ಶಿವಮೊಗ್ಗ: “ಫೆಬ್ರವರಿ 14 ರಂದು ಹಾವೇರಿಯಲ್ಲಿ ನಡೆಯುವ ರಾಜ್ಯ ಸರ್ಕಾರದ ಸರ್ಮಪಣಾ ಕಾರ್ಯಕ್ರಮದಲ್ಲಿ ರಾಜ್ಯ ಸರ್ಕಾರದಿಂದ 3 ಲಕ್ಷ ಕುಟುಂಬಗಳಿಗೆ ಹಕ್ಕುಪತ್ರ ನೀಡಲಾಗುವುದು” ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, “ರಾಜ್ಯದ 6,500 ವಸತಿ ಪ್ರದೇಶದಲ್ಲಿರುವ 3 ಲಕ್ಷ ಕುಟುಂಬಗಳಿಗೆ ನಾಳೆ ಹಾವೇರಿಯಲ್ಲಿ ನಡೆಯುವ ಸರ್ಕಾರದ ಸರ್ಮಪಣಾ ಕಾರ್ಯಕ್ರಮದಲ್ಲಿ ಹಕ್ಕು ಪತ್ರಗಳನ್ನು ನೀಡಲಾಗುವುದು. 6,500 ಸಾವಿರ ವಸತಿ ಪ್ರದೇಶದಲ್ಲಿ ವಾಸವಾಗಿದ್ದರೂ ಸಹ ಅವರಿಗೆ ಹಕ್ಕುಪತ್ರಗಳಿರಲಿಲ್ಲ. ದಾಖಲೆ ರಹಿತ ವಸತಿ ಪ್ರದೇಶಗಳಾಗಿವೆ.
ವಾಸವಾಗಿರುವ ಜನರಿಗೆ ದಾಖಲೆ ಇರಲಿಲ್ಲ. ಕಳೆದ 50 ರಿಂದ 60 ವರ್ಷದಿಂದ ವಾಸವಾಗಿದ್ದ ಜನರಿಗೆ ಹಕ್ಕು ಪತ್ರವಿರಲಿಲ್ಲ. ಈ ಪ್ರದೇಶಗಳನ್ನು ಕಂದಾಯ ಭೂಮಿ ಎಂದು ಘೋಷಿಸಿ ಹಕ್ಕುಪತ್ರ ನೀಡಲಾಗುತ್ತಿದೆ. ಇದುವರೆಗೂ 2.20 ಲಕ್ಷ ಜನರಿಗೆ ಹಕ್ಕುಪತ್ರ ನೀಡಲಾಗಿದೆ. ಕಳೆದ ವರ್ಷ 36 ಸಾವಿರ ಕುಟುಂಬಗಳಿಗೆ ಹಕ್ಕು ಪತ್ರ ನೀಡಲಾಗಿತ್ತು. ಈ ವರ್ಷ 1 ಲಕ್ಷದ 6 ಸಾವಿರ ಜನರಿಗೆ ಹಕ್ಕುಪತ್ರ ನೀಡಲಾಗುವುದು” ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ : ತಾಳಗುಪ್ಪ-ಬೆಂಗಳೂರು ರೈಲಿನಲ್ಲಿ ತಲ್ವಾರ್ ಹಿಡಿದು ದರೋಡೆಕೋರನ ದಾಂಧಲೆ



















