ಬಳ್ಳಾರಿ: ತಾಲೂಕಿನ ಅಸುಂಡಿ ಗ್ರಾಮದ ರವಿ ಎನ್ನುವ ಯುವಕನ, ಸಂಶಯಾಸ್ಪದ ಸಾವು ಪ್ರಕರಣಕ್ಕೆ ಸಂಬಂಧ ಪಟ್ಟಂತೆ, ಕೊಲೆಯಾಗಿರುವುದು ಖಚಿತಗೊಂಡಿದೆ. ಕೊಲೆ ಮಾಡಿದ ಆರೋಪಿಗಳನ್ನು, ಪರಮದೇವನಹಳ್ಳಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಶೋಭಾರಾಣಿ ವಿ.ಜೆ. ತಿಳಿಸಿದ್ದಾರೆ.
ಅ.24ರ ನಸುಕಿನ ಜಾವದಲ್ಲಿ ಅಸುಂಡಿ ಗ್ರಾಮದ ಬಳಿ ಇರುವ ಬೈಪಾಸ್ ರಸ್ತೆ ಸಮೀಪದ ಬಳ್ಳಾರಿ-ಅಸುಂಡಿ ಮಾರ್ಗದ ತಗ್ಗಿನಲ್ಲಿ ರವಿಕುಮಾರ್ ಎನ್ನುವ ಯುವಕನ ಶವ ಪತ್ತೆಯಾಗಿತ್ತು. ರವಿಕುಮಾರನ ಹಣೆ, ತಲೆಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದವು. ಇದೊಂದು ಅಪಘಾತ ಪ್ರಕರಣ ಎನ್ನುವಂತೆ ಸೃಷ್ಟಿ ಮಾಡಲಾಗಿತ್ತು. ಅಪಘಾತ ಸಂಭವಿಸಿರಬಹುದು ಎಂದು ಆರಂಭದಲ್ಲಿ ಶಂಕಿಸಲಾಗಿತ್ದತು,ಇದೀಗ ರವಿಯವರ ಕುಟುಂಬದವರು, ಹಳೆಯ ದ್ವೇಷ-ವೈಷಮ್ಯಗಳ ಹಿನ್ನೆಲೆಯಲ್ಲಿ ಅಸುಂಡಿ ಗ್ರಾಮದ ಕೆಲವರು ಕೊಲೆ ಮಾಡಿರುವ ಅನುಮಾನವಿದೆ ಎಂದು ಹೇಳಿ ಪೊಲೀಸರಿಗೆ ದೂರು ನೀಡಿದ್ದರು ಎಂದು ಹೇಳಿದರು.
ಬಂಧಿತ ಆರೋಪಿಗಳನ್ನು ಅಸುಂಡಿ ಗ್ರಾಮದ ದೊಡ್ಡ ಹೊನ್ನೂರಸ್ವಾಮಿ ಅಲಿಯಾಸ್ ರಿಕ್ಕಿ, ಶೇಖರ್ ಅಲಿಯಾಸ್ ಉದ್ದೇಹಾಳ್ ಶೇಖರ್, ದುಬ್ಬು ಹೊನ್ನೂರುಸ್ವಾಮಿ, ದೊಡ್ಡ ಈರಪ್ಪ, ನಾಗರಾಜ, ಆಟೋ ಎರೆಸ್ವಾಮಿ, ಪ್ರಕಾಶ್, ಸುರೇಂದ್ರ, ಹೊನ್ನೂರಸ್ವಾಮಿ ಅಲಿಯಾಸ್ ಅಗಸರ ಹೊನ್ನೂರಸ್ವಾಮಿ, ಹಾಗೂ ಪ್ರಸಾದ್ ಎಂದು ಗುರುತಿಸಲಾಗಿದ್ದು, ಅವರಿಂದ ಕೃತ್ಯಕ್ಕೆ ಬಳಸಿದ ಆಯುಧಗಳನ್ನು ಹಾಗೂ ಎರಡು ಮೋಟಾರ್ ಸೈಕಲ್ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ವಿವರಿಸಿದರು.
ಬಂಧಿತ ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು, ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಪಿ.ಡಿ. ಹಳ್ಳಿ ಪೊಲೀಸರ ಈ ತನಿಖಾ ಕಾರ್ಯವನ್ನು ಎಸ್ಪಿ ಶೋಭಾರಾಣಿ ಶ್ಲಾಘಿಸಿ, ಅಭಿನಂದಿಸಿದ್ದಾರೆ.
ಇದನ್ನೂ ಓದಿ : ಗರ್ಭಗುಡಿಗೆ ನುಗ್ಗಿ, ವಿಗ್ರಹಕ್ಕೆ ಚಪ್ಪಲಿಯಿಂದ ಒದ್ದು ವಿಕೃತಿ ಮೆರೆದ ಅನ್ಯ ಕೋಮಿನ ಯುವಕ



















