ರಾಯಚೂರು : ಕೇತುಗ್ರಸ್ಥ ಚಂದ್ರಗ್ರಹಣ ಇರುವ ಹಿನ್ನೆಲೆಯಲ್ಲಿ ಬಹುತೇಕ ದೇವಸ್ಥಾನಗಳನ್ನು ಬಂದ್ ಮಾಡಲಾಗಿದೆ. ಆದರೆ ರಾಯರು ಮಾತ್ರ ತಮ್ಮ ಭಕ್ತರಿಗೆ ದರ್ಶನ ನೀಡುತ್ತಿದ್ದಾರೆ. ಹೌದು.. ಕೇತುಗ್ರಸ್ಥ ಚಂದ್ರಗ್ರಹಣ (Lunar Eclipse) ನಡುವೆಯೂ ಮಂತ್ರಾಲಯ ಗುರುರಾಘವೇಂದ್ರ ಸ್ವಾಮಿ ಮಠದಲ್ಲಿ (Raghavendra Swamy Matha) ರಾಯರ ದರ್ಶನಕ್ಕೆ ಯಾವುದೇ ನಿರ್ಬಂಧ ಇಲ್ಲ ಎಂದು ಆಡಳಿತ ಮಂಡಳಿ ಹೇಳಿದೆ. ಈ ಹಿನ್ನೆಲೆಯಲ್ಲಿ ಬೆಳಗ್ಗೆಯಿಂದಲೇ ಭಕ್ತರು ಸರತಿ ಸಾಲಿನಲ್ಲಿ ನಿಂತು ರಾಯರ ದರ್ಶನ ಮಾಡುತ್ತಿದ್ದಾರೆ.
ರಾಜ್ಯದ ಪ್ರಮುಖ ದೇವಸ್ಥಾನಗಳನ್ನು ಮಧ್ಯಾಹ್ನ ಗ್ರಹಣದ ಸಂದರ್ಭದಲ್ಲಿ ಬಂದ್ ಮಾಡಲಾಗುತ್ತಿದೆ. ಇಂದು ಮಧ್ಯಾಹ್ನ 12 ಗಂಟೆಯಿಂದಲೇ ಹಲವು ದೇವಸ್ಥಾನಗಳು ಬಂದ್ ಆಗಿದ್ದರೆ, ಹಲವು ದೇವಸ್ಥಾನಗಳು ಮಧ್ಯಾಹ್ನ 2 ಗಂಟೆಯಿಂದ ಬಂದ್ ಆಗುತ್ತಿವೆ. ಸಂಜೆ 7.30ರ ನಂತರ ಎಲ್ಲ ದೇವಸ್ಥಾನಗಳನ್ನು ತೆರೆದು, ಶುಚಿಗೊಳಿಸಿ ನಂತರ ಕ್ಷೀರಾಭಿಷೇಕ ಮಾಡಲು ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ. ಆದರೆ ರಾಯರ ಮಠದಲ್ಲಿ ಮಾತ್ರ ದೇವಸ್ಥಾನವನ್ನು ಬಂದ್ ಮಾಡುತ್ತಿಲ್ಲ. ಹೀಗಾಗಿ ಭಕ್ತರು ದರ್ಶನ ಮಾಡುತ್ತಿದ್ದಾರೆ.
ಆದರೆ, ಇಂದು ಚಂದ್ರಗ್ರಹಣ ಇರುವ ಹಿನ್ನೆಲೆಯಲ್ಲಿ ಭಕ್ತರ ಸಂಖ್ಯೆಯಲ್ಲಿ ಕ್ಷೀಣವಾಗಿದೆ. ಅಲ್ಲದೇ, ಹೋಳಿ ಇರುವುದು ಕೂಡ ಇದಕ್ಕೆ ಕಾರಣ ಎನ್ನಲಾಗುತ್ತಿದೆ. ಇಂದು ಮಂತ್ರಾಲಯದಲ್ಲಿ (Mantralaya Matha) ಬೆಳಿಗ್ಗೆ ರಾಯರ ವೃಂದಾವನಕ್ಕೆ ಜಲಾಭಿಷೇಕ ಹೊರತು ಪಡಿಸಿ ಬೇರೆ ಪೂಜೆ, ನೈವೇದ್ಯ ಅಲಂಕಾರವನ್ನ ಮಾಡಲಾಗಿಲ್ಲ. ಗಂಧಧಾರಣೆ, ತುಳಸಿ ಮಣಿಯೊಂದಿಗೆ ಪೂಜೆ ಮುಗಿಸಲಾಗಿದ್ದು. ಬೆಳಿಗ್ಗೆಯಿಂದ ಗ್ರಹಣ ಮುಗಿಯುವವರೆಗೂ ತೀರ್ಥ, ಪ್ರಸಾದ ವಿತರಣೆ ನಿಲ್ಲಿಸಲಾಗಿದೆ.
ಗ್ರಹಣ ನಡೆಯುತ್ತಿದ್ದ ಸಂದರ್ಭದಲ್ಲಿ ರಾಯರ ಮಠದಲ್ಲಿ ಶಾಂತಿ ಹೋಮ, ಬಳಿಕ ಸ್ವಚ್ಛತಾ ಕಾರ್ಯ ಹಾಗೂ ಯತಿಗಳ ವೃಂದಾವನಗಳಿಗೆ ಜಲಾಭಿಷೇಕ ಮಾಡಲಾಗುತ್ತದೆ. ಅದಾದ ಬಳಿಕವಷ್ಟೆ ರಾತ್ರಿವೇಳೆ ಎಂದಿನಂತೆ ಪೂಜೆ, ತೀರ್ಥ, ಪ್ರಸಾದ ಉತ್ಸವ ಸೇವೆಗಳು ನಡೆಯಲಿವೆ ಎಂದು ಆಡಳಿತ ಮಂಡಳಿ ತಿಳಿಸಿದೆ. ಗ್ರಹಣ ಇದ್ದರೂ ರಾಯರ ದರ್ಶನಕ್ಕೆ ಯಾವುದೇ ತೊಂದರೆ ಮಾಡಿಲ್ಲ. ಆದರೆ ಭಕ್ತರು ಕಡಿಮೆ ಸಂಖ್ಯೆಯಲ್ಲಿ ಇರುವುದರಿಂದಾಗಿ ಬಂದವರಿಗೆ ಸುಲಭ ದರ್ಶನ ಸಿಗುತ್ತಿದೆ. ಹೀಗಾಗಿ ಹಲವು ಭಕ್ತರು ಸಂತಸ ವ್ಯಕ್ತಪಡಿಸುತ್ತಿದ್ದಾರೆ.
ಇದನ್ನೂ ಓದಿ : ಸೆಹ್ವಾಗ್ ವಿರುದ್ಧ ತೀವ್ರಗೊಂಡ ಆಕ್ರೋಶ | ಮಿಲ್ಲರ್ ಕುರಿತ ವೈರಲ್ ಹೇಳಿಕೆಯ ಅಸಲಿಯತ್ತೇನು?



















