ವಾರಾಣಸಿ: ಎರ್ನಾಕುಲಂ-ಬೆಂಗಳೂರು ಸೇರಿದಂತೆ ಒಟ್ಟು ನಾಲ್ಕು ಹೊಸ ವಂದೇ ಭಾರತ್ ಎಕ್ಸ್ಪ್ರೆಸ್ ರೈಲುಗಳಿಗೆ ಪ್ರಧಾನಿ ನರೇಂದ್ರ ಮೋದಿ ಇಂದು ಚಾಲನೆ ನೀಡಿದ್ದಾರೆ.
ತಮ್ಮ ಸಂಸದೀಯ ಕ್ಷೇತ್ರವಾದ ಉತ್ತರ ಪ್ರದೇಶದ ವಾರಾಣಸಿಯಲ್ಲಿ ಈ ರೈಲುಗಳಿಗೆ ಅವರು ಹಸಿರು ನಿಶಾನೆ ತೋರಿದ್ದಾರೆ. ಬನಾರಸ್-ಖಜುರಾಹೊ, ಲಕ್ನೋ-ಸಹಾರನ್ಪುರ, ಫಿರೋಜ್ಪುರ-ದೆಹಲಿ ಮತ್ತು ಎರ್ನಾಕುಲಂ-ಬೆಂಗಳೂರು ಮಾರ್ಗಗಳಲ್ಲಿ ಹೊಸ ರೈಲುಗಳು ಸಂಚರಿಸಲಿವೆ. ಕಾರ್ಯಕ್ರಮದ ಬಳಿಕ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, “ಈ ವಂದೇ ಭಾರತ್ ರೈಲುಗಳು ದೇಶದ ಸಂಪರ್ಕ ವ್ಯವಸ್ಥೆಯನ್ನು ಹೆಚ್ಚಿಸುವುದರ ಜೊತೆಗೆ ನಾಗರಿಕರಿಗೆ ಹೆಚ್ಚಿನ ಪ್ರಯಾಣ ಸೌಕರ್ಯವನ್ನು ಒದಗಿಸುತ್ತವೆ,” ಎಂದು ಹೇಳಿದರು.
ಹೊಸ ರೈಲುಗಳ ಸೇರ್ಪಡೆಯೊಂದಿಗೆ ದೇಶದಲ್ಲಿ ಕಾರ್ಯಾಚರಿಸುತ್ತಿರುವ ವಂದೇ ಭಾರತ್ ರೈಲುಗಳ ಒಟ್ಟು ಸಂಖ್ಯೆ 160 ದಾಟಿದೆ ಎಂದು ಅವರು ಮಾಹಿತಿ ನೀಡಿದರು. “ವಂದೇ ಭಾರತ್ ರೈಲು ಭಾರತೀಯರಿಂದ, ಭಾರತೀಯರಿಗಾಗಿ ಮತ್ತು ಭಾರತೀಯರದ್ದೇ ಆದ ರೈಲು. ಇದು ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆ ತರುವ ಸಂಗತಿಯಾಗಿದೆ. ವಂದೇ ಭಾರತ್, ನಮೋ ಭಾರತ್ ಮತ್ತು ಅಮೃತ್ ಭಾರತ್ನಂತಹ ರೈಲುಗಳು ಭಾರತೀಯ ರೈಲ್ವೆಯ ಹೊಸ ಪೀಳಿಗೆಗೆ ಅಡಿಪಾಯ ಹಾಕುತ್ತಿವೆ,” ಎಂದು ಪ್ರಧಾನಿ ತಿಳಿಸಿದರು. ಈ ಸಂದರ್ಭದಲ್ಲಿ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಉಪಸ್ಥಿತರಿದ್ದರು.

ಹೊಸ ಮಾರ್ಗಗಳ ವಿವರ
ಎರ್ನಾಕುಲಂ-ಬೆಂಗಳೂರು: ಕೇರಳದ ಎರ್ನಾಕುಲಂ ಮತ್ತು ಕರ್ನಾಟಕದ ರಾಜಧಾನಿ ಬೆಂಗಳೂರನ್ನು ಸಂಪರ್ಕಿಸುವ ಈ ರೈಲು, ಪ್ರಯಾಣದ ಸಮಯವನ್ನು ಎರಡು ಗಂಟೆಗಳಿಗಿಂತ ಕಡಿಮೆ ಮಾಡಲಿದೆ. ಕೇವಲ 8 ಗಂಟೆ 40 ನಿಮಿಷಗಳಲ್ಲಿ ಈ ಪ್ರಯಾಣವನ್ನು ಪೂರ್ಣಗೊಳಿಸಬಹುದು. ದೇಶದ ಪ್ರಮುಖ ಐಟಿ ಮತ್ತು ವಾಣಿಜ್ಯ ಕೇಂದ್ರಗಳನ್ನು ಸಂಪರ್ಕಿಸುವ ಈ ಮಾರ್ಗವು ವೃತ್ತಿಪರರು, ವಿದ್ಯಾರ್ಥಿಗಳು ಮತ್ತು ಪ್ರವಾಸಿಗರಿಗೆ ವೇಗವಾದ ಮತ್ತು ಆರಾಮದಾಯಕ ಪ್ರಯಾಣದ ಆಯ್ಕೆಯನ್ನು ಒದಗಿಸುತ್ತದೆ. ಇದು ಕೇರಳ, ತಮಿಳುನಾಡು ಮತ್ತು ಕರ್ನಾಟಕದ ನಡುವೆ ಹೆಚ್ಚಿನ ಆರ್ಥಿಕ ಚಟುವಟಿಕೆ ಮತ್ತು ಪ್ರವಾಸೋದ್ಯಮವನ್ನು ಉತ್ತೇಜಿಸಲಿದೆ.
ಬನಾರಸ್-ಖಜುರಾಹೊ: ಈ ಮಾರ್ಗದಲ್ಲಿ ನೇರ ಸಂಪರ್ಕವನ್ನು ಕಲ್ಪಿಸುವ ವಂದೇ ಭಾರತ್ ರೈಲು, ಪ್ರಸ್ತುತ ಚಾಲ್ತಿಯಲ್ಲಿರುವ ವಿಶೇಷ ರೈಲುಗಳಿಗೆ ಹೋಲಿಸಿದರೆ ಸುಮಾರು 2 ಗಂಟೆ 40 ನಿಮಿಷಗಳ ಪ್ರಯಾಣ ಸಮಯವನ್ನು ಉಳಿಸಲಿದೆ. ಇದು ವಾರಾಣಸಿ, ಪ್ರಯಾಗ್ರಾಜ್, ಚಿತ್ರಕೂಟ ಮತ್ತು ಖಜುರಾಹೊ ಸೇರಿದಂತೆ ಭಾರತದ ಪ್ರಮುಖ ಧಾರ್ಮಿಕ ಮತ್ತು ಸಾಂಸ್ಕೃತಿಕ ಸ್ಥಳಗಳನ್ನು ಸಂಪರ್ಕಿಸುತ್ತದೆ. ಇದು ಯುನೆಸ್ಕೋ ವಿಶ್ವ ಪರಂಪರೆಯ ತಾಣವಾದ ಖಜುರಾಹೊಗೆ ಪ್ರವಾಸಿಗರಿಗೆ ವೇಗದ ಪ್ರಯಾಣ ಕಲ್ಪಿಸಲಿದೆ.
ಲಕ್ನೋ-ಸಹರಾನ್ಪುರ: ಈ ರೈಲು ಸುಮಾರು 7 ಗಂಟೆ 45 ನಿಮಿಷಗಳಲ್ಲಿ ಪ್ರಯಾಣವನ್ನು ಪೂರ್ಣಗೊಳಿಸಲಿದ್ದು, ಸುಮಾರು ಒಂದು ಗಂಟೆ ಸಮಯವನ್ನು ಉಳಿತಾಯ ಮಾಡಲಿದೆ. ಲಕ್ನೋ, ಸೀತಾಪುರ, ಶಾಹಜಹಾನ್ಪುರ, ಬರೇಲಿ, ಮೊರಾದಾಬಾದ್, ಬಿಜ್ನೋರ್ ಮತ್ತು ಸಹಾರನ್ಪುರದ ಪ್ರಯಾಣಿಕರಿಗೆ ಇದು ಹೆಚ್ಚು ಅನುಕೂಲಕರವಾಗಿದೆ.
ಫಿರೋಜ್ಪುರ-ದೆಹಲಿ: ಈ ಮಾರ್ಗದಲ್ಲಿ ಅತಿ ವೇಗದ ರೈಲು ಇದಾಗಿದ್ದು, 6 ಗಂಟೆ 40 ನಿಮಿಷಗಳಲ್ಲಿ ಪ್ರಯಾಣವನ್ನು ಪೂರ್ಣಗೊಳಿಸುತ್ತದೆ. ಇದು ದೆಹಲಿ ಮತ್ತು ಪಂಜಾಬ್ನ ಪ್ರಮುಖ ನಗರಗಳಾದ ಫಿರೋಜ್ಪುರ, ಭಟಿಂಡಾ ಮತ್ತು ಪಟಿಯಾಲ ನಡುವಿನ ಸಂಪರ್ಕವನ್ನು ಬಲಪಡಿಸಲಿದೆ.
ಇದನ್ನೂ ಓದಿ: ಪವಿತ್ರಾ ಗೌಡಗೆ ಮತ್ತೆ ಶಾಕ್ | ಪುನರ್ ಪರಿಶೀಲಾನ ಅರ್ಜಿ ವಜಾಗೊಳಿಸಿದ ಸುರ್ಪೀಂ ಕೋರ್ಟ್



















