ಬೆಂಗಳೂರು: ಅಮೃತಹಳ್ಳಿ ಗ್ಯಾಂಗ್ ರೇಪ್ ಪ್ರಕರಣದಲ್ಲಿ ಬಂಧಿತನಾಗಿರುವ ಆರೋಪಿ ನಿಖಿಲ್ ವಿರುದ್ಧ ತನಿಖೆ ವೇಳೆ ಮತ್ತಷ್ಟು ಅನುಮಾನಗಳು ವ್ಯಕ್ತವಾಗಿವೆ. ಪ್ರಕರಣದಲ್ಲಿ ಪ್ರಮುಖ ಸಾಕ್ಷ್ಯವೆಂದು ಪರಿಗಣಿಸಲಾಗಿರುವ ಮೊಬೈಲ್ ಫೋನ್ ಅನ್ನು ಕಸ್ಟಡಿಯಲ್ಲಿದ್ದರೂ ಪೊಲೀಸರ ವಶಕ್ಕೆ ನೀಡದೆ ಕಳ್ಳಾಟ ನಡೆಸುತ್ತಿರುವ ಆರೋಪ ಕೇಳಿಬಂದಿದೆ.
ಮೂಲಗಳ ಪ್ರಕಾರ, ಅಮೃತಹಳ್ಳಿ ಪೊಲೀಸರಿಂದ ಬಂಧನಕ್ಕೂ ಮುನ್ನ ನಿಖಿಲ್ ಮಲ್ಲೇಶ್ವರಂ ಪೊಲೀಸ್ ಠಾಣೆಗೆ ದೂರು ನೀಡಿದ್ದನು. ಸಂತ್ರಸ್ತೆ ಹಾಗೂ ಮತ್ತೋರ್ವ ವ್ಯಕ್ತಿ ತನ್ನ ಮಾನಹಾನಿ ಮಾಡುವುದಾಗಿ ಬೆದರಿಸಿ ಹಣಕ್ಕಾಗಿ ಬ್ಲ್ಯಾಕ್ಮೇಲ್ ಮಾಡುತ್ತಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾನೆ.
ಈ ಸಂಬಂಧ ಕೆಲವು ಫೋಟೋಗಳನ್ನು ಸಾಕ್ಷ್ಯವಾಗಿ ತನ್ನ ಮೊಬೈಲ್ನಲ್ಲಿ ತೋರಿಸಿ ದೂರು ನೀಡಿದ್ದನೆಂದು ತಿಳಿದುಬಂದಿದೆ. ಆದರೆ ಇದೀಗ ವಿಚಾರಣೆ ವೇಳೆ ಅದೇ ಮೊಬೈಲ್ ಫೋನ್ನ್ನು ಪೊಲೀಸರಿಗೆ ಒಪ್ಪಿಸಲು ವಿಳಂಬ ಮಾಡುತ್ತಿದ್ದು, ಮೊಬೈಲ್ ರಿಪೇರಿಗೆ ನೀಡಿರುವುದಾಗಿ ಹೇಳಿಕೆ ನೀಡುತ್ತಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪ್ರಕರಣದಲ್ಲಿ ಪ್ರಮುಖ ಡಿಜಿಟಲ್ ಸಾಕ್ಷ್ಯವಾಗಿರುವ ಮೊಬೈಲ್ ಸಿಗದಿರುವುದು ತನಿಖೆಗೆ ಅಡಚಣೆ ಉಂಟುಮಾಡುತ್ತಿದೆ. ವಿಚಾರಣೆ ವೇಳೆ ನಿಖಿಲ್ ತಾರತಮ್ಯಯುತ ಹೇಳಿಕೆ ನೀಡುತ್ತಿರುವುದು ಗಮನಾರ್ಹವಾಗಿದೆ.
ಇನ್ನೊಂದೆಡೆ, ಆರೋಪಿ ನಿಖಿಲ್ ಸಂಪರ್ಕದಲ್ಲಿ ಕೆಲ ಪ್ರಭಾವಿ ವ್ಯಕ್ತಿಗಳು ಇರುವ ಸಾಧ್ಯತೆ ತನಿಖೆಯಲ್ಲಿ ಹೊರಬಂದಿದೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಅಂಶವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಎಲ್ಲ ದಿಕ್ಕಿನಿಂದ ಪರಿಶೀಲನೆ ನಡೆಸುತ್ತಿದ್ದಾರೆ. ಪ್ರಕರಣದ ತನಿಖೆ ಮುಂದುವರಿದಿದ್ದು, ಮೊಬೈಲ್ಫೋನ್ ವಶಕ್ಕೆ ಪಡೆದು ಫೊರೆನ್ಸಿಕ್ ಪರಿಶೀಲನೆ ನಡೆಸಲು ಪೊಲೀಸರು ಕ್ರಮ ಕೈಗೊಂಡಿದ್ದಾರೆ.
ಇದನ್ನೂ ಓದಿ : ಬ್ಯಾಡಗಿ | ಸ್ವಿಮ್ಮಿಂಗ್ ಪೂಲ್ನಲ್ಲಿ ಮುಳುಗಿ ಯುವಕ ಸಾವು



















