ಬೆಂಗಳೂರು: ನೀವು ಬೆಂಗಳೂರು ನಿವಾಸಿಗಳಾಗಿದ್ದು, ಕೆಲ ತಿಂಗಳಿನಿಂದ ಕಾವೇರಿ ನೀರಿನ ಬಿಲ್ ಬಾಕಿ ಉಳಿಸಿಕೊಂಡಿದ್ದೀರಾ? ಅಸಲು, ವಿಳಂಬ ಪಾವತಿಯ ದಂಡ ಹಾಗೂ ಬಡ್ಡಿ ಸೇರಿ ಎಲ್ಲ ಹಣವನ್ನು ಹೇಗೆ ಪಾವತಿಸಬೇಕು ಎಂದು ಯೋಚಿಸುತ್ತಿದ್ದೀರಾ? ಹಾಗಾದರೆ, ನೀವು ಇನ್ನು ಚಿಂತೆ ಮಾಡಬೇಕಿಲ್ಲ. ಏಕೆಂದರೆ, ಜಲಮಂಡಳಿಯು ಒನ್ ಟೈಮ್ ಸೆಟಲ್ ಮೆಂಟ್ ಗೆ ಅವಕಾಶ ನೀಡಿದೆ. ಇದರಿಂದಾಗಿ ಬೆಂಗಳೂರಿನ ನಿವಾಸಿಗಳು ಹಣ ಉಳಿಸಲು ಸಾಧ್ಯವಾಗಲಿದೆ.
ಕಾವೇರಿ ನೀರಿನ ವಿಳಂಬ ಪಾವತಿಯ ದಂಡ ಹಾಗೂ ಬಾಕಿ ಬಿಲ್ ಮೇಲಿನ ಬಡ್ಡಿಗೆ ಜಲ ಮಂಡಳಿಯು ಸಂಪೂರ್ಣವಾಗಿ ವಿನಾಯಿತಿ ನೀಡಿದೆ. ಇದರಿಂದಾಗಿ ಬೆಂಗಳೂರಿನ ನಿವಾಸಿಗಳು ನೀರಿನ ಬಿಲ್ ಪಾವತಿಸಿದರೆ ಸಾಕು. ವಿಳಂಬ ಪಾವತಿ ಮೇಲಿನ ದಂಡ ಹಾಗೂ ಬಡ್ಡಿಯನ್ನು ಪಾವತಿಸಬೇಕಿಲ್ಲ. ಆದರೆ, ಅಸಲನ್ನು ಸಂಪೂರ್ಣವಾಗಿ ಕಟ್ಟಲೇಬೇಕಿದೆ.
ಜಲಮಂಡಳಿಯು ಬೆಂಗಳೂರಿನಲ್ಲಿ 11.14 ಮನೆಗಳಿಗೆ ಕಾವೇರಿ ನೀರಿನ ಸಂಪರ್ಕ ಒದಗಿಸಿದೆ. ಸುಮಾರು 1.55 ಕೋಟಿ ಜನರಿಗೆ ನೀರಿನ ಸೌಲಭ್ಯ ಒದಗಿಸುತ್ತಿದೆ. ಜನ ಪಾವತಿಸುವ ನೀರಿನ ಶುಲ್ಕವೇ ಜಲಮಂಡಳಿಗೆ ಪ್ರಮುಖ ಆದಾಯವಾಗಿದೆ. ಆದರೆ, ಕೆಲ ತಿಂಗಳಿನಿಂದ ಸಾರ್ವಜನಿಕರು ನೀರಿನ ಬಿಲ್ ಪಾವತಿಸದ ಕಾರಣ ಆದಾಯದ ಕೊರತೆಯಾಗಿದೆ. ಹಾಗಾಗಿಯೇ ಜಲಮಂಡಳಿಯು ಒನ್ ಟೈಮ್ ಸೆಟಲ್ ಮೆಂಟ್ ಗೆ ಅವಕಾಶ ನೀಡಿದೆ.
ಲಕ್ಷಾಂತರ ರೂಪಾಯಿ ನೀರಿನ ಬಿಲ್ ಬಾಕಿ ಉಳಿಸಿಕೊಂಡವರೂ ಇದ್ದಾರೆ. ಸಾರ್ವಜನಿಕರು ಒಂದೇ ಬಾರಿಗೆ ನೀರಿನ ಬಿಲ್ ಪಾವತಿಸಿದರೆ ಬಡ್ಡಿ ಹಾಗೂ ದಂಡದಿಂದ ವಿನಾಯಿತಿ ನೀಡಲಾಗಿದೆ. ಜಲಮಂಡಳಿಗೆ ಸುಮಾರು 700 ಕೋಟಿ ರೂ.ಗಿಂತ ಹೆಚ್ಚಿನ ಹಣ ಪಾವತಿಯಾಗಬೇಕಿದೆ. ಅಸಲಿನ ಮೊತ್ತವೇ 450 ಕೋಟಿ ರೂ.ಗಿಂತ ಜಾಸ್ತಿಯಾಗಿದೆ. ಈಗ ಒನ್ ಟೈಮ್ ಸೆಟಲ್ ಮೆಂಟ್ ನಿಂದ ಜಲಮಂಡಳಿಗೆ 450 ಕೋಟಿ ರೂ. ಆದಾಯ ಲಭಿಸುವ ಸಾಧ್ಯತೆ ಇದೆ.
ಇದನ್ನೂ ಓದಿ: ಕಾರವಾರ ಜೈಲಿನಲ್ಲಿ ಮತ್ತೆ ಮೊಬೈಲ್ ಸೇರಿ ಹಲವು ನಿಷೇಧಿತ ವಸ್ತುಗಳು ಪತ್ತೆ | ದೂರು ದಾಖಲಿಸಿದ ಜೈಲರ್



















