಲಿದ್ದು, ಕ್ರಮವಾಗಿ ಆರ್.ಡಿ. ಶೇಖರ್ ಮತ್ತು ಇನಿಗೊ ಎಸ್. ಇರುದಯರಾಜ್ ಅವರು ಇಲ್ಲಿನ ಶಾಸಕರಾಗಿದ್ದಾರೆ. “ನಮಗೆ ಒಂದು ಅವಕಾಶ ನೀಡಿ, ಇದು ಸೀಟಿ (Whistle) ಕ್ರಾಂತಿಯ ಚುನಾವಣೆ” ಎಂದು ಕರೆ ನೀಡುವ ಮೂಲಕ ತಮ್ಮ ಪಕ್ಷದ ಲಾಂಛನವನ್ನು ಜನರ ಮನೆ-ಮನಸ್ಸಿಗೆ ತಲುಪಿಸುವ ಪ್ರಯತ್ನವನ್ನೂ ವಿಜಯ್ ಮಾಡಿದ್ದಾರೆ.
ಪ್ರಮುಖ ನಾಯಕರಿಗೆ ಟಿವಿಕೆ ಸವಾಲು
ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಪ್ರತಿನಿಧಿಸುವ ಕೊಳತ್ತೂರು ಕ್ಷೇತ್ರದಲ್ಲಿ ಟಿವಿಕೆ ಪರವಾಗಿ ವಿ.ಎಸ್. ಬಾಬು ಕಣಕ್ಕಿಳಿಯಲಿದ್ದಾರೆ. ಅದೇ ರೀತಿ, ಉಪಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ವಿರುದ್ಧ ಚೆಪಾಕ್ ಕ್ಷೇತ್ರದಲ್ಲಿ ಕಾಂಗ್ರೆಸ್ ತೊರೆದು ಟಿವಿಕೆ ಸೇರಿರುವ ಸೆಲ್ವಂ ಅವರನ್ನು ಕಣಕ್ಕಿಳಿಸುವ ಮೂಲಕ ವಿಜಯ್ ಭರ್ಜರಿ ಪೈಪೋಟಿ ನೀಡಲು ಮುಂದಾಗಿದ್ದಾರೆ. ಪಕ್ಷದ ಪ್ರಧಾನ ಕಾರ್ಯದರ್ಶಿ ಆಧವ್ ಅರ್ಜುನ್ ವಿಲ್ಲಿವಾಕ್ಕಂನಿಂದ ಹಾಗೂ ಸೆಂಗೊಟ್ಟೈಯನ್ ಗೋಬಿಚೆಟ್ಟಿಪಾಳ್ಯಂನಿಂದ ಸ್ಪರ್ಧಿಸಲಿದ್ದಾರೆ.
ಸಾಮಾನ್ಯರಿಗೆ ಆದ್ಯತೆ
ಅಭ್ಯರ್ಥಿಗಳ ಹೆಸರನ್ನು ಘೋಷಿಸಿ ಮಾತನಾಡಿದ ವಿಜಯ್, “ನಮ್ಮ ಅಭ್ಯರ್ಥಿಗಳು ಸಾಮಾನ್ಯ ಹಿನ್ನೆಲೆಯಿಂದ ಬಂದವರು. ಅವರು ಲೂಟಿ ಮಾಡಿದ ಅಥವಾ ಅಕ್ರಮ ಗಣಿಗಾರಿಕೆ ನಡೆಸಿದ ಅನುಭವ ಹೊಂದಿಲ್ಲ. ಪತ್ರಕರ್ತರ ಮೇಲೆ ಹಲ್ಲೆ ನಡೆಸುವವರೂ ನಮ್ಮಲ್ಲಿಲ್ಲ,” ಎಂದು ಡಿಎಂಕೆ ನಾಯಕರ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು. ಜೈಲಿಗೆ ಹೋಗಿ ಬಂದಿರುವ ಭ್ರಷ್ಟಾಚಾರದ ಆರೋಪ ಹೊತ್ತ ಡಿಎಂಕೆ ಅಭ್ಯರ್ಥಿಗಳ ಬಗ್ಗೆ ಜನರು ಯೋಚಿಸಬೇಕು ಎಂದು ಅವರು ಮನವಿ ಮಾಡಿದರು.
ಪ್ರಣಾಳಿಕೆಯ ಪ್ರಮುಖ ಆಶ್ವಾಸನೆಗಳು
ಮುಂಬರುವ ಚುನಾವಣೆಯಲ್ಲಿ ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ‘ಮಾದಕ ದ್ರವ್ಯ ಮುಕ್ತ ತಮಿಳುನಾಡು’ ನಿರ್ಮಾಣ ಮಾಡುವುದಾಗಿ ವಿಜಯ್ ಭರವಸೆ ನೀಡಿದ್ದಾರೆ. ಇದರೊಂದಿಗೆ, 29 ವರ್ಷ ದಾಟಿದರೂ ಉದ್ಯೋಗ ಸಿಗದ ಯುವಕರಿಗೆ ಮಾಸಿಕ ಸಹಾಯಧನ ಹಾಗೂ ಸರ್ಕಾರಿ ಉದ್ಯೋಗ ನೇಮಕಾತಿಯಲ್ಲಿ ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ತರಲು ಹೊಸ ಕಾನೂನು ಜಾರಿಗೊಳಿಸುವುದಾಗಿ ಅವರು ಘೋಷಿಸಿದ್ದಾರೆ.
ತಮಿಳುನಾಡಿನ 234 ಕ್ಷೇತ್ರಗಳಿಗೆ ಏಪ್ರಿಲ್ 23 ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದು, ಡಿಎಂಕೆ, ಎಐಎಡಿಎಂಕೆ-ಬಿಜೆಪಿ ಮೈತ್ರಿಕೂಟ, ಟಿವಿಕೆ ಹಾಗೂ ಪಿಎಂಕೆ-ಶಶಿಕಲಾ ಮೈತ್ರಿಕೂಟದ ನಡುವೆ ಚತುಷ್ಕೋನ ಸ್ಪರ್ಧೆ ಏರ್ಪಟ್ಟಿದೆ. ವಿಜಯ್ ಅವರ ಎಂಟ್ರಿಯಿಂದಾಗಿ ಈ ಬಾರಿಯ ಚುನಾವಣೆ ಇಡೀ ದೇಶದ ಗಮನ ಸೆಳೆದಿದೆ.
ಇದನ್ನೂ ಓದಿ : ರಂಗೇರಿದ ಬಾಗಲಕೋಟೆ ಉಪಚುನಾವಣೆ ಅಖಾಡ – ಜಾರಕಿಹೊಳಿ ಪುತ್ರ ಭರ್ಜರಿ ಮತಭೇಟೆ



















