ಬೆಂಗಳೂರು : ನಗರದ ಸ್ಯಾಂಕಿ ಕೆರೆಯಲ್ಲಿ 20 ವರ್ಷದ ವಿದ್ಯಾರ್ಥಿನಿಯ ಮೃತದೇಹ ಪತ್ತೆಯಾಗಿದ್ದು, ಆತ್ಮಹತ್ಯೆ ಶಂಕೆ ವ್ಯಕ್ತವಾಗಿದೆ. ಮೃತ ಯುವತಿಯನ್ನು ತೇಜು ಎಂದು ಗುರುತಿಸಲಾಗಿದೆ.
ಚಿಕ್ಕಬಾಣವಾರ ಭಾಗದಲ್ಲಿ ವಾಸವಿದ್ದ ತೇಜು, ರಾತ್ರಿ ವೇಳೆ ಒಬ್ಬಳೇ ಕೆರೆಗೆ ಬಂದು ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಿಳಿದುಬಂದಿದೆ. ಮಾಹಿತಿ ತಿಳಿಯುತ್ತಿದ್ದಂತೆ ಸದಾಶಿವನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.
ಪ್ರಾಥಮಿಕ ಮಾಹಿತಿ ಪ್ರಕಾರ, ತೇಜು ಆತ್ಮಹತ್ಯೆಗೂ ಮುನ್ನ ತನ್ನ ಬಾಯ್ಫ್ರೆಂಡ್ಗೆ “ನಾನು ಸಾಯುತ್ತೇನೆ” ಎಂದು ಮೆಸೇಜ್ ಕಳುಹಿಸಿದ್ದಳು ಎನ್ನಲಾಗಿದೆ. ಈ ಮೆಸೇಜ್ ಅನ್ನು ಯುವತಿಯ ಪ್ರಿಯಕರ ತಕ್ಷಣವೇ ಆಕೆಯ ತಾಯಿಗೆ ರವಾನಿಸಿದ್ದಾನೆ. ಆದರೆ ಅಷ್ಟರಲ್ಲೇ ತೇಜು ಸ್ಯಾಂಕಿ ಕೆರೆಗೆ ತೆರಳಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಮೃತ ತೇಜು ಅವರ ತಾಯಿ ಮೆಟ್ರೊದಲ್ಲಿ ಕೆಲಸ ಮಾಡುತ್ತಿದ್ದು, ತಂದೆ ಮತ್ತು ತಾಯಿಗೆ ಈ ಹಿಂದೆ ವಿಚ್ಛೇದನವಾಗಿತ್ತು ಎಂದು ತಿಳಿದುಬಂದಿದೆ. ಸದ್ಯ ಪೊಲೀಸರು ಯುವತಿಯ ಪೋಷಕರು ಸ್ಥಳಕ್ಕೆ ಬರುವಿಕೆಗಾಗಿ ಕಾಯುತ್ತಿದ್ದು, ಪೋಷಕರ ಹೇಳಿಕೆ ಹಾಗೂ ಇತರೆ ಮಾಹಿತಿಯನ್ನು ಸಂಗ್ರಹಿಸುವ ಕಾರ್ಯ ಮುಂದುವರಿದಿದೆ.
ಘಟನೆ ಸಂಬಂಧ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆತ್ಮಹತ್ಯೆಗೆ ನಿಖರ ಕಾರಣವೇನು ಎಂಬುದನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮೊಬೈಲ್ ಸಂದೇಶಗಳು ಸೇರಿದಂತೆ ಎಲ್ಲಾ ಆಯಾಮಗಳಲ್ಲಿ ತನಿಖೆ ಮುಂದುವರಿದಿದೆ.
ಇದನ್ನೂ ಓದಿ : ಗುರಾಯಿಸಿದ್ದಕ್ಕೆ ಬಿತ್ತು ಹೆಣ.. ಬಿಯರ್ ಬಾಟಲಿ, ಚಾಕುವಿನಿಂದ ಚುಚ್ಚಿ ಯುವಕನ ಬರ್ಬರ ಹತ್ಯೆ



















