ಕೋಲ್ಕತ್ತಾ : ಪಶ್ಚಿಮ ಬಂಗಾಳ ರಾಜಕೀಯದ ಧೀಮಂತ ನಾಯಕ, ತೃಣಮೂಲ ಕಾಂಗ್ರೆಸ್ನ ಸಹ-ಸಂಸ್ಥಾಪಕ ಮತ್ತು ಮಾಜಿ ರೈಲ್ವೆ ಸಚಿವ ಮುಕುಲ್ ರಾಯ್ (71) ಅವರು ಕೋಲ್ಕತ್ತಾದ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ತೀವ್ರ ಹೃದಯಾಘಾತದಿಂದ ಅವರು ಮೃತಪಟ್ಟಿದ್ದಾರೆ ಎಂದು ಅವರ ಪುತ್ರ ಸುಭ್ರಾಂಶು ರಾಯ್ ಖಚಿತಪಡಿಸಿದ್ದಾರೆ. ಕಳೆದ 2 ವರ್ಷಗಳಿಂದ ಡೆಮೆನ್ಶಿಯಾ ಸೇರಿದಂತೆ ಹಲವು ರೀತಿಯ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ಅವರು, ಇತ್ತೀಚೆಗೆ ಕೋಮಾ ಸ್ಥಿತಿಗೆ ತಲುಪಿದ್ದರು. ಅವರ ನಿಧನದೊಂದಿಗೆ ಬಂಗಾಳ ರಾಜಕೀಯದ ಒಂದು ಸುದೀರ್ಘ ಅಧ್ಯಾಯ ಅಂತ್ಯಗೊಂಡಂತಾಗಿದೆ.
ಮಮತಾ ಬ್ಯಾನರ್ಜಿ ಬಲಗೈ ಬಂಟ
1998ರಲ್ಲಿ ಮಮತಾ ಬ್ಯಾನರ್ಜಿ ಅವರೊಂದಿಗೆ ಸೇರಿ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಕಟ್ಟುವಲ್ಲಿ ಮುಕುಲ್ ರಾಯ್ ಅವರ ಪಾತ್ರ ಅನನ್ಯವಾಗಿತ್ತು. ಪಕ್ಷದ ಸಂಘಟನಾ ಚತುರ ಎಂದೇ ಕರೆಯಲ್ಪಡುತ್ತಿದ್ದ ಅವರು, ಟಿಎಂಸಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ದೀರ್ಘಕಾಲ ಸೇವೆ ಸಲ್ಲಿಸಿದ್ದರು. 2011ರಲ್ಲಿ ಬಂಗಾಳದಲ್ಲಿ ದಶಕಗಳ ಕಾಲದ ಎಡರಂಗದ ಆಡಳಿತವನ್ನು ಕಿತ್ತೊಗೆದು ಮಮತಾ ಬ್ಯಾನರ್ಜಿ ಅಧಿಕಾರಕ್ಕೆ ಬರುವಲ್ಲಿ ರಾಯ್ ಅವರ ರಾಜಕೀಯ ತಂತ್ರಗಾರಿಕೆ ಪ್ರಮುಖವಾಗಿತ್ತು. ಯುಪಿಎ-2 ಸರ್ಕಾರದ ಅವಧಿಯಲ್ಲಿ ಅವರು ಕೇಂದ್ರ ಶಿಪ್ಪಿಂಗ್ ಖಾತೆ ರಾಜ್ಯ ಸಚಿವರಾಗಿ ಮತ್ತು ನಂತರ ರೈಲ್ವೆ ಸಚಿವರಾಗಿ ಕೂಡ ಕಾರ್ಯನಿರ್ವಹಿಸಿದ್ದರು.
ಬಿಜೆಪಿಯ ಏಳಿಗೆಯಲ್ಲೂ ಪ್ರಮುಖ ಪಾತ್ರ
ಒಂದು ಕಾಲದಲ್ಲಿ ಮಮತಾ ನಂತರದ 2ನೇ ಪ್ರಭಾವಿ ನಾಯಕರಾಗಿದ್ದ ರಾಯ್ ಅವರು ಶಾರದಾ ಮತ್ತು ನಾರದಾ ಹಗರಣಗಳ ಆರೋಪದ ನಂತರ ಪಕ್ಷದಲ್ಲಿ ತಮ್ಮ ಪ್ರಾಬಲ್ಯ ಕಳೆದುಕೊಂಡರು. 2015ರಲ್ಲಿ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಅವರನ್ನು ಕೆಳಗಿಳಿಸಲಾಗಿತ್ತು. ಇದರಿಂದ ಅಸಮಾಧಾನಗೊಂಡಿದ್ದ ಅವರು 2017ರಲ್ಲಿ ಬಿಜೆಪಿಗೆ ಸೇರ್ಪಡೆಯಾಗುವ ಮೂಲಕ ಎಲ್ಲರಿಗೂ ಅಚ್ಚರಿ ಮೂಡಿಸಿದ್ದರು. ಬಂಗಾಳದಲ್ಲಿ ತಳಮಟ್ಟದಿಂದ ಬಿಜೆಪಿಯನ್ನು ಸಂಘಟಿಸಿದ ಅವರು, 2019ರ ಲೋಕಸಭಾ ಚುನಾವಣೆಯಲ್ಲಿ ಪಕ್ಷವು 18 ಸ್ಥಾನಗಳನ್ನು ಗೆಲ್ಲುವಲ್ಲಿ ಮತ್ತು 2021ರ ಅಸೆಂಬ್ಲಿ ಚುನಾವಣೆಯಲ್ಲಿ ಪ್ರಮುಖ ವಿರೋಧ ಪಕ್ಷವಾಗಿ ಬಿಜೆಪಿ ಹೊರಹೊಮ್ಮುವಲ್ಲಿ ‘ಚಾಣಕ್ಯ’ನಂತೆ ಕೆಲಸ ಮಾಡಿದ್ದರು.
ಕೊನೆಯ ದಿನಗಳಲ್ಲಿ ಮರಳಿ ಮಾತೃಪಕ್ಷಕ್ಕೆ
2021ರ ಚುನಾವಣೆಯಲ್ಲಿ ಕೃಷ್ಣನಗರ ಕ್ಷೇತ್ರದಿಂದ ಬಿಜೆಪಿ ಟಿಕೆಟ್ನಲ್ಲಿ ಸ್ಪರ್ಧಿಸಿ ಜಯಗಳಿಸಿದ್ದರೂ, ಪಕ್ಷದಲ್ಲಿನ ಬದಲಾದ ವಿದ್ಯಮಾನಗಳಿಂದ ಬೇಸತ್ತು ಕೇವಲ ಒಂದು ತಿಂಗಳಲ್ಲೇ ಮತ್ತೆ ತೃಣಮೂಲ ಕಾಂಗ್ರೆಸ್ಗೆ ಮರಳಿದ್ದರು. “ಹಳೆಯದು ಯಾವಾಗಲೂ ಬಂಗಾರ” ಎನ್ನುವ ಮೂಲಕ ಅವರನ್ನು ಮಮತಾ ಬ್ಯಾನರ್ಜಿ ಆತ್ಮೀಯವಾಗಿ ಬರಮಾಡಿಕೊಂಡಿದ್ದರು. ಆದರೆ, ಅವರ ಎರಡನೇ ಇನ್ನಿಂಗ್ಸ್ ಆರೋಗ್ಯ ಸಮಸ್ಯೆಯಿಂದಾಗಿ ಹೆಚ್ಚು ಕ್ರಿಯಾಶೀಲವಾಗಿ ಸಾಗಲಿಲ್ಲ. ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ, ಸಿಎಂ ಮಮತಾ ಬ್ಯಾನರ್ಜಿ, ಸಂಸದ ಅಭಿಷೇಕ್ ಬ್ಯಾನರ್ಜಿ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದು, ಇಂದು ಅಂತ್ಯಕ್ರಿಯೆ ನೆರವೇರಲಿದೆ.
ಇದನ್ನೂ ಓದಿ : ಅಕ್ಷರ್ ಪಟೇಲ್ ನಿರ್ಲಕ್ಷ್ಯ | ಗಂಭೀರ್ ನಿರ್ಧಾರದ ವಿರುದ್ಧ ಅಶ್ವಿನ್ ಆಕ್ರೋಶ



















