ಬೆಂಗಳೂರು : ಓಲಾ ಕಂಪನಿ ಸಿಬ್ಬಂದಿ ಅನುಮಾನಸ್ಪದವಾಗಿ ಸಾವನಪ್ಪಿರುವ ಹಿನ್ನಲೆ ಇದೀಗ ಓಲಾ ಸಿಇಒ ಮೇಲೆ ಎಫ್ಐಆರ್ ದಾಖಲಾಗಿದೆ. ಮೃತ ಸಿಬ್ಬಂದಿ ಮನೆಯಲ್ಲಿ ಬರೋಬ್ಬರಿ 28 ಪುಟಗಳ ಡೆತ್ನೋಟ್ ಪತ್ತೆಯಾಗಿದ್ದು, ಈ ಬೆನ್ನಲ್ಲೇ ಸಿಇಓ ಭವೇಶ್ ಅಗರ್ವಾಲ್ , ಸಂಸ್ಥೆ ಮತ್ತು ಇಂಜಿನಿಯರ್ ಮೇಲೆ ಕೇಸ್ ದಾಖಲಾಗಿದೆ.
ಕಂಪನಿಯ ಹೋಮೋಲೋಗೇಷನ್ ವಿಭಾಗದ ಅರವಿಂದ್ ಕೆ(38) ಅವರು ಚಿಕ್ಕಲಸಂದ್ರದಲ್ಲಿರುವ ಮಂಜುನಾಥನಗರದಲ್ಲಿರುವ ಅಪಾರ್ಟ್ಮೆಂಟ್ನಲ್ಲಿ ಸೆ.28 ರಂದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆ ಮಾಡಿಕೊಂಡ ಎರಡು ದಿನದ ಬಳಿಕ ಅರವಿಂದ್ ಅಕೌಂಟ್ 17.46 ಲಕ್ಷ ರೂ. ಹಣ ಜಮೆಯಾಗಿತ್ತು.
ಹಣ ಜಮೆಯಾದ ಬಗ್ಗೆ ಅನುಮಾನದಿಂದ ಕಂಪನಿಯವರನ್ನ ಕುಟುಂಬಸ್ಥರು ಪ್ರಶ್ನಿಸಿದ್ದರು. ಆದರೆ ಕಂಪನಿಯಿಂದ ಸರಿಯಾದ ಸ್ಪಷ್ಟನೆ ಸಿಕ್ಕಿರಲಿಲ್ಲ. ಹೀಗಾಗಿ ಅನುಮಾನ ಹೆಚ್ಚಾದ ನಂತರ ಮನೆಯನ್ನು ಪರಿಶೀಲಿಸಿದಾಗ 28 ಪುಟಗಳ ಡೆತ್ ನೋಟ್ ಪತ್ತೆಯಾಗಿತ್ತು. ಡೆತ್ ನೋಟ್ ಆಧಾರದ ಮೇಲೆ ಅರವಿಂದ್ ಅವರ ಸಹೋದರ ಅಶ್ವಿನ್ ಅವರು ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಎಫ್ಐಆರ್ ದಾಖಲಾಗಿದೆ. ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಅಡಿ ಸುಬ್ರತ್ ಕುಮಾರ್ ದಾಸ್(ಎ1),ಭವೀಶ್ ಅಗರ್ವಾಲ್ (ಎ2),ಓಲಾ ಎಲೆಕ್ಟ್ರಿಕ್ ಕಂಪನಿ(ಎ3) ಆರೋಪಿಗಳನ್ನಾಗಿ ಮಾಡಲಾಗಿದೆ.
“ಅರವಿಂದ್ ಅವರ ಡೆತ್ ನೋಟ್ ಪತ್ತೆ”
ಮೃತ ಅರವಿಂದ್ ರೂಮ್ ನಲ್ಲಿ ಬರೋಬ್ಬರಿ 28 ಪುಟಗಳ ಡೆತ್ ನೋಟ್ ಪತ್ತೆಯಾಗಿದೆ. ಡೆತ್ ನೋಟ್ ನಲ್ಲಿ ಸುಬ್ರತ್ ಕುಮಾರ್ ದಾಸ್ ಮತ್ತು ಸಿಇಒ ಭವೀಶ್ ಅಗರ್ವಾಲ್ ತನ್ನ ಕೆಲಸಕ್ಕೆ ಒತ್ತಡ ನೀಡುತ್ತಾ ತನಗೆ ನೀಡಬೇಕಾದ ಭತ್ಯೆ ಮತ್ತು ವೇತನ ನೀಡದೆ ಕಿರುಕುಳ ನೀಡಿದ್ದರಿಂದ ತಾನು ಬೇಸತ್ತು ವಿಷ ಸೇವನೆ ಮಾಡಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಮತ್ತು ತನ್ನ ಸಾವಿಗೆ ಇವರು ನೀಡುತ್ತಿದ್ದ ಕಿರುಕುಳವೇ ಕಾರಣ ಎಂದು ಬರೆದಿದ್ದು ಕಂಡು ಬಂದಿದೆ. ಇದನ್ನು ಕಂಡ ಕುಟುಂಬಸ್ಥರು ಆಘಾತಕ್ಕೊಳಗಾಗಿದ್ದಾರೆ.