ಬೆಂಗಳೂರು : GBA ವ್ಯಾಪ್ತಿಯ ಪಶ್ಚಿಮ ನಗರ ಪಾಲಿಕೆ ವ್ಯಾಪ್ತಿಗೆ ಸೇರಿಕೊಂಡಿರೋ ಹೆಮ್ಮಿಗೆಪುರ ವಾರ್ಡಿನ ಉತ್ತರಹಳ್ಳಿ ಹೋಬಳಿ ಮಲ್ಲಸಂದ್ರ ಗ್ರಾಮದ ಸರ್ವೆ ನಂಬರ್ 18/1A4, 18/1A5, 18/1A6, 18/1A7, 18/1A8 ಮತ್ತು 18/1A9 ಕ್ಕೆ ಸೇರಿದ 10.20 ಎಕರೆ ವಿಸ್ತೀರ್ಣದ ಜಾಗದಲ್ಲಿರುವ ಚೆನ್ನೈ ಮೂಲದ M/s CASAGRAND LOTUS PRIVATE LIMITED ಎಂಬ ಕಟ್ಟಡವು ಮಾಲೀಕ ಸತೀಶ್ ಸಿ.ಜಿ. ಎಂಬುವವರಿಗೆ ಸೇರಿದ್ದಾಗಿದ್ದು, ರೆವೆನ್ಯೂ ಜಾಗವಾಗಿರುತ್ತದೆ. ಜಾಗವು ಭೂ ಪರಿವರ್ತನೆ ಆಗಿರುವುದಿಲ್ಲ.
ಈ ರೆವೆನ್ಯೂ ಸ್ವತ್ತಿಗೆ ‘ಎ’ಖಾತೆ ಮಾಡಿಕೊಡಬೇಕೆಂಬ ದುರುದ್ದೇಶದಿಂದ, ಸ್ವತ್ತಿನ ಮಾಲೀಕರಾದ ಸತೀಶ್ ಸಿ.ಜಿ. 5 ಕೋಟಿ ರೂ. ಗಳಿಗೂ ಹೆಚ್ಚು ಹಣವನ್ನು ಲಂಚ ನೀಡಿ, ನಕಲಿ ಪಿಐಡಿ ನಂಬರ್ ಪಡೆದು ಎ ಖಾತ ಪಡೆದಿದ್ದಾರೆ. ಇದಕ್ಕೆ ಸ್ಥಳೀಯ ವಾರ್ಡನ ಕಂದಾಯ ಪರಿವೀಕ್ಷಕ ಶಿವಕುಮಾರ್, ಸಹಾಯಕ ಕಂದಾಯ ಅಧಿಕಾರಿ ರಮೇಶ್ ರಾಥೋಡ್, ಉಪ ಆಯುಕ್ತರಾದ ಅಬ್ದುಲ್ ರಬ್ ಮತ್ತು ಜಂಟಿ ಆಯುಕ್ತರಾದ ಆರತಿ ಆನಂದ್ ಭ್ರಷ್ಟಾಚಾರ ಮಾಡಿ ಎ ಖಾತ ನೀಡಿದ್ದಾರೆ ಎಂದು ಬಿಜೆಪಿ ಮುಖಂಡ ಎನ್.ಆರ್ ರಮೇಶ್ ಆರೋಪ ಮಾಡಿದ್ದಾರೆ.
ಸುಮಾರು 10-20 ಎಕರೆ ವಿಸ್ತೀರ್ಣದ ಜಾಗದ ಪೈಕಿ, 30 ಅಡಿ ವಿಸ್ತೀರ್ಣದ ಜಾಗಕ್ಕೆ PID ಸಂಖ್ಯೆ: 3458527845 ಎಂಬ ನಕಲಿ ಸಂಖ್ಯೆಯನ್ನು ನೀಡಿ, ಈ ರೀತಿ 30 ಅಡಿಗಳ ಸ್ವತ್ತಿಗೆ ನಕಲಿ PID ಸೃಷ್ಟಿಸಿ ‘ಎ’ಖಾತಾವನ್ನು ಮಾಡಿಕೊಟ್ಟಿದ್ದಾರೆ ಎನ್ನಲಾಗಿದೆ. ಪುನಃ ಈಗ ಅದೇ ‘ಎ’ಖಾತಾವನ್ನು 10.20 ಎಕರೆ ಚ.ಮೀಟರ್ ಜಾಗಕ್ಕೆ PID ಸಂಖ್ಯೆ – 3458527845 ರ ಜಾಗಕ್ಕೆ ತಿದ್ದುಪಡಿ ಮಾಡುವ ಸಂಬಂಧ ಟಿಪ್ಪಣಿ ಹಾಳೆಗಳನ್ನು ಸಿದ್ಧಪಡಿಸಿರುತ್ತಾರೆ. ಇದಕ್ಕೆ ಸಂಬಂಧಿಸಿದಂತೆ ‘A’ ಖಾತಾ ಮಾಡಲು ಸ್ವತಃ ಕಂದಾಯ ಪರಿವೀಕ್ಷಕರಾದ ಶಿವಕುಮಾರ್ ಅವರೇ ತಮ್ಮ ಹಸ್ತಾಕ್ಷರದಲ್ಲಿ ಬರೆದಿದ್ದಾರೆ ಎಂದು ಆರೋಪಿಸಲಾಗಿದೆ.
ಇದರಿಂದ ಪಶ್ಚಿಮ ನಗರ ಪಾಲಿಕೆಗೆ ಹತ್ತಾರು ಕೋಟಿ ಹಣ ನಷ್ಟ ಉಂಟಾಗಿದೆ. ಈಗಾಗಲೇ ಸಹಾಯಕ ಕಂದಾಯ ಅಧಿಕಾರಿಗಳಾದ ರಮೇಶ್ ರಾಥೋಡ್ ಸೇರಿದಂತೆ ಕಂದಾಯ ಪರಿವೀಕ್ಷಕರು, ಕಂದಾಯ ವಸೂಲಿಗಾರರು, ದ್ವಿತೀಯ ದರ್ಜೆ ಸಹಾಯಕರು ಮತ್ತು ಗಣಕಯಂತ್ರ ನಿರ್ವಾಹಕರುಗಳೆಲ್ಲಾ ಸೇರಿ ನೂರಾರು ನಕಲಿ PID ಗಳನ್ನು ಸೃಷ್ಟಿಸಿ, ಪ್ರತಿಯೊಬ್ಬರಿಂದ ಲಕ್ಷಾಂತರ ರೂಪಾಯಿ ಹಣವನ್ನು ಲಂಚದ ರೂಪದಲ್ಲಿ ಪಡೆದು ಪಾಲಿಕೆಗೆ ಮಹಾವಂಚನೆ ಎಸಗಿದ್ದು, ಅವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು ಜೊತೆಗೆ ಅವರನ್ನು ಸೇವೆಯಿಂದ ವಜಾಗೊಳಿಸಬೇಕು ಎನ್.ಆರ್ ರಮೇಶ್ ಆಗ್ರಹಿಸಿದ್ದಾರೆ.
ಈ ಸಂಬಂಧ ಸಂಪೂರ್ಣ ದಾಖಲೆಗಳ ಸಹಿತ ಬೆಂಗಳೂರು ಪಶ್ಚಿಮ ನಗರ ಪಾಲಿಕೆಯ ಆಯುಕ್ತ ಹಾಗೂ ಜಿಬಿಎ ಕಂದಾಯ ಇಲಾಖೆಯ ವಿಶೇಷ ಆಯುಕ್ತರಿಗೆ, ಲೋಕಾಯುಕ್ತಕ್ಕೆ ದಾಖಲೆ ಸಮೇತ ಎನ್.ಆರ್ ರಮೇಶ್ ದೂರು ನೀಡಿದ್ದು, ಕ್ರಮಕ್ಕೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ : ನೆಲಮಂಗಲದಲ್ಲಿ ಆರೆಂಜ್ ತುಂಬಿದ್ದ ಲಾರಿ ಪಲ್ಟಿ | ರಸ್ತೆಯುದ್ದಕ್ಕೂ ಚೆಲ್ಲಾಪಿಲ್ಲಿಯಾದ ಹಣ್ಣುಗಳು!



















