ನೋಯ್ಡಾ: ತನ್ನ ಜತೆ ಅಕ್ರಮ ಸಂಬಂಧ ಹೊಂದಿದ್ದ ಮಹಿಳೆಯನ್ನು ಬಸ್ನೊಳಗೆ ಭೀಕರವಾಗಿ ಹತ್ಯೆ ಮಾಡಿ, ಆಕೆಯ ದೇಹವನ್ನು ಹಲವು ಭಾಗಗಳಾಗಿ ತುಂಡರಿಸಿ, ಬೇರೆ ಬೇರೆ ಕಡೆ ಎಸೆದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ 34 ವರ್ಷದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಸ್ ಚಾಲಕ ಮೋನು ಸಿಂಗ್ ಅಲಿಯಾಸ್ ಮೋನು ಸೋಲಂಕಿ ಬಂಧಿತ ಆರೋಪಿ. ಮೃತ ಪ್ರೀತಿ ಯಾದವ್ ತನಗೆ ಹಣಕ್ಕಾಗಿ ನಿರಂತರವಾಗಿ ಪೀಡಿಸುತ್ತಿದ್ದಳು ಮತ್ತು ತನ್ನ ಕುಟುಂಬಕ್ಕೆ ಬೆದರಿಕೆ ಹಾಕುತ್ತಿದ್ದಳು. ಹೀಗಾಗಿ ಆಕೆಯನ್ನು ಕೊಲೆಗೈದೆ ಎಂದು ಆರೋಪಿ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ.
ಹತ್ಯೆಯ ಹಿಂದಿನ ಕಾರಣ
ಈಗಾಗಲೇ ಮದುವೆಯಾಗಿ ಇಬ್ಬರು ಹೆಣ್ಣು ಮಕ್ಕಳನ್ನು ಹೊಂದಿರುವ ಮೋನು ಸಿಂಗ್, ಪ್ರೀತಿ ಯಾದವ್ ಜೊತೆ ಅಕ್ರಮ ಸಂಬಂಧ ಹೊಂದಿದ್ದ. ಇಬ್ಬರೂ ನೋಯ್ಡಾದ ಬರೋಲಾದಲ್ಲಿ ವಾಸಿಸುತ್ತಿದ್ದರು. ಹಣಕ್ಕಾಗಿ ಪ್ರೀತಿ ಯಾದವ್ ತನಗೆ ಬ್ಲ್ಯಾಕ್ಮೇಲ್ ಮಾಡುತ್ತಿದ್ದಳು. ಅಷ್ಟೇ ಅಲ್ಲದೆ, ತನ್ನ ಹೆಣ್ಣುಮಕ್ಕಳನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸುವುದಾಗಿ ಬೆದರಿಕೆ ಹಾಕುತ್ತಿದ್ದಳು ಎಂದು ಮೋನು ಸಿಂಗ್ ಪೊಲೀಸರ ಬಳಿ ಹೇಳಿಕೊಂಡಿದ್ದಾನೆ.
ಬಸ್ನಲ್ಲೇ ನಡೆದ ಭೀಕರ ಕೊಲೆ
ನವೆಂಬರ್ 5 ರಂದು ಮೋನು ಸಿಂಗ್ ಈ ಕೃತ್ಯ ಎಸಗಿದ್ದಾನೆ. ಪ್ರೀತಿ ಯಾದವ್ ಅವರ ಮನೆಯಿಂದಲೇ ಆತ ಆಕೆಗೆ ತಿಳಿಯದಂತೆ ಹರಿತವಾದ ಆಯುಧವೊಂದನ್ನು ತೆಗೆದುಕೊಂಡು ಬಂದಿದ್ದ. ನಂತರ ಇಬ್ಬರೂ ಬಸ್ನೊಳಗೆ ಊಟ ಮಾಡಿದ್ದಾರೆ. ಈ ವೇಳೆ ಇಬ್ಬರ ನಡುವೆ ಜಗಳ ನಡೆದಿದ್ದು, ಸಿಂಗ್ ಆಯುಧದಿಂದ ಆಕೆಯ ಮೇಲೆ ಹಲ್ಲೆ ನಡೆಸಿ ತಲೆ ಕಡಿದಿದ್ದಾನೆ. ಗುರುತು ಸಿಗಬಾರದು ಎಂಬ ಉದ್ದೇಶದಿಂದ ಕೈಗಳನ್ನು ಕೂಡ ಕತ್ತರಿಸಿದ್ದಾನೆ. ಬಳಿಕ, ದೇಹದ ಮುಂಡವನ್ನು ನೋಯ್ಡಾದ ಚರಂಡಿಯಲ್ಲಿ ಮತ್ತು ಉಳಿದ ಭಾಗಗಳನ್ನು ಹಾಗೂ ಆಯುಧವನ್ನು ಗಾಜಿಯಾಬಾದ್ನ ಸಿದ್ಧಾರ್ಥ್ ವಿಹಾರ್ ಬಳಿಯ ಒಣ ಚರಂಡಿಯಲ್ಲಿ ಎಸೆದಿದ್ದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ ಎಂದು ಡಿಸಿಪಿ ಯಮುನಾ ಪ್ರಸಾದ್ ಹೇಳಿದ್ದಾರೆ.
ಬಂಧಿಸಿದ್ದು ಹೇಗೆ?
ನವೆಂಬರ್ 6 ರಂದು ನೋಯ್ಡಾದ ಸೆಕ್ಟರ್-39 ಪೊಲೀಸ್ ಠಾಣಾ ವ್ಯಾಪ್ತಿಯ ಚರಂಡಿಯಲ್ಲಿ ಪ್ರೀತಿ ಯಾದವ್ ಅವರ ಶಿರ ಮತ್ತು ಕೈಕಾಲುಗಳಿಲ್ಲದ ದೇಹ ಪತ್ತೆಯಾಗಿತ್ತು. ಆಕೆಯ ಕಾಲ್ಬೆರಳಿನಲ್ಲಿದ್ದ ಕಾಲುಂಗುರವನ್ನು ಬಿಟ್ಟರೆ ಗುರುತು ಪತ್ತೆ ಹಚ್ಚಲು ಬೇರೆ ಯಾವುದೇ ಸುಳಿವು ಇರಲಿಲ್ಲ. ಪ್ರಕರಣವನ್ನು ಭೇದಿಸಲು ಒಂಬತ್ತು ಪೊಲೀಸ್ ತಂಡಗಳನ್ನು ರಚಿಸಲಾಗಿತ್ತು. 5,000ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿ, 1,100ಕ್ಕೂ ಹೆಚ್ಚು ವಾಹನಗಳನ್ನು ತಪಾಸಣೆ ಮಾಡಲಾಯಿತು. ಈ ವೇಳೆ, ನವೆಂಬರ್ 5 ರಂದು ಅಪರಾಧ ನಡೆದ ಸ್ಥಳದ ಬಳಿ ಬಿಳಿ ಮತ್ತು ನೀಲಿ ಬಣ್ಣದ ಬಸ್ಸೊಂದು ಲೈಟ್ ಆಫ್ ಮಾಡಿಕೊಂಡು ಅನುಮಾನಾಸ್ಪದವಾಗಿ ಚಲಿಸುತ್ತಿರುವುದು ಪತ್ತೆಯಾಗಿದೆ. ಬಸ್ನ ನಂಬರ್ ಪ್ಲೇಟ್ (UP16 KT 0037) ಆಧರಿಸಿ ಪತ್ತೆ ಹಚ್ಚಿದಾಗ ಅದು ಮೋನು ಸಿಂಗ್ಗೆ ಸೇರಿದ್ದು ಎಂದು ತಿಳಿದುಬಂದಿದೆ. ಇದರ ಆಧಾರದ ಮೇಲೆ ಆರೋಪಿಯನ್ನು ಬಂಧಿಸಲಾಗಿದೆ. ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 103(1) ಮತ್ತು 238 ರ ಅಡಿಯಲ್ಲಿ ಎಫ್ಐಆರ್ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ಇದನ್ನೂ ಓದಿ: ಬೆಂಗಳೂರು | ತಂದೆಯ ಕಾರಿಗೆ ಸಿಲುಕಿ ಮಗು ಸ್ಥಳದಲ್ಲೇ ಸಾವು



















