ಕೊಲೊಂಬೊ/ನವದೆಹಲಿ : ಇರಾನ್ ಮತ್ತು ಇಸ್ರೇಲ್ ನಡುವಿನ ಸಂಘರ್ಷ ಈಗ ಹಿಂದೂ ಮಹಾಸಾಗರಕ್ಕೂ ವ್ಯಾಪಿಸಿದ್ದು, ಶ್ರೀಲಂಕಾದ ದಕ್ಷಿಣ ಕರಾವಳಿಯಿಂದ ಸುಮಾರು 40 ಕಿಲೋಮೀಟರ್ ದೂರದಲ್ಲಿರುವ ಅಂತಾರಾಷ್ಟ್ರೀಯ ಜಲಪ್ರದೇಶದಲ್ಲಿ ಇರಾನ್ನ ‘ಐರಿಸ್ ದೇನಾ’ (IRIS Dena) ಎಂಬ ಯುದ್ಧನೌಕೆಯನ್ನು ಅಮೆರಿಕದ ಜಲಂತರ್ಗಾಮಿ ನೌಕೆಯು ಟಾರ್ಪಿಡೊ ದಾಳಿಯ ಮೂಲಕ ಮುಳುಗಿಸಿದೆ. ಈ ಭೀಕರ ಘಟನೆಯಲ್ಲಿ 148 ಇರಾನಿ ನಾವಿಕರು ನಾಪತ್ತೆಯಾಗಿದ್ದಾರೆ.
ಅಮೆರಿಕ ಮಿಂಚಿನ ದಾಳಿ
ಬುಧವಾರ ಮುಂಜಾನೆ ಈ ದಾಳಿ ನಡೆದಿದ್ದು, ಅಮೆರಿಕದ ನೌಕಾಪಡೆಯು ಒಂದೇ ಒಂದು ‘ಮಾರ್ಕ್ 48’ ಟಾರ್ಪಿಡೊ ಬಳಸಿ ಇರಾನ್ ಫ್ರಿಗೇಟ್ ಅನ್ನು ಧ್ವಂಸಗೊಳಿಸಿದೆ. ದಾಳಿಯ ಬೆನ್ನಲ್ಲೇ ಶ್ರೀಲಂಕಾ ನೌಕಾಪಡೆಯು ಕ್ಷಿಪ್ರ ರಕ್ಷಣಾ ಕಾರ್ಯಾಚರಣೆಗೆ ಇಳಿದು 32 ಇರಾನಿ ನಾವಿಕರನ್ನು ರಕ್ಷಿಸಿದೆ. ರಕ್ಷಿಸಲ್ಪಟ್ಟವರನ್ನು ಗಾಲೆಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಲ್ಲಿ ಬಿಗಿ ಭದ್ರತೆ ಏರ್ಪಡಿಸಲಾಗಿದೆ. ಆದರೆ, ನೌಕೆಯಲ್ಲಿದ್ದ ಉಳಿದ 148 ಸಿಬ್ಬಂದಿಗಳ ಪತ್ತೆಗಾಗಿ ತೀವ್ರ ಹುಡುಕಾಟ ನಡೆಯುತ್ತಿದ್ದರೂ, ಸಮಯ ಕಳೆದಂತೆ ಅವರು ಬದುಕಿರುವ ಭರವಸೆ ಕ್ಷೀಣಿಸುತ್ತಿದೆ ಎಂದು ಶ್ರೀಲಂಕಾ ಅಧಿಕಾರಿಗಳು ತಿಳಿಸಿದ್ದಾರೆ.
ಅಮೆರಿಕದ ಎಚ್ಚರಿಕೆ: ‘ಇದು ನಿಶ್ಯಬ್ದ ಸಾವು’
ವಾಷಿಂಗ್ಟನ್ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಈ ಕಾರ್ಯಾಚರಣೆಯನ್ನು ದೃಢಪಡಿಸಿರುವ ಅಮೆರಿಕದ ರಕ್ಷಣಾ ಸಚಿವ ಪೀಟ್ ಹೆಗ್ಸೆತ್, “ಅಂತಾರಾಷ್ಟ್ರೀಯ ಜಲಪ್ರದೇಶದಲ್ಲಿ ನಾನು ಸುರಕ್ಷಿತವಾಗಿದ್ದೇನೆ ಎಂದು ಭಾವಿಸಿದ್ದ ಇರಾನ್ ಯುದ್ಧನೌಕೆಯನ್ನು ನಮ್ಮ ಜಲಾಂತರ್ಗಾಮಿ ಮುಳುಗಿಸಿದೆ. ಇದನ್ನು ‘ನಿಶ್ಯಬ್ದ ಸಾವು’ (Quiet Death) ಎಂದು ಕರೆಯಬಹುದು,” ಎಂದು ಅವರು ಬಣ್ಣಿಸಿದ್ದಾರೆ. ಎರಡನೇ ಮಹಾಯುದ್ಧದ ನಂತರ ಅಮೆರಿಕದ ಜಲಂತರ್ಗಾಮಿಯೊಂದು ಶತ್ರು ರಾಷ್ಟ್ರದ ನೌಕೆಯನ್ನು ಮುಳುಗಿಸಿದ ಮೊದಲ ಘಟನೆ ಇದಾಗಿದೆ ಎಂದು ಸೇನಾ ಅಧಿಕಾರಿಗಳು ತಿಳಿಸಿದ್ದಾರೆ. ಇರಾನ್ನ ನೌಕಾ ಶಕ್ತಿಯನ್ನು ಸಂಪೂರ್ಣವಾಗಿ ಕುಂದಿಸುವುದು ಈ ಮಿಲಿಟರಿ ಅಭಿಯಾನದ ಮುಖ್ಯ ಉದ್ದೇಶವಾಗಿದೆ.
ಭಾರತ ಮತ್ತು ಪ್ರಾದೇಶಿಕ ಭದ್ರತೆಗೆ ಎದುರಾದ ಭೀತಿ
ಈ ಘಟನೆಯು ದಕ್ಷಿಣ ಏಷ್ಯಾದ ರಾಷ್ಟ್ರಗಳಲ್ಲಿ ತೀವ್ರ ಆತಂಕ ಮೂಡಿಸಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಶ್ರೀಲಂಕಾ ಸಂಸದ ನಾಮಲ್ ರಾಜಪಕ್ಸೆ, “ಇದು ಕೇವಲ ಶ್ರೀಲಂಕಾಗೆ ಮಾತ್ರವಲ್ಲದೆ ಭಾರತಕ್ಕೂ ಗಂಭೀರ ಕಳವಳಕಾರಿ ವಿಷಯವಾಗಿದೆ. ಪರ್ಷಿಯನ್ ಕೊಲ್ಲಿಯಿಂದ ಮೈಲುಗಳಷ್ಟು ದೂರದಲ್ಲಿರುವ ಹಿಂದೂ ಮಹಾಸಾಗರದಲ್ಲಿ ಇಂತಹ ದಾಳಿಗಳು ನಡೆಯುತ್ತಿರುವುದು ಅಪಾಯಕಾರಿ,” ಎಂದು ಹೇಳಿದ್ದಾರೆ. ದಕ್ಷಿಣ ಏಷ್ಯಾದ ದೇಶಗಳಾದ ಭಾರತ, ಬಾಂಗ್ಲಾದೇಶ ಮತ್ತು ಪಾಕಿಸ್ತಾನಗಳು ಒಗ್ಗೂಡಿ ಈ ಪ್ರಾದೇಶಿಕ ಭದ್ರತಾ ಸವಾಲನ್ನು ಚರ್ಚಿಸಬೇಕು ಎಂದು ಅವರು ಕರೆ ನೀಡಿದ್ದಾರೆ.
ಶ್ರೀಲಂಕಾ ಸರ್ಕಾರದ ಮೇಲೆ ಒತ್ತಡ
ತನ್ನ ಆರ್ಥಿಕ ವಲಯಕ್ಕೆ ಸಮೀಪದಲ್ಲೇ ಇಂತಹ ದೊಡ್ಡ ಮಟ್ಟದ ದಾಳಿ ನಡೆದರೂ ಶ್ರೀಲಂಕಾ ಸರ್ಕಾರಕ್ಕೆ ಇದರ ಸುಳಿವಿತ್ತೇ ಎಂಬ ಪ್ರಶ್ನೆಗಳು ಎದ್ದಿವೆ. ಒಂದು ವೇಳೆ ಸರ್ಕಾರಕ್ಕೆ ಈ ಬಗ್ಗೆ ಮೊದಲೇ ಮಾಹಿತಿ ಇದ್ದರೆ ಅದನ್ನು ಸಾರ್ವಜನಿಕರಿಂದ ಏಕೆ ಮುಚ್ಚಿಡಲಾಯಿತು? ಇಲ್ಲದಿದ್ದರೆ, ನಮ್ಮ ಜಲಪ್ರದೇಶದ ಸಮೀಪ ನಮಗೆ ತಿಳಿಯದಂತೆ ಇಂತಹ ಕಾರ್ಯಾಚರಣೆ ನಡೆದಿದ್ದು ಹೇಗೆ? ಎಂದು ರಾಜಪಕ್ಸೆ ಪ್ರಶ್ನಿಸಿದ್ದಾರೆ. ಅಂತಾರಾಷ್ಟ್ರೀಯ ಕಾನೂನುಗಳು ಮತ್ತು ಸಾರ್ವಭೌಮತ್ವವನ್ನು ಗೌರವಿಸಬೇಕೆಂದು ಅವರು ಒತ್ತಿ ಹೇಳಿದ್ದಾರೆ. ಸದ್ಯ ಶ್ರೀಲಂಕಾ ನೌಕಾಪಡೆಯು ತನ್ನ ವಿಮಾನಗಳು ಮತ್ತು ಹಡಗುಗಳ ಮೂಲಕ ಸಮುದ್ರದಲ್ಲಿ ತೈಲ ಸೋರಿಕೆಯಾಗಿರುವ ಜಾಗದಲ್ಲಿ ಹುಡುಕಾಟ ಮುಂದುವರಿಸಿದ್ದು, ಕೆಲವು ಮೃತದೇಹಗಳು ಪತ್ತೆಯಾಗಿವೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ : ಕಡಿಮೆ ಬೆಲೆಗೆ ಚಿನ್ನ ಕೊಡುತ್ತೇನೆಂದು ಮೋಸ | ಉದ್ಯಮಿಯಿಂದ 20 ಲಕ್ಷ ದರೋಡೆ



















