ವಾಷಿಂಗ್ಟನ್/ನವದೆಹಲಿ : ಭಾರತದ ಸರಕುಗಳ ಮೇಲೆ ವಿಧಿಸಲಾಗಿದ್ದ ಶೇ. 50ರಷ್ಟು ಭಾರಿ ಸುಂಕವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶೇ.18ಕ್ಕೆ ಇಳಿಕೆ ಮಾಡುವುದಾಗಿ ಘೋಷಿಸಿದ್ದರೂ, ಈ ಸುಂಕ ಕಡಿತದ ಹಿಂದೆ ಅಮೆರಿಕ ಒಂದು ಪ್ರಮುಖ ಷರತ್ತನ್ನು ಒಡ್ಡಿದ್ದು, ಭಾರತವು ರಷ್ಯಾದಿಂದ ಕಚ್ಚಾ ತೈಲ ಆಮದನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಬೇಕು ಎಂದು ತಿಳಿಸಿದೆ. ಈ ನಿರ್ಧಾರವು ಉಕ್ರೇನ್ ಯುದ್ಧವನ್ನು ಕೊನೆಗಾಣಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಲಿದೆ ಎಂದು ಟ್ರಂಪ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಆದರೆ, ದೀರ್ಘಕಾಲದ ಮಿತ್ರರಾಷ್ಟ್ರವಾಗಿರುವ ರಷ್ಯಾದೊಂದಿಗೆ ಸಂಬಂಧ ಕಡಿದುಕೊಳ್ಳಲು ಭಾರತ ನಿಜಕ್ಕೂ ಒಪ್ಪಿದೆಯೇ ಎಂಬ ಪ್ರಶ್ನೆ ಇದೀಗ ಮೂಡಿದೆ.
ತಮ್ಮ ‘ಟ್ರೂತ್ ಸೋಷಿಯಲ್’ ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಮಾಹಿತಿ ನೀಡಿರುವ ಡೊನಾಲ್ಡ್ ಟ್ರಂಪ್, ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ನಡೆದ ಮಾತುಕತೆ ಯಶಸ್ವಿಯಾಗಿದೆ. ಭಾರತವು ಇನ್ನು ಮುಂದೆ ರಷ್ಯಾದ ತೈಲದ ಬದಲಿಗೆ ಅಮೆರಿಕ ಮತ್ತು ವೆನೆಜುವೆಲಾದಿಂದ ಇಂಧನವನ್ನು ಖರೀದಿಸಲು ಒಪ್ಪಿಕೊಂಡಿದೆ ಎಂದು ಹೇಳಿದ್ದಾರೆ. “ಇದರಿಂದ ಉಕ್ರೇನ್ನಲ್ಲಿ ನಡೆಯುತ್ತಿರುವ ಯುದ್ಧವನ್ನು ಕೊನೆಗಾಣಿಸಲು ಸಾಧ್ಯವಾಗುತ್ತದೆ, ಅಲ್ಲಿ ಪ್ರತಿ ವಾರ ಸಾವಿರಾರು ಜನರು ಜೀವ ಕಳೆದುಕೊಳ್ಳುತ್ತಿದ್ದಾರೆ” ಎಂದು ಟ್ರಂಪ್ ಬರೆದುಕೊಂಡಿದ್ದಾರೆ. ಈ ಮೂಲಕ ರಷ್ಯಾದ ಆರ್ಥಿಕ ಮೂಲಕ್ಕೆ ಪೆಟ್ಟು ನೀಡುವುದು ಅಮೆರಿಕದ ಸ್ಪಷ್ಟ ಗುರಿ ಎಂಬುದು ಸಾಬೀತಾಗಿದೆ.
ರಷ್ಯಾ ತೈಲ ಕುರಿತು ಉಲ್ಲೇಖಿಸದ ಪ್ರಧಾನಿ ಮೋದಿ
ಅತ್ತ ಅಮೆರಿಕದ ಅಧ್ಯಕ್ಷರು ತೈಲ ಖರೀದಿಯ ಬಗ್ಗೆ ನೇರವಾದ ಹೇಳಿಕೆ ನೀಡಿದ್ದರೆ, ಪ್ರಧಾನಿ ನರೇಂದ್ರ ಮೋದಿ ಅವರು ಸ್ವಲ್ಪ ಭಿನ್ನವಾದ ಹಾದಿ ತುಳಿದಿದ್ದಾರೆ. ‘ಎಕ್ಸ್’ (ಟ್ವಿಟ್ಟರ್) ಮೂಲಕ ಪ್ರತಿಕ್ರಿಯಿಸಿರುವ ಮೋದಿ, ಸುಂಕ ಕಡಿತದ ನಿರ್ಧಾರವನ್ನು “ಅದ್ಭುತ ಸುದ್ದಿ” ಎಂದು ಸ್ವಾಗತಿಸಿದ್ದಾರೆ. ಆದರೆ, ರಷ್ಯಾದಿಂದ ತೈಲ ಖರೀದಿಯನ್ನು ನಿಲ್ಲಿಸುವ ಬಗ್ಗೆ ಅವರು ತಮ್ಮ ಪೋಸ್ಟ್ನಲ್ಲಿ ಎಲ್ಲಿಯೂ ನೇರವಾಗಿ ಉಲ್ಲೇಖಿಸಿಲ್ಲ. ಬದಲಿಗೆ, ಜಾಗತಿಕ ಶಾಂತಿ ಮತ್ತು ಸ್ಥಿರತೆಗೆ ಟ್ರಂಪ್ ಅವರ ನಾಯಕತ್ವ ಅತ್ಯಗತ್ಯ ಎಂದು ಹೇಳುವ ಮೂಲಕ ರಾಜತಾಂತ್ರಿಕ ಚಾಕಚಕ್ಯತೆ ಮೆರೆದಿದ್ದಾರೆ. ಭಾರತವು ಈ ಹಿಂದಿನಿಂದಲೂ ತನ್ನ ಇಂಧನ ಭದ್ರತೆಯ ದೃಷ್ಟಿಯಿಂದ ರಷ್ಯಾದಿಂದ ರಿಯಾಯಿತಿ ದರದಲ್ಲಿ ತೈಲ ಖರೀದಿಸುವುದನ್ನು ಸಮರ್ಥಿಸಿಕೊಳ್ಳುತ್ತಾ ಬಂದಿದೆ ಎಂಬುದು ಇಲ್ಲಿ ಗಮನಾರ್ಹ.
ರಷ್ಯಾ ತೈಲಕ್ಕೆ ವೆನೆಜುವೆಲಾ ಪರ್ಯಾಯವಾಗಬಲ್ಲದೇ?
ಭಾರತವು ಪ್ರಸ್ತುತ ದಿನಕ್ಕೆ ಸುಮಾರು 1.5 ದಶಲಕ್ಷ ಬ್ಯಾರೆಲ್ ರಷ್ಯಾದ ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುತ್ತಿದೆ. ಇದನ್ನು ವೆನೆಜುವೆಲಾದಿಂದ ಭರ್ತಿ ಮಾಡುವುದು ಅಷ್ಟು ಸುಲಭದ ಮಾತಲ್ಲ. ವೆನೆಜುವೆಲಾದ ತೈಲವು ರಷ್ಯಾದ ತೈಲದಂತೆಯೇ ಗುಣಮಟ್ಟವನ್ನು ಹೊಂದಿದ್ದರೂ, ಅಲ್ಲಿನ ತೈಲ ಮೂಲಸೌಕರ್ಯಗಳು ಅತ್ಯಂತ ಹದಗೆಟ್ಟಿವೆ. ವೆನೆಜುವೆಲಾ ಮತ್ತೆ ಹಳೆಯ ವೇಗದಲ್ಲಿ ತೈಲ ಉತ್ಪಾದನೆ ಆರಂಭಿಸಲು ದಶಕಗಳ ಕಾಲಾವಧಿ ಮತ್ತು ಬಿಲಿಯನ್ ಗಟ್ಟಲೆ ಹೂಡಿಕೆಯ ಅಗತ್ಯವಿದೆ. ಹೀಗಾಗಿ, ರಷ್ಯಾದ ತೈಲವನ್ನು ಸಂಪೂರ್ಣವಾಗಿ ಕೈಬಿಟ್ಟು ಅಮೆರಿಕ ಅಥವಾ ವೆನೆಜುವೆಲಾವನ್ನು ನೆಚ್ಚಿಕೊಳ್ಳುವುದು ಭಾರತದ ಪಾಲಿಗೆ ತಾಂತ್ರಿಕ ಮತ್ತು ಆರ್ಥಿಕ ಸವಾಲಾಗಿದೆ ಎಂದು ತಜ್ಞರು ವಿಶ್ಲೇಷಿಸುತ್ತಿದ್ದಾರೆ.
ರಾಜತಾಂತ್ರಿಕ ಜೂಜಾಟ
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಇತ್ತೀಚೆಗಷ್ಟೇ ದೆಹಲಿ ಭೇಟಿಯ ವೇಳೆ ಅಡೆತಡೆಯಿಲ್ಲದೆ ತೈಲ ಪೂರೈಕೆ ಮಾಡುವುದಾಗಿ ಭರವಸೆ ನೀಡಿದ್ದರು. ಹೀಗಿರುವಾಗ ಭಾರತವು ಅಮೆರಿಕದ ಸುಂಕದ ರಿಯಾಯಿತಿಗಾಗಿ ರಷ್ಯಾದಂತಹ ಹಳೆಯ ಮಿತ್ರನ ಸ್ನೇಹವನ್ನು ಹೇಗೆ ನಿಭಾಯಿಸುತ್ತದೆ ಎಂಬುದು ಈಗ ಕುತೂಹಲದ ವಿಷಯವಾಗಿದೆ. ಒಂದು ವೇಳೆ ಭಾರತವು ರಷ್ಯಾದ ತೈಲ ಖರೀದಿಸಿ ನಿಲ್ಲಿಸಿದರೆ, ಅದು ರಷ್ಯಾದ ಆರ್ಥಿಕತೆಗೆ ದೊಡ್ಡ ಹೊಡೆತ ನೀಡಲಿದೆ. ಆದರೆ ಈ ವ್ಯಾಪಾರ ಒಪ್ಪಂದದ ಪೂರ್ಣ ವಿವರಗಳು ಮತ್ತು ತೈಲ ಕಡಿತದ ಗಡುವು ಇನ್ನಷ್ಟೇ ಅಧಿಕೃತವಾಗಿ ಹೊರಬೀಳಬೇಕಿದೆ.
ಇದನ್ನೂ ಓದಿ : ಉಡುಪಿಯ ಹಿರಿಯಡ್ಕದಲ್ಲಿ ಭೀಕರ ಅಪಘಾತ | ಪವಾಡ ಸದೃಶವಾಗಿ ಪಾರಾದ ಬೈಕ್ ಸವಾರರು.. ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆ!


















