ಕಾಬೂಲ್ : ಅತ್ತ ಇರಾನ್-ಇಸ್ರೇಲ್-ಅಮೆರಿಕ ಯುದ್ಧದ ನಡುವೆಯೇ ಇತ್ತ ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ನಲ್ಲಿರುವ ಆಸ್ಪತ್ರೆಯೊಂದರ ಮೇಲೆ ಪಾಕಿಸ್ತಾನ ಸೇನೆ ಇಂದು ನಡೆಸಿದ ಭೀಕರ ವೈಮಾನಿಕ ದಾಳಿಯಲ್ಲಿ 400 ಜನರು ಮೃತಪಟ್ಟಿದ್ದು, 250ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ತಾಲಿಬಾನ್ ಆಡಳಿತ ಹೇಳಿದೆ. ಆದರೆ, ಆಸ್ಪತ್ರೆಯ ಮೇಲಿನ ದಾಳಿಯನ್ನು ನಿರಾಕರಿಸಿರುವ ಪಾಕಿಸ್ತಾನ, ಉಗ್ರರ ನೆಲೆಗಳನ್ನು ಮಾತ್ರ ಗುರಿಯಾಗಿಸಿ ದಾಳಿ ನಡೆಸಲಾಗಿದೆ ಎಂದು ಹೇಳಿಕೊಂಡಿದೆ. ಈ ಬೆಳವಣಿಗೆಯಿಂದಾಗಿ ಉಭಯ ರಾಷ್ಟ್ರಗಳ ನಡುವಿನ ಸಂಘರ್ಷ ಈಗ ‘ಯುದ್ಧ’ದ ಸ್ವರೂಪ ಪಡೆದುಕೊಳ್ಳುವ ಭೀತಿ ಎದುರಾಗಿದೆ.
ಮಾದಕ ವ್ಯಸನಮುಕ್ತ ಕೇಂದ್ರವೇ ಗುರಿ
ಅಫ್ಘಾನಿಸ್ತಾನದ ಸರ್ಕಾರದ ಉಪ ವಕ್ತಾರ ಹಮ್ದುಲ್ಲಾ ಫಿತ್ರತ್ ಅವರ ಪ್ರಕಾರ, ಸ್ಥಳೀಯ ಕಾಲಮಾನ ಸೋಮವಾರ ರಾತ್ರಿ 9 ಗಂಟೆ ಸುಮಾರಿಗೆ ಈ ದಾಳಿ ನಡೆದಿದೆ. 2,000 ಹಾಸಿಗೆಗಳ ಸಾಮರ್ಥ್ಯದ ಬಹುದೊಡ್ಡ ಮಾದಕ ವ್ಯಸನಮುಕ್ತ ಆಸ್ಪತ್ರೆಯ ಮೇಲೆ ಪಾಕ್ ವಾಯುದಾಳಿ ನಡೆಸಿದ್ದು, ಆಸ್ಪತ್ರೆಯ ಬಹುಪಾಲು ಕಟ್ಟಡಗಳು ನಾಶವಾಗಿವೆ. ಅಫ್ಘಾನ್ ಸರ್ಕಾರದ ವಕ್ತಾರ ಜಬಿವುಲ್ಲಾ ಮುಜಾಹಿದ್ ಈ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದು, ಪಾಕಿಸ್ತಾನವು ಉದ್ದೇಶಪೂರ್ವಕವಾಗಿ ನಾಗರಿಕ ನೆಲೆಗಳು ಮತ್ತು ಆಸ್ಪತ್ರೆಗಳನ್ನು ಗುರಿಯಾಗಿಸಿಕೊಂಡು ಘೋರ ಕೃತ್ಯಗಳನ್ನು ಎಸಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಚಿಕಿತ್ಸೆ ಪಡೆಯುತ್ತಿದ್ದ ಅಮಾಯಕ ರೋಗಿಗಳ ಸಾವಿಗೆ ಕಾರಣವಾದ ಈ ಕೃತ್ಯವು ಎಲ್ಲಾ ಅಂತಾರಾಷ್ಟ್ರೀಯ ನಿಯಮಗಳ ಉಲ್ಲಂಘನೆ ಹಾಗೂ ಮಾನವೀಯತೆಯ ಮೇಲಿನ ಅಪರಾಧ” ಎಂದು ಅವರು ಕಿಡಿಕಾರಿದ್ದಾರೆ.
ಮಿಲಿಟರಿ ನೆಲೆಗಳ ಮೇಲಷ್ಟೇ ನಿಖರ ದಾಳಿ: ಪಾಕಿಸ್ತಾನ
ತಾಲಿಬಾನ್ ಆರೋಪಗಳನ್ನು ‘ಸಂಪೂರ್ಣ ಆಧಾರರಹಿತ’ ಎಂದು ತಳ್ಳಿಹಾಕಿರುವ ಪಾಕಿಸ್ತಾನ, ಕಾಬೂಲ್ನಲ್ಲಿ ತಾನು ಯಾವುದೇ ಆಸ್ಪತ್ರೆಯ ಮೇಲೆ ದಾಳಿ ಮಾಡಿಲ್ಲ ಎಂದು ಸ್ಪಷ್ಟಪಡಿಸಿದೆ. ಪಾಕಿಸ್ತಾನದ ವಾರ್ತಾ ಸಚಿವ ಅತಾವುಲ್ಲಾ ತರಾರ್ ಅವರು ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಕಾಬೂಲ್ ಮತ್ತು ಪೂರ್ವ ನಂಗರ್ಹಾರ್ ಪ್ರಾಂತ್ಯದ ಮಿಲಿಟರಿ ನೆಲೆಗಳ ಮೇಲೆ ಪಾಕಿಸ್ತಾನಿ ಸೇನೆಯು ‘ನಿಖರ ವಾಯುದಾಳಿ’ಗಳನ್ನು ನಡೆಸಿದೆ ಎಂದು ತಿಳಿಸಿದ್ದಾರೆ. ಆಫ್ಘನ್ ತಾಲಿಬಾನ್ ಆಡಳಿತವು ತನ್ನ ಭಯೋತ್ಪಾದಕ ಪ್ರಾಕ್ಸಿಗಳಿಗೆ ಬೆಂಬಲ ನೀಡಲು ಬಳಸುತ್ತಿರುವ ತಾಂತ್ರಿಕ ಮೂಲಸೌಕರ್ಯಗಳು ಮತ್ತು ಮದ್ದುಗುಂಡುಗಳ ಶೇಖರಣಾ ಘಟಕಗಳನ್ನು ಮಾತ್ರ ಗುರಿಯಾಗಿಸಿ ನಾಶಪಡಿಸಲಾಗಿದೆ ಎಂದು ಅವರು ಸಮರ್ಥಿಸಿಕೊಂಡಿದ್ದಾರೆ.
ಮುರಿದುಬಿದ್ದ ಕದನ ವಿರಾಮ: ‘ಯುದ್ಧ’ದ ಎಚ್ಚರಿಕೆ
ಈ ದಾಳಿಗೂ ಮುನ್ನ ಉಭಯ ದೇಶಗಳ ಗಡಿಯಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ನಾಲ್ವರು ಆಫ್ಘನ್ ಪ್ರಜೆಗಳು ಸಾವನ್ನಪ್ಪಿದ್ದರು. ಕಳೆದ ಅಕ್ಟೋಬರ್ನಲ್ಲಿ ಕತಾರ್ ಮಧ್ಯಸ್ಥಿಕೆಯಲ್ಲಿ ಏರ್ಪಟ್ಟಿದ್ದ ಕದನ ವಿರಾಮ ಈಗ ಸಂಪೂರ್ಣವಾಗಿ ಮುರಿದುಬಿದ್ದಿದ್ದು, ಮೂರು ವಾರಗಳಿಂದ ಸಂಘರ್ಷ ತಾರಕಕ್ಕೇರಿದೆ. ಫೆಬ್ರವರಿ ಅಂತ್ಯದಲ್ಲಿ ಅಫ್ಘಾನಿಸ್ತಾನದೊಳಗೆ ಪಾಕಿಸ್ತಾನ ನಡೆಸಿದ ವಾಯುದಾಳಿಯಲ್ಲಿ ನಾಗರಿಕರು ಮೃತಪಟ್ಟಿದ್ದರು. ಇದಕ್ಕೆ ಪ್ರತಿಯಾಗಿ ಅಫ್ಘಾನಿಸ್ತಾನ ಗಡಿಯಾಚೆಗಿನ ದಾಳಿ ಆರಂಭಿಸಿದ ನಂತರ ಈ ಭೀಕರ ಕಾಳಗ ಶುರುವಾಗಿದೆ. ಸದ್ಯ, ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸಿಫ್ ಅವರು ಅಫ್ಘಾನಿಸ್ತಾನದೊಂದಿಗೆ ‘ಮುಕ್ತ ಯುದ್ಧ’ (Open war) ಸಾರಲಾಗಿದೆ ಎಂದು ಘೋಷಿಸಿದ್ದಾರೆ
ಇದನ್ನೂ ಓದಿ : ಧೋನಿ ಜೊತೆಗಿನ ಒಡನಾಟಕ್ಕೆ ಸಂಜು ಕಾತರ.. CSK ಪಾಳಯದಲ್ಲಿ ‘ಮಾಹಿ’ ಪ್ರಭಾವದ ಬಗ್ಗೆ ಸ್ಫೋಟಕ ಬ್ಯಾಟರ್ ಮನದಾಳದ ಮಾತು!



















